ಛತ್ರಪತಿ ಸಂಭಾಜಿನಗರದಲ್ಲಿರುವ ತಮ್ಮ ಮನೆಯಲ್ಲಿ ಭದ್ರತಾ ಪಡೆಯ ಭಾಗವಾಗಿ ನಿಯೋಜಿಸಲಾದ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಪಿಎಸ್ಐ) ಅವರು, ಜನರು ನಮ್ಮನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದಿಪ್ಕೆ ಆರೋಪ ಮಾಡಿದ್ದು, ಅವರನ್ನು ಕರ್ತವ್ಯದಿಂದ ತೆಗೆದುಹಾಕುವಂತೆ ಒತ್ತಾಯಿಸಿದರು.
ಭದ್ರತಾ ಅಧಿಕಾರಿಯು ಮನೆಗೆ ಭೇಟಿ ನೀಡುವವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ, ಮಧ್ಯ ಮಹಾರಾಷ್ಟ್ರ ನಗರದ ವಾಲುಜ್ ಎಂಐಡಿಸಿ ಪ್ರದೇಶದಲ್ಲಿ ತಮ್ಮ ನಿವಾಸಕ್ಕೆ ಪ್ರವೇಶಿಸುವ ಜನರನ್ನು ನಿರ್ಬಂಧಿಸುವ ಜೊತೆಗೆ ಮೇಲ್ವಿಚಾರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
“ರಾಜ್ಯ ಸಿಐಡಿ ಸಿಬ್ಬಂದಿ ತಮ್ಮ ನಿವಾಸದ ಬಳಿ ಸಾಮಾನ್ಯ ಉಡುಪಿನಲ್ಲಿ ಸುತ್ತಾಡುತ್ತಿದ್ದಾರೆ, ಬಳಿಕ ಅವರು ‘ಹಿಟ್ ಸ್ಪ್ರೇ’ ಎಂಬ ಸಾಮಾಜಿಕ ಮಾಧ್ಯಮ ಗುಂಪಿನಲ್ಲಿ ವರದಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಹಿರಿಯ ಪೊಲೀಸ್ ಅಧಿಕಾರಿ ಮತ್ತು ಅವರ ನಿವಾಸದಲ್ಲಿ ಪಿಎಸ್ಐ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿರುವ ವೀಡಿಯೊಗಳು ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ.
ಸಂಭಾಷಣೆಯ ಸಮಯದಲ್ಲಿ, ದೀಪ್ಕೆ ಪಿಎಸ್ಐಗೆ ಗದರಿದ್ದಾರೆ. ತಮ್ಮ ಮನೆಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ತಂಡದಿಂದ ಅಧಿಕಾರಿಯನ್ನು ಕೂಡಲೇ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
“ನಾನೇ ಜನರನ್ನು ಒಳಗೆ ಬರಲು ಹೇಳಿದ ಮೇಲೆ ಅವರನ್ನು ಮನೆಗೆ ಬರಲು ಬಿಡುವುದರಲ್ಲಿ ಸಮಸ್ಯೆ ಏನು? ನೀವು ದೆಹಲಿ ಪೊಲೀಸರಂತೆ ಏಕೆ ವರ್ತಿಸುತ್ತಿದ್ದೀರಿ? ಇಂದಿನವರೆಗೆ ಯಾವುದೇ ಸಮಸ್ಯೆ ಬಂದಿಲ್ಲ. ನಾನು ನಿಮ್ಮನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ. ನಾನು ಯಾರನ್ನು ಭೇಟಿಯಾಗಬೇಕು, ಯಾರನ್ನು ಭೇಟಿಯಾಗಬಾರದು ಎಂದು ನೀವು ನನಗೆ ಹೇಳುವುದಕ್ಕೆ ಸಾಧ್ಯವಿಲ್ಲ” ಎಂದು ದೀಪ್ಕೆ ವೀಡಿಯೊ ಒಂದರಲ್ಲಿ ಸಿವಿಲ್ ಡ್ರೆಸ್ನಲ್ಲಿರುವ ಪಿಎಸ್ಐಗೆ ಹೇಳಿದ್ದಾರೆ.
