ಅರಣ್ಯ ಇಲಾಖೆಯ ಕರ್ತವ್ಯನಿಷ್ಟ ಮಹಿಳಾ ಅಧಿಕಾರಿಯನ್ನು ಬೀದರ್ಗೆ ವರ್ಗಾಯಿಸುವಂತೆ ಯತ್ನಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಕ್ರಮಕ್ಕೆ ಸರ್ಕಾರ ತಡೆ ನೀಡಿದ್ದು, ಅವರನ್ನು ಈಗಿರುವಲ್ಲಿಯೇ ಮುಂದುವರಿಸಲು ನಿರ್ಧರಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.
ಮಂಗಳೂರು ಅರಣ್ಯ ಸಂಚಾರಿ ದಳದಲ್ಲಿ ನಿಯೋಜನೆಯಲ್ಲಿ ಕೆಲಸಮಾಡುತ್ತಿದ್ದ ಬೆಳ್ತಂಗಡಿ ಮೂಲದ ಅರಣ್ಯ ಅಧಿಕಾರಿ ಸಂಧ್ಯಾ ಸಚಿನ್ರನ್ನು ಬೀದರ್ಗೆ ವರ್ಗಾಯಿಸುವಂತೆ ಶಾಸಕ ಪೂಂಜಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಮತ್ತು ವರ್ಗಾಯಿಸುವುದು ಎಂದು ಬರೆದು ಸಿಎಂ ಸಹಿ ಹಾಕಿರುವ ಪತ್ರ ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಜತೆಗೆ ಅರಣ್ಯಾಧಿಕಾರಿ ಸಂಧ್ಯಾ ಮರಗಳ್ಳರ ಮೇಲೆ ತಾನು ನಿಷ್ಟುರ ಕ್ರಮಕೈಗೊಂಡಿದ್ದಕ್ಕೆ ಸೇಡಿನಿಂದ ವರ್ಗಾ ಮಾಡಲಾಗಿದೆ ಎಂದು ಬರೆದ ಪತ್ರವೂ ವೈರಲ್ ಆಗಿತ್ತು.
ಸಂಧ್ಯಾ ಕೇಸು ದಾಖಲಿಸಿದ್ದ ಮರಗಳ್ಳರು ಶಾಸಕರ ಆಪ್ತರೆನ್ನಲಾಗಿದ್ದು, ಶಾಸಕರ ವರ್ತನೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬೆಳ್ತಂಗಡಿ ಗುರು ನಾರಾಯಣಸ್ವಾಮಿ ಸೇವಾ ಸಂಘದವರು ಸೇಡಿನ ವರ್ಗಾವಣೆ ಮಾಡದಂತೆ ಒತ್ತಾಯಿಸಿದ್ದರು. ಈಗ ಸರ್ಕಾರ ಸಂಧ್ಯಾರ ವರ್ಗಾವಣೆ ಮಾಡದೆ ಮೊದಲಿದ್ದ ಹುದ್ದೆಯಲ್ಲೆ ಮುಂದುವರಿಸಲು ಸೂಚಿಸಿದೆಯೆನ್ನಲಾಗಿದೆ.
ಇದನ್ನೂ ಓದಿ: ಬಜೆಟ್ 2022: ಒಕ್ಕೂಟ ಸರ್ಕಾರದ ಮೇಲೆ ಜನರ ನಿರೀಕ್ಷೆಗಳೇನು?