ವಕೀಲರಾದ ನಾಗೇಂದ್ರ ರಾಮಚಂದ್ರ ನಾಯಕ್ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ನ ಕೊಲಿಜಿಯಂ ಮಂಗಳವಾರ ಮೂರನೇ ಬಾರಿಗೆ ಪುನರುಚ್ಚರಿಸಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಜನವರಿ 10ರಂದು ನಡೆದ ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆಯಲ್ಲಿ, ಕರ್ನಾಟಕ ಹೈಕೋರ್ಟ್ ವಕೀಲರಾದ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ನ್ಯಾಯಾಧೀಶರನ್ನಾಗಿ ನೇಮಿಸುವ ಹಿಂದಿನ ಶಿಫಾರಸನ್ನು ಪುನರುಚ್ಚರಿಸಲಾಗಿದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಮೊದಲು 2019 ರ ಅಕ್ಟೋಬರ್ 3 ರಂದು ನಾಯಕ್ ಅವರ ಹೆಸರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಲು ಕೊಲಿಜಿಯಂ ಶಿಫಾರಸು ಮಾಡಿತ್ತು. ಆ ನಂತರವೂ ಅದು ತನ್ನ ನಿರ್ಧಾರವನ್ನು ಎರಡು ಬಾರಿ- ಅಂದರೆ ಒಮ್ಮೆ ಮಾರ್ಚ್ 2, 2021 ರಂದು, ನಂತರ ಸೆಪ್ಟೆಂಬರ್ 1, 2021ರಂದು ತಿಳಿಸಿತ್ತು. ಸಂಪ್ರದಾಯದಂತೆ, ನಿರ್ಧಾರವನ್ನು ಪುನರುಚ್ಚರಿಸಿದರೆ ಕೊಲಿಜಿಯಂನ ಶಿಫಾರಸನ್ನು ಸರ್ಕಾರ ಒಪ್ಪಿಕೊಳ್ಳಬೇಕಾಗಿದೆ.
ಕೊಲಿಜಿಯಂ ತನ್ನ ಶಿಫಾರಸುಗಳನ್ನು ಸರ್ವಾನುಮತದಿಂದ ಪುನರುಚ್ಚರಿಸಿದರೆ ಸರ್ಕಾರವು ಮೂರರಿಂದ ನಾಲ್ಕು ವಾರಗಳಲ್ಲಿ ನ್ಯಾಯಾಧೀಶರನ್ನು ನೇಮಿಸಬೇಕು ಎಂದು ಏಪ್ರಿಲ್ 2021ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಈ ಮಧ್ಯೆ ಕೊಲಿಜಿಯಂ ಇತರ ಎಂಟು ಹೆಸರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ. ಇವರಲ್ಲಿ ಏಳು ಜನ ಪ್ರಸ್ತುತ ನ್ಯಾಯಾಂಗದ ಅಧಿಕಾರಿಗಳಾಗಿದ್ದು, ಒಬ್ಬರು ವಕೀಲರಾಗಿದ್ದಾರೆ. ಅರಿಬಮ್ ಗುಣೇಶ್ವರ್ ಶರ್ಮಾ ಮತ್ತು ಗೊಲ್ಮೆಯ್ ಗೈಫುಲ್ಶಿಲ್ಲು ಕಬುಯಿ ಅವರನ್ನು ಮಣಿಪುರ ಹೈಕೋರ್ಟ್ಗೆ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದೆ.
ಆಂಧ್ರಪ್ರದೇಶ ಹೈಕೋರ್ಟ್ಗೆ ಪಿ.ವೆಂಕಟ ಜ್ಯೋತಿರ್ಮಾಯಿ ಮತ್ತು ವಿ.ಗೋಪಾಲಕೃಷ್ಣ ರಾವ್ ಅವರ ಹೆಸರನ್ನು ಮುಂದಿಟ್ಟಿದೆ. ಮೃದುಲ್ ಕುಮಾರ್ ಕಲಿತಾ ಅವರನ್ನು ಗೌಹಾಟಿ ಹೈಕೋರ್ಟ್ಗೆ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ. ಇನ್ನು ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ವಕೀಲರಾದ ನೀಲಾ ಕೇದಾರ್ ಗೋಖಲೆ ಅವರನ್ನು ನೇಮಿಸಲಾಯಿತು. ಕರ್ನಾಟಕ ಹೈಕೋರ್ಟ್ಗೆ ರಾಮಚಂದ್ರ ದತ್ತಾತ್ರೇ ಹುದ್ದಾರ್ ಮತ್ತು ವೆಂಕಟೇಶ್ ನಾಯ್ಕ್ ತಾವರ್ಯಾನಾಯ್ಕ್ ಅವರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸೂಚಿಸಿದೆ.
ಕಾನೂನು ಸಚಿವ ಕಿರಣ್ ರಿಜಿಜು ಅವರು ಕೊಲಿಜಿಯಂ ನೇಮಕಾತಿ ವ್ಯವಸ್ಥೆಯನ್ನು ಪದೇ ಪದೇ ಟೀಕಿಸಿದ್ದಾರೆ. ನ್ಯಾಯಾಂಗ ನೇಮಕಾತಿ ಪ್ರಕ್ರಿಯೆ ನಡೆಸಬೇಕಿದ್ದ ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗವು ಪ್ರಸ್ತುತ ಜಗಳದಲ್ಲಿ ನಿರತವಾಗಿವೆ.