ಪ್ರೆಸ್ ಇನ್ಫರ್ಮೇಶನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್ಚೆಕ್ ವಿಂಗ್ ವಲಸೆ ಕಾರ್ಮಿಕರ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ಮಾಧ್ಯಮ ವರದಿಗಳನ್ನು ತಪ್ಪು ಎಂದು ಘೋಷಿಸಿದೆ. ಆದರೆ ವಾಸ್ತವ ಬೇರೆಯೇ ಇದೆ. ಅವುಗಳೆಂದರೆ
1 ತಾಯಿಯ ಸಾವು…
ಮಗುವೊಂದು ಸತ್ತ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ಹೃದಯ ವಿದ್ರಾವಕ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದ್ದು ದೇಶಾದ್ಯಂತ ವ್ಯಾಪಕ ಚರ್ಚೆಗೊಳಗಾಗಿತ್ತು. ಆ ತಾಯಿ 23 ವರ್ಷದ ಅರ್ವಿನಾ ಕಾಥೂನ್ ಎಂಬುವವರು ಹಸಿವು, ಬಾಯಾರಿಕೆ ಮತ್ತು ಬಿಸಿಲಿನ ಝಳ ತಾಳಲಾರದೆ ಸಾವನಪ್ಪಿದ್ದಾರೆ. ಆಕೆ ರೈಲಿನಲ್ಲಿ ಅಹಮದ್ಬಾದ್ನಿಂದ ಹೊರಟಾಗಿನಿಂದಲೂ ಆಹಾರ ನೀರು ಸಿಕ್ಕಿರಲಿಲ್ಲ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ ಪಿಐಬಿ ಮಾಧ್ಯಮಗಳ ವರದಿ ತಪ್ಪು ಮತ್ತು ಕಲ್ಪನೆಯಿಂದ ಕೂಡಿವೆ. ಅರ್ವಿನಾ ಮೊದಲೇ ಹಲವು ರೋಗಗಳಿಂದ ಬಳಲುತ್ತಿದ್ದಳು ಹಾಗಾಗಿ ಸಾವನಪ್ಪಿದ್ದಾಳೆ ಎಂದು ಷರಾ ಬರೆದಿದೆ.
#दावा: वायरल वीडियो में मुजफ्फरपुर स्टेशन पर एक महिला की भूख-प्यास से हुई मौत को दिखाया जा रहा है#factcheck: गलत और भ्रामक है। महिला के पहले से ही बीमार होने की पुष्टि उसके परिवार ने की है। pic.twitter.com/XIsP9c8Esm
— PIB In Bihar ?? Mask yourself ? (@PIB_Patna) May 27, 2020
ಫ್ಯಾಕ್ಟ್ಚೆಕ್:
ಅರ್ವಿನಾ ಜೊತೆಗೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆಕೆಯ ತಂಗಿ ಕೊಹಿನೂರ್ ಮತ್ತು ಮೊಹಮ್ಮದ್ ವಾಜಿರ್ ಇಬ್ಬರೂ ಸಹ ಆಕೆಗೆ ಯಾವುದೇ ರೋಗವಿರಲಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ರೈಲು ಹತ್ತುವ ಮುನ್ನ ಡಾಕ್ಟರ್ ಬಳಿ ತಪಾಸಣೆ ನಡೆಸಿದ್ದು, ಅದರಲ್ಲಿ ಅರ್ವಿನಾ ಚೆನ್ನಾಗಿದ್ದಾಳೆ ಎಂಬ ವರದಿ ಬಂದಿದೆ ಎಂದು ಅವರು ಹೇಳಿದ್ದಾರೆ.
ಆಕೆಯ ತಂದೆ ತಾಯಿ ಇಬ್ಬರೂ ಸಹ ಆಕೆ ಚೆನ್ನಾಗಿದ್ದಳು, ಲಾಕ್ಡೌನ್ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದರಿಂದ ಊರಿಗೆ ಬರಲು ಬಯಸಿದ್ದಳು ಎಂದು ಹೇಳಿದ್ದಾರೆ.
