ಮೈಸೂರಿನಲ್ಲಿ ರಸ್ತೆಯೊಂದಕ್ಕೆ ಅಂಬೇಡ್ಕರ್ ಹೆಸರಿನ ನಾಮಫಲಕ ಅಳವಡಿಸುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿರುವ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.
ದಲಿತ ಸಮುದಾಯ ಹಾಗೂ ನಾಯಕ ಸಮುದಾಯದ ನಡುವೆ ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರದಲ್ಲಿ ಘರ್ಷಣೆ ಉಂಟಾಗಿದೆ. ಈ ವೇಳೆ ದಲಿತರ ಬೀದಿಯ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಉದ್ರಿಕ್ತ ಗುಂಪು ಧ್ವಂಸ ಮಾಡಿ ಕಲ್ಲು ತೂರಾಟ ಕೂಡ ನಡೆಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ಸೇರಿ 30ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಈ ಪೈಕಿ 8 ಮಂದಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ನಂಜನಗೂಡು ಸರ್ಕಲ್ ಇನ್ಸ್ಪೆಕ್ಟರ್ ಸುನಿಲ್, ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿ ಗೋಪಾಲಕೃಷ್ಣ ಅವರಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್, ಅಡಿಷನಲ್ ಎಸ್ ಪಿ ನಂದಿನಿ ಭೇಟಿ ನೀಡಿದ್ದಾರೆ. ಯಾವುದೇ ಹೆಚ್ಚುವರಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಘಟನೆ ಹಿನ್ನೆಲೆ
ಹಲ್ಲರೆ ಗ್ರಾಮದಿಂದ ಹುರ ಗ್ರಾಮದ ಕಡೆಗೆ ತೆರಳುವ ರಸ್ತೆಗೆ ಡಾ. ಬಿ ಆರ್ ಅಂಬೇಡ್ಕರ್ ಹೆಸರಿಡಲು ಪರಿಶಿಷ್ಟ ಸಮುದಾಯದ ಯುವಕರು ಸ್ಥಳೀಯ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಪಿಡಿಒ ಅವರಿಂದ ಅನುಮತಿ ಪಡೆದಿದ್ದರು. ಆದರೆ ಬೀದಿಯ ಕೊನೆಯಲ್ಲಿ ನಮ್ಮ ಮನೆಗಳಿದ್ದು, ಇಲ್ಲಿ ಫಲಕ ಅಳವಡಿಸಬೇಡಿ ಎಂದು ನಾಯಕ ಸಮುದಾಯದವರು ಇದಕ್ಕೆ ವಿರೋಧಿಸಿದ್ದರು. ಹೀಗಾಗಿ ಐದು ದಿನಗಳ ಹಿಂದೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಮುಂದೂಡಲಾಗಿತ್ತು.
ಸೋಮವಾರ ಸಂಜೆ ಪರಿಶಿಷ್ಟ ಜಾತಿಯ ಯುವಕರು ರಸ್ತೆಯಲ್ಲಿ ನಾಮಫಲಕ ಅಳವಡಿಸಲು ಮುಂದಾದಾಗ ಜಗಳ ಆರಂಭಗೊಂಡಿದ್ದು, ಬಳಿಕ ಹೊಡೆದಾಟ, ಪರಸ್ಪರ ಕಲ್ಲು ಹಾಗೂ ಒನಕೆಯಿಂದ ಹಲ್ಲೆ ನಡೆಸಲಾಗಿದೆ. ಮನೆಗಳಿಗೂ ಕಲ್ಲು ತೂರಾಟ ನಡೆಸಲಾಗಿದ್ದು, ಹೆಂಚುಗಳು ಪುಡಿಪುಡಿಯಾಗಿವೆ. 30ಕ್ಕೂ ಹೆಚ್ಚು ಬೈಕ್ಗಳು ಜಖಂಗೊಂಡಿದ್ದು, ಶಾಲಾ ಬಸ್ ಸೇರಿದಂತೆ ಸ್ಥಳದಲ್ಲಿದ್ದ ಇತರ ವಾಹನಗಳಿಗೂ ಹಾನಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತೆರಳಿದ್ದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಕೂಡ ಗಾಯಗಳಾಗಿವೆ.
ಇದನ್ನು ಓದಿ: ಕೆರಗೋಡು ಧ್ವಜ ವಿವಾದ: ಬಿಜೆಪಿ-ಆರ್ಎಸ್ಎಸ್ ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ ಎಂದ ಕಾಂಗ್ರೆಸ್