ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಈ ಕುರಿತು ತಕ್ಷಣವೇ ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಯಾವುದೇ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಹಕ್ಕುಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿರುವ ಸುದೀರ್ಘ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ತಮಿಳುನಾಡು ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, ಈ ಸೂಕ್ಷ್ಮ ಹಾಗೂ ದೀರ್ಘಕಾಲೀನ ಅಂತಾರಾಜ್ಯ ನದಿ ನೀರು ವಿವಾದವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳದಂತೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳಿಗೆ ಕಳಕಳಿಯ ಮನವಿ ಮಾಡಿದರು.
‘ಅಗ್ಗದ ರಾಜಕೀಯ ಮಾಡಲ್ಲ, ಕಾನೂನು ಹೋರಾಟವೇ ಅಂತಿಮ’
ವಿಧಾನಸಭೆಯಲ್ಲಿ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ವಿಜಯ್, “ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ದಯವಿಟ್ಟು ಯಾರೂ ಅಗ್ಗದ ರಾಜಕೀಯ ಮಾಡಬೇಡಿ. ಸರ್ವಪಕ್ಷಗಳ ಸಭೆ ಕರೆಯುವ ಅಗತ್ಯವಿಲ್ಲ. ಕಾವೇರಿ ನೀರು ಹಂಚಿಕೆ ಅಥವಾ ಮೇಕೆದಾಟು ಅಣೆಕಟ್ಟು ನಿರ್ಮಾಣ ವಿರೋಧಿಸುವ ವಿಚಾರದಲ್ಲಿ ನಮ್ಮ ಸರ್ಕಾರದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶಗಳಿಗೆ ಬದ್ಧವಾಗಿ ರಾಜ್ಯದ ಹಕ್ಕನ್ನು ಎತ್ತಿಹಿಡಿಯಲು ನಾವು ಕಾನೂನಾತ್ಮಕ ಹೋರಾಟಕ್ಕೆ ದೃಢವಾಗಿದ್ದೇವೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ” ಎಂದು ಸ್ಪಷ್ಟಪಡಿಸಿದರು.
1969ರಲ್ಲಿ ಕಾವೇರಿ ವಿವಾದದ ಕುರಿತು ನಡೆದ ರಾಜಕೀಯ ಚರ್ಚೆಗಳು ಹಾಗೂ ಅಂದಿನ ಘಟನಾವಳಿಗಳನ್ನು ಸ್ಮರಿಸಿದ ಅವರು, ಕಾವೇರಿ ವಿಷಯವನ್ನು ಅತ್ಯಂತ ಜಾಗರೂಕತೆ ಮತ್ತು ಗಂಭೀರತೆಯಿಂದ ನಿಭಾಯಿಸಬೇಕಾಗಿದೆ ಎಂದರು.
ಬೆಂಗಳೂರು ಭೇಟಿ ಪ್ರಸ್ತಾವನೆ ಮತ್ತು ಸ್ಪಷ್ಟನೆ
ಕಾವೇರಿ ಹಾಗೂ ಮೇಕೆದಾಟು ವಿವಾದವನ್ನು ಸೌಹಾರ್ದಯುತವಾಗಿ ಹಾಗೂ ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬೆಂಗಳೂರಿಗೆ ಭೇಟಿ ನೀಡುವ ಪ್ರಸ್ತಾವನೆಯೊಂದನ್ನು ಮುಖ್ಯಮಂತ್ರಿ ವಿಜಯ್ ಹೊಂದಿದ್ದರು.
ಆದರೆ ಈ ಪ್ರಸ್ತಾವನೆ ಕುರಿತು ತಮಿಳುನಾಡು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳು ಶುರುವಾದ ಹಿನ್ನೆಲೆಯಲ್ಲಿ ಸದನದಲ್ಲಿ ಸ್ಪಷ್ಟನೆ ನೀಡಿದ ಅವರು, “ಕರ್ನಾಟಕದ ನಾಯಕರೊಂದಿಗೆ ಅಥವಾ ಬೆಂಗಳೂರು ಭೇಟಿಯ ವೇಳೆ ನಡೆಯುವ ಯಾವುದೇ ಮಾತುಕತೆಯು ತಮಿಳುನಾಡಿನ ಕಾವೇರಿ ನದಿ ನೀರಿನ ಮೇಲಿನ ಕಾನೂನಾತ್ಮಕ ಹಕ್ಕಿನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲ್ಲ ಅಥವಾ ನಿಲುವನ್ನು ಸಡಿಲಗೊಳಿಸುವುದಿಲ್ಲ” ಎಂದು ಖಾತ್ರಿಪಡಿಸಿದರು.


