Homeಅಂತರಾಷ್ಟ್ರೀಯಅನೌಪಚಾರಿಕ ಶೃಂಗಸಭೆ - ಉಭಯ ನಾಯಕರ ವ್ಯರ್ಥ ಕಸರತ್ತು : ಜಾಲಿ ರೈಡ್ ನಡೆಸಿದ ಮೋದಿ-ಕ್ಸಿ

ಅನೌಪಚಾರಿಕ ಶೃಂಗಸಭೆ – ಉಭಯ ನಾಯಕರ ವ್ಯರ್ಥ ಕಸರತ್ತು : ಜಾಲಿ ರೈಡ್ ನಡೆಸಿದ ಮೋದಿ-ಕ್ಸಿ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ನಡುವಿನ ಮಾತುಕತೆ ವ್ಯರ್ಥ ಕಸರತ್ತಿನಂತೆ ಕಾಣುತ್ತದೆ. ಇದು ಅನೌಪಚಾರಿಕ ಶೃಂಗಸಭೆಯಾದ್ದರಿಂದ ನಿರ್ಧಿಷ್ಟಪಡಿಸಿದ ವಿಷಯಗಳೇ ಪ್ರಸ್ತಾಪವಾಗಬೇಕು ಎಂದೇನೂ ಇರಲಿಲ್ಲ. ಹಾಗಾಗಿ ಆರ್ಥಿಕ ವಿಷಯಗಳಲ್ಲದೆ ಗಡಿ ವಿಷಯಗಳು ಚರ್ಚೆಗೆ ಬರಬೇಕಿತ್ತು. ಪ್ರಧಾನಿ ಮೋದಿ ಆರ್ಥಿಕತೆ ಮತ್ತು ವ್ಯಾಪಾರ ಕುರಿತು ಮಾತನಾಡಿದರೆ ಕ್ಸಿ ಸರಕು ಮತ್ತು ಹೂಡಿಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಉಭಯ ನಾಯಕರು ಪ್ರಜ್ಞಾಪೂರ್ವಕವಾಗಿಯೇ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಮೋದಿ-ಕ್ಸಿ ಜೋಡಿ ಹಳೆಯ ವಿಷಯಗಳಿಗೆ ಕಟ್ಟುಬಿದ್ದಿರುವುದರಿಂದ ಶೃಂಗಸಭೆಯ ಉದ್ದೇಶ ಈಡೇರಿದಂತೆ ಆಗಿಲ್ಲ ಎನ್ನಬಹುದು.

ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ರದ್ದುಪಡಿಸುವ ಮೊದಲು ಹಾಗೂ ನಂತರವೂ ಚೀನಾ ದೇಶ ಪಾಕಿಸ್ತಾನದ ಪರ ಧ್ವನಿ ಎತ್ತುತ್ತಲೇ ಬರುತ್ತಿದೆ. ಪ್ರತಿಯೊಂದು ಹಂತದಲ್ಲೂ ಚೀನಾ ಪಾಕಿಸ್ತಾನವನ್ನು ಬಿಟ್ಟುಕೊಟ್ಟಿಲ್ಲ. ವಿಶೇಷ ಸ್ಥಾನಮಾನ ತೆಗೆದ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಎರಡು ಬಾರಿ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿ ಬಂದು ತಾನು ಭಾರತದ ಪರ ಇಲ್ಲ ಎಂಬುದನ್ನು ಪ್ರದರ್ಶಿಸಿದೆ. ಚೀನಾ ದೇಶವು ಪಾಕಿಸ್ತಾನ ನೆಲದಲ್ಲಿ ಅಂದರೆ ಭಾರತದ ಗಡಿಗೆ ಹೊಂದಿಕೊಂಡಂತೆ ಆರ್ಥಿಕ ಕಾರಿಡಾರ್ ಹೊಂದಿರುವ ಕಾರಣ ಆ ದೇಶಕ್ಕೆ ಪಾಕ್‍ನ್ನು ಬೆಂಬಲಿಸುವುದು ಅನಿವಾರ್ಯವು ಆಗಬಹುದು. ಹಾಗಾಗಿಯೇ ಚೀನಾಕ್ಕೆ ಪಾಕ್ ಮೇಲಿನ ಪ್ರೇಮ ಹೆಚ್ಚು. ಇದೇ ಕಾರಣಕ್ಕಾಗಿಯೇ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, 56 ಇಂಚಿನ ಎದೆಯನ್ನು ಈಗ ಪ್ರಧಾನಿ ಚೀನಾ ಅಧ್ಯಕ್ಷರ ಮುಂದೆ ಪ್ರದರ್ಶಿಸಬೇಕು. ಪಾಕ್ ಆಕ್ರಮಿತ ಕಾಶ್ಮೀರದಿಂದ ಹಿಂದೆ ಸರಿಯಲು ಕ್ಸಿಗೆ ಪ್ರಧಾನಿ ನೇರವಾಗಿ ಹೇಳಬೇಕು ಎಂದು ವ್ಯಂಗ್ಯವಾಗಿ ತಿವಿದರು.

