ಮಣಿಪುರದ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಲೇ ಇವೆ. ಆದರೆ ಪ್ರಧಾನಿ ಮಾತ್ರ ಬಾಯಿಬಿಡುತ್ತಿಲ್ಲ ಹಾಗಾಗಿ ವಿರೋಧ ಪಕ್ಷಗಳು ಬುಧವಾರ ಲೋಕಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಎಎನ್ಐಗೆ ತಿಳಿಸಿದ್ದಾರೆ.
ಜುಲೈ 20ರಂದು ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಮೋದಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಲೇ ಇವೆ. ಚರ್ಚೆ ನಡೆಸಲು ಸಿದ್ಧ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ, ಆದರೆ ಪ್ರಧಾನಿ ಮಾತ್ರ ಮಾತನಾಡಲು ಸಿದ್ಧವಿಲ್ಲ.
ಮೇ 3ರಿಂದ ಕುಕಿಗಳು ಮತ್ತು ಮೈತಿ ಸಮುದಾಯಗಳ ನಡುವಿನ ಘರ್ಷಣೆಯಿಂದ ಮಣಿಪುರವು ಧ್ವಂಸಗೊಂಡಿದೆ. 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಿದ್ದಾರೆ.
ಇಬ್ಬರು ಕುಕಿ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ವೀಡಿಯೊ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ, ಮಣಿಪುರದಲ್ಲಿನ ರಾಜ್ಯ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ದಾಳಿ ನಡೆಸಿದವು.
ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಚೇಂಬರ್ನಲ್ಲಿ INDIA ಒಕ್ಕೂಟದ 26 ಪಕ್ಷಗಳ ನಾಯಕರು ಸಭೆ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರುವ ಕ್ರಮವನ್ನು ಅಂತಿಮಗೊಳಿಸಲಾಯಿತು.
ಲೋಕಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸ್ಪಷ್ಟ ಬಹುಮತವನ್ನು ಹೊಂದಿರುವುದರಿಂದ ಅವಿಶ್ವಾಸ ನಿರ್ಣಯವು ಸೋಲುವುದು ಖಚಿತ. ಆದರೆ ಸಂಸತ್ತಿನಲ್ಲಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಈ ಪ್ರಸ್ತಾಪವನ್ನು ಒಂದು ಸಾಧನವಾಗಿ ಬಳಸಬಹುದು ಎಂಬುದು ಪ್ರತಿಪಕ್ಷಗಳ ನಂಬಿಕೆ..
”ಅವರು [ಮೋದಿ] ನಮ್ಮ ಬೇಡಿಕೆಯನ್ನು ನಿರಾಕರಿಸುತ್ತಿದ್ದಾರೆ” ಆದರೆ ಸರ್ಕಾರದ ಮೇಲಿನ ಆರೋಪಗಳಿಗೆ ಪ್ರಧಾನಿ ಅವರೇ ಉತ್ತರಿಸಬೇಕು ಎಂದು ಚೌಧರಿ ANI ಗೆ ತಿಳಿಸಿದರು.
ಖರ್ಗೆ ಹಾಗೂ ಚೌಧರಿಗೆ ಅಮಿತ್ ಶಾ ಪತ್ರ
ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಖರ್ಗೆ ಮತ್ತು ಚೌಧರಿ ಅವರಿಗೆ ಪತ್ರ ಬರೆದಿದ್ದು, ಮಣಿಪುರದ ಬಗ್ಗೆ ವಿಸ್ತೃತ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
”ಎಲ್ಲಾ ರಾಜಕೀಯ ಪಕ್ಷಗಳ ಸಂಸದರು ಮಣಿಪುರದಲ್ಲಿ ಶಾಂತಿ ನೆಲಸು ಶಾಸಕರು ಒಗ್ಗಟ್ಟಾಗಿದ್ದಾರೆ ಮತ್ತು ಬದ್ಧರಾಗಿದ್ದಾರೆ ಎಂಬ ವಿಶ್ವಾಸವನ್ನು ನೀಡಬೇಕು ಎಂದು ಮಣಿಪುರದ ಜನರು ಬಯಸುತ್ತಾರೆ” ಎಂದಿದ್ದಾರೆ.
”ಸರ್ಕಾರವು ಯಾವುದಕ್ಕೂ ಹೆದರುವುದಿಲ್ಲ. ಮಣಿಪುರ ವಿಷಯದ ಬಗ್ಗೆ ಚರ್ಚೆ ಮಾಡಲು ಬಯಸುವವರು ಚರ್ಚೆ ಮಾಡಬಹುದು. ನಮಗೆ ಮುಚ್ಚಿಡಲು ಏನೂ ಇಲ್ಲ” ಎಂದು ಶಾ ತಿಳಿಸಿದ್ದಾರೆ.
Today, I wrote to the opposition leaders of both houses, Shri @adhirrcinc Ji of Lok Sabha, and Shri @kharge Ji of Rajya Sabha, appealing to them for their invaluable cooperation in the discussion of the Manipur issue.
The government is ready to discuss the issue of Manipur and… pic.twitter.com/IpGGtYSNwT
— Amit Shah (@AmitShah) July 25, 2023