ಬುಧವಾರ ಮೇಘಾಲಯ ಕಾಂಗ್ರೆಸ್ಗೆ ಭಾರಿ ಆಘಾತ ಉಂಟಾಗಿದೆ. ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ರಾಜ್ಯದ 17 ಕಾಂಗ್ರೆಸ್ ಶಾಸಕರ ಪೈಕಿ 11 ಶಾಸಕರೊಂದಿಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಮೇಘಾಲಯದ ಶಾಸಕರು ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ವಿಧಾನಸಭೆ ಸ್ಪೀಕರ್ ಮೆಟ್ಬಾ ಲಿಂಗ್ಡೋಹ್ ಅವರಿಗೆ ಪತ್ರವನ್ನು ಸಲ್ಲಿಸಿದ್ದು, ತಮ್ಮ ಸ್ಥಾನಮಾನದ ಬದಲಾವಣೆಯ ಬಗ್ಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೊಸ ಶಾಸಕರೊಂದಿಗೆ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ಕೀರ್ತಿ ಆಜಾದ್ ಮತ್ತು ಅಶೋಕ್ ತನ್ವಾರ್ ಮತ್ತು ಹಿಂದೆ ಜನತಾ ದಳ (ಯುನೈಟೆಡ್) ಆಗಿದ್ದ ಪವನ್ ವರ್ಮಾ ದೆಹಲಿಯಲ್ಲಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿಗೆ ಸೇರ್ಪಡೆಯಾಗಿದ್ದರು. ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ನ ಈ ಯುದ್ಧದಲ್ಲಿ ಸೇರಲು ಬಯಸುವ ಇತರ ಪಕ್ಷಗಳ ರಾಜಕೀಯ ನಾಯಕರಿಗೆ ತಮ್ಮ ಪಕ್ಷಕ್ಕೆ ಸ್ವಾಗತವಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಭ್ರಷ್ಟ, ಕೋಮುವಾದಿ ಬಿಜೆಪಿ ಸೋಲಿಸೋಣ: ಮಮತಾ ಬ್ಯಾನರ್ಜಿ ಜೊತೆ ಮೈತ್ರಿಗೆ ಮುಂದಾದ ಗೋವಾ ಫಾರ್ವಾಡ್ ಪಾರ್ಟಿ
ಮೇಘಾಲಯ ತೃಣಮೂಲ ಕಾಂಗ್ರೆಸ್ ಅನ್ನು ಔಪಚಾರಿಕವಾಗಿ 2012 ರಲ್ಲಿ ರಾಜ್ಯದ 60 ಸ್ಥಾನಗಳಲ್ಲಿ 35 ಸ್ಥಾನಗಳಿಗೆ ಸ್ಪರ್ಧಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ತಂಡದ ಸದಸ್ಯರು 2023 ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಶಿಲ್ಲಾಂಗ್ನಲ್ಲಿದ್ದಾರೆ ಎಂದು ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರೊಂದಿಗೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಂಡಿರುವ ಮಮತಾ ಬ್ಯಾನರ್ಜಿ ಈ ಬಾರಿ ದೆಹಲಿಯಲ್ಲಿದ್ದರು ಅವರನ್ನು ಭೇಟಿ ಮಾಡಿಲ್ಲ. ಈ ಬಗ್ಗೆ ಕೇಳಿದಾಗ ಸಿಡಿಮಿಡಿಗೊಂಡಿರುವ ಮಮತಾ, ಸೋನಿಯಾ ಗಾಂಧಿಯವರೊಂದಿಗೆ ಯಾವುದೇ ಅಪಾಯಿಂಟ್ಮೆಂಟ್ ಕೇಳಿರಲಿಲ್ಲ, ಏಕೆಂದರೆ ಅವರು ಪಂಜಾಬ್ ಚುನಾವಣೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ “ನಾವು ಪ್ರತಿ ಬಾರಿ ಸೋನಿಯಾರನ್ನು ಏಕೆ ಭೇಟಿಯಾಗಬೇಕು? ಇದು ಸಾಂವಿಧಾನಿಕವಾಗಿ ಕಡ್ಡಾಯವಾಗಿಲ್ಲ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.