ಲೋಕಸಭೆ ಚುನಾವಣೆಗೆ ಮೊದಲೇ ಅಸಂವಿಧಾನಿಕ ಸಿಎಎ (ಪೌರತ್ವ ತಿದ್ದುಪಡಿ) ಕಾಯ್ದೆ ಜಾರಿ ಸಾಧ್ಯತೆ ಇದೆ. 7 ದಿನಗಳಲ್ಲಿ ಸಿಎಎ ಕಾಯ್ದೆಯನ್ನು ರಾಷ್ಟ್ರವ್ಯಾಪಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಶಾಂತನು ಠಾಕೂರ್ ಹೇಳಿದ್ದು, ವಿವಾದಾತ್ಮಕ ಕಾಯ್ದೆ ಮತ್ತೆ ಮುನ್ನೆಲೆಗೆ ಬಂದಿದೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯಸಚಿವ ಶಾಂತನು ಠಾಕೂರ್, ಅಯೋಧ್ಯೆಯಲ್ಲಿ ರಾಮಮಂದಿರ (ದೇವಾಲಯ) ಉದ್ಘಾಟನೆಯಾಗಿದೆ ಮತ್ತು ಮುಂದಿನ 7 ದಿನಗಳಲ್ಲಿ ಸಿಎಎ ದೇಶಾದ್ಯಂತ ಜಾರಿಗೆ ಬರಲಿದೆ. ಇದು ನನ್ನ ಗ್ಯಾರಂಟಿ. ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಿಎಎಯನ್ನು ಒಂದು ವಾರದೊಳಗೆ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಮೋದಿ ಸರ್ಕಾರವು ಅಂಗೀಕರಿಸಿದ್ದ ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಸಿಎಎ ಕಾಯ್ದೆಯು ಡಿಸೆಂಬರ್ 31, 2014ರೊಳಗೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುತ್ತದೆ. CAA ಡಿಸೆಂಬರ್ 2019ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದ್ದು, ಆ ಬಳಿಕ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದೆ. ಈ ಅಸಂವಿಧಾನಿಕ ಕಾಯ್ದೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸಿಎಎ ಕಾಯ್ದೆ ಕುರಿತ ನಿಯಮಗಳನ್ನು ಲೋಕಸಭೆ ಚುನಾವಣೆ ಘೋಷಣೆಗೆ ಮೊದಲೇ ಸೂಚಿಸುವುದಾಗಿ ಹೇಳಿರುವ ಬಗ್ಗೆ ಪಿಟಿಐ ವರದಿ ಉಲ್ಲೇಖಿಸಿದೆ. ಜನವರಿ 3ರಂದು ಮಾತನಾಡಿದ್ದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಸಂವಿಧಾನಿಕ ಎಂದು ಕರೆದಿದ್ದು, ಧರ್ಮದ ಆಧಾರದ ಮೇಲೆ ಕಾಯ್ದೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದರು.
ಕಳೆದ ಡಿಸೆಂಬರ್ 27ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಸಿಎಎ ಅನುಷ್ಠಾನವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಇದು ದೇಶದ ಕಾನೂನಿನಂತೆ ನಿಂತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ವಿಷಯದಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಪ್ರತಿಪಕ್ಷಗಳ ಬಲವಾದ ವಿರೋಧದ ಮಧ್ಯೆ ಕೇಂದ್ರವು ಸಿಎಎ ಕುರಿತು ನಿಯಮವನ್ನು ರೂಪಿಸಲಿದೆ ಎಂದು ಹೇಳಿದ್ದರು.
ಸಂಸದೀಯ ಕಾರ್ಯವಿಧಾನಗಳ ಕೈಪಿಡಿಯ ಪ್ರಕಾರ, ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದ ಆರು ತಿಂಗಳೊಳಗೆ ಮಸೂದೆಯ ಶಾಸನಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ನಿಯಮಗಳು ನಿರ್ದೇಶಿಸುತ್ತವೆ. ಇಲ್ಲದಿದ್ದರೆ ಸರ್ಕಾರವು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅಧೀನ ಶಾಸನಗಳ ಸಮಿತಿಗಳಿಂದ ವಿಸ್ತರಣೆಯನ್ನು ಕೋರಬಹುದಾಗಿದೆ.
9 ರಾಜ್ಯಗಳಲ್ಲಿ 30ಕ್ಕೂ ಹೆಚ್ಚು ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಮತ್ತು ಗೃಹ ಕಾರ್ಯದರ್ಶಿಗಳಿಗೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಆಗಮಿಸುವ ಹಿಂದೂಗಳು, ಸಿಖ್ಗಳು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವ ಕಾಯ್ದೆಯ-1955ರಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲು ಅಧಿಕಾರವನ್ನು ಪಡೆದಿದ್ದಾರೆ. 2021-22ರ ಗೃಹ ವ್ಯವಹಾರಗಳ ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ, ಏಪ್ರಿಲ್ 1, 2021 ರಿಂದ ಡಿಸೆಂಬರ್ 31, 2021ರ ನಡುವೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳ ಒಟ್ಟು 1,414 ವ್ಯಕ್ತಿಗಳಿಗೆ ಪೌರತ್ವ ನೀಡಲಾಗಿದೆ.
VIDEO | "Ram Mandir has been inaugurated (in Ayodhya), and within the next seven days, the CAA – Citizenship (Amendment) Act – will be implemented across the country. This is my guarantee. Not just in West Bengal, the CAA would be implemented in every state of India within a… pic.twitter.com/f5Ergu5TG3
— Press Trust of India (@PTI_News) January 29, 2024
ಇದನ್ನು ಓದಿ: ಮೈಸೂರು: ಅಂಬೇಡ್ಕರ್ ನಾಮಫಲಕ ಅಳವಡಿಕೆ ವಿಚಾರದಲ್ಲಿ ಘರ್ಷಣೆ: 30ಕ್ಕೂ ಅಧಿಕ ಮಂದಿಗೆ ಗಾಯ