ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ದೇಶದೊಳಗೆ ಪ್ರವೇಶಿಸುವುದನ್ನು ತಡೆಯುವಂತೆ ಕೆನಡಾದ 40ಕ್ಕೂ ಹೆಚ್ಚು ನಾಗರಿಕ, ಮಾನವ ಹಕ್ಕುಗಳು, ಕಾರ್ಮಿಕ ಮತ್ತು ಧಾರ್ಮಿಕ ಸಂಘಟನೆಗಳು ಅಲ್ಲಿನ ಸಾರ್ವಜನಿಕ ಸುರಕ್ಷತಾ ಸಚಿವರಿಗೆ ಒತ್ತಾಯಿಸಿವೆ ಎಂದು ವರದಿಯಾಗಿದೆ.
ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಮೋಹನ್ ಭಾಗವತ್ ಕೆನಡಾ ಭೇಟಿ ನಿಗದಿಯಾಗಿದೆ. ಈ ಹಿನ್ನೆಲೆ ಸಂಘಟನೆಗಳು ಒಟ್ಟಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರಿ ಅವರಿಗೆ ಬರೆದ ಪತ್ರದಲ್ಲಿ ಸಂಘಟನೆಗಳು, ಮೋಹನ್ ಭಾಗವತ್ ಅವರ ಪ್ರಸ್ತಾವಿತ ಭೇಟಿಯು ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗೆ ಕಳವಳ ತಂದೊಡ್ಡುತ್ತದೆ ಎಂದು ಹೇಳಿವೆ.
ಆರ್ಎಸ್ಎಸ್ ಧಾರ್ಮಿಕ ಬಹುಸಂಖ್ಯಾತವಾದ, ಬೆದರಿಕೆ ಹಾಗೂ ಗಡಿಯಾಚೆಗಿನ ದಬ್ಬಾಳಿಕೆಯೊಂದಿಗೆ ನಂಟನ್ನು ಹೊಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಂಘಟನೆಗಳು, ಈ ಕಾರಣಗಳಿಗಾಗಿ ಭಾಗವತ್ ಭೇಟಿಯನ್ನು ವಿರೋಧಿಸಿವೆ.
ಕೆನಡಾದ ವಲಸಿಗ ಸಮುದಾಯಗಳಲ್ಲಿನ ಹೋರಾಟಗಾರರು, ಶಿಕ್ಷಣ ತಜ್ಞರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರ ಮೇಲಿನ ಕಿರುಕುಳ ಹಾಗೂ ಆರ್ಎಸ್ಎಸ್ ನಂಟು ಹೊಂದಿರುವ ನೆಟ್ವರ್ಕ್ಗಳ ನಡುವಿನ ಸಂಬಂಧವನ್ನು ಉಲ್ಲೇಖಿಸಿರುವ ಸಂಘಟನೆಗಳು, ಕೆನಡಾದ ಕಾನೂನುಗಳ ಅಡಿಯಲ್ಲಿ ಮೋಹನ್ ಭಾಗವತ್ ಅವರ ಪ್ರವೇಶಾರ್ಹತೆಯನ್ನು ಪರಿಶೀಲಿಸಬೇಕು ಎಂದು ಸಚಿವರಿಗೆ ಆಗ್ರಹಿಸಿವೆ.
ಸಚಿವರಿಗೆ ಮನವಿ ಸಲ್ಲಿಸಿದ ಸಂಘಟನೆಗಳಲ್ಲಿ ಕೆನಡಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ & ಡೆಮಾಕ್ರಸಿ ಇನ್ ಇಂಡಿಯಾ, ಕೆನಡಿಯನ್ ಕೌನ್ಸಿಲ್ ಆಫ್ ಇಂಡಿಯನ್ ಮುಸ್ಲಿಮ್ಸ್, ಕೆನಡಿಯನ್ಸ್ ಫಾರ್ ಇಂಡಿಯನ್ ಡೆಮಾಕ್ರಸಿ, ಸೌತ್ ಏಷ್ಯನ್ ದಲಿತ್ ಆದಿವಾಸಿ ನೆಟ್ವರ್ಕ್, ವರ್ಲ್ಡ್ ಸಿಖ್ ಆರ್ಗನೈಸೇಶನ್, ಕೆನಡಿಯನ್ ಕೌನ್ಸಿಲ್ ಆಫ್ ಮುಸ್ಲಿಂ ವುಮೆನ್, ಇಂಡಿಪೆಂಡೆಂಟ್ ಯಹೂದಿ ವಾಯ್ಸಸ್ ಕೆನಡಾ, ಜಸ್ಟ್ ಪೀಸ್ ಅಡ್ವೊಕೇಟ್ಸ್, ಸೌತ್ ಏಷ್ಯನ್ ವುಮೆನ್ಸ್ & ಇಮ್ಮಿಗ್ರಂಟ್ಸ್ ಸರ್ವೀಸಸ್, ಫೆಡರೇಶನ್ ಡೆಸ್ ಫೆಮ್ಮೆಸ್ ಡು ಕ್ವಿಬೆಕ್, ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಮಿಷನ್, ಟೊರೊಂಟೊ ಈಸ್ಟ್ ಆಂಟಿ-ಹೇಟ್ ಮೊಬಿಲೈಸೇಶನ್ ಮತ್ತು ಏಷ್ಯನ್ ಕೆನಡಿಯನ್ ಲೇಬರ್ ಅಲೈಯನ್ಸ್, ಇತರವು ಸೇರಿವೆ.
“ನಮ್ಮ ಸಮುದಾಯಗಳನ್ನು ಬಲಪಂಥೀಯ ಉಗ್ರವಾದ, ದ್ವೇಷ ಭಾಷಣ ಮತ್ತು ವಿದೇಶಿ ಬೆದರಿಕೆಗಳಿಂದ ರಕ್ಷಿಸಲು ಸಚಿವ ಆನಂದಸಂಗರಿ ಅವರು ಕೆನಡಾದ ಕಾನೂನನ್ನು ಜಾರಿಗೊಳಿಸಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
“ಹಿಂಸಾತ್ಮಕ ಅರೆಸೇನಾ ಸಂಘಟನೆಯ ಮುಖ್ಯಸ್ಥರಿಗೆ ಕೆನಡಾಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುವುದು ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಯಹೂದಿಗಳು ಮತ್ತು ದಲಿತರು ಸೇರಿದಂತೆ ದುರ್ಬಲ ಅಲ್ಪಸಂಖ್ಯಾತ ಜನಸಂಖ್ಯೆಗೆ ಬೆದರಿಕೆಯೊಡ್ಡುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸಂಘಟನೆಯ ಜಾಗತಿಕ ವಿಸ್ತರಣಾ ಪ್ರಯತ್ನಗಳ ಭಾಗವಾಗಿ ಅಮೆರಿಕಕ್ಕೆ ಭೇಟಿ ನೀಡಿದ ಬಳಿಕ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೆನಡಾಕ್ಕೆ ತಮ್ಮ ಮೊಟ್ಟಮೊದಲ ಭೇಟಿಗೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲೇ ಈ ಸಂಘಟನೆಗಳ ಒಕ್ಕೂಟವು ಸಚಿವರಿಗೆ ಮನವಿ ಮಾಡಿದೆ.


