ಪ್ರಧಾನಿ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಕುರಿತು ಮಾತನಾಡಿದ ಬೆನ್ನಲ್ಲೇ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರು ಮುಸ್ಲಿಮರನ್ನು ‘ಹಿಂದೂ ನಾಗರಿಕ ಸಂಹಿತೆ’ಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿ ಹೇಳಿದ್ದೇನು?
ಮಂಗಳವಾರ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ, ”ಮನೆಯಲ್ಲಿ ಒಬ್ಬರಿಗೆ ಒಂದು, ಇನ್ನೊಬ್ಬರಿಗೆ ಇನ್ನೊಂದು ಕಾನೂನು ಇದ್ದರೆ ಕುಟುಂಬವನ್ನು ನಿಭಾಯಿಸುವುದು ಕಪ್ಪ. ಇನ್ನೂ ಎರಡು ಕಾನೂನುಗಳಿದ್ದರೆ ರಾಷ್ಟ್ರವನ್ನು ಮುನ್ನಡೆಸಲು ಸಾಧ್ಯವೇ?” ಎಂದು ಕೇಳುವ ಮೂಲಕ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಆಗತ್ಯವನ್ನು ಪ್ರತಿಪಾದಿಸಿದ್ದರು.
ಒವೈಸಿ ಪ್ರತಿಕ್ರಿಯೆ
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಸಾದುದ್ದೀನ್ ಒವೈಸಿ, ”ದೇಶದ ಪ್ರಧಾನಿಯವರು ಈಗ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡುತ್ತಿದ್ದಾರೆ. ಏಕರೂಪ ನಾಗರಿಕ ಸಂಹಿತ ಹೆಸರಿನಲ್ಲಿ ಬಹುತ್ವ, ವೈವಿಧ್ಯತೆಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದೀರಾ?” ಎಂದು ಕೇಳಿದ್ದಾರೆ.
”ಅವರು (ಪ್ರಧಾನಿ) ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡಿಲ್ಲ. ಹಿಂದೂ ನಾಗರಿಕ ಸಂಹಿತೆ ಕುರಿತು ಮಾತನಾಡಿದ್ದಾರೆ. ಈ ಕಾನೂನಿನ ಮೂಲಕ ಅವರು ಮುಸ್ಲಿಮರ ಎಲ್ಲ ಆಚರಣೆಗಳನ್ನು ಅಕ್ರಮವೆಂದು ಪರಿಗಣಿಸಲಿದ್ದಾರೆ. ಪ್ರಧಾನಿಯವರು ಈ ಕಾನೂನಿನ ಅಡಿಯಲ್ಲಿ ಹಿಂದೂಗಳ ಸಂಪ್ರದಾಯಗಳನ್ನು ರಕ್ಷಿಸಲಿದ್ದಾರೆ” ಎಂದು ಆರೋಪಿಸಿದ್ದಾರೆ.
”ನಾನು ಮತ್ತೆ ಹೇಳುತ್ತಿದ್ದೇನೆ. ಪ್ರಧಾನಿ ಅವರು ಹಿಂದೂ ನಾಗರಿಕ ಸಂಹಿತೆ ಬಗ್ಗೆ ಮಾತನಾಡಲು ಮತ್ತು ಜಾರಿಗೊಳಿಸಲು ಬಯಸಿದ್ದಾರೆ. ಅದು ಅವರ ಉದ್ದೇಶವಾಗಿದೆ. ಆ ಮೂಲಕ ಭಾರತೀಯ ಮುಸ್ಲಿಮರನ್ನು ಗುರಿಯಾಗಿಸುವುದು ಮತ್ತು ಅವಮಾನಿಸುವುದು ಅವರ ಧೈಯ” ಎಂದು ಗಂಭೀರ ಆರೋಪ ಮಾಡಿದ್ದಾರೆ.
”ಹಿಂದೂ ಅವಿಭಜಿತ ಕುಟುಂಬ (ಎಚ್ಯುಎಫ್) ಕಾನೂನು ರದ್ದುಪಡಿಸಲು ಸಾಧ್ಯವೇ?” ಎಂದು ಪ್ರಶ್ನಿಸಿರುವ ಒವೈಸಿ, ”ಪ್ರಧಾನಿಯವರು ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಪಂಜಾಬ್ನಲ್ಲಿ ಮಾತನಾಡಬೇಕು ಮತ್ತು ಅದಕ್ಕೆ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಬೇಕು” ಎಂದು ಸವಾಲು ಹಾಕಿದ್ದಾರೆ.
ಇದನ್ನು ಓದಿ: ಮಣಿಪುರ ಹೊತ್ತಿಯುರಿಯುತ್ತಿದ್ದರೂ ಪ್ರಧಾನಿ ‘ಮೌನ’, ಗೃಹ ಸಚಿವ ಶಾ ‘ನಿಷ್ಟ್ರಯೋಜಕ’: ಜೈರಾಮ್ ರಮೇಶ್ ವಾಗ್ದಾಳಿ