ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಅಧಿಕೃತವಾಗಿ ಸೇರದಿದ್ದರೂ ತಮ್ಮ ಸಂಪೂರ್ಣ ಬೆಂಬಲ ಎಂದಿಗೂ ಬಿಜೆಪಿಗೆ ಇರುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಇದು ಮಂಡ್ಯ ಜನತೆಗೆ ಆಘಾತ ತರಿಸಿದ್ದು, ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದಲ್ಲಿನ ಲಂಕೇಶ್ ರಂಗ ಮಂದಿರದಿಂದ ಸುಮಲತಾ ಅವರ ಫೋಟೋವನ್ನು ತೆರವುಗೊಳಿಸಿದ್ದಾರೆ.
ಹಿರಿಯ ನಟ ಅಂಬರೀಷ್ ಅವರು ಸಂಸದರಾಗಿದ್ದಾಗ ನೀಡಿದ್ದ ಅನುದಾನದಲ್ಲಿ ಪಿ.ಲಂಕೇಶ್ ಅವರ ಹೆಸರಿನಲ್ಲಿ ನಿರ್ಮಿಸಿದ್ದ ರಂಗಮಂದಿರದಲ್ಲಿ ಸುಮಲತಾ ಅವರ ಫೋಟೊವನ್ನೂ ಅಳವಡಿಸಲಾಗಿತ್ತು. ಲಂಕೇಶ್ ಪತ್ರಿಕೆಯ ಅಂಕಣಕಾರರಾಗಿದ್ದ ಬಿ.ಚಂದ್ರೇಗೌಡ ಅವರು ಪಿ.ಲಂಕೇಶ್ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನದ ಪ್ರತೀಕವಾಗಿ ಗ್ರಾಮದಲ್ಲಿ ಪಿ.ಲಂಕೇಶ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿ ಗೌರಿ ಲಂಕೇಶ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಿದ್ದರು.
ಈ ರಂಗಮಂದಿರದಲ್ಲಿ ವರನಟ ಡಾ. ರಾಜ್ಕುಮಾರ್, ನಟ ಅಂಬರೀಶ್ ಹಾಗೂ ಸುಮಲತಾರ ಫೋಟೋವನ್ನು ಅಳವಡಿಸಲಾಗಿತ್ತು. ಆದರೆ ಸುಮಲತಾ ಬಿಜೆಪಿಗೆ ಬೆಂಬಲ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಂಗಮಂದಿರದಲ್ಲಿದ್ದ ಸುಮಲತಾ ಫೋಟೋ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ: ತೀವ್ರ ವಿರೋಧದ ಬಳಿಕ ರಾತ್ರೋರಾತ್ರಿ ಉರಿಗೌಡ, ನಂಜೇಗೌಡ ಮಹಾದ್ವಾರ ತೆರವು
ಕಳೆದ ಬಾರಿ ಸುಮಲತಾ ಅವರು ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದನ್ನು ಮಂಡ್ಯದ ಸ್ವಾಭಿಮಾನದ ಗೆಲುವು ಎಂದು ಬಣ್ಣಿಸಲಾಗಿತ್ತು. ಈ ಭಾಗದಲ್ಲಿ ಯಾವತ್ತೂ ಬಿಜೆಪಿ ಪಕ್ಷವನ್ನು ಒಪ್ಪಿಕೊಂಡಿರಲಿಲ್ಲ, ಇಲ್ಲಿಯ ಜನರು ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಒಲುವು ತೋರುತ್ತಾ ಬಂದಿದ್ದಾರೆ. ಆದರೆ ಇದೀಗ ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ ಬಳಿಕ ಮಂಡ್ಯದ ಜನರು ಸುಮಲತಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಅಂಕಣಕಾರ ಬಿ ಚಂದ್ರೇಗೌಡ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅವರಿಗೆ ನಮ್ಮೂರಿನಿಂದಲೇ (ಬಿದರಕೆರೆ ಗ್ರಾಮ) ಹೆಚ್ಚಿನ ಮತಗಳು ಬಂದಿವೆ. ಅವರು ಗೆದ್ದ ಬಳಿಕ ನಮ್ಮೂರಿನ ಯುವಕರು ಸುಮಲತಾ ಭಾವಚಿತ್ರವನ್ನು ಲಂಕೇಶ್ ರಂಗಮಂದಿರದಲ್ಲಿ ಹಾಕಿದ್ದರು ಎಂದು ತಿಳಿಸಿದರು.
”ಅಂಬರೀಶ್ ಅವರು ಮಹಾನ್ ಸೆಕ್ಯೂಲರ್ ಮನುಷ್ಯ ಆಗಿದ್ದರು. ಸುಮಲತಾ ಕೂಡ ಅವರ ಹಾದಿಯಲ್ಲೇ ನಡೆಯುತ್ತಾರೆ ಎಂದು ಭಾವಿಸಿದ್ದೆವು. ಆದರೆ ಸುಮಲತಾ ಅವರು ಕೋಮುವಾದಿ ಪಕ್ಷವಾಗಿರುವ ಬಿಜೆಪಿಗೆ ಅಧಿಕೃತವಾಗಿ ಸೇರದಿದ್ದರೂ, ಬೆಂಬಲ ಕೊಡುತ್ತೇನೆ ಎಂದು ಹೇಳಿರುವುದು ನಮ್ಮ ಊರಿನ ಜನರಿಗೆ ಬೇಸರ ತರಿಸಿತು. ಹಾಗಾಗಿ ಸುಮಲತಾ ಘೋಷಣೆ ಬೆನ್ನಲ್ಲೇ ನಮ್ಮೂರಿನ ಯುವಕರು ಅವರ ಫೋಟೋವನ್ನು ತಗೆದು ಬಿಸಾಕಿದ್ದಾರೆ. ಸುಮಲತಾ ಅವರು ಬಿಜೆಪಿಗೆ ಸೇರುವ ಮೂಲಕ ಮಂಡ್ಯ ಜನರಿಗೆ ಮೋಸ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
”ಸುಮಲತಾ ಅವರು ಪಕ್ಷೇತರರಾಗಿ ಗೆಲುವು ಸಾಧಿಸಿದ್ದು ಒಂದು ಇತಿಹಾಸ, ಅವರು ಯಾವುದೇ ನಿರ್ಧಾರ ತಗೆದುಕೊಳ್ಳುವ ಮುನ್ನ ಕಾರ್ಯಕರ್ತರ ಅಭಿಪ್ರಾಯ ಕೇಳುತ್ತೇನೆ ಎಂದು ಹೇಳಿದ್ದರು. ಆದರೆ ಇಂದು ಆ ಮಾತು ಮರೆತಿದ್ದಾರೆ. ಮಂಡ್ಯ ಜನರ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ಹಾಗಾಗಿ ರಂಗಮಂದಿರದಲ್ಲಿನ ಅವರ ಭಾವಚಿತ್ರವನ್ನು ತಗೆದುಬಿಸಾಕಿದ್ದಾರೆ. ಆ ಜಗಕ್ಕೆ ಪುನಿತ್ ರಾಜಕುಮಾರ್ ಫೋಟೋ ಹಾಕಲಾಗುತ್ತಿದೆ” ಎಂದು ಚಂದ್ರೇಗೌಡ ಅವರು ತಿಳಿಸಿದರು.
Ondu athyutthama kelasa madiddiri nagamangalada yuvakare2