ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮತ್ತು ಯುಪಿ ಮಾಜಿ ಸಿಎಂ ಮಾಯಾವತಿ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಮತ್ತು ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ತೆಗೆದು ಹಾಕಿದ್ದಾರೆ.
ಆಕಾಶ್ ಆನಂದ್ ‘ರಾಜಕೀಯವಾಗಿ ಪ್ರಬುದ್ಧರಾಗುವವರೆಗೆ’ ಅವರನ್ನು ಪಕ್ಷದ ಪ್ರಮುಖ ಹುದ್ದೆಗಳಿಂದ ವಜಾಗೊಳಿಸಿದ್ದೇನೆ ಎಂದು ಮಾಯಾವತಿ ಈ ಕುರಿತು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಮಾಯಾವತಿ, ನಾನು ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕ ಮತ್ತು ಉತ್ತರಾಧಿಕಾರಿ ಎಂದು ಘೋಷಿಸಿದ್ದೆ, ಆದರೆ ಪಕ್ಷ ಮತ್ತು ಚಳವಳಿಯ ದೊಡ್ಡ ಹಿತಾಸಕ್ತಿಯಿಂದ ಅವರು ಪೂರ್ಣ ಪ್ರಬುದ್ಧತೆಯನ್ನು ಪಡೆಯುವವರೆಗೆ ಈ ಎರಡೂ ಪ್ರಮುಖ ಜವಾಬ್ದಾರಿಗಳಿಂದ ಅವರನ್ನು ವಜಾಗೊಳಿಸುವುದಾಗಿ ಹೇಳಿದ್ದಾರೆ.
ಬಿಎಸ್ಪಿ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಆತ್ಮಗೌರವ ಮತ್ತು ಸ್ವಾಭಿಮಾನದ ಸಂಕೇತ ಹಾಗೂ ಸಾಮಾಜಿಕ ಬದಲಾವಣೆಗಾಗಿ ಕಾನ್ಶಿರಾಂ ಅವರು ಕಟ್ಟಿದ ಚಳವಳಿ. ಇದಕ್ಕಾಗಿ ನಾನು ನನ್ನ ಇಡೀ ಜೀವನವನ್ನು ಸಮರ್ಪಿಸಿಕೊಂಡಿದ್ದೇನೆ ಮತ್ತು ಹೊಸ ಪೀಳಿಗೆ ಕೂಡಾ ಈ ಚಳವಳಿಗೆ ವೇಗ ನೀಡಲು ಸಜ್ಜಾಗಬೇಕು. ಆಕಾಶ್ ಅವರ ತಂದೆ ಆನಂದ್ ಕುಮಾರ್ ಅವರು ಪಕ್ಷದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.
ಏಪ್ರಿಲ್ 28ರಂದು,ಸೀತಾಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಆರೋಪದ ಹಿನ್ನೆಲೆ ಆಕಾಶ್ ಆನಂದ್ ಮತ್ತು ಇತರ ನಾಲ್ವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ರ್ಯಾಲಿಯಲ್ಲಿ ಆನಂದ್ ಭಾಷಣದ ವಿರುದ್ಧ ಜಿಲ್ಲಾಡಳಿತ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಆನಂದ್ ಅಲ್ಲದೆ, ಬಿಎಸ್ಪಿ ಅಭ್ಯರ್ಥಿ ಮಹೇಂದ್ರ ಯಾದವ್, ಶ್ಯಾಮ್ ಅವಸ್ತಿ ಮತ್ತು ಅಕ್ಷಯ್ ಕಲ್ರಾ ಮತ್ತು ರ್ಯಾಲಿ ಆಯೋಜಕ ವಿಕಾಸ್ ರಾಜವಂಶಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಹೇಳಿದ್ದಾರೆ.
ಈ ಸರ್ಕಾರ ಬುಲ್ಡೋಜರ್ ಸರ್ಕಾರ ಮತ್ತು ದೇಶದ್ರೋಹಿ ಸರ್ಕಾರ, ಯುವಕರನ್ನು ಹಸಿವಿನಿಂದ ಬಿಡುವ ಮತ್ತು ತನ್ನ ಹಿರಿಯರನ್ನು ತನ್ನ ಗುಲಾಮರನ್ನಾಗಿ ಮಾಡುವ ಪಕ್ಷವು ಭಯೋತ್ಪಾದಕ ಸರ್ಕಾರವಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಇಂತಹ ಸರ್ಕಾರವನ್ನು ನಡೆಸುತ್ತಿದೆ ಎಂದು ಅವರು ಬಿಜೆಪಿ ನೇತೃತ್ವದ ಉತ್ತರಪ್ರದೇಶ ಸರ್ಕಾರದ ವಿರುದ್ಧ ಟೀಕೆ ಮಾಡುವ ವೇಳೆ ಹೇಳಿದ್ದರು.
ಕಳೆದ ಡಿಸೆಂಬರ್ನಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಸೋದರಳಿಯ ಆನಂದ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸಿ ಅವರಿಗೆ ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ನೀಡಿದ್ದರು. ಆಕಾಶ್ ಆನಂದ್ ಅವರು ಮಾಯಾವತಿಯ ಕಿರಿಯ ಸಹೋದರ ಆನಂದ್ ಕುಮಾರ್ ಅವರ ಪುತ್ರರಾಗಿದ್ದಾರೆ. ಅವರು ಬಿಎಸ್ಪಿಯಲ್ಲಿ ಬೆಹೆನ್ ಜಿ(ಮಾಯಾವತಿಯ) ನಂತರದ ಸ್ಥಾನದಲ್ಲಿದ್ದರು.
1. विदित है कि बीएसपी एक पार्टी के साथ ही बाबा साहेब डा भीमराव अम्बेडकर के आत्म-सम्मान व स्वाभिमान तथा सामाजिक परिवर्तन का भी मूवमेन्ट है जिसके लिए मान्य. श्री कांशीराम जी व मैंने खुद भी अपनी पूरी ज़िन्दगी समर्पित की है और इसे गति देने के लिए नई पीढ़ी को भी तैयार किया जा रहा है।
— Mayawati (@Mayawati) May 7, 2024
ಇದನ್ನು ಓದಿ: ಬೆಳಗಾವಿ| ವಿದೇಶಿ ಪ್ರತಿನಿಧಿಗಳ ಭೇಟಿಗೆ ಅವಕಾಶ ನಿರಾಕರಣೆ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ‘ಎದ್ದೇಳು ಕರ್ನಾಟಕ’