ಪರ-ವಿರೋಧ ಚರ್ಚೆಗಳ ನಡುವೆ ಅಂತರ್-ಧರ್ಮೀಯ ಕುಟುಂಬಗಳ ಸೌಹಾರ್ದತೆ ಬಿಂಬಿಸುವ, ಟೈಟನ್ ಗ್ರೂಪ್ನ ತನಿಷ್ಕ್ ಜುವೆಲ್ಲರಿಯ ‘ಏಕತ್ವಂ’ ಜಾಹೀರಾತನ್ನು ಕಂಪನಿಯು ತೆಗೆದುಹಾಕಿದೆ. ಆದರೂ ಆಭರಣ ಮಳಿಗೆಗಳಿಗೆ ಬೆದರಿಕೆ ಕರೆಗಳು ಹೋಗುತ್ತಿರುವ ಕುರಿತು ವರದಿಯಾಗಿದೆ.
ಗುಜರಾತ್ನ ಕಚ್ ಜಿಲ್ಲೆಯಲ್ಲಿ ತನಿಷ್ಕ್ ಜುವೆಲ್ಲರಿ ಶಾಪ್ ಅನ್ನು ಗುರುಯಾಗಿಸಿಕೊಂಡು ಕೆಲವು ಗುಂಪುಗಳು ಬೆದರಿಕೆ ಕರೆಗಳನ್ನು ಮಾಡುತ್ತಿವೆ ಎಂದು ವರದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಆದ ನಂತರ ಜಾಹೀರಾತನ್ನು ಹಿಂಪಡೆಯಲಾಗಿತ್ತು.
“ಕೆಲವು ಜನರಿಗೆ ಜಾಹೀರಾತು ಇಷ್ಟವಾಗಿಲ್ಲ. ಕೆಲ ಸಮುದಾಯದವರ ಭಾವನೆಗಳನ್ನು ನೋಯಿಸಿದ್ದಾರೆ ಎಂದು ಆರೋಪಿಸಿ ಕೆಲವು ಅಂಗಡಿ ಮಾಲೀಕರಿಗೆ ಬೆದರಿಕೆ ಕರೆಗಳು ಬಂದಿವೆ. ಪೊಲೀಸರು ನಿಯಮಿತವಾಗಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾರೆ. ಯಾವುದೇ ದರೋಡೆ, ಗಲಭೆ, ಪ್ರತಿಭಟನೆ ಅಥವಾ ದಾಳಿ ನಡೆದಿಲ್ಲ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಸೌಹಾರ್ದತೆ ಸಾರುವ ’ಏಕತ್ವಂ’ ಜಾಹೀರಾತು ನಿಲ್ಲಿಸಿದ ತನಿಷ್ಕ್ ಆಭರಣ ಕಂಪನಿ: ಅಂತದ್ದೇನಿದೆ ಅದರಲ್ಲಿ?
ಸೋಮವಾರ(ಅ.12) ರಾತ್ರಿ ತನಿಷ್ಕ್ ಅವರ ಗಾಂಧಿಧಾಮ್ ಅಂಗಡಿಯ ವ್ಯವಸ್ಥಾಪಕರಿಂದ ಕ್ಷಮೆಯಾಚನೆ ಟಿಪ್ಪಣಿ ಬರೆಯುವಂತೆ ಒತ್ತಾಯಿಸಿರುವ ಘಟನೆ ವರದಿಯಾಗಿದೆ. “ಜಾಹೀರಾತು ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ನಾವು ಕ್ಷಮೆಯಾಚಿಸುತ್ತೇವೆ ” ಎಂದು ವ್ಯವಸ್ಥಾಪಕರು ಬರೆದಿರುವ ಹೇಳಿಕೆಯನ್ನು ಬರೆಸಿಕೊಂಡ ದುಷ್ಕರ್ಮಿಗಳ ಗುಂಪು ಅದನ್ನು ಅಂಗಡಿಯಲ್ಲಿ ಅಂಟಿಸಿದೆ ಎಂದು ತಿಳಿದುಬಂದಿದೆ.
ಹೊಸ ಜಾಹೀರಾತಿನಲ್ಲಿ ಇರುವುದೇನು..?
ಮುಸ್ಲಿಂ ಕುಟುಂಬದ ವರನನ್ನು ಮದುವೆಯಾದ ಹಿಂದೂ ಮಹಿಳೆಯ ಕಥೆಯನ್ನು ಸುಂದರವಾದ ಜಾಹೀರಾತಾಗಿ ತನಿಷ್ಕ್ ಚಿತ್ರಿಸಿದ್ದಾರೆ. ಜಾಹೀರಾತಿನಲ್ಲಿ, ಹಿಂದೂ ಮಹಿಳೆ ಗರ್ಭಿಣಿಯಾಗಿದ್ದು, ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿರುತ್ತಾರೆ. ಸೀಮಂತ ಸಮಾರಂಭಕ್ಕಾಗಿ ಅತ್ತೆ ಆಕೆಯನ್ನು ಕೈಹಿಡಿದು ಕರೆದೊಯ್ಯುತ್ತಾರೆ. ಸಂಭ್ರಮಾಚರಣೆಯ ಸ್ಥಳವನ್ನು ನೋಡಿ ಗರ್ಭಿಣಿ ಆಶ್ಚರ್ಯಪಡುತ್ತಾಳೆ. ಏಕೆಂದರೆ ಸಮಾರಂಭವನ್ನು ಹಿಂದೂ ಸಂಪ್ರದಾಯಗಳ ಪ್ರಕಾರ ಆಯೋಜಿಸಲಾಗಿರುತ್ತದೆ. ಗರ್ಭಿಣಿ ಅದರ ಬಗ್ಗೆ ತನ್ನ ಅತ್ತೆಯನ್ನು ’ಈ ರೀತಿಯ ಸಮಾರಂಭವನ್ನು ನಿಮ್ಮ ಮನೆಗಳಲ್ಲಿ ಆಚರಿಸಲಾಗುವುದಿಲ್ಲ, ಅಲ್ಲವೇ? ಎಂದು ಕೇಳುತ್ತಾಳೆ. ಆಗ ಆಕೆಯ ಅತ್ತೆ ’ಮಗಳನ್ನು ಸಂತೋಷಪಡಿಸುವ ಸಮಾರಂಭವನ್ನು ಪ್ರತಿ ಮನೆಯಲ್ಲಿಯೂ ನಡೆಸಲಾಗುತ್ತದೆ, ಅಲ್ಲವೇ..?’ ಎಂದು ಉತ್ತರಿಸುತ್ತಾರೆ.
ಈ ಜಾಹೀರಾತಿನ ಮೂಲಕ ತನಿಷ್ಕ್ ‘ಲವ್ ಜಿಹಾದ್’ ಹಾಗೂ ‘ನಕಲಿ ಜಾತ್ಯತೀತತೆ’ಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಹಲವರು ಕೆಟ್ಟ ಟ್ರೋಲಿಂಗ್ ಮಾಡಿದ್ದರು. ಇದನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್, ಲೇಖಕ ಚೇತನ್ ಭಗತ್, ಖ್ಯಾತ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಸೇರಿದಂತೆ ಹಲವು ಮಂದಿ ಖಂಡಿಸಿದ್ದಾರೆ.