ನಾಗಾಲ್ಯಾಂಡ್ನ ಮೋನ್ ಜಿಲ್ಲೆಯ ಓಟಿಂಗ್ನ ಗ್ರಾಮಸ್ಥರು ಮತ್ತು ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ 14 ಜನರ ಕುಟುಂಬ ಸದಸ್ಯರು ಸರ್ಕಾರದ ಪರಿಹಾರವನ್ನು ನಿರಾಕರಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾದ ಸೇನಾ ಸಿಬ್ಬಂದಿಯನ್ನು “ನ್ಯಾಯಾಂಗ ವಿಚಾರಣೆಗೆ ಒಳಪಡಿಸುವವರೆಗೆ ಯಾವುದೇ ಸರ್ಕಾರಿ ಪರಿಹಾರ ನಮಗೆ ಬೇಡ” ಎಂದು ಹೇಳಿದ್ದಾರೆ.
ಹತ್ಯೆಯ ನಂತರ ಸ್ಥಳೀಯರು ಶವಸಂಸ್ಕಾರ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿದ್ದಾಗ ಡಿಸೆಂಬರ್ 5 ರಂದು ರಾಜ್ಯ ಸಚಿವ ಪಿ. ಪೈವಾಂಗ್ ಕೊನ್ಯಾಕ್ ಮತ್ತು ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ 18.30 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಓಟಿಂಗ್ ವಿಲೇಜ್ ಕೌನ್ಸಿಲ್ ಹೇಳಿಕೆಯಲ್ಲಿ ತಿಳಿಸಿದೆ.
ಸಚಿವರಿಂದ ನೀಡಿದ “ಪ್ರೀತಿ ಮತ್ತು ಉಡುಗೊರೆಯ ಟೋಕನ್” ಎಂದು ಸಂತ್ರಸ್ತರು ಮೊದಲು ಭಾವಿಸಿದರು. ಆದರೆ ಇದು ಕೊಲ್ಲಲ್ಪಟ್ಟ ಮತ್ತು ಗಾಯಗೊಂಡವರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ನೀಡಲಾದ ಅನುಕಂಪದ ಕಂತು ಎಂದು ತಿಳಿಯಿತು ಎಂದು ಗ್ರಾಮಸ್ಥರು ಹೇಳಿದ್ದಾರೆ.
“ಭಾರತೀಯ ಸಶಸ್ತ್ರ ಪಡೆಗಳ 21ನೇ ಪ್ಯಾರಾ ಕಮಾಂಡೋಗಳ ಅಪರಾಧವನ್ನು ನ್ಯಾಯಾಂಗದ ಅಂಗಳಕ್ಕೆ ತರುವವರೆಗೆ, ನಾಗರಿಕ ಕಾನೂನು ಸಂಹಿತೆ ಮತ್ತು ಸಂಪೂರ್ಣ ಸಶಸ್ತ್ರ ಪಡೆ ವಿಶೇಷ ಅಧಿಕಾರ ಕಾಯಿದೆ (AFSPA) ಹಿಂಪಡೆಯುವವರೆಗೆ ಪರಿಹಾರವನ್ನು ಕುಟುಂಬಗಳು ಸ್ವೀಕರಿಸುವುದಿಲ್ಲ” ಎಂದು ಹೇಳಿಕೆ ತಿಳಿಸಿದೆ.
ಭಾನುವಾರ ಹೊರಡಿಸಿದ ಹೇಳಿಕೆಗೆ ವಿಲೇಜ್ ಕೌನ್ಸಿಲ್ ಅಧ್ಯಕ್ಷ ಲಾಂಗ್ವಾಂಗ್ ಕೊನ್ಯಾಕ್, ಆಂಗ್ (‘ರಾಜ’) ತಹ್ವಾಂಗ್, ಡೆಪ್ಯೂಟಿ ಅಂಗ್ ಚಿಂಗ್ವಾಂಗ್ ಮತ್ತು ಗಾವ್ ಬುರಾಹ್ಗಳು (ಗ್ರಾಮ ಮುಖ್ಯಸ್ಥರು) ಸಹಿ ಮಾಡಿದ್ದಾರೆ.
ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ 14 ಜನರ ಕುಟುಂಬಗಳಿಗೆ ನಾಗಾಲ್ಯಾಂಡ್ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ನಾಗಾಲ್ಯಾಂಡ್ನ ಮಯನ್ಮಾರ್ ಗಡಿಯ ಬಳಿ ದಂಗೆಕೋರರ ವಿರುದ್ಧದ ಕಾರ್ಯಾಚರಣೆಯ ವೇಳೆ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ 13 ಮಂದಿ ಗ್ರಾಮಸ್ಥರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದರು.
ಘಟನೆಯ ಬಳಿಕ ವಿಷಾದ ವ್ಯಕ್ತಪಡಿಸಿದ್ದ ಗೃಹಸಚಿವ ಅಮಿತ್ ಶಾ, “ಭಾರತ ಸರ್ಕಾರವು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸುತ್ತದೆ. ಘಟನೆಯ ತನಿಖೆಗಾಗಿ SIT ರಚಿಸಲಾಗಿದ್ದು, ಒಂದು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ. ನಾಗಾಲ್ಯಾಂಡ್ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಆದರೆ ನಿಯಂತ್ರಣದಲ್ಲಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಎಲ್ಲಾ ಸಂಸ್ಥೆಗಳು ಅದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಹೇಳಿದ್ದರು.
ಇದನ್ನೂ ಓದಿರಿ: ನಾಗಾಲ್ಯಾಂಡ್: ಎಎಫ್ಎಸ್ಪಿಎ ಹಿಂಪಡೆಯಲು ಒತ್ತಾಯಿಸಿ ಮುಂದುವರಿದ ಹೋರಾಟ