ತಿರುಪತಿಯಲ್ಲಿ ಲಡ್ಡು ತಯಾರಿಸಲು ಕರ್ನಾಟಕದಿಂದ ಸರಬರಾಜು ಆಗುತ್ತಿದ್ದ ನಂದಿನಿ ತುಪ್ಪ 2021ರಿಂದಲೇ ಬಂದ್ ಆಗಿದೆ. ಬಹಳ ಕಡಿಮೆ ದರಕ್ಕೆ ಬಿಡ್ ಕರೆಯುವುದರಿಂದ ಟಿಟಿಡಿ ಟೆಂಡರ್ನಲ್ಲಿ ಕೆಎಂಎಫ್ ಪಾಲ್ಗೊಂಡಿರಲಿಲ್ಲ ಎಂದು ಕೆಎಂಎಫ್ ಅಧ್ಯಕ್ಷರಾದ ಭೀಮಾ ನಾಯ್ಕ್ ತಿಳಿಸಿದ್ದಾರೆ.
ತಿರುಪತಿ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪ ಸರಬರಾಜು ಮಾಡದೇ ಕಾಂಗ್ರೆಸ್ ಪಕ್ಷ ತನ್ನ ಅಜೆಂಡಾಕ್ಕಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಮುಂದಾಗಿದೆ ಎಂಬ ಆರೋಪಕ್ಕೆ ಉತ