ಇನ್ನು ಮುಖ್ಯವಾಗಿ ಪಿಐಬಿ ಆಕೆ ಸಾವನಪ್ಪಲು ಯಾವ ರೋಗದಿಂದ ಬಳಲುತ್ತಿದ್ದಳು ಎಂಬದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಅಲ್ಲದೇ ಆಕೆ ರೋಗದಿಂದ ಬಳಲುತ್ತಿದ್ದಳು ಎಂಬುದಕ್ಕೆ ಯಾವುದೇ ವೈದ್ಯಕೀಯ ದಾಖಲೆಗಳು ಸಹ ಇಲ್ಲ. ಇನ್ನು ಸರ್ಕಾರ ಆಕೆಯ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿಲ್ಲ. ಇಷ್ಟೆಲ್ಲ ತೊಡಕುಗಳಿದ್ದರೂ ಪಿಐಬಿ ಆಕೆ ಮುಂಚೆಯೇ ರೋಗದಿಂದ ಬಳಲುತ್ತಿದ್ದಳು ಎಂದು ಹೇಗೆ ಹೇಳಿತು?
ಪಿಐಬಿ ಒಂದನ್ನು ಮಾತ್ರ ಹೇಳುತ್ತಿದೆ. ಅದೆಂದರೆ ಆಕೆ ಮೊದಲೇ ರೋಗದಿಂದ ಬಳಲುತ್ತಿದ್ದಳು ಎಂದು ಆಕೆಯ ಸಂಬಂಧಿ ಮೊಹಮ್ಮದ್ ವಾಜಿರ್ ಹೇಳಿಕೆಯೊಂದಕ್ಕೆ ಹೆಬ್ಬೆಟ್ಟಿನ ಗುರುತು ಒತ್ತಿ ಸಹಿ ಮಾಡಿದ್ದಾರೆ ಎಂದು ವಾದಿಸಿದೆ. ಆದರೆ ಈ ಬಗ್ಗೆ ಮೊಹಮ್ಮದ್ “ನನಗೆ ಓದಲು ಮತ್ತು ಬರೆಯಲು ಬರುವುದಿಲ್ಲ. ಆ ಹೇಳಿಕೆಯನ್ನು ನಾನು ಬರೆದಿಲ್ಲ ಮತ್ತು ನನಗೆ ಅದರಲ್ಲಿ ಏನಿದೆ ಎಂದು ಯಾರೂ ಓದಿ ಹೇಳಿಲ್ಲ, ಸಹಿ ಮಾಡಿ ಎಂದಾಗ ನಾನು ಹೆಬ್ಬೆಟ್ಟು ಒತ್ತಿದೆ” ಎನ್ನುತ್ತಾರೆ.
2 ನಾಲ್ಕು ವರ್ಷದ ಮಗುವಿನ ಸಾವು
ಮೇ 28ರಂದು ಪತ್ರಕರ್ತೆ ರಾಣ ಅಯ್ಯೂಬ್ರವರು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದ ಮುಜಾಫರ್ಪುರದ ನಾಲ್ಕು ವರ್ಷದ ಮಗುವಿನ ಸಾವಿನ ಸುದ್ದಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ರೈಲ್ವೇ ಸಚಿವಾಲಯದ ವಕ್ತಾರರ ಹೇಳಿಕೆಯನ್ನು ಪಿಐಬಿ ರೀಟ್ವೀಟ್ ಮಾಡಿದೆ. ಅದರಲ್ಲಿ “ಆ ಮಗು ಮೊದಲೇ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು ದೆಹಲಿಯಿಂದ ಹಿಂದಿರುವಾಗ ರೈಲಿನಲ್ಲಿ ಮೃತಪಟ್ಟಿದೆ. ಹಾಗಾಗಿ ಪರಿಶೀಲಿಸದ ಸುದ್ದಿಗಳನ್ನು ಪ್ರಕಟಿಸಬೇಡಿ” ಎಂದು ತಾಕೀತು ಮಾಡಿದೆ.
