ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ-ಮನೆ ಗಣತಿ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದ್ದು, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಆಡಳಿತಾತ್ಮಕ ಮತ್ತು ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಕೋರಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಆಯೋಗವು, ಹೊಸ ವೇಳಾಪಟ್ಟಿಯೊಂದಿಗೆ ಅಧಿಕೃತ ಆದೇಶ ಹೊರಡಿಸಿದೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಕೋರಿಕೆಯ ಮೇರೆಗೆ ಆಯೋಗವು ಇಂದು (ಆಗಸ್ಟ್ 7, 2026) ಈ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪರಿಷ್ಕೃತ SIR ವೇಳಾಪಟ್ಟಿ ಹೀಗಿದೆ:
- ಬಿಎಲ್ಒಗಳ (BLO) ಮನೆ-ಮನೆ ಭೇಟಿ ಗಡುವು: ಜೂನ್ 30, 2026 ರಿಂದ ಆಗಸ್ಟ್ 17, 2026ರವರೆಗೆ ವಿಸ್ತರಣೆ.
- ಮತಗಟ್ಟೆಗಳ ಪುನರ್ರಚನೆ/ಮರುಸಂಯೋಜನೆ: ಆಗಸ್ಟ್ 17, 2026.
- ಕರಡು ಮತದಾರರ ಪಟ್ಟಿ ಪ್ರಕಟಣೆ: ಆಗಸ್ಟ್ 24, 2026.
- ಆಕ್ಷೇಪಣೆ ಹಾಗೂ ಹಕ್ಕುಗಳ ಸಲ್ಲಿಕೆ ಅವಧಿ: ಆಗಸ್ಟ್ 24 ರಿಂದ ಸೆಪ್ಟೆಂಬರ್ 23, 2026.
- ನೋಟಿಸ್ ಜಾರಿ ಹಾಗೂ ಆಕ್ಷೇಪಣೆಗಳ ಇತ್ಯರ್ಥ: ಆಗಸ್ಟ್ 24 ರಿಂದ ಅಕ್ಟೋಬರ್ 22, 2026.
- ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಅಕ್ಟೋಬರ್ 27, 2026.
ನಾಗರಿಕ ಸಮಿತಿಗಳ ಒತ್ತಡ:
ಹಿಂದಿನ ವೇಳಾಪಟ್ಟಿಯ ಪ್ರಕಾರ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮೊದಲ ಹಂತವಾದ ಗಣತಿ ನಮೂನೆಗಳನ್ನು ಭರ್ತಿ ಮಾಡಿ ವಾಪಸ್ ನೀಡಲು ನಾಳೆ (ಆಗಸ್ಟ್ 8) ಕೊನೆಯ ದಿನ ಎಂದು ಹೇಳಲಾಗಿತ್ತು.
ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ವಿವಿಧ ನಾಗರಿಕ ವೇದಿಕೆಗಳು (Citizen Forums) ಹಾಗೂ ಮತ ಕಾವಲು ಸಮಿತಿಗಳಿಂದ ವ್ಯಕ್ತವಾಗಿದ್ದ ತೀವ್ರ ಆಕ್ಷೇಪಣೆ ಹಾಗೂ ಒತ್ತಡಕ್ಕೆ ಕೊನೆಗೂ ಭಾರತೀಯ ಚುನಾವಣಾ ಆಯೋಗ (ECI) ಮಣಿದಿದೆ. ಬಿಎಲ್ಒ (BLO) ಮನೆ-ಮನೆ ಗಣತಿ ಹಾಗೂ ನಮೂನೆ ಸಲ್ಲಿಕೆಯ ಗಡುವನ್ನು ಆಗಸ್ಟ್ 17, 2026 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ರಾಜ್ಯಾದ್ಯಂತ ಲಕ್ಷಾಂತರ ಮತದಾರರಿಗೆ ಇನ್ನೂ ಗಣತಿ ನಮೂನೆಗಳು ತಲುಪದಿರುವುದು, ನಗರ ಪ್ರದೇಶಗಳಲ್ಲಿ ಮನೆ-ಮನೆ ಭೇಟಿಗೆ ಕಾಲಾವಕಾಶ ಸಾಲದಿರುವುದು ಮತ್ತು ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಗಡುವು ವಿಸ್ತರಿಸುವಂತೆ ವಿವಿಧ ಸಾಮಾಜಿಕ ಸಂಘಟನೆಗಳು ಹಾಗೂ ನಾಗರಿಕ ಜಾಗೃತಿ ವೇದಿಕೆಗಳು ಸರ್ಕಾರ ಮತ್ತು ಆಯೋಗದ ಮೇಲೆ ತೀವ್ರ ಒತ್ತಡ ಹೇರಿದ್ದವು.
ಈ ಹೊಸ ವೇಳಾಪಟ್ಟಿಯ ಕುರಿತು ರಾಜ್ಯದ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಲಿಖಿತ ರೂಪದಲ್ಲಿ ಅಧಿಕೃತ ಮಾಹಿತಿ ತಲುಪಿಸಬೇಕು ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಜೊತೆಗೆ, ಸಾರ್ವಜನಿಕರಿಗೆ ಯಾವುದೇ ರೀತಿಯ ಗೊಂದಲವಾಗದಂತೆ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.


