ಬೆಂಗಳೂರು ಮೈಸೂರು ನಡುವೆ ನಿರ್ಮಿಸಿರುವ 118 ಕಿಲೋ ಮೀಟರ್ ಉದ್ದದ ಎಕ್ಸ್ಪ್ರೆಸ್ವೇ ಉದ್ಘಾಟನೆಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಈ ವೇಳೆ ಅವರು ರೋಡ್ ಶೋ ನಡೆಸುವ ಮಾರ್ಗದಲ್ಲಿ ಮಹಾದ್ವಾರಕ್ಕೆ ನಕಲಿ ಇತಿಹಾಸದ ಉರಿಗೌಡ, ನಂಜೇಗೌಡ ಹೆಸರಿಡಲಾಗಿತ್ತು. ಜನರ ತೀವ್ರ ವಿರೋಧದಿಂದ ಇದೀಗ ಆ ಮಹಾದ್ವಾರದ ಹೆಸರನ್ನು ತಗೆದು ಬಾಲಗಂಗಾಧರ ನಾಥ ಸ್ವಾಮೀಜಿ ಮಹಾದ್ವಾರ ಎಂದು ಹೆಸರಿಡಲಾಗಿದೆ.
ಭಾನುವಾರ ಮಂಡ್ಯ ನಗರ ವ್ಯಾಪ್ತಿಯ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಧಾನಿ 1.8 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ಈ ಮಾರ್ಗದಲ್ಲಿ ಒಟ್ಟು 4 ಮಹಾದ್ವಾರ ಅಳವಡಿಸಲಾಗಿದೆ. ರೋಡ್ ಶೋ ಆರಂಭವಾಗುವ ಪ್ರವಾಸಿ ಮಂದಿರದ ಬಳಿ ಸರ್. ಎಂ.ವಿಶ್ವೇಶ್ವರಯ್ಯ ಮಹಾದ್ವಾರ, ಜೆಸಿ ವೃತ್ತದಲ್ಲಿ ಕೆಂಪೇಗೌಡ, ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾದ್ವಾರ, ಫ್ಯಾಕ್ಟರಿ ಸರ್ಕಲ್ನಲ್ಲಿ ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರ ಹಾಕಲಾಗಿತ್ತು.
ಟಿಪ್ಪು ಹತ್ಯೆ ಮಾಡಿದ್ದು ಉರಿಗೌಡ, ನಂಜೇಗೌಡ ಎಂದು ವಾಟ್ಸ್ಅಪ್ನಲ್ಲಿ ಬಂದ ಸುಳ್ಳನ್ನೇ ಸತ್ಯವೆಂದು ನಂಬಿಸಲು ಹೊರಟಿರುವ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಮೋದಿ ಆಗಮನದ ಹಿನ್ನೆಲೆಯಲ್ಲಿ ಮಂಡ್ಯದ ಹೆದ್ದಾರಿಯಲ್ಲಿ ಹಾಕಲಾಗಿರುವ ‘ಉರಿಗೌಡ, ದೊಡ್ಡ ನಂಜೇಗೌಡ ಮಹಾದ್ವಾರ’ವನ್ನು ತೆರವುಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ನಕಲಿ ಇತಿಹಾಸದ ಉರಿಗೌಡ, ನಂಜೇಗೌಡರ ಹೆಸರಲ್ಲಿ ಮಹಾದ್ವಾರ; ನಗೆಪಾಟಲಿಗೀಡಾದ ಸಂಘಪರಿವಾರ
ಕೈಯಲ್ಲಿ ಖಡ್ಗ ಹಿಡಿದು ನಿಂತಿರುವ ತಮಿಳುನಾಡಿನ ವೀರರ ಚಿತ್ರವನ್ನೇ ಉರಿಗೌಡ, ನಂಜೇಗೌಡ ಎಂದು ಹರಿಬಿಟ್ಟಿರುವುದು ಈಗಾಗಲೇ ಬಯಲಾಗಿದೆ. ಆ ಚಿತ್ರಗಳನ್ನೇ ಇಲ್ಲಿನ ಮಹಾದ್ವಾರದಲ್ಲೂ ಹಾಕಿಕೊಳ್ಳಲಾಗಿತ್ತು.
