ತ್ರಿಪುರ ರಾಜ್ಯದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೆ ಮುಂಚಿತವಾಗಿ ಹಲವಾರು ಬಿಜೆಪಿ ಶಾಸಕರು ಸಾಲು ಸಾಲಾಗಿ ಬಿಜೆಪಿ ತೊರೆಯುತ್ತಿದ್ದಾರೆ. ಬುಧವಾರ ಬಿಜೆಪಿಯ ಶಾಸಕ ದಿಬಾ ಚಂದ್ರ ಹ್ರಾಂಗ್ಖಾಲ್ ಅವರು ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ.
ಬುಡಕಟ್ಟು ನಾಯಕರಾದ ಹ್ರಂಗ್ಖಾಲ್, ಉತ್ತರ ತ್ರಿಪುರಾದ ಉನಕೋಟಿ ಜಿಲ್ಲೆಯ ಕರಂಚರಾ ಅಸೆಂಬ್ಲಿ ಸ್ಥಾನದಿಂದ ಬಿಜೆಪಿಯ ಟಿಕೆಟ್ನಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು ಬಿಜೆಪಿ ತೊರೆದಿದ್ದಾರೆ. ಇದರೊಂದಿಗೆ ಒಂದು ವರ್ಷದಲ್ಲಿ 5 ಬಿಜೆಪಿ ಶಾಸಕರು ಪಕ್ಷ ತ್ಯಜಿಸಿದರು.
ಒಟ್ಟಾರೆಯಾಗಿ ಬಿಜೆಪಿ ಮೈತ್ರಿ ಭಾಗವಾಗಿರುವ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ ಆಡಳಿತ ಮೈತ್ರಿಕೂಟದ ಎಂಟು ಶಾಸಕರು ಪಕ್ಷಾಂತರ ಮಾಡಿದ್ದಾರೆ. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
ಈ ಹಿಂದೆ ಒಂದು ವರ್ಷದಲ್ಲಿ ಬಿಜೆಪಿ ಶಾಸಕರಾದ ಬುರ್ಬಾ ಮೋಹನ್, ಆಶಿಸ್ ದಾಸ್, ಸುದೀಪ್ ರಾಯ್ ಬರ್ಮನ್, ಆಶಿಸ್ ಕುಮಾರ್ ಸಹಾ ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದರು. ಅಲ್ಲದೆ ಮೇವರ್ ಕುಮಾರ್ ಜಮಾಟಿಯಾ, ಬೃಶಕೇತು ದೆಬ್ಬರ್ಮಾ ಮತ್ತು ಧನಂಜಯ್ ಮೈತ್ರಿಕೂಟ ತ್ಯಜಿಸಿದ್ದಾರೆ.
ರಾಜೀನಾಮೆ ನೀಡಿದ 8 ಜನರಲ್ಲಿ ಮೂವರು ಕಾಂಗ್ರೆಸ್ ಪಕ್ಷ ಸೇರಿದರೆ, ಐವರು ತ್ರಿಪಾಹ ಇಂಡಿಜಿನಸ್ ಪ್ರೊಗ್ರೆಸ್ಸಿವ್ ರೀಜನಲ್ ಅಲೆಯನ್ಸ್ ಒಕ್ಕೂಟ ಸೇರಿದ್ದಾರೆ.
2023 ಫೆಬ್ರವರಿಯಲ್ಲಿ ತ್ರಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಸದ್ಯ 60 ಸದಸ್ಯರ ವಿಧಾನ ಸಭೆಯಲ್ಲಿ ಬಿಜೆಪಿ 33 ಮತ್ತು ಇತರೆ ಮೈತ್ರಿ ಪಕ್ಷಗಳ 5 ಶಾಸಕರ ಬಲದೊಂದಿಗೆ ಒಟ್ಟು 38 ಸ್ಥಾನಗಳನ್ನು ಪಡೆದು ಅಧಿಕಾರದಲ್ಲಿದೆ.
ಇದನ್ನೂ ಓದಿ: ‘ಒಪಿಎಸ್ ಜಾರಿ ಸಾಧ್ಯವಿಲ್ಲ’: ಗೌರ್ಮೆಂಟ್ ನೌಕರರ ಗಾಯಕ್ಕೆ ಉಪ್ಪು ಸವರಿದ ಸರ್ಕಾರ