ಚೀನಾ ಮತ್ತು ಭಾರತದ ನಡುವೆ ಗಡಿ ವಿವಾದ ಹಿಂದಿನಿಂದಲೂ ಇದೆ. ಅದನ್ನು ಬಗೆಹರಿಸುವ ಸಣ್ಣ ಪ್ರಯತ್ನಗಳು ನಡೆದಿವೆಯಾದರೂ ಗಡಿ ವಿವಾದಗಳು ಬಗೆಹರಿದಿಲ್ಲ. ಭಾರತ ಮತ್ತು ಚೀನಾ ಗಡಿಯನ್ನು ಹಂಚಿಕೊಂಡಿವೆ. ಅದೇ ಕಾರಣಕ್ಕೆ ವಿವಾದ ಹಾಗೆಯೇ ಉಳಿದಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನಿರ್ಮಾಣವಾಗುವ ಸಂದರ್ಭದಲ್ಲಿ ಭಾರತ ತಕರಾರು ಎತ್ತಿತ್ತು. ನಮ್ಮ ಗಡಿಯಲ್ಲಿ ಆರ್ಥಿಕ ಕಾರಿಡಾರು ಮಾಡಬಾರದು ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ನೆಪವನ್ನು ಇಟ್ಟುಕೊಂಡು ಚೀನಾ ಮತ್ತೆ ಕ್ಯಾತೆ ತೆಗೆಯಿತು. 2017ರಲ್ಲಿ ತನ್ನ ಗಡಿಭಾಗದಲ್ಲಿ ಹೆಚ್ಚುವರಿ ಸೈನಿಕರ ಜಮಾವಣೆ ಮಾಡಿತು. ಇದಕ್ಕೆ ಉತ್ತರವಾಗಿ ಭಾರತವೂ ಗಡಿಯಲ್ಲಿ ಸೈನಿಕರ ನಿಯೋಜನೆ ಮಾಡಿತು. ಇದರಿಂದಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿದಂತೆ ಉಭಯ ರಾಷ್ಟ್ರಗಳು ಸೈನಿಕರನ್ನು ವಾಪಸ್ ಕರೆಸಿಕೊಂಡರು.

ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳು ತನಗೆ ಸೇರಬೇಕು ಎಂದು ಚೀನಾ ವಾದಿಸಿತು. ಹೀಗಾಗಿ ಸಿಕ್ಕಿಂ ಪ್ರದೇಶದ ಕೋಳಿ ಕತ್ತು ಅಥವಾ ಟ್ರೈ ಜಂಕ್ಷನ್ ಪ್ರದೇಶದಲ್ಲಿ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಆ ವಿಷಯ ಇನ್ನೂ ಹಸಿರಾಗಿಯೇ ಇದೆ. ಪರಿಸ್ಥಿತಿ ಹೀಗಿರುವಾಗ ಗಂಭೀರವಾದ ವಿಷಯಗಳು ಅನೌಪಚಾರಿಕ ಶೃಂಗಸಭೆಯಲ್ಲಿ ಚರ್ಚೆಗೆ ಬಂದಿದ್ದರೆ ಒಳ್ಳೆಯದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಮ್ಮು-ಕಾಶ್ಮೀರ ವಿಷಯವನ್ನು ತೆಗೆದುಕೊಂಡು ಹೋಗಿದ್ದರೂ ಅದು ಉಭಯ ದೇಶಗಳ ನಡುವೆ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇದು ಭಾರತದ ಪ್ರತಿಪಾದನೆಯೂ ಕೂಡ. ಆದರೆ ಭಾರತ ಅಮೇರಿಕಾವನ್ನು ನಂಬಿ ಕೂತಂತೆ ಕಾಣುತ್ತಿದೆ. ಪ್ರಧಾನಿ ಮೋದಿ ಅವರು ಪದೇಪದೇ ಅಮೆರಿಕಾ ಅಧ್ಯಕ್ಷರನ್ನು ಭೇಟಿ ಮಾಡುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ. ಅಮೆರಿಕಾ ತನ್ನ ನಿಲುವು ಸ್ಪಷ್ಟಪಡಿಸದೆ ಒಮ್ಮೆ ಭಾರತದ ಪರವಾಗಿ ಮತ್ತೊಮ್ಮೆ ಪಾಕಿಸ್ತಾನದ ಪರವಾಗಿ ಮಾತನಾಡುತ್ತ ತನ್ನ ಶಸ್ತ್ರಾಸ್ತ್ರಗಳ ಮಾರಾಟದಲ್ಲಿ ತೊಡಗಿದೆ.

