ಮಣಿಪುರ ಜಾನಾಂಗೀಯ ಸಂಘರ್ಷದಿಂದ ಹೊತ್ತಿ ಉರಿಯುತ್ತಿದ್ದರೆ, ಬಿಜೆಪಿ ಮಾತ್ರ ವಿವಿಧ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತೆಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ”2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ಕಾರ್ಯಕರ್ತರು ಶ್ರಮವಹಿಸಿ ದುಡಿಯಬೇಕು” ಎಂದು ಕರೆ ನೀಡಿದರು.
”ರಾಹುಲ್ ಗಾಂಧಿ ಮಣಿಪುರಕ್ಕೆ ಹೋಗಬಹುದಾದರೆ, ಪ್ರಧಾನಿ ಯಾಕೆ ಭೇಟಿ ನೀಡಬಾರದು? ಅಲ್ಲಿ ಮಹಿಳೆಯರಿಗೆ ಯಾವ ರಕ್ಷಣೆ ನೀಡಲಾಗಿದೆ? ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗುತ್ತಿದ್ದು, ಅವರನ್ನು ಹತ್ಯೆ ಮಾಡಲಾಗುತ್ತಿದೆ, ಜನರು ತಮ್ಮ ಮನೆಗಳಿಂದ ಪಲಾಯನ ಮಾಡುತ್ತಿದ್ದಾರೆ ಆದರೂ ಬಿಜೆಪಿ ಮಾತ್ರ ಬೇರೆ ರಾಜ್ಯಗಳಲ್ಲಿ ಚುನಾವಣೆ ಪ್ರಚಾರದಲ್ಲಿ ನಿರತವಾಗಿದೆ” ಎಂದು ಖರ್ಗೆ ಆರೋಪಿಸಿದರು.
”ನಮ್ಮ ಕಾರ್ಯಕರ್ತೆಯರು ಹೊಸ ಆಲೋಚನೆ, ಕಾರ್ಯತಂತ್ರಗಳೊಂದಿಗೆ 2024ರ ಲೋಕಸಭಾ ಚುನಾವಣೆ ಎದುರಿಸಲಿದ್ದಾರೆ. ಅವರು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯುತ್ತಾರೆ ಎಂಬ ನಂಬಿಕೆ ಇದೆ” ಎಂದು ಖರ್ಗೆ ಹೇಳಿದ್ದಾರೆ.
”ಮಣಿಪ್ರರ ಹಿಂಸಾಚಾರದ ಬಗ್ಗೆ, ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದರು. ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ ನಂತರವೇ ಅವರು ಸಂಸತ್ತಿನಲ್ಲಿ ಮಣಿಪುರ ವಿಷಯದ ಬಗ್ಗೆ ಮಾತನಾಡಿದ್ದಾರೆ” ಎಂದು ಖರ್ಗೆ ಆರೋಪ ಮಾಡಿದ್ದಾರೆ.