ಅಸ್ಸಾಂ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲ ಜಗದೀಶ್ ಮುಖಿ ಭಾಷಣದ ವೇಳೆ ಬಿಜೆಪಿ ಸರ್ಕಾರವು ಭರವಸೆ ನೀಡಿದಂತೆ ಒಂದು ಲಕ್ಷ ಯುವಕರಿಗೆ ಉದ್ಯೋಗ ನೀಡದ ಕುರಿತು ಪದೇ ಪದೇ ಪ್ರಸ್ತಾಪಿಸಿದ್ದಕ್ಕಾಗಿ ಸ್ವತಂತ್ರ ಶಾಸಕ, ರೈತ ಹೋರಾಟಗಾರ ಅಖಿಲ್ ಗೊಗೊಯ್ ಅವರನ್ನು ಸೋಮವಾರ ಸದನದಿಂದ ಅಮಾನತುಗೊಳಿಸಲಾಗಿದೆ.
ಸ್ಪೀಕರ್ ಬಿಸ್ವಜಿತ್ ಡೈಮರಿ ಅವರು ರಾಜ್ಯಪಾಲರ ಭಾಷಣದ ಅವಧಿಗೆ ಸದನದಿಂದ ಹೊರಹೋಗುವಂತೆ ಅಖಿಲ್ ಗೊಗೊಯ್ ಅವರನ್ನು ಅಮಾನತುಗೊಳಿಸಿದ್ದರು.
ಅಮಾನತುಗೊಳಿಸಿದರು ಸದನದಿಂದ ಹೊರಹೋಗದ ಹೋರಾಟಗಾರ ಅಖಿಲ್ ಗೊಗೊಯ್ ಅವರು ಭಿತ್ತಿಫಲಕ ತೋರಿಸಿ ಪ್ರತಿಭಟನೆ ಮುಂದುವರೆಸಿದ್ದರು. ಇದರಿಂದ ಮಾರ್ಷಲ್ಗಳು ಅವರನ್ನು ಹೊರಗೆ ಎಳೆದೊಯ್ದರು. ರಾಜ್ಯಪಾಲರು ತಮ್ಮ 38 ಪುಟಗಳ ಭಾಷಣವನ್ನು ಓದುವುದನ್ನು ಮುಂದುವರಿಸಿದ್ದರು.
ಇದನ್ನೂ ಓದಿ: ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯ್ ವಿರುದ್ದದ ಪ್ರಕರಣ ಖುಲಾಸೆಗೊಳಿಸಿದ ಕೋರ್ಟ್
ರಾಜ್ಯಪಾಲ ಜಗದೀಶ್ ಮುಖಿ, “ಚುನಾವಣೆಯ ಪ್ರಮುಖ ಭರವಸೆಗಳಲ್ಲಿ ಒಂದಾದ, ನಮ್ಮ ಯುವಕರಿಗೆ ಒಂದು ಲಕ್ಷ ಉದ್ಯೋಗಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಸರ್ಕಾರವು ಪ್ರಾರಂಭಿಸಿದೆ. ವಿವಿಧ ಹುದ್ದೆಗಳಲ್ಲಿ ಯುವಕರನ್ನು ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ” ಎಂದು ಪ್ರಸ್ತಾಪಿಸಿದ್ದರು.
ಯುವಕರಿಗೆ ಒಂದು ಲಕ್ಷ ಉದ್ಯೋಗದ ಹೊರತಾಗಿಯೂ ಶಾಸಕ ಗೊಗೋಯ್, ರಾಜ್ಯಪಾಲರ ಭಾಷಣದ ವೇಳೆ ರೈತರಿಂದ ಭತ್ತ ಖರೀದಿ, ಸ್ಥಳೀಯರಿಗೆ ಭೂಮಿಯ ಹಕ್ಕು ಮತ್ತು ನೀರು ಸರಬರಾಜು ಯೋಜನೆಯಲ್ಲಿನ ಭ್ರಷ್ಟಾಚಾರದಂತಹ ಇತರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದ್ದರು.
ಹೀಗೆ ಪ್ರತಿ ಬಾರಿಯೂ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಬೇಡಿ ಎಂದು ಸಭಾಧ್ಯಕ್ಷರು ಮನವಿ ಮಾಡಿದ ನಂತರ ಅಖಿಲ್ ಗೊಗೊಯ್ ಕುಳಿತುಕೊಳ್ಳುತ್ತಿದ್ದರು. ಹೀಗಗಾಗಿ ಅವರನ್ನು ಅಮಾನತು ಮಾಡಲಾಗಿತ್ತು. ರಾಜ್ಯಪಾಲ ಜಗದೀಶ್ ಮುಖಿ ಭಾಷಣದ ನಂತರ ಸದನ ಮರು ಸ್ಥಾಪಿತವಾದ ತಕ್ಷಣ ಸ್ಪೀಕರ್, ಗೊಗೊಯ್ ಅವರ ಅಮಾನತು ರದ್ದುಗೊಳಿಸಿದ್ದಾರೆ.
ರೈತ ಹಕ್ಕುಗಳ ಹೋರಾಟಗಾರರ ಸಮೂಹವಾದ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (ಕೆಎಂಎಸ್ಎಸ್)ಯಲ್ಲಿ ಅಖಿಲ್ ಗೊಗೋಯ್ ತೊಡಗಿಸಿಕೊಂಡಿದ್ದರು. ಸಿಎಎ ಹೋರಾಟದ ಸಮಯದಲ್ಲಿ ದೇಶದ್ರೋಹದ ಪ್ರಕರಣದಲ್ಲಿ ಬಂಧನವಾದ ನಂತರ ಜೈಲಿನಲ್ಲಿದ್ದುಕೊಂಡೇ 2020ರ ಅಕ್ಟೋಬರ್ನಲ್ಲಿ ರೈಜೋರ್ ದಳ ಪಕ್ಷವನ್ನು ಸ್ಥಾಪಿಸಿದ್ದರು. ಅವರು ಅದರ ಅಧ್ಯಕ್ಷರಾಗಿದ್ದು, ಮತ್ತೊಬ್ಬ ಹೋರಾಟಗಾರ ಭಾಸ್ಕೊ ಡಿ ಸೈಕಿಯಾ ಅದರ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಜೈಲಿನಲ್ಲಿದ್ದುಕೊಂಡೆ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸಿಬ್ಸಾಗರ್ ಕ್ಷೇತ್ರದಿಂದ ಗೊಗೊಯ್ ಜಯ ಗಳಿಸಿದ್ದರು.
ಇದನ್ನೂ ಓದಿ: ಅಸ್ಸಾಂ ಚುನಾವಣೆ: ಜೈಲಿನಲ್ಲಿದ್ದುಕೊಂಡೇ ಜಯಗಳಿಸಿದ ಹೋರಾಟಗಾರ ಅಖಿಲ್ ಗೊಗೊಯ್