ಭಾರತದ ಪ್ರಧಾನಿ ಭೇಟಿಯಾದರೆ ಉಭಯ ದೇಶಗಳು ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲಿ ಅನ್ನುವುದು. ಪಾಕ್ ಪ್ರಧಾನಿ ಭೇಟಿ ಮಾಡಿದರೆ ತಾನು ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ದ ಎನ್ನುವುದು. ಹೀಗೆ ಎರಡು ನಾಲಗೆಯ ಮಾತುಗಳು ಅಮೆರಿಕಾದಿಂದ ಹೊರಬರುತ್ತಿವೆ. ಇದು ಭಾರತಕ್ಕೆ ತಿಳಿಯುತ್ತಿಲ್ಲವೇ? ಅಮೆರಿಕಾ ಮತ್ತು ಚೀನಾ ಪಾಕಿಸ್ತಾನದ ಪರವಾಗಿಯೇ ಇದ್ದರೂ ಭಾರತ ಯಾರ ಓಲೈಕೆಯಲ್ಲಿ ತೊಡಗಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ಇದು ವ್ಯರ್ಥ ಕಸರತ್ತೂ ಕೂಡ. ಭಾರತ ರಾಜತಾಂತ್ರಿಕ ಪ್ರಬುದ್ಧತೆ ಪ್ರದರ್ಶಿಸುತ್ತಿಲ್ಲ. ಚರ್ಚಿತವಾಗಬೇಕಾದ ವಿಷಯಗಳೇ ಪ್ರಮುಖವಾಗುತ್ತಿಲ್ಲ.

ಚೀನಾ ಅಧ್ಯಕ್ಷರು ‘ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ’ ಬಗ್ಗೆ ಮಾತನಾಡಿದ್ದಾರೆ. ಅದು ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಇಲ್ಲವೇ ಬೆಲ್ ಅಂಡ್ ರೋಡ್ ಫೋರಂ ಮತ್ತು ಆರ್ಥಿಕ ಕಾರಿಡಾರ್‌ನ ಮುಂದುವರೆದ ಭಾಗ. ಈಗಾಗಲೇ ಪಾಕಿಸ್ತಾನದಲ್ಲಿ ತನ್ನ ನೆಲೆಯನ್ನು ಕಂಡುಕೊಂಡಿರುವ ಚೀನಾ. ಭಾರತದ ಮೇಲೂ ಹೊಸ ಆರ್ಥಿಕ ಪಾಲುದಾರಿಕೆ ಮೂಲಕ ಸವಾರಿ ಮಾಡಲು ಹೊರಟಂತೆ ಕಾಣುತ್ತಿದೆ. ಚೀನಾ ಉತ್ಪನ್ನಗಳನ್ನು ತಿರಸ್ಕರಿಸಬೇಕು ಎನ್ನುವ ಬಿಜೆಪಿಯು ತನ್ನದೇ ಕೇಂದ್ರ ಸರ್ಕಾರ ಚೀನಾದಿಂದ ಹೂಡಿಕೆಗೆ ಅವಕಾಶ ನೀಡುತ್ತಿರುವುದನ್ನು ಮಗುಮ್ಮಾಗಿಯೇ ಸ್ವೀಕರಿಸುವ ಮೂಲಕ ತನ್ನ ಆಷಾಡಭೂತಿತನವನ್ನು ಪ್ರದರ್ಶಿಸಿದೆ. ಕಳೆದ ಐದು ವರ್ಷದಿಂದ ಇಚೀಗೆ ಯಾವುದೇ ದೇಶ ಇಂಡಿಯಾದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿಲ್ಲ. ಹಾಗಾದರೆ ವಿದೇಶ ಸುತ್ತುವ ಮೋದಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ಆದ್ದರಿಂದ ಮಾಮಲ್ಲಪುರಂನಲ್ಲಿ ಚೀನಾ ಅಧ್ಯಕ್ಷರಿಗೆ ಕೆಂಪು ನೆಲಹಾಸ ಹಾಕಿ ಸ್ವಾಗತಿಸಿದರೂ ಉಭಯ ನಾಯಕರ ನಡುವೆ ನಡೆದ ಚರ್ಚೆ ವ್ಯರ್ಥ ಕಸರತ್ತು ಎನ್ನದೆ ಬೇರೆ ಮಾರ್ಗವಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...