ಮರುದು ಪಾಂಡ್ಯರು (ಪೆರಿಯ ಮರುದು ಮತ್ತು ಚಿನ್ನ ಮರುದು) 18ನೇ ಶತಮಾನದ ಅಂತ್ಯದಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯದಲ್ಲಿ ಪ್ರಸಿದ್ಧರಾಗಿದ್ದರು ಎಂದು ಲಭ್ಯವಿರುವ ಮಾಹಿತಿಗಳು ಹೇಳುತ್ತವೆ. ಈ ಇಬ್ಬರು ಸಹೋದರರು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ಇವರನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಅವರ ಚಿತ್ರವನ್ನೇ ‘ಉರಿಗೌಡ, ನಂಜಗೌಡ’ ಎಂಬ ಕಾಲ್ಪನಿಕ ಕತೆಗೆ ಬಳಸಿಕೊಳ್ಳಲಾಗಿದೆ.
ಈ ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಟಿಪ್ಪು ಸುಲ್ತಾನ್ನನ್ನು ಕೊಂದರು ಎಂದು ಬಿಜೆಪಿ ನಾಯಕರು ಸಭೆ ಸಮಾರಂಭಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್ನನ್ನು ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ಗೌಡ ಸಮುದಾಯದ ಮಹಾನಾಯಕರಾದ ಉರಿಗೌಡ ಮತ್ತು ದೊಡ್ಡ ನಂಜೇಗೌಡರೇ ಟಿಪ್ಪುಅನ್ನು ಕೊಂದಿದ್ದಾಗಿ ಸುಳ್ಳು ಪ್ರಚಾರ ಮಾಡುತ್ತಾ ಬಂದಿದ್ದಾರೆ.
ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ಟಿಪ್ಪು ಕೊಂದ ದೋಷವನ್ನು ಒಕ್ಕಲಿಗ ಸಮುದಾಯದ ತಲೆಗೆ ಕಟ್ಟಲು ಮುಂದಾಗಿದ್ದಾರೆ ಎಂದು ಮಹಾದ್ವಾರವು ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ ಮಹಾದ್ವಾರದ ಚಿತ್ರ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಮಂಡ್ಯ ಜಿಲ್ಲಾಡಳಿತ ಮಹಾದ್ವಾರದ ಹೆಸರು ಬದಲಾವಣೆ ಮಾಡಿದೆ.
ಈ ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರ ತೆರವು ಮಾಡದಿದ್ದರೆ ಅಥವಾ ಹೆಸರು ಬದಲಾಯಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಗತಿಪರರು ಎಚ್ಚರಿಕೆ ನೀಡಿದ್ದರು. ಜತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಕೂಡಾ ವಿರೋಧ ವ್ಯಕ್ತಪಡಿಸಿದ್ದರು.
ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರಕ್ಕೆ ಪ್ರಗತಿಪರರಿಂದ ವಿರೋಧ:
ಈ ಬಗ್ಗೆ ಸಿಪಿಐಎಂ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಟಿ.ಎಲ್. ಪ್ರತಿಕ್ರಿಯಿಸಿ, ”ಹಾಕಿರುವ ಫ್ಲೆಕ್ಸ್ಗಳನ್ನು ಕೂಡಲೇ ತೆರೆವುಗೊಳಿಸಿ ಜಿಲ್ಲೆಯನ್ನು ಕೋಮು ದಳ್ಳುರಿಗೆ ತಳ್ಳುವ ಬಿಜೆಪಿಯ ಪ್ರಯತ್ನಗಳನ್ನು ವಿಫಲಗೊಳಿಸಬೇಕು ಎಂದು ಮಂಡ್ಯ ಜಿಲ್ಲಾಡಳಿತವನ್ನು CPIM ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ” ಎಂದು ಹೇಳಿದ್ದರು.
