ಮ್ಯಾನ್ಮಾರ್ನ ಜುಂಟಾದಿಂದ ರಾಜ್ಯಕ್ಕೆ ಪ್ರವೇಶಿಸಿರುವ ನಿರಾಶ್ರಿತರ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸುವ ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ನಿರ್ಲಕ್ಷಿಸುವುದಾಗಿ ಮಿಜೋರಾಂ ಸರ್ಕಾರ ಘೋಷಿಸಿದೆ.
ಏಪ್ರಿಲ್ನಲ್ಲಿ ಗೃಹ ಸಚಿವಾಲಯವು ಮಿಜೋರಾಂ ಮತ್ತು ಮಣಿಪುರ ರಾಜ್ಯಗಳಿಗೆ ಬಂದಿರುವ “ಅಕ್ರಮ ವಲಸಿಗರ” ಬಯೋಮೆಟ್ರಿಕ್ ಮತ್ತು ಸ್ವವಿವರಗಳನ್ನು ಸಂಗ್ರಹಿಸಲು ನಿರ್ದೇಶನ ನೀಡಿತ್ತು. ಎರಡೂ ರಾಜ್ಯಗಳು ಮ್ಯಾನ್ಮಾರ್ನೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಜೂನ್ನಲ್ಲಿ, ಸೆಪ್ಟೆಂಬರ್ ಅಂತ್ಯದೊಳಗೆ ಎಷ್ಟು ಜನ ನಿರಾಶ್ರಿತರು ರಾಜ್ಯ ಪ್ರವೇಶಿಸಿದ್ದಾರೆ ಎನ್ನುವ ವಿವರವನ್ನು ಕೇಳಲಾಯಿತು.
ಜುಂಟಾದಿಂದ ಪಲಾಯನ ಮಾಡುತ್ತಿರುವ ಮ್ಯಾನ್ಮಾರ್ನ ಜನರನ್ನು ಮರಳಿ ಕಳಿಸುವ ಗೃಹ ಸಚಿವಾಲಯದ ನಿರ್ದೇಶನವನ್ನು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗಾ ತಿರಸ್ಕರಿಸಿದ್ದರು. ಮಿಜೋಗಳು ಮ್ಯಾನ್ಮಾರ್ನ ಚಿನ್ ಬುಡಕಟ್ಟಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿದ್ದರು.
”ಮ್ಯಾನ್ಮಾರ್ ನಿರಾಶ್ರಿತರ ಬಯೋಮೆಟ್ರಿಕ್ ಮತ್ತು ಸ್ವವಿವರಗಳ ದತ್ತಾಂಶಗಳ ಸಂಗ್ರಹವು ನಮ್ಮ ಸಹೋದರರು ಮತ್ತು ಸಹೋದರಿಯರ ವಿರುದ್ಧ ತಾರತಮ್ಯವನ್ನು ಉಂಟುಮಾಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ಇದನ್ನು ಕೈಗೊಳ್ಳದಿರಲು ನಿರ್ಧರಿಸಲಾಗಿದೆ” ಎಂದು ಅವರು ಹೇಳಿದರು.
ಚುನಾಯಿತ ಪ್ರತಿನಿಧಿಗಳು ಸೇರಿದಂತೆ 30,000ಕ್ಕೂ ಹೆಚ್ಚು ಮ್ಯಾನ್ಮಾರ್ ಪ್ರಜೆಗಳು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರು ಸಮುದಾಯ ಭವನಗಳು, ತಾತ್ಕಾಲಿಕ ಶಿಬಿರಗಳು, ಚರ್ಚ್ಗಳು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಮಣಿಪುರ ಸರ್ಕಾರದ ವಿನಂತಿಯ ಮೇರೆಗೆ ಬಯೋಮೆಟ್ರಿಕ್ಸ್ ಸಂಗ್ರಹದ ಗಡುವನ್ನು ಗೃಹ ಸಚಿವಾಲಯವು ಮಾರ್ಚ್ 2024ಕ್ಕೆ ವಿಸ್ತರಿಸಿದೆ.
ಮಣಿಪುರವು ಜುಲೈ 29ರಂದು ಈ ಪ್ರಕ್ರಿಯೆಯನ್ನು ಆರಂಭಿಸಿತು, ಆದರೆ ಕುಕಿ ಮತ್ತು ಮೈತಿ ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರದ ಕಾರಣ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಒಂದು ವರ್ಷದವರೆಗೆ ವಿಸ್ತರಣೆಯನ್ನು ಕೋರಿದರು. ಗೃಹ ಸಚಿವಾಲಯವು ಆರು ತಿಂಗಳ ವಿಸ್ತರಣೆಯನ್ನು ನೀಡಿತು, ಮಾರ್ಚ್ 31, 2024ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಮಣಿಪುರ ಸರ್ಕಾರವನ್ನು ಕೇಳಿದೆ.
ಇದನ್ನೂ ಓದಿ: ಮಣಿಪುರ: ಸಿಎಂ ಕುಟುಂಬದ ಮನೆ ಮೇಲೆ ದಾಳಿಗೆ ಯತ್ನ