ಪ್ರಧಾನಿ ಮೋದಿ ಅವರು ದಿನಪೂರ್ತಿ ರೋಡ್ಶೋ ನಡೆಸುವುದರಿಂದ ಬೆಂಗಳೂರು ನಿವಾಸಿಗಳು ಟ್ರಾಫಿಕ್ ತೊಂದರೆ ಅನುಭವಿಸುತ್ತಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ಬಹಳ ಚರ್ಚೆ ನಡೆಯುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಶನಿವಾರ ನಡೆಯಬೇಕಿದ್ದ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಚಾರ ಆರಂಭಿಸಿರುವ ಪ್ರಧಾನಿ ಮೋದಿ ಅವರು, ಕಳೆದ ಶನಿವಾರ ರೋಡ್ಶೋ ನಡೆಸಿದರು. ಈ ವೇಳೆ ಸಹಜವಾಗಯೇ ಭದ್ರತೆ ವಿಚಾರವಾಗಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕುವುದು ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಇದರಿಂದ ಜನಸಾಮಾನ್ಯರು ಭಾರೀ ಟ್ರಾಫಿಕ್ ಸಮಸ್ಯೆ ಎದುರಿಸಿದರು. ಇದೀಗ ಮತ್ತೆ ನಾಳೆ(ಶನಿವಾರ) ರೋಡ್ ಶೋ ನಡೆಸಲು ವೇಳಾಪಟ್ಟಿ ಸಿದ್ದಪಡಿಸಲಾಗಿದೆ.
ಜನರಿಗೆ ಕಿರಿಕಿರಿ ಉಂಟಾಗುವುದರಿಂದ ಮೊದಲೇ ಎಚ್ಚೆತ್ತಿಕೊಂಡಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ಗಂಟೆಗಳ ರೋಡ್ ಶೋ ನಡೆಸುವ ಯೋಜನೆಯನ್ನು ಬಿಜೆಪಿ ಕೈಬಿಟ್ಟಿದೆ.
ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ಮತ್ತು ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2.30 ರವರೆಗೆ ಎರಡು ದಿನಗಳ ಕಾಲ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಇದನ್ನೂ ಓದಿ: ತನ್ನನ್ನು ನಿಂದಿಸುತ್ತಿದ್ದಾರೆಂದು ಅಳುವ ಪ್ರಧಾನಿಯನ್ನು ನೋಡುತ್ತಿದ್ದೇವೆ: ಮೋದಿಯನ್ನು ಗೇಲಿ ಮಾಡಿದ ಪ್ರಿಯಾಂಕಾ
”ಪ್ರಧಾನಿ ಮೋದಿ ಶನಿವಾರ ಇಲ್ಲಿ 36.6 ಕಿಮೀ ರೋಡ್ ಶೋ ನಡೆಸಲಿದ್ದಾರೆ — ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ 10.1 ಕಿಮೀ ಮತ್ತು ಸಂಜೆ 4 ರಿಂದ ರಾತ್ರಿ 10 ರವರೆಗೆ 26.5 ಕಿಮೀ ದೂರವನ್ನು ಒಳಗೊಂಡಿದೆ ಎಂದು ಪಕ್ಷವು ಬುಧವಾರ ಹೇಳಿತ್ತು. ಆದರೆ, ಇಡೀ ದಿನ ರೋಡ್ ಶೋ ನಡೆಸಿದರೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರ ಭಾವನೆಗೆ ಗೌರವ ನೀಡಿ ಎರಡು ದಿನ ಪ್ರಚಾರ ಮಾಡಿದ್ದೇವೆ” ಎಂದು ಶೋಭಾ ಕರಂದ್ಲಾಜೆ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
”ಮೇ 6 ಮತ್ತು 7 ರಂದು ನಗರದ ಒಟ್ಟು 28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ರೋಡ್ ಶೋಗಳು ನಡೆಯಲಿವೆ” ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೂ ಮೋದಿ ಶೋದಿಂದ ತೊಂದರೆ
ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸುತ್ತಿದ್ದು ಇದರಿಂದಾಗಿ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
ಪ್ರಧಾನಿ ರೋಡ್ ಶೋ ನಡೆಸುವ ಕಾರಣ ಟ್ರಾಫಿಕ್ ಜಾಮ್ ಉಂಟಾಗಿ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಹೀಗಾಗಿ ನಗರದ ವಿವಿಧ ಭಾಗಗಳಿಂದ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆ ಉಂಟಾಗುತ್ತದೆ.
ಇದಕ್ಕೆ ಸಂಬಂಧಪಟ್ಟಿರೋ ಅಧಿಕಾರಿಗಳು ಕೂಡಲೇ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕನಿಷ್ಠ ಎರಡು ತಾಸು ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಾಗುತ್ತದೆ. ವಿಶೇಷ ಭದ್ರತಾ ವ್ಯವಸ್ಥೆ ಇರುವ ಪ್ರಧಾನಿ ಮೋದಿ ರೋಡ್ ಶೋ, ಪ್ರಚಾರ ಸಭೆ, ರ್ಯಾಲಿ ಇದೇ ಸಮಯದಲ್ಲಿ ನಡೆಯಲಿವೆ. ಈ ವೇಳೆ ಅವರು ಸಾಗುವ ಮಾರ್ಗಗಳನ್ನು ಸಾಮಾನ್ಯವಾಗಿ ಮೂರ್ನಾಲ್ಕು ಗಂಟೆ ಮೊದಲೇ ಬಂದ್ ಮಾಡಲಾಗುತ್ತದೆ. ಪರೀಕ್ಷೆ ಎದುರಿಸುವ ಸವಾಲನ್ನು ಒಡಲೊಳಗೆ ಇಟ್ಟುಕೊಂಡ ಮಕ್ಕಳು, ಈ ಅಡೆತಡೆಗಳನ್ನು ದಾಟಿ ಪರೀಕ್ಷಾ ಕೇಂದ್ರಗಳನ್ನು ಮುಟ್ಟುವುದಕ್ಕೆ ಕಷ್ಟ ಪಡಬೇಕಾಗುತ್ತದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ರೋಡ್ ಶೋ ನಡೆಸಲಿದ್ದಾರೆ. ಈಗ ನಿಗದಿಯಾಗಿರುವಂತೆ, ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದ (ಒಪೆರಾ ಹೌಸ್ ವೃತ್ತ) ಬಳಿಯಿಂದ ಅವರ ರೋಡ್ ಶೋ ಶುರುವಾಗಲಿದೆ. ಅದು ಮಲ್ಲೇಶ್ವರದ ಸರ್ಕಲ್ ಮಾರಮ್ಮ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಮೋದಿಯವರ ರೋಡ್ ಶೋ ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ ಎಂಬ ನಿಖರ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯ ಇನ್ನೂ ಬಿಡುಗಡೆ ಮಾಡಿಲ್ಲ.
10 ಗಂಟೆಗೆ ರೋಡ್ ಶೋ ಆರಂಭವಾದರೆ ಅದು ಸಾಗುವ ಮಾರ್ಗವನ್ನು ಕನಿಷ್ಠ ಎರಡು ಗಂಟೆ ಮೊದಲೇ ವಿಶೇಷ ರಕ್ಷಣಾ ಪಡೆ (ಎಸ್ಪಿಜಿ) ತನ್ನ ಕಣ್ಗಾವಲಿನಲ್ಲಿ ಇಡುತ್ತದೆ. ರೋಡ್ ಶೋಗೆ ಯಾವುದೇ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ, ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. ರೋಡ್ ಶೋ ಸಾಗುವ ಮುಖ್ಯಮಾರ್ಗಕ್ಕೆ ಸಂಪರ್ಕಿಸುವ ಎಲ್ಲ ಉಪ ಹಾಗೂ ಕಿರು ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ, ನಿರ್ಬಂಧ ವಿಧಿಸಲಾಗುತ್ತದೆ.
”ನಿಗದಿತ ಪರೀಕ್ಷಾ ಕೇಂದ್ರ ತಲುಪಲು ತಾವು ನಿತ್ಯವೂ ಓಡಾಡುವ ದಾರಿಯಲ್ಲಿ ಹೋಗುವುದು ರೋಡ್ ಶೋನಿಂದಾಗಿ ಭಾನುವಾರ ಕಷ್ಟವಾಗುವ ಸಂಭವ ಇದೆ. ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಇರಬೇಕಾದರೆ, ಅದಕ್ಕಿಂತ 2–3 ಗಂಟೆ ಮೊದಲು ಮಕ್ಕಳನ್ನು ಮನೆಯಿಂದ ಹೊರಡಿಸಬೇಕಾಗುತ್ತದೆ” ಎಂದು ಪೋಷಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಮೇ 10 ರಂದು ಕರ್ನಾಟಕದ ಮತಗಳು. ಮೇ 8 ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಮೇ 13 ರಂದು ಮತಗಳ ಎಣಿಕೆ ನಡೆಯಲಿದೆ.