“ದಯವಿಟ್ಟು ಹೊರಗೆ ಹೋಗಿ, ನೀವು ನನ್ನ ಮನೆಯಲ್ಲಿ ಇರಬಾರದು” ಎಂದು ಅವರು ಪಿಎಸ್ಐಗೆ ಹೇಳಿದ್ದಾರೆ.
ಎರಡನೇ ವೀಡಿಯೊದಲ್ಲಿ, ದೀಪ್ಕೆ ಅವರು ಪಿಎಸ್ಐ ಬಗ್ಗೆ ದೂರವಾಣಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗೆ ದೂರು ನೀಡುತ್ತಿರುವುದು ರೆಕಾರ್ಡ್ ಆಗಿದೆ.
“ಸುರೇಶ್ ಎಂಬ ಪಿಎಸ್ಐ ಇಲ್ಲಿಗೆ ಬಂದಿದ್ದಾರೆ, ಅವರು ನನ್ನನ್ನು ಭೇಟಿಯಾಗಲು ಬರುವ ಜನರೊಂದಿಗೆ ತುಂಬಾ ಅಸಭ್ಯವಾಗಿ ವರ್ತಿಸುತ್ತಾರೆ. ಅವರು ಜನರನ್ನು ಹೊರಗೆ ಹೋಗುವಂತೆ ಹೇಳುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆಯೇ? ನನಗೆ ಅವರು ಬೇಡ; ಅವರನ್ನು ಇಲ್ಲಿಂದ ತೆಗೆದುಹಾಕಿ” ಎಂದು ಅಭಿಜೀತ್ ಪೊಲೀಸ್ ಅಧಿಕಾರಿಗೆ ಹೇಳಿದ್ದಾರೆ.
ಅದೇ ಕರೆಯಲ್ಲಿ, ರಾಜ್ಯ ಸಿಐಡಿ ಸಿಬ್ಬಂದಿ ತಮ್ಮ ಮನೆಯ ಸುತ್ತಲೂ ಓಡಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
“ಕೆಲವು ಸಿಐಡಿ ಜನರು ನನ್ನ ಮನೆಯ ಬಳಿ ಕಾಣಿಸಿಕೊಂಡಿದ್ದಾರೆ ಎಂದು ವರದಿಗಾರರೊಬ್ಬರು ನನಗೆ ಹೇಳಿದರು. ಪೊಲೀಸರು ಅವರನ್ನು ಅಲ್ಲಿಂದ ಕಳಿಸಲು ಪ್ರಯತ್ನಿಸಿದಾಗ, ಅವರು ಸಿಐಡಿಯವರು ಎಂದು ಬಹಿರಂಗಪಡಿಸಿದರು. ಸಿಐಡಿ ಸಿಬ್ಬಂದಿಗಳಲ್ಲಿ ಒಬ್ಬರ ಫೋನ್ನಲ್ಲಿ ವಾಟ್ಸಾಪ್ ಗುಂಪು ಮಾಡಿರುವುದನ್ನು ವರದಿಗಾರ ನೋಡಿದ್ದಾರೆ. ‘ಹಿಟ್ ಸ್ಪ್ರೇ’ ಎಂದು ಆ ಗುಂಪಿಗೆ ಹೆಸರಿಡಲಾಗಿದೆ. ಅವರು ತಮ್ಮ ವರದಿಗಳನ್ನು ಆ ಗುಂಪಿನ ಮೂಲಕ ಕಳುಹಿಸುತ್ತಿದ್ದಾರೆ ಎಂದು ವರದಿಗಾರ ನನಗೆ ಹೇಳಿದರು” ಎಂದು ದಿಪ್ಕೆ ಹೇಳಿದ್ದಾರೆ.