ಫ್ಯಾಕ್ಟ್ಚೆಕ್
ಈ ಕುರಿತು ಆಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ ನಡೆಸಿದ್ದು ಆ ಮಗು ಇರ್ಷದ್ ನ ತಂದೆ ಮೊಹ್ಮಮ್ಮದ್ ಪಿಂಟುರವರನ್ನು ಮಾತನಾಡಿಸಿದೆ. ಅವರು “ಇರ್ಷದ್ಗೆ ಯಾವುದೇ ಸಮಸ್ಯೆಯಿರಲಿಲ್ಲ ಮತ್ತು ಯಾವುದೇ ಚಿಕಿತ್ಸೆ ಸಹ ಕೊಡಿಸಿಲ್ಲ. ನಾವು ಮೇ 23ರಂದು ಮುಂಬೈನಿಂದ ಪಾಟ್ನಾಗೆ ಪ್ರಯಾಣಿಸುತ್ತಿದ್ದೆವು. ದೆಹಲಿ ಸರ್ಕಾರ ನಮಗೆ ಊಟ ನೀರು ನೀಡಿತ್ತು. ರೈಲಿಗೆ ದರ ಸಹ ವಿಧಿಸಿರಲಿಲ್ಲ. ಅಂದು ರಾತ್ರಿ ಲಕ್ನೋ ಸ್ಟೇಷನ್ನಲ್ಲಿ ನಮಗೆ ಚಿಕ್ಕ ಊಟದ ಪ್ಯಾಕೆಟ್ ಮತ್ತು ನೀರು ಕೊಟ್ಟರು. ಅಲ್ಲಿಂದ ಮುಂದಕ್ಕೆ ನಾಲ್ಕು ದಿನ ನಮಗೆ ಏನೇನು ಸಿಗಲಿಲ್ಲ. ಟ್ರೈನ್ ನಿಲ್ಲಿಸಿದ ಸ್ಥಳಗಳಲ್ಲಿ ತಿನ್ನಲು ಏನೂ ಸಿಗಲಿಲ್ಲ. ನಮ್ಮ ಕುಟುಂಬದ ಹದಿನಾರು ಜನ ಒಟ್ಟಿಗೆ ಹಸಿದುಕೊಂಡೇ ಪ್ರಯಾಣಿಸುತ್ತಿದ್ದೆವು. ಮಕ್ಕಳು ಬಿಸಿಲು ಬಾಯಾರಿಕೆಯಿಂದ ಬಳಲುತ್ತಿದ್ದರು. ನಾವು ಪಾಟ್ನ ತಲುಪಿ ಅಲ್ಲಿಂದ ದಾನಾಪುರಕ್ಕೆ ಬಂದು ರಾತ್ರಿ ಹತ್ತರ ವೇಳೆಗೆ ಮುಜಾಫರ್ಪುರಕ್ಕೆ ಬಂದಿಳಿದೆವು. ರಾತ್ರಿಯಿಂದ ಬೆಳಿಗ್ಗೆವರೆಗೆ ಕಾಯ್ದರೂ ಯಾವುದೇ ಸಾರಿಗೆ ವ್ಯವಸ್ಥೆ ಸಿಗಲಿಲ್ಲ. ಈ ನಡುವೆ ನಮ್ಮ ಮಗು ಇರ್ಷದ ಮೃತಪಟ್ಟ’ ಎನ್ನುತ್ತಾರೆ.
ಇರ್ಷದ್ ಆರೋಗ್ಯವಾಗಿಯೇ ಇದ್ದ. ರೈಲು ಹತ್ತುವ ಮುನ್ನ ನಡೆಸಿದ ಮೆಡಿಕಲ್ ಚೆಕಪ್ ನಡೆಸಲಾಗಿತ್ತು. ಅಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಸಮಸ್ಯೆಯಿದ್ದರೆ ರೈಲು ಹತ್ತಲು ಸಹ ಬಿಡುವುದಿಲ್ಲ ಅಲ್ಲವೆ ಎಂದು ಅವರು ಪ್ರಶ್ನಿಸುತ್ತಾರೆ..
3 ಇಬ್ಬರ ಸಾವು
ಮೇ 27ರಂದು ರೈಲ್ವೇ ಸಚಿವಾಲಯದ ವಕ್ತಾರರ ಟ್ವೀಟ್ ಅನ್ನು ಪಿಐಬಿ ರೀಟ್ವೀಟ್ ಮಾಡಿದೆ. ಅದರಲ್ಲಿ ಮುಂಬೈನಿಂದ ವಾರಣಾಸಿಗೆ ತೆರಳುತ್ತಿದ್ದ ರೈಲಿನಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು ಅವರಿಗೆ ಪ್ಯಾರಲೈಸ್, ಕಿಡ್ನಿ ವೈಫಲ್ಯ ಮುಂತಾದ ರೋಗಗಳಿದ್ದವು ಎಂದಿದೆ.
ಫ್ಯಾಕ್ಟ್ಚೆಕ್:
ಮೃತ ವ್ಯಕ್ತಿಗಳಾದ ದಿವ್ಯಾಂಗ್ ದಶರಥ್(30) ಮತ್ತು ರಾಮರ್ಥನ್ ರಘುನಾಥ್ (63) ಅಧಿಕ ಉಷ್ಣಾಂಶ ಮತ್ತು ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದರಲ್ಲಿ ರಾಮರ್ಥನ್ನರವರ ಮಗ ರಾಜೇಶ್ ಮಾತನಾಡಿ “ಅವರಿಗೆ ಯಾವುದೇ ಸಮಸ್ಯೆಯಿರಲಿಲ್ಲ. ಬಿಪಿ ಕೂಡ ಇರಲಿಲ್ಲ. ಅವರು ಪ್ರಯಾಣದ ಸಂದರ್ಭದಲ್ಲಿ ಫೋನ್ನಲ್ಲಿ ಮಾತನಾಡಿದ್ದೇ” ಎಂದಿದ್ದಾರೆ.
ಮೃತಪಟ್ಟವರೆಲ್ಲರೂ ಬಡವರಾಗಿದ್ದು ಅಪೌಷ್ಠಿಕತೆ, ಲಾಕ್ಡೌನ್ನಿಂದಾದ ಆರ್ಥಿಕ ಸಂಕಷ್ಟ, ದಣಿವು, ಹಸಿವು ಎಲ್ಲಾ ಸೇರಿ ಸಾವಿಗೆ ಕಾರಣವಾಗಿದೆ. ಆದರೆ ಪಿಐಬಿ ಮಾತ್ರ ಮೊದಲೇ ಧೀರ್ಘಕಾಲದ ರೋಗ ಇತ್ತು, ಈಗ ರೈಲಿನಲ್ಲಿ ಸತ್ತಿದ್ದಾರೆ ಎಂಬ ಕಾಟಾಚಾರದ ಫ್ಯಾಕ್ಟ್ಚೆಕ್ ಮಾಡಿ ಕೈತೊಳೆದುಕೊಂಡಿದೆ. ಒಟ್ಟಿನಲ್ಲಿ ಪಿಐಬಿ ಬೇಜವಾಬ್ದಾರಿಯಿಂದ ವರ್ತಿಸಿದ್ದು ಬಡಜನರ ಪ್ರಾಣದ ವಿಚಾರದಲ್ಲಿಯೂ ಅಮಾನವೀಯತೆಯಿಂದ ವರ್ತಿಸಿದೆ.
ಇದನ್ನೂ ಓದಿ: ನಕಲಿ ಸುದ್ದಿ ಪ್ರಸಾರ: ಪತ್ರಕರ್ತ ದೀಪಕ್ ಚೌರಾಸಿಯಾಗೆ ಲೀಗಲ್ ನೋಟಿಸ್