ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯುಎಸ್) 10% ಕೋಟಾ ಸಾಮಾಜಿಕ ನ್ಯಾಯದ ಆದರ್ಶಗಳಿಗೆ ವಿರುದ್ಧವಾಗಿದ್ದು, ಹಾಗಾಗಿ ತಮಿಳುನಾಡಿನಲ್ಲಿ ಅದನ್ನು ಜಾರಿಗೊಳಿಸಲಾಗುವುದಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ. ರಾಜ್ಯದಲ್ಲಿ ಪ್ರಸ್ತುತ ಇರುವ 69% ಮೀಸಲಾತಿ ನೀತಿಯನ್ನು ಮುಂದುವರಿಸಲು ರಾಜ್ಯವು ಬದ್ದವಾಗಿದೆ ಎಂದು ಸರ್ಕಾರವು ಸೋಮವಾರ ಸ್ಪಷ್ಟವಾಗಿ ಹೇಳಿದೆ.
“ರಾಜ್ಯದಲ್ಲಿ ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ವಿಶಿಷ್ಟವಾದ ಮೀಸಲಾತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಈ ಸರ್ಕಾರವು ರಾಜ್ಯದಲ್ಲಿ ಪ್ರಸ್ತುತ ಮೀಸಲಾತಿ ನೀತಿಯನ್ನು ಮುಂದುವರಿಸಲು ದೃಡವಾಗಿ ನಿಂತಿದ್ದು, ಏಕೆಂದರೆ EWS ಗೆ 10% ಕೋಟಾವು ಸಾಮಾಜಿಕ ನ್ಯಾಯದ ಆದರ್ಶಗಳಿಗೆ ವಿರುದ್ಧವಾಗಿದೆ’’ ಎಂದು ವಿಧಾನಸಭೆಯಲ್ಲಿ ಮಂಡಿಸಿದ ರಾಜ್ಯಪಾಲ ಆರ್.ಎನ್. ರವಿ ಭಾಷಣದ ಪಠ್ಯದಲ್ಲಿ ಹೇಳಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
2022ರ ನವೆಂಬರ್ನಲ್ಲಿ ಸುಪ್ರೀಂಕೋರ್ಟ್ EWS ಗೆ ನೀಡಿದ್ದ 10% ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ. 2022 ರಲ್ಲಿ ಒಕ್ಕೂಟ ಸರ್ಕಾರವು ಇಡಬ್ಲ್ಯೂಎಸ್ ಮೀಸಲಾತಿಗಳನ್ನು ಜಾರಿಗೆ ತರಬೇಕೆ ಅಥವಾ ಬೇಡವೇ ಎಂಬುದು ರಾಜ್ಯಗಳ ಹಕ್ಕು ಎಂದು ಹೇಳಿತ್ತು.
ಈ ನಡುವೆ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅವರ ಮಿತ್ರಪಕ್ಷಗಳು ಇಡಬ್ಲ್ಯೂಎಸ್ ಮೀಸಲಾತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ತಮಿಳುನಾಡಿನಲ್ಲಿ ಅದನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿವೆ.
ಸುಪ್ರೀಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಎಂಕೆ ಸಂಸದ ಪಿ. ವಿಲ್ಸನ್, “ಕೇವಲ ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಮೀಸಲಾತಿಯನ್ನು ಎತ್ತಿಹಿಡಿಯುವ ತೀರ್ಪು ಮೀಸಲಾತಿಯ ಮೇಲಿನ ಈ ಹಿಂದಿನ ಪೂರ್ವನಿದರ್ಶನಗಳನ್ನು ಅಲ್ಲಗೆಳೆದಿದೆ” ಎಂದು ಹೇಳಿದ್ದರು.
ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದಂತೆ ಅದರ ಬಗ್ಗೆ ಪ್ರತಿಕ್ರಿಯಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಇಡಬ್ಲ್ಯೂಎಸ್ ಬೆಳವಣಿಗೆಯು ಸಾಮಾಜಿಕ ನ್ಯಾಯದ ಶತಮಾನಗಳಷ್ಟು ಹಳೆಯದಾದ ಹೋರಾಟಕ್ಕೆ ಹಿನ್ನಡೆ ಎಂದು ಹೇಳಿದ್ದರು. ಅಲ್ಲದೆ, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಇತರ ಸಂಘಟನೆಗಳು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ಕೈಜೋಡಿಸಬೇಕೆಂದು ಅವರು ಕರೆ ನೀಡಿದ್ದರು.