ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಮರುದಿನ ಮಂಗಳವಾರ ಬಲಪಂಥೀಯ ಗುಂಪೊಂದು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ಟಿಐಐ) ಕ್ಯಾಂಪಸ್ಗೆ ನುಗ್ಗಿ ಮಂದಿರ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ.
ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಕ್ಯಾಂಪಸ್ಗೆ ನುಗ್ಗಿದ ಕೇಸರಿ ಶಾಲು ಧರಿಸಿದ್ದ ವ್ಯಕ್ತಿಗಳು, ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆಸಿರುವುದನ್ನು ಮತ್ತು “ಬಾಬರಿಯನ್ನು ನೆನಪಿಸಿಕೊಳ್ಳಿ, ಸಂವಿಧಾನದ ಸಾವು” ಎಂದು ಬರೆಯಲಾಗಿದ್ದ ದೊಡ್ಡ ಬ್ಯಾನರ್ಗಳನ್ನು ಸುಟ್ಟು ಹಾಕಿರುವುದನ್ನು ಕಾಣಬಹುದು.
Visuals shared by FTII students show a Hindu right-wing group breaking placards at a protest against the construction of the Ram temple in Ayodhya: pic.twitter.com/z6OPtawbxE
— Bharathy Singaravel|பாரதி (@KuthaliPu) January 23, 2024
ದುಷ್ಕರ್ಮಿಗಳು ನಮ್ಮ ಮೇಲೆ ದಾಳಿ ನಡೆಸುತ್ತಿದ್ದಾಗ ಸ್ಥಳದಲ್ಲಿ ಪೊಲೀಸರು ಇದ್ದರೂ ತಡೆದಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕಾಲೇಜಿನ ಭದ್ರತಾ ಸಿಬ್ಬಂದಿ ಕೂಡ ಅವರನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ. ಎಫ್ಟಿಐಐ ವಿದ್ಯಾರ್ಥಿ ಸಂಘಟನೆಯ ಪತ್ರಿಕಾ ಹೇಳಿಕೆಯ ಪ್ರಕಾರ, ಘಟನೆಯಲ್ಲಿ ಕನಿಷ್ಠ ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ.
ಸುಮಾರು 20 ರಿಂದ 25 ಉದ್ರೇಕಿತ ಜನರ ಗುಂಪು ಮಧ್ಯಾಹ್ನ 1:30 ರ ಸುಮಾರಿಗೆ ಕ್ಯಾಂಪಸ್ಗೆ ನುಗ್ಗಿತ್ತು. ಮೊದಲು ಅವರು ಗೇಟ್ ಬಳಿ ನಿಂತಿದ್ದ ಭದ್ರತಾ ಸಿಬ್ಬಂದಿ ಜೊತೆ ಗಲಾಟೆ ಮಾಡಿದ್ದರು. ಈ ಬಗ್ಗೆ ಕೆಲ ವಿದ್ಯಾರ್ಥಿಗಳು ವಿಚಾರಿಸಲು ಭದ್ರತಾ ಸಿಬ್ಬಂದಿ ಬಳಿ ಹೋದಾಗ ದುಷ್ಕರ್ಮಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ವಿದ್ಯಾರ್ಥಿಗಳನ್ನು ನಿಂದಿಸಿದರು. ನಮ್ಮ ಅಧ್ಯಕ್ಷರಾದ ಮಂಕಪ್ ನೋಕ್ವೋಹಮ್ ಮುಖ್ಯ ಗೇಟ್ನ ಕಡೆಗೆ ಹೋದಾಗ ಗುಂಪು ಜೋರಾಗಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿತು. ಅಲ್ಲದೆ ಅವರು ನಮ್ಮ ಅಧ್ಯಕ್ಷರಾದ ಮಂಕಪ್ ಹಲ್ಲೆ ಮಾಡಿದರು. ಮಂಕಪ್ ಮೇಲೆ ಹಿಂಸಾತ್ಮಕವಾಗಿ ದಾಳಿ ಮಾಡಿದರು. ಅವರಿಗೆ ಕ್ರೂರವಾಗಿ ಥಳಿಸಿದರು. ಟಿ-ಶರ್ಟ್ ಹರಿದು ಹಾಕಿದರು. ಭದ್ರತಾ ಸಿಬ್ಬಂದಿ ಏನೂ ಮಾಡಲಾಗದೆ ಅಸಹಾಯಕಾರಗಿ ನಿಂತು ನೋಡುತ್ತಿದ್ದರು ಎಂದು ದಾಳಿಯ ಕುರಿತು ಎಫ್ಟಿಐಐ ಸ್ಟೂಡೆಂಟ್ಸ್ ಅಸೋಸಿಯೇಷನ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದ ಇದೇ ಗುಂಪು ಜನವರಿ 21ರಂದು ಕಾಲೇಜ್ ಕ್ಯಾಂಪಸ್ನ ಗೇಟ್ ಬಳಿ ಜಮಾಯಿಸಿ ದೊಣ್ಣೆಗಳನ್ನು ತೋರಿಸಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿತ್ತು. ನಾವು ಹೆಚ್ಚಿನ ಜನರೊಂದಿಗೆ ಬರುತ್ತೇವೆ ಎಂದು ಹೇಳಿತ್ತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳ ಪ್ರಕಾರ, ಜನವರಿ 21ರ ಘಟನೆಯ ಬಗ್ಗೆ ಎಫ್ಟಿಐಐನ ಭದ್ರತಾ ಅಧಿಕಾರಿ ಸಂಜಯ್ ಜಾಧವ್ ಮತ್ತು ರಿಜಿಸ್ಟ್ರಾರ್ ಪ್ರತೀಕ್ ಜೈನ್ ಅವರಿಗೆ ತಿಳಿಸಲಾಗಿತ್ತು. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ನಮ್ಮ ಕ್ಯಾಂಪಸ್ಗೆ ಹೊರಗಿನವರು ಬಂದು ಹಲ್ಲೆ ಮಾಡುವಾಗ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮೂಕಪ್ರೇಕ್ಷಕರಾಗಿದ್ದರು. ಇದು ವಿದ್ಯಾರ್ಥಿಗಳ ಬದುಕುವ ಮೂಲಭೂತ ಹಕ್ಕಿನ ಮೇಲಿನ ಘೋರ ದಾಳಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಗಂಭೀರ ವೈಫಲ್ಯವಾಗಿದೆ. ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳು ಹಾಗೂ ವಿದ್ಯಾರ್ಥಿಗಳ ಜೀವನದ ಮೇಲಿನ ಇಂತಹ ಭೀಕರ ದಾಳಿಯ ವಿರುದ್ಧ ಎಫ್ಟಿಐಐ ವಿದ್ಯಾರ್ಥಿ ಸಂಘವು ಬಲವಾಗಿ ನಿಂತಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಎಫ್ಟಿಐಐ ಅಧ್ಯಕ್ಷರಾಗಿ ನೇಮಕಗೊಂಡ ನಟ ಆರ್ ಮಾಧವನ್ ಈ ಘಟನೆಯ ಬಗ್ಗೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ : ರಾಮಮಂದಿರ ಉದ್ಘಾಟನೆಯಂದು ಸಂವಿಧಾನದ ಪೀಠಿಕೆ ಹಂಚಿಕೊಂಡ ನಟ, ನಟಿಯರು