ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ 14 ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ನ ಮೊರೆ ಹೋಗಿವೆ. ಸುಪ್ರೀಂ ಕೋರ್ಟ್ ಏಪ್ರಿಲ್ 5ರಂದು ಈ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಯಂತಹ ಸಂಸ್ಥೆಗಳು ಬಿಜೆಪಿಯ ವಿರೋಧಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಪ್ರತಿಪಕ್ಷಗಳು ಹೇಳುತ್ತವೆ.
ವಿರೋಧಿ ಪಕ್ಷದಲ್ಲಿರುವ ನಾಯಕರು ಬಿಜೆಪಿಗೆ ಸೇರಿದ ನಂತರ ಅವರ ಮೇಲಿನ ಪ್ರಕರಣಗಳನ್ನು ಆಗಾಗ್ಗೆ ಕೈಬಿಡಲಾಗುತ್ತದೆ ಅಥವಾ ಅವುಗಳನ್ನು ಸಮಾಧಿ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರತಿಪಕ್ಷಗಳ ಈ ಆರೋಪಗಳನ್ನು ಬಿಜೆಪಿ ನಿರಾಕರಿಸಿದ್ದು, ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ಸಲ್ಲಿಕೆಯನ್ನು ಗಮನಿಸಿ, ಎರಡು ವಾರಗಳಲ್ಲಿ ಪ್ರಕರಣವನ್ನು ಪಟ್ಟಿ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಚರ್ಚೆಯಿಲ್ಲದೆ ಬಜೆಟ್ಗೆ ಅನುಮೋದನೆ; ಸಂಸದೀಯ ಪ್ರಜಾಪ್ರಭುತ್ವದ ”ಕೆಟ್ಟ ಸಂದೇಶ” ಎಂದ ಪಿ ಚಿದಂಬರಂ
ಕೇಂದ್ರ ತನಿಖಾ ಸಂಸ್ಥೆಗಳು ಅನುಸರಿಸಬೇಕಾದ ಬಂಧನದ ಪೂರ್ವ ಮತ್ತು ನಂತರದ ಮಾರ್ಗಸೂಚಿಗಳನ್ನು ಸಹ ಪ್ರತಿಪಕ್ಷಗಳು ಕೋರಿವೆ.
”95% ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧ ಇವೆ. ನಾವು ಬಂಧನ ಪೂರ್ವ ಮಾರ್ಗಸೂಚಿಗಳನ್ನು ಮತ್ತು ಬಂಧನದ ನಂತರದ ಮಾರ್ಗಸೂಚಿಗಳನ್ನು ಕೇಳುತ್ತಿದ್ದೇವೆ” ಎಂದು ಹಿರಿಯ ವಕೀಲ ಸಿಂಘ್ವಿ ಹೇಳಿದರು.
ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ ಪಕ್ಷಗಳು:- ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಜನತಾ ದಳ-ಯುನೈಟೆಡ್, ಭಾರತ್ ರಾಷ್ಟ್ರ ಸಮಿತಿ, ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ, ಶಿವಸೇನೆ (ಉದ್ಧವ್ ಠಾಕ್ರೆ ಬಣ), ನ್ಯಾಷನಲ್ ಕಾನ್ಫರೆನ್ಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಎಡಪಕ್ಷಗಳು ಮತ್ತು ಡಿಎಂಕೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಡೆಪ್ಯೂಟಿ ಮನೀಶ್ ಸಿಸೋಡಿಯಾ ಅವರನ್ನು ಕಳೆದ ತಿಂಗಳು ಸಿಬಿಐ ಮತ್ತು ನಂತರ ಇಡಿ ಬಂಧಿಸಿತ್ತು. ಈ ಬೆಳವಣಿಗೆಯ ನಂತರ ಪ್ರತಿಪಕ್ಷಗಳನ್ನು ಒಟ್ಟುಗೂಡಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೇಜ್ರಿವಾಲ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.