Homeಮುಖಪುಟಬಿಜೆಪಿ ಪರ ಪ್ರಚಾರ ಮಾಡುತ್ತಿರುವ NEWJ ಫೇಸ್‌ಬುಕ್ ಪೇಜ್: ದುಡ್ಡು ಮಾತ್ರ ಅಂಬಾನಿಯದ್ದು!

ಬಿಜೆಪಿ ಪರ ಪ್ರಚಾರ ಮಾಡುತ್ತಿರುವ NEWJ ಫೇಸ್‌ಬುಕ್ ಪೇಜ್: ದುಡ್ಡು ಮಾತ್ರ ಅಂಬಾನಿಯದ್ದು!

ಮುಸ್ಲಿಂ ವಿರೋಧಿ ಭಾವನೆ ಪ್ರಚೋದಿಸುವುದು ಮತ್ತು ವಿರೋಧ ಪಕ್ಷಗಳನ್ನು ಅವಹೇಳನ ಮಾಡುವ ಸುದ್ದಿಗಳನ್ನು NEWJ ಜಾಹೀರಾತು ರೂಪದಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟಿಸುತ್ತಿದೆ

- Advertisement -
- Advertisement -

ಭಯೋತ್ಪಾದನೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ, ಹಿಂದೂ ಸಾದ್ವಿ ಎಂದು ಕರೆಯಲ್ಪಡುವ ಪ್ರಗ್ಯಾ ಸಿಂಗ್ ಠಾಕೂರ್‌ರವರನ್ನು ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯೆಂದು ಘೋಷಿಸಿತು. ಅವರು ನಾಮಪತ್ರ ಸಲ್ಲಿಸಿದ ಕೂಡಲೇ ಅವರ ಕುರಿತು ಸುದ್ದಿಯಂತಿರುವ “ತಪ್ಪು ಮಾಹಿತಿಯ” ಹೆಡ್‌ಲೈನ್‌ ಇರುವ ವರದಿಯೊಂದನ್ನು ಜಾಹೀರಾತಿನ ರೂಪದಲ್ಲಿ ಫೇಸ್‌ಬುಕ್‌ ಪ್ರಕಟಿಸಿತು.

ಪಶ್ಚಿಮ ಮಹಾರಾಷ್ಟ್ರದ ಮಲೆಂಗಾವ್ ಎಂಬ ಮುಸ್ಲಿಂ ಬಾಹುಳ್ಯದ ನಗರದ ಮಸೀದಿಯೊಂದಕ್ಕೆ ಸ್ಪೋಟಕಗಳನ್ನು ತುಂಬಿದ್ದ ಮೋಟಾರ್‌ ಸೈಕಲ್ ನುಗ್ಗಿಸಿ ಆರು ಜನರ ಸಾವಿಗೆ ಕಾರಣವಾದ ಭಯೋತ್ಪಾದನೆ ಕೃತ್ಯದ ಎಲ್ಲಾ ಆರೋಪಗಳಿಂದ ಪ್ರಗ್ಯಾ ಸಿಂಗ್ ಠಾಕೂರ್ “ಖುಲಾಸೆಯಾಗಿದ್ದಾರೆ” ಎಂದು ಆ ಜಾಹೀರಾತಿನಲ್ಲಿ ತಪ್ಪಾಗಿ ಹೇಳಲಾಗಿತ್ತು. ಆ ವಿಡಿಯೋ ವರದಿಯನ್ನು ಒಂದೇ ದಿನದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಆದರೆ ವಾಸ್ತವದಲ್ಲಿ ಆ ಭಯೋತ್ಪಾದನಾ ಪ್ರಕರಣದಲ್ಲಿ ಪ್ರಗ್ಯಾ ಸಿಂಗ್ ಇಂದಿಗೂ ವಿಚಾರಣೆ ಎದುರಿಸುತ್ತಿದ್ದಾರೆ ಮತ್ತು ಆರೋಗ್ಯ ಚಿಕಿತ್ಸೆಯ ಕಾರಣದಿಂದ ಜಾಮೀನು ಪಡೆದು ಹೊರಬಂದಿದ್ದಲ್ಲದೆ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯ ಮತದಾನ ಆರಂಭವಾಗುವ ಒಂದು ತಿಂಗಳ ಮೊದಲು ಏಪ್ರಿಲ್ 11 ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಜಾಹೀರಾತು ಒಂದು ಫೇಸ್‌ಬುಕ್‌ನಲ್ಲಿ ಹರಿದಾಡಿತು. ಭಾಷಣವೊಂದರಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, 1990ರ ಸಮಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ “ಭಯೋತ್ಪಾದನೆಯ ಬಗ್ಗೆ ಮೃದು ಧೋರಣೆ” ತೋರಿತ್ತು ಎಂದು ಟೀಕಿಸಿದ್ದರು. ಭಾರತವು ಭಯೋತ್ಪಾದಕ ಎಂದು ಪರಿಗಣಿಸಿರುವ ಮಸೂದ್ ಅಜರ್‌ ಎಂಬಾತನನ್ನು ಬಿಜೆಪಿ ಜೈಲಿನಿಂದ ಬಿಡುಗಡೆ ಮಾಡಿತು. ಆತನನನ್ನು ಅಜರ್ ಜಿ ಎಂದು ಕರೆದು ಬೀಳ್ಕೊಟ್ಟಿತ್ತು ಎಂದು ವ್ಯಂಗ್ಯವಾಡಿದ್ದರು.

ಆದರೆ ರಾಹುಲ್ ಗಾಂಧಿ ಬಿಜೆಪಿಯನ್ನು ಖಂಡಿಸುವ ಭಾಗವನ್ನು ತೆಗೆದುಹಾಕಿ “ರಾಹುಲ್ ಗಾಂಧಿ ಮಸೂದ್ ಅಜರ್‌ಜಿ ಎಂದು ಕರೆದಾಗ” ಎಂಬ ಶೀರ್ಷಿಕೆಯೊಂದಿಗೆ NEWJ ಎಂಬ ಲೋಗೋದೊಂದಿಗೆ ಸುದ್ದಿ ವರದಿಯಂತಹ ತಿರುಚಿದ ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಜಾಹೀರಾತಿನಂತೆ ಪ್ರಸಾರವಾಯಿತು. ನಾಲ್ಕು ದಿನಗಳಲ್ಲಿ ಸರಿಸುಮಾರು 6,50,000 ಜನರು ಆ ವಿಡಿಯೋ ನೋಡಿದರು ಮತ್ತು ಆ ಮೂಲಕ ರಾಹುಲ್ ಗಾಂಧಿ ಭಯೋತ್ಪಾದಕರನ್ನು ಬೆಂಬಲಿಸುತ್ತಾರೆ ಎಂಬ ಸುಳ್ಳು ಕಥನ ಕಟ್ಟಲಾಯಿತು.

NEWJ ಎಂಬ ಫೇಸ್‌ಬುಕ್ ಪುಟವು ಮೇಲಿನ ಎರಡೂ ಜಾಹೀರಾತುಗಳಿಗೆ ಹಣ ಪಾವತಿಸಿದೆ. ಈ  NEWJ ಎಂಬ ಫೇಸ್‌ಬುಕ್ ಪೇಜ್ ಯಾರದು ಎಂದು ಹುಡುಕುತ್ತಾ ಹೊರಟರೆ ಆಶ್ಚರ್ಯ ಕಾದಿತ್ತು. ನ್ಯೂ ಎಮರ್ಜಿಂಗ್ ವರ್ಲ್ಡ್ ಆಫ್ ಜರ್ನಲಿಸಂ ಲಿಮಿಟೆಡ್‌ನ ಸಂಕ್ಷಿಪ್ತ ರೂಪವಾಗಿರುವ NEWJ ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಗ್ರೂಪ್ ಒಡೆತನದ ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಇಂಟರ್ನೆಟ್ ಕಂಪನಿ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ! ಈ ಫೇಸ್‌ಬುಕ್‌ ಪುಟವು ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿದೆ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಬಿಜೆಪಿಗೆ ರಾಜಕೀಯ ಅನುಕೂಲ ಮಾಡಿಕೊಡುತ್ತಿದೆ.

ಈ ಮೇಲಿನ ಎರಡು ಜಾಹೀರಾತುಗಳನ್ನು ನಾವು ‘ಬದಲಿ ಜಾಹೀರಾತು’ ಎಂದರೆ ಕರೆಯುತ್ತೇವೆ. ಅಂದರೆ ಈ ಜಾಹೀರಾತು ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶಕ್ಕಾಗಿಯೇ ರಚನೆಯಾಗಿದ್ದರೂ ಸಹ ಅದಕ್ಕೆ ಪಾವತಿ ಮಾಡಿದ್ದು ಬಿಜೆಪಿ ಪಕ್ಷವಲ್ಲ, ಬದಲಿಗೆ ರಿಲಯನ್ಸ್ ಜಿಯೋ ಆಗಿದೆ. ಭಾರತದ ಚುನಾವಣಾ ಆಯೋಗವು ಕಾನೂನನ್ನು ಹೇಗೆ ಅನ್ವಯಿಸುತ್ತದೆ ಮತ್ತು ಫೇಸ್‌ಬುಕ್‌ನ ನಿಯಮಗಳು, ಪ್ರಕ್ರಿಯೆಗಳು ಹೇಗೆ ಬೃಹತ್ ಲೋಪದೋಷದಿಂದ ಕೂಡಿವೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. 2019ರ ಸಂಸತ್ ಚುನಾವಣೆ ಮತ್ತು ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯವರ ಪ್ರಚಾರಕ್ಕಾಗಿಯೇ ಈ ಫೇಸ್‌ಬುಕ್ ಬದಲಿ ಜಾಹೀರಾತುಗಳ ಮೂಲಕ ಕೋಟ್ಯಾಂತರ ರೂಗಳನ್ನು ವ್ಯಯಿಸಲಾಗಿದೆ. ಆದರೆ ಆ ಹಣ ಬಿಜೆಪಿಯದ್ದಲ್ಲ ಬದಲಿಗೆ ಅಂಬಾನಿಯದ್ದಾಗಿದೆ.

ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಈ ರೀತಿಯ ಬದಲಿ ಜಾಹೀರಾತುಗಳಿಗೆ ಕಡಿವಾಣ ಹಾಕುವುದಾಗಿ ಫೇಸ್‌ಬುಕ್ ನಾಟಕವಾಡಿತು. ಆದರೆ ಆ ಸಂದರ್ಭದಲ್ಲಿ ಅದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಜಾಹೀರಾತುಗಳನ್ನು ತಡೆ ಹಿಡಿಯಿತು ಮತ್ತು ಅದೇ ಸಂದರ್ಭದಲ್ಲಿ ಬಿಜೆಪಿಗೆ ಸಹಾಯ ಮಾಡುವ NEWJ ನಂತಹ ನೂರಾರು ಪೇಜ್‌ಗಳನ್ನು ಪುರಸ್ಕರಿಸಿತು!

2019ರ ಫೆಬ್ರವರಿ ತಿಂಗಳಿನಿಂದ 2020ರ ನವೆಂಬರ್‌ವರೆಗೆ 22 ತಿಂಗಳ ಅವಧಿಯಲ್ಲಿ 5,36,070 ರಾಜಕೀಯ ಉದ್ದೇಶದ ಜಾಹೀರಾತುಗಳು ಫೇಸ್‌ಬುಕ್‌ ಮತ್ತು ಇನ್ಸ್ಟಗ್ರಾಮ್‌ನಲ್ಲಿ ಪ್ರಕಟಗೊಂಡಿವೆ. ಅವುಗಳನ್ನು ದಿ ರಿಪೋರ್ಟರ್ಸ್ ಕಲೆಕ್ಟಿವ್ (TRC) ಎಂಬ ಲಾಭರಹಿತ ಮಾಧ್ಯಮ ಸಂಸ್ಥೆ ಮತ್ತು ad.watch ಎಂಬ ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯ ಜಾಹೀರಾತುಗಳನ್ನು ಅಧ್ಯಯನ ಮಾಡುವ ಸಂಶೋಧನಾ ಸಂಸ್ಥೆಗಳ ಕೂಲಂಕುಷವಾಗಿ ವಿಶ್ಲೇಷಿಸಿವೆ. ಫೇಸ್‌ಬುಕ್‌ನ ಜಾಹೀರಾತು ವೇದಿಕೆಯು ವಿಶ್ವದ ಅತಿದೊಡ್ಡ ಚುನಾವಣಾ ಪ್ರಜಾಪ್ರಭುತ್ವದಲ್ಲಿ ಬಹುದೊಡ್ಡ ತಾರತಮ್ಯವೆಸಗಿದೆ ಮತ್ತು ಉಳಿದ ಪಕ್ಷಗಳನ್ನು ಹಿಂದಕ್ಕೆ ಸರಿಸಿ ಬಿಜೆಪಿಗೆ ಅನ್ಯಾಯಯುತ ಲಾಭವನ್ನುಂಟುಮಾಡಿದೆ ಎಂದು ಈ ಅಧ್ಯಯನದಲ್ಲಿ ಕಂಡುಬಂದಿದೆ.

ಸುದ್ದಿಗಳೆ ಜಾಹೀರಾತು ರೂಪದಲ್ಲಿ ಬಂದಾಗ

NEWJ ಸಾಮಾಜಿಕ ಮಾಧ್ಯಮದ ಮೂಲಕ ಪ್ರತ್ಯೇಕವಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿನ ಜನರಿಗೆ “ಸುದ್ದಿ ವಿಷಯ” ವನ್ನು ಒದಗಿಸುವ ಸ್ಟಾರ್ಟಪ್ ಕಂಪನಿ ಎಂಬ ಸ್ಥಾನ ಪಡೆದಿದೆ. ಆದರೆ ವಾಸ್ತವದಲ್ಲಿ ಆ ಕಂಪನಿಯು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊಗಳನ್ನು ಪ್ರಕಟಿಸಲು ಜಾಹೀರಾತು ಸ್ಥಳವನ್ನು ಖರೀದಿಸುತ್ತದೆ. ಅವುಗಳಲ್ಲಿ ಹಲವು ರಾಜಕೀಯ ಪ್ರಚಾರಗಳಾಗಿರುತ್ತವೆ, ಆದರೆ ಸುದ್ದಿಯ ಮುಖವಾಡ ಧರಿಸಿರುತ್ತವೆ. ಬಿಜೆಪಿಯನ್ನು ಪ್ರಚಾರ ಮಾಡುವುದು, ತಪ್ಪು ಮಾಹಿತಿಗಳನ್ನು ಉತ್ತೇಜಿಸುವುದು, ಮುಸ್ಲಿಂ ವಿರೋಧಿ ಭಾವನೆಗಳನ್ನು ಪ್ರಚೋದಿಸುವುದು ಮತ್ತು ವಿರೋಧ ಪಕ್ಷಗಳನ್ನು ಅವಹೇಳನ ಮಾಡುವುದು ಅದರ ಪ್ರಮುಖ ಗುರಿಯಾಗಿದೆ.

ನಿಮಗೆಲ್ಲ ತಿಳಿದಿರುವ ಹಾಗೆ ವ್ಯಕ್ತಿಗಳು ಮತ್ತು ಪೇಜ್‌ಗಳಿಂದ ಹಾಕುವ ಪೋಸ್ಟ್‌ಗಳು ಅವರ ಸ್ನೇಹಿತರಿಗೆ, ಅವರನ್ನು ಫಾಲೋ ಮಾಡುವವರಿಗೆ ಮಾತ್ರ ಹೆಚ್ಚು ತಲುಪುತ್ತವೆ. ಅದಕ್ಕೊಂದು ಮಿತಿ ಇದ್ದೆ ಇರುತ್ತದೆ. ಆದರೆ ಫೇಸ್‌ಬುಕ್‌ಗೆ ಹಣ ನೀಡಿ ಜಾಹೀರಾತು ಮೂಲಕ ಹಾಕುವ ಪೋಸ್ಟ್‌ಗಳು ಎಲ್ಲಾ ಮಿತಿಗಳನ್ನು ಮೀರಿ ಸ್ನೆಹಿತರಲ್ಲದ, ಫಾಲೋ ಮಾಡದವರನ್ನು ಸಹ ಬೇಕಾದ ಪ್ರದೇಶ, ಜನರ ಆಸಕ್ತಿಯನ್ನು ಆಧರಿಸಿ ಅತಿ ಹೆಚ್ಚು ಜನರಿಗೆ ತಲುಪುತ್ತವೆ. 2019ರಿಂದ ಫೇಸ್‌ಬುಕ್ ತನ್ನ ಆಡ್ ಲೈಬ್ರರಿಯಲ್ಲಿ ರಾಜಕೀಯಕ್ಕೆ ಸಂಬಂಧಿಸಿವೆ ಎಂದು ಪ್ರಕಟಿಸುತ್ತಿದೆ. ಅದರಂತೆ ಈ NEWJ ಫೇಸ್‌ಬುಕ್ ಪುಟವು 2019ರ ಲೋಕಸಭಾ ಚುನಾವಣೆಯ ಮೂರು ತಿಂಗಳಲ್ಲಿ ಸುಮಾರು 170 ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿದೆ. ಅದರಲ್ಲಿ ಹೆಚ್ಚಿನವು ಬಿಜೆಪಿ ನಾಯಕರನ್ನು ವೈಭವೀಕರಿಸುವ, ಮೋದಿಗೆ ಮತದಾರರು ಬೆಂಬಲ ಸೂಚಿಸಿದ್ದಾರೆ ಎಂದು ಕಥೆ ಕಟ್ಟುವ, ರಾಷ್ಟ್ರೀಯತೆ ಮತ್ತು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ, ಬಿಜೆಪಿಗೆ ಚುನಾವಣೆಯಲ್ಲಿ ಚಿಮ್ಮು ಹಲಗೆಗಳಾಗುವ – ಅಥವಾ ವಿರೋಧ ಪಕ್ಷದ ನಾಯಕರು ಮತ್ತು ಅವರು ನಡೆಸಿದ ರ್ಯಾಲಿಗಳನ್ನು ಲೇವಡಿ ಮಾಡಿರುವವೆ ತುಂಬಿಕೊಂಡಿವೆ.

ಈ ಜಾಹೀರಾತುಗಳ ನಡುವೆ ಬಹಳ ಪ್ರಜ್ಞಾಪೂರ್ವಕವಾಗಿ ಕೆಲವು ರಾಜಕೀಯ ರಹಿತವಾದ ಮಾನವೀಯ ವಿಡಿಯೋಗಳನ್ನು, ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಡಿಯೋಗಳನ್ನು ಸಹ ಹರಿಯಬಿಡಲಾಗುತ್ತದೆ. ಉದಾಹರಣೆಗೆ ಅಂಗವಿಕಲ ಮಹಿಳೆಯೊಬ್ಬರು ವಿವಿ ಪರೀಕ್ಷೆಯನ್ನು ಕಾಲಿನಲ್ಲಿ ಬರೆಯುತ್ತಿರುವುದು ಎಂಬ ಪೋಸ್ಟ್‌ಗಳನ್ನು ಹಾಕಿ ಜನರು ಪುಟವನ್ನು ಲೈಕ್ ಮಾಡುವಂತೆಯೂ ಮಾಡಲಾಗುತ್ತದೆ.

ಬದಲಿಗೆ ಜಾಹೀರಾತುಗಳ ಕಾಲ

ಈ NEWJ ಸ್ಥಾಪಕ ಶಲಭ್ ಉಪಾಧ್ಯಾಯ ಅವರು ರಿಲಯನ್ಸ್ ಮತ್ತು ಬಿಜೆಪಿ ಎರಡರೊಂದಿಗೂ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಅವರ ತಂದೆ ಉಮೇಶ್ ಉಪಾಧ್ಯಾಯ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಅಧ್ಯಕ್ಷರು ಮತ್ತು ಮಾಧ್ಯಮ ನಿರ್ದೇಶಕರಾಗಿದ್ದಾರೆ. ಅಲ್ಲದೆ ಈ ಹಿಂದೆ ರಿಲಯನ್ಸ್-ಮಾಲೀಕತ್ವದ ನೆಟ್‌ವರ್ಕ್-18 ಗುಂಪಿನಲ್ಲಿ ಸುದ್ದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದು ಭಾರತದಲ್ಲಿ ಹಲವಾರು ಸುದ್ದಿ ವಾಹಿನಿಗಳನ್ನು ನಡೆಸುತ್ತಿದೆ. ಅವರ ಚಿಕ್ಕಪ್ಪ ಸತೀಶ್ ಉಪಾಧ್ಯಾಯ ಬಿಜೆಪಿ ನಾಯಕ ಮತ್ತು ಪಕ್ಷದ ದೆಹಲಿ ಘಟಕದ ಮಾಜಿ ಅಧ್ಯಕ್ಷರು.

ಆದರೂ NEWJ ಬಿಜೆಪಿಯೊಂದಿಗೆ ಔಪಚಾರಿಕ ಸಂಬಂಧ ಹೊಂದಿಲ್ಲ ಮತ್ತು ಸಾರ್ವಜನಿಕವಾಗಿ ಬಿಜೆಪಿ ಅದಕ್ಕೆ ಹಣ ಪಾವತಿಸಿರುವುದು ವರದಿಯಾಗಿಲ್ಲ. 2018ರ ಜನವರಿಯಿಂದ 2020ರ ಮಾರ್ಚ್‌ವರೆಗಿನ NEWJ ನ ಹಣಕಾಸಿನ ವ್ಯವಹಾರಗಳತ್ತ ಕಣ್ಣು ಹಾಯಿಸಿದರೆ ಅದು ಯಾವುದೇ ಲಾಭ ಗಳಿಸಿಲ್ಲ ಬದಲಿಗೆ ಜಾಹೀರಾತಿಗಾಗಿ ಕೋಟ್ಯಾಂತರ ಹಣ ವ್ಯಯಿಸಿದೆ. ಆ ಹಣವನ್ನು ರಿಲಯನ್ಸ್ ಗ್ರೂಪ್ ಪೂರೈಸಿದೆ.

ರಾಜಕೀಯ ಅಭ್ಯರ್ಥಿಯನ್ನು ಬೆಂಬಲಿಸುವ ಆದರೆ ಆ ಅಭ್ಯರ್ಥಿಯಿಂದ ನೇರವಾಗಿ ಹಣ ಪಡೆಯದ ಅಥವಾ ಅಧಿಕೃತಗೊಳಿಸದ ಬದಲಿ ಜಾಹೀರಾತುಗಳು ಅಥವಾ ಹೆಸರುಗಳಿಲ್ಲದ ಜಾಹೀರಾತುಗಳನ್ನು ಪ್ರಕಟಿಸುವುದು ಭಾರತೀಯ ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ರಾಜಕೀಯ ಪಕ್ಷಗಳು ಅವರು ಜಾಹೀರಾತಿನಲ್ಲಿ ಹಾಕುವ ಎಲ್ಲಾ ಮಾಹಿತಿಗಳಿಗೆ ಜವಾಬ್ದಾರರಾಗಿರುವಂತೆ ಕಾನೂನು ಸೂಚಿಸುತ್ತದೆ. ಚುನಾವಣಾ ಪ್ರಚಾರಕ್ಕಾಗಿ ಜಾಹೀರಾತುಗಳಿಗೆ ಅಪರಿಚಿತ ಮೂಲಗಳ ಮೂಲಕ ಹಣ ಪಾವತಿಸುವುದನ್ನು ಸಹ ನಿಷೇಧಿಸುತ್ತದೆ.

ಆದರೆ ಚುನಾವಣಾ ಆಯೋಗವು ಈ ನಿಷೇಧವನ್ನು ಫೇಸ್‌ಬುಕ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಅನ್ವಯಿಸುವುದಿಲ್ಲ. ಆರ್‌ಟಿಐ ಅರ್ಜಿಗಳ ಮಾಹಿತಿಯಿಂದ ಹಲವು ವರ್ಷಗಳಿಂದ ಈ ಲೋಪದೋಷದ ಬಗ್ಗೆ ತಿಳಿದಿದ್ದರೂ ಈ ನಿಯಮಗಳನ್ನು ಫೇಸ್‌ಬುಕ್‌ಗೆ ವಿಸ್ತರಿಸುತ್ತಿಲ್ಲ. ಹಾಗಾಗಿಯೇ ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ ಈ ನಿಯಮವನ್ನು ಬಳಸುತ್ತಿಲ್ಲ. NEWJ ಮೂಲಕ ರಿಲಯನ್ಸ್ ಚುನಾವಣಾ ಸಂದರ್ಭದಲ್ಲಿ ಫೇಸ್‌ಬುಕ್ ಮತ್ತು ಇನ್ಸ್ಟಗ್ರಾಮ್‌ಗಳಲ್ಲಿ ಬಿಜೆಪಿ ಪರವಾದ ಜಾಹೀರಾತುಗಳ ಸುರಿಮಳೆಗೈಯುತ್ತದೆ.

ಆದರೆ ಫೇಸ್‌ಬುಕ್‌ ತಾನು ಬದಲಿ ಜಾಹೀರಾತುಗಳನ್ನು ತಡೆಹಿಡಿದಿದ್ದೇವೆ ಎಂದು ಪ್ರತಿಪಾದಿಸಿದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಜಾಹೀರಾತು ನೀಡುತ್ತಿವೆ ಎಂದು ಆರೋಪಿಸಿ ಕ್ರಮ ತೆಗೆದುಕೊಂಡಿತ್ತು. ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿವೆ ಎಂದು ಆರೋಪಿಸಿ ದೇಶ ವಿದೇಶದ 687 ಫೇಸ್‌ಬುಕ್ ಪೇಜ್‌ ಮತ್ತು ಖಾತೆಗಳನ್ನು ರದ್ದುಗೊಳಿಸಿತ್ತು. ಆದರೆ ಕೇವಲ 1 ಫೇಸ್‌ಬುಕ್ ಪೇಜ್ ಮತ್ತು 14 ಖಾತೆಗಳನ್ನು ಬಿಜೆಪಿಯೊಂದಿಗೆ ಸಂಬಂಧ ಹೊಂದಿವೆ ಎಂದು ರದ್ದುಗೊಳಿಸಿತ್ತು. ಆದರೆ NEWJ ಅಂತಹ ಪೇಜ್‌ಗಳು ಇಂದಿಗೂ ಮುಂದುವರೆಯುತ್ತಿವೆ.

2019ರ ಫೆಬ್ರವರಿಯಿಂದ 2020ರ ನವೆಂಬರ್ ವರೆಗೆ 22 ತಿಂಗಳ ಅವಧಿಯಲ್ಲಿ ಲೋಕಸಭೆ ಸೇರಿ 10 ಚುನಾವಣೆಗಳು ನಡೆದಿವೆ. ಈ ಅವಧಿಯಲ್ಲಿ 718 ಜಾಹೀರಾತುಗಳನ್ನು ನೀಡಿರುವ NEWJ ಅವುಗಳನ್ನು 29 ಕೋಟಿ ಜನ ನೋಡುವಂತೆ ಮಾಡಿದೆ. ಅದಕ್ಕಾಗಿ 52 ಲಕ್ಷ ರೂಗಳನ್ನು ಖರ್ಚು ಮಾಡಿದೆ. ಈ ಜಾಹಿರಾತುಗಳಲ್ಲಿ ಹಲವು ಮೋದಿಯವರ ಸರ್ಕಾರವನ್ನು ಶ್ಲಾಘಿಸುವ, ಮುಸ್ಲಿಂ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಭಾವನೆಗಳ ಹೊತ್ತಿಸುವಂತ, ಬಿಜೆಪಿಯ ವಿರೋಧಿಗಳು ಮತ್ತು ಟೀಕಾಕಾರರನ್ನು ಹೊಡೆದುರುಳಿಸಿದವಂತವು ಆಗಿದ್ದವು.

ಬದಲಿ ಜಾಹೀರಾತಿಗೆ ದೊಡ್ಡ ಮಟ್ಟದ ಹೂಡಿಕೆ

2018ರಲ್ಲಿ NEWJ ಅನ್ನು 1 ಲಕ್ಷ ಬಂಡವಾಳ ಹಾಕಿ ಆರಂಭಿಸಲಾಗಿತ್ತು. ನವೆಂಬರ್ ಮಧ್ಯದಲ್ಲಿ, ರಿಲಯನ್ಸ್ ಗ್ರೂಪ್ ಕಂಪನಿ ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್‌ಮೆಂಟ್ ಮತ್ತು ಹೋಲ್ಡಿಂಗ್ಸ್ ಲಿಮಿಟೆಡ್ (RIIHL) NEWJ ಅನ್ನು 75 ರಷ್ಟು ಈಕ್ವಿಟಿ ಪಾಲಿನೊಂದಿಗೆ ವಹಿಸಿಕೊಂಡಿತು. ನಂತರ ಅದು ಕಂಪನಿಗೆ 8.4 ಕೋಟಿ ರೂಪಾಯಿಗಳನ್ನು ಕನ್ವರ್ಟಿಬಲ್ ಡಿಬೆಂಚರ್‌ಗಳ ಮೂಲಕ ನೀಡಿತು. ಯಾವುದೇ ಲಾಭ ಗಳಿಸದ NEWJ 2.2 ಕೋಟಿಯನ್ನು ಜಾಹೀರಾತಿಗಾಗಿ ವ್ಯಯಿಸಿತು. ಮುಂದಿನ ವರ್ಷ ರಿಲಯನ್ಸ್ ಮತ್ತೆ 12.5 ಕೋಟಿ ಹಣವನ್ನು ನೀಡಿತು. ಯಾವುದೇ ಲಾಭ ಗಳಿಸದ NEWJ ಜಾಹೀರಾತಿನ ಮೇಲೆ ಮತ್ತೆ 2 ಕೋಟಿ 73 ಲಕ್ಷವನ್ನು ಸುರಿಯಿತು. ನಂತರ ಕಂಪನಿಯನ್ನು ಜಿಯೋ ವಹಿಸಿಕೊಂಡಿತು. ಅಲ್ಲದೆ NEWJ ನಲ್ಲಿ ಯಾವ ಕಂಟೆಂಟ್ ಬರಬೇಕೆಂಬುದನ್ನು ಜಿಯೋ ನಿರ್ಧರಿಸುವಂತೆ ತಿದ್ದುಪಡಿ ಮಾಡಲಾಗಿದೆ. ಜಿಯೋ ಈಗ 8.4 ಕೋಟಿ ಸಾಲವನ್ನು ಕೇವಲ 0.0001% ಬಡ್ಡಿದರದಲ್ಲಿ ನೀಡಿದೆ. ಈಗ ಜಿಯೋ ಫೇಸ್‌ಬುಕ್ ಅನ್ನು ಹೂಡಿಕೆದಾರ ಎಂದು ಪರಿಗಣಿಸುತ್ತದೆ. ಹಾಗಾಗಿ ಫೇಸ್‌ಬುಕ್‌ನಲ್ಲಿ ತನ್ನ ಹೂಡಿಕೆಯ ಜಾಹೀರಾತುಗಳೆ ಬರುತ್ತಿವೆ. ಅವನ್ನು ತಡೆಯುವವರು ಯಾರು??

ಕಣ್ಮುಚ್ಚಿ ಕುಳಿತ ಚುನಾವಣಾ ಆಯೋಗ

ಹಣದ ಬಲದಿಂದ ಚುನಾವಣೆ ನಡೆಯುವುದನ್ನು ತಡೆಯಲು ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಚುನಾವಣಾ ಆಯೋಗ ಇಂತಿಷ್ಟು ಎಂದು ಮಿತಿ ವಿಧಿಸುತ್ತದೆ. ಅದನ್ನು ಮೀರಿದವರ ಮೇಲೆ ಕ್ರಮ ಕೈಗೊಳ್ಳುತ್ತದೆ. ಒಂದು ವೇಳೆ ಮೂರನೇ ವ್ಯಕ್ತಿ ತನಗೂ ಅಭ್ಯರ್ಥಿಗೂ ಸಂಬಂಧವಿಲ್ಲ ಎಂದು ಘೋಷಿಸಿಕೊಂಡು ಅಭ್ಯರ್ಥಿಯ ಪರವಾಗಿ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದರೆ ಅದು ಸಹ ಅಭ್ಯರ್ಥಿಯ ಖರ್ಚು ಎಂತಲೇ ಆಯೋಗ ನಿರ್ಧರಿಸುತ್ತದೆ. ಅಲ್ಲದೆ ಸಾಂಪ್ರಾದಾಯಿಕ ಮಾಧ್ಯಮಗಳಲ್ಲಿ ಸುದ್ದಿಯ ರೂಪದಲ್ಲಿ ಅಭ್ಯರ್ಥಿ ಪರ ಪ್ರಚಾರ ಕಂಡುಬಂದರೆ ಅದನ್ನು ತನಿಖೆ ನಡೆಸುತ್ತದೆ. ಒಂದು ವೇಳೆ ಹಣ ಕೊಟ್ಟು ಸುದ್ದಿ ಪ್ರಕಟಿಸಿದ್ದರೆ ಅದನ್ನು ಸಹ ಚುನಾವಣಾ ಮಿತಿ ವೆಚ್ಚಕ್ಕೆ ಸೇರಿಸಲಾಗುತ್ತದೆ. ಆದರೆ ಈ ನಿಯಮಗಳು ಸಾಮಾಜಿಕ ಮಾಧ್ಯಮಗಳಿಗೆ ಅನ್ವಯಿಸುತ್ತಿಲ್ಲ. ನೇರವಾಗಿ ಅಭ್ಯರ್ಥಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದರೆ ಮಾತ್ರ ಅದು ವೆಚ್ಚದ ಅಡಿ ಬರುತ್ತದೆ. ಮೂರನೇ ವ್ಯಕ್ತಿ ಜಾಹೀರಾತು ನೀಡಿದರೆ ಅದು ಲೆಕ್ಕಕ್ಕೆ ಬರುವುದಿಲ್ಲ. ಹಾಗಾಗಿ ಬದಲಿ ಜಾಹೀರಾತುಗಳು ಹೆಚ್ಚಾಗಿವೆ. ಇದರಿಂದ ಫೇಸ್‌ಬುಕ್‌ಗೆ ಕೋಟ್ಯಾಂತರ ರೂ ಲಾಭವಾಗುತ್ತಿದೆ. ಬಿಜೆಪಿ ತರದ ಪಕ್ಷಗಳಿಗೆ ಮತಗಳು ಬೀಳುತ್ತಿವೆ!

ಹಲವು ಮಾಧ್ಯಮಗಳೆ ನೇರವಾಗಿ ಬಿಜೆಪಿ ತುತ್ತೂರಿಗಳಾಗಿರುವಾಗ ಫೇಸ್‌ಬುಕ್ ಪೇಜ್‌ಗಳು ಏನು ಕಡಿಮೆಯಿಲ್ಲದಂತೆ ಪೈಪೋಟಿ ನೀಡುತ್ತಿವೆ. ಆದರೆ ಮಾಧ್ಯಮಗಳನ್ನು ನೇರವಾಗಿ ಗುರುತಿಸಬಹುದು. ಅವುಗಳನ್ನು ನೋಡದಂತೆ ನಾವು ತಡೆಯಬಹುದು. ಆದರೆ ಫೇಸ್‌ಬುಕ್‌ನಲ್ಲಿ ನಾವು ಆ ಪೇಜ್ ಅನ್ನು ಲೈಕ್/ಫಾಲೋ ಮಾಡದಿದ್ದರೂ ಸಹ ಅವುಗಳ ಪ್ರೊಪಗಂಡಾ ವಿಡಿಯೋಗಳು ನಮಗೆ ಪದೇ ಪದೇ ಕಾಣಿಸುತ್ತಿವೆ. ಆಕರ್ಷಕ ಬಣ್ಣ ಬಣ್ಣದ ಸುಳ್ಳುಗಳು ಜನರನ್ನು ಮರಳು ಮಾಡುತ್ತವೆ. ಇದನ್ನು ತಡೆಯಬೇಕಾಗಿದ್ದ ಫೇಸ್‌ಬುಕ್ ಆ ಕಂಪನಿಗೆ ಮಾಲೀಕನಾಗಿದೆ. ಇಂತಹ ಸಂದರ್ಭದಲ್ಲಿ ನ್ಯಾಯಸಮ್ಮತ ಚುನಾವಣೆನ್ನು ನಿರೀಕ್ಷಿಸುವುದು ತಪ್ಪಾದೀತು ಅಲ್ಲವೇ?

ಕೃಪೆ: ಅಲ್‌ಜಜೀರಾ


ಇದನ್ನೂ ಓದಿ: ಫೇಸ್‌ಬುಕ್ ಎಲ್ಲರಿಗೂ ಗೊತ್ತಿರುವ ಕಳ್ಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...