”ಉರೀಗೌಡ ಮತ್ತು ದೊಡ್ಡ ನಂಜೇಗೌಡ ಎಂಬ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಅವರು ಟಿಪ್ಪುವನ್ನು ಕೊಂದ ಸೈನಿಕರು ಎಂದು ಸುಳ್ಳು ಕತೆ ಕಟ್ಟಿ ಒಕ್ಕಲಿಗರನ್ನು ಟಿಪ್ಪು ವಿರುದ್ಧ ಹೋರಾಡಿ ಬ್ರಿಟೀಷರಿಗೆ ಸಹಾಯ ಮಾಡಿದರು ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಒಕ್ಕಲಿಗರನ್ನು ಬ್ರಿಟೀಷರ ಏಜೆಂಟರು ಎಂದು ಅವಮಾನಿಸುವ ಕೆಲಸವನ್ನು ಬಿಜೆಪಿ ಮತ್ತು ಸಂಘ ಪರಿವಾರ ಮಾಡುತ್ತಿದೆ. ಇದರ ಮುಂದವರಿಕೆಯಾಗಿ ಪ್ರಧಾನಿಯೊಬ್ಬರ ಬೇಟಿಯ ಘನತೆಯನ್ನೂ ಮಣ್ಣು ಪಾಲು ಮಾಡಿ ತನ್ನ ಸುಳ್ಳಿನ, ವಿಕೃತಿಯ ಪ್ರಚಾರದಲ್ಲಿ ಬಿಜೆಪಿ ನಿರತವಾಗಿದೆ” ಎಂದು ಟೀಕಿಸಿದ್ದರು.
ಲೇಖಕ ಚಂದ್ರಪ್ರಭ ಕಟಾರಿ ಪ್ರತಿಕ್ರಿಯಿಸಿ, ”ವಾಟ್ಸಪ್ ಯೂನಿವರ್ಸಿಟಿ ಹುಟ್ಟಿ(ಸಿ)ದ ಉರಿಗೌಡ ಮತ್ತು ನಂಜೇಗೌಡರು ಬ್ರಿಟಿಷರ ಪರವಾಗಿ ಯುದ್ಧ ಮಾಡಿದರು ಎಂಬ ಕಟ್ಟುಕತೆ ಈಗ ಅಕ್ಷರಶಃ ಬೀದಿಯಲ್ಲಿ ರಾರಾಜಿಸುತ್ತಿದೆ. ಸಂಘಿಗಳು ವ್ಯವಸ್ಥಿತವಾಗಿ ತಮ್ಮ ರಾಜಕೀಯ ಲಾಭಕ್ಕಾಗಿ ಇಂಥ ದೇಶದ್ರೋಹದ ಅಪವಾದವನ್ನು ಒಕ್ಕಲಿಗ ಸಮುದಾಯದ ಹಣೆಗೆ ಕಟ್ಟಲು ಪಣ ತೊಟ್ಟಂತಿದೆ. ಅಪಾರ ಕನ್ನಡಾಭಿಮಾನದ ಒಕ್ಕಲಿಗರು ಇದನ್ನು ಪ್ರತಿಭಟಿಸಿ, ಈ ಕಟ್ಟುಕತೆ ಮುಂದುವರೆಯದಂತೆ ನೋಡಿಕೊಳ್ಳುವ ಅನಿವಾರ್ಯತೆ ಈಗ ಅವರ ಹೆಗಲಿಗೇರಿದೆ. ಪಕ್ಷಾತೀತವಾಗಿ ಇದನ್ನು ಈಗಲೇ ಚಿವುಟಿ ಹಾಕದಿದ್ದರೆ, ಒಕ್ಕಲಿಗ ಸಮುದಾಯವು ಬ್ರಿಟಿಷರ ಪರವಾಗಿತ್ತು ಎಂಬ ಕಪೋಲಕಲ್ಪಿತ ಕತೆಯು ಮುಂದಿನ ಪೀಳಿಗೆಯ ಜನಮಾನಸದಲ್ಲಿ ಶಾಶ್ವತವಾಗಿ ಉಳಿದು, ದೇಶದ್ರೋಹದ ಪಟ್ಟದ ಅಪಾಯವಂತೂ ಕಟ್ಟಿಟ್ಟ ಬುತ್ತಿ” ಎಂದು ಎಚ್ಚರಿಸಿದ್ದರು.
ಹೋರಾಟಗಾರರು ಹಾಗೂ ವೈದ್ಯರೂ ಆದ ಎಚ್.ವಿ.ವಾಸು ಅವರು ಪ್ರತಿಕ್ರಿಯಿಸಿ, ”ಇದು ಮಂಡ್ಯ ಜಿಲ್ಲೆಗೆ ಮಾಡುತ್ತಿರುವ ಅವಮಾನವೆಂಬುದರಲ್ಲಿ ಸಂದೇಹವಿಲ್ಲ. ಮಂಡ್ಯದ ಕುರಿತು ಹೊರಗೆ ಹಲವು ಪೂರ್ವಗ್ರಹಗಳಿವೆ. ಅವರು ತೀರಾ ‘Mandya centred’, ಜಾತಿ ಕೇಂದ್ರಿತ ಮನೋಭಾವ ಇರುವವರು, ಮಂಡ್ಯ ಕುರಿತಂತೆ ದುರಭಿಮಾನ ಹೊಂದಿರುವವರು ಇತ್ಯಾದಿ. ಮಂಡ್ಯದ ಜೊತೆ ಕಳೆದ 23 ವರ್ಷಗಳ ಒಡನಾಟ, 12 ವರ್ಷಗಳ ಕಾಲ ಅಲ್ಲಿಯೇ ವಾಸ ಮಾಡಿದ್ದುದರ ಆಧಾರದ ಮೇಲೆ ಹೇಳುವುದಾದರೆ ಅವೆಲ್ಲವೂ ಸುಳ್ಳು… ಒಂದು ಸಹಜ ವಿಶಾಲ ಮನೋಭಾವ, ನೆಲಮೂಲದ ವಿವೇಕವನ್ನು ಹೊಂದಿರುವ ಸಮುದಾಯ ಅಲ್ಲಿದೆ (ಎಲ್ಲಾ ಕಡೆ ಇರುವ ಸಮಸ್ಯೆಗಳು, ಕೆಡುಕು ಅಲ್ಲೂ ಇದೆ; ಇರುತ್ತದೆ)” ಎಂದು ವಿವರಿಸಿದರು.
”ಯಾವ ಸಂದೇಹವೂ ಇಲ್ಲದೇ ಹೇಳಬಹುದಾದ ಸಂಗತಿಯೆಂದರೆ – ಇಂದು ಮಂಡ್ಯದಲ್ಲಿ ದ್ವಾರದಲ್ಲಿ ಹೆಸರಿಸಲಾಗಿರುವ ಎರಡು ಫೇಕ್ ಪಾತ್ರಗಳು ಒಕ್ಕಲಿಗ ಸಮುದಾಯಕ್ಕೂ, ಮಂಡ್ಯಕ್ಕೂ ದೊಡ್ಡ ಅವಮಾನವಲ್ಲದೇ ಬೇರೇನೂ ಅಲ್ಲ. ಇಂದಿಗೂ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಡಾ.ಸಿ.ಬಂದೀಗೌಡರು, ನಮ್ಮೆಲ್ಲರನ್ನು ಪೊರೆದ ಹಿರಿಯ ಜೀವ ಪ್ರೊ.ಎಚ್.ಎಲ್.ಕೇಶವಮೂರ್ತಿ, ದಸಂಸದ ಹಿರಿಯ ನಾಯಕ ನಾರಾಯಣ್ ಇಂಥವರನ್ನು ನೆನೆದರೇನೇ ಮನಸ್ಸಿನಲ್ಲಿ ಗೌರವ, ಪ್ರೀತಿ ಉಕ್ಕುತ್ತದೆ. ಹಾಗೆಯೇ ನಾವು ದಾರಿ ತಪ್ಪಬಾರದು ಎಂಬ ಎಚ್ಚರ ಮೂಡುತ್ತದೆ. ಅವರಂಥವರ ಸಹವಾಸದಲ್ಲಿ ಒಂದೆರಡು ದಶಕಗಳ ಕಾಲ ಇದ್ದ ನಾವುಗಳು ಮಂಡ್ಯಕ್ಕೆ ಈ ಅವಮಾನ ಆಗದಂತೆ ನೋಡಿಕೊಳ್ಳಬೇಕು. ಇದು ನಮ್ಮ ಕರ್ತವ್ಯ” ಎಂದು ನೆನಪಿಸಿದರು.
ಕವಿ ರಾಜೇಂದ್ರ ಪ್ರಸಾದ್ ಈ ಕುರಿತು ಪೋಸ್ಟ್ ಮಾಡಿ, ”ಪ್ರಧಾನಿಯವರು ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ‘ಉರಿಗೌಡ & ನಂಜೇಗೌಡ’ ಹೆಸರುಗಳಲ್ಲಿ ಹಾಕಿರುವ ಫ್ಲೆಕ್ಸ್ ಗಳನ್ನು ಕೂಡಲೇ ತೆರೆವು ಗೊಳಿಸಿ ಎಲ್ಲವೂ ಶಾಂತಿಯುತವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದರು.