ಗೋಕಳ್ಳತನ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ಯುವಕನನ್ನು ಗುಂಪೊಂದು ಥಳಿಸಿ ಕೊಲೆ ಮಾಡಿರುವ ಘಟನೆ ಅಸ್ಸಾಂನ ಹೊಜೈ ಜಿಲ್ಲೆಯ ಲಂಕಾ ಪ್ರದೇಶದಲ್ಲಿರುವ ಬಮುಂಗಾವ್ ಗ್ರಾಮದಲ್ಲಿ ನಡೆದಿದೆ.
ಆಗಸ್ಟ್ 12 ರಂದು ಈ ಘಟನೆ ಸಂಭವಿಸಿದೆ. ಗುಂಪೊಂದು ನಡೆಸಿದ ಮಾನುಷ ಹಲ್ಲೆಯಿಂದಾಗಿ ಮಾನಸಿಕ ಅಸ್ವಸ್ಥ ಯುವಕ ಹಿಫ್ಜುರ್ ರೆಹಮಾನ್(23) ಮೃತಪಟ್ಟಿದ್ದಾರೆ.
ಮಾನಸಿಕ ಅಸ್ವಸ್ಥನಾಗಿದ್ದ 23 ವರ್ಷದ ರೆಹಮಾನ್, ಹಿಂದೂ ಪ್ರಾಬಲ್ಯವಿರುವ ಬಮುಂಗಾವ್ ಗ್ರಾಮಕ್ಕೆ ಬಂದಿದ್ದಾನೆ.ಈ ಹಿಂದೆ ಆ ಪ್ರದೇಶದಲ್ಲಿ ಗೋವುಗಳ ಕಳ್ಳತನ ನಡೆದಿತ್ತು. ಇದರಿಂದಾ ಗ್ರಾಮಸ್ಥರು ನಿಗಾ ಇಟ್ಟಿದ್ದರು. ಅಪರಿಚಿತನಾಗಿದ್ದ ರೆಹಮಾನ್ ಗ್ರಾಮಕ್ಕೆ ಬಂದಿದ್ದು, ಅವನನ್ನು ಗೋಕಳ್ಳನೆಂದು ಶಂಕಿಸಿ ಗುಂಪು ಕ್ರೂರವಾಗಿ ಥಳಿಸಿದೆ.ನಂತರ ಅದೇ ಗುಂಪು ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದೆ.
ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಅಲ್ಲಿ ರೆಹಮಾನ್ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ರೆಹಮಾನ್ ಅವರ ಕುಟುಂಬವು ಹಸು ಕಳ್ಳತನದ ಆರೋಪಗಳನ್ನು ನಿರಾಕರಿಸಿದೆ. ರೆಹಮಾನ್ ಮಾನಸಿಕ ಅಸ್ವಸ್ಥನಾಗಿದ್ದ. ರೆಹಮಾನ್ ಅವರ ಸಹೋದರ ಇಮ್ರುಲ್ ಹೇಳಿದ್ದಾರೆ. ನನ್ನ ಸಹೋದರ ಹಸಿವಾದರೆ ಅಂಗಡಿಗಳಿಂದ ಕೇಳಿ ತಿಂದಿದ್ದ. ಈವರೆಗೆ ಕಳ್ಳತನ ಮಾಡಿದ ವ್ಯಕ್ತಿ ಅಲ್ಲ. ಮಾನಸಿಕ ಅಸ್ವಸ್ಥನಾದ ಸಹೋದರನ ಮೇಲೆ ನಡೆದ ಕೃತ್ಯಕ್ಕೆ ಇಮ್ರುಲ್ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ಥಳೀಯ ಅಧಿಕಾರಿಗಳು ಪ್ರತಿಕ್ರಿಯಿಸಿ, ರೆಹಮಾನ್ ಹತ್ಯೆಗೆ ಸಂಬಂಧಿಸಿದಂತೆ ಸಂಜೋಯ್ ದಾಸ್, ನಿಖಿಲ್ ದಾಸ್, ತುಳೇಂದ್ರ ದಾಸ್, ಉತ್ತಮ್ ಚಕ್ರಬರ್ತಿ, ಜಯಂತ ಚಕ್ರಬರ್ತಿ ಮತ್ತು ಸನಂದು ಮಜುಂದಾರ್. ಎಂಬವರನ್ನು ಬಂಧಿಸಲಾಗಿದೆ. ಬಂಧಿತರ ಮೇಲೆ ಐಪಿಸಿ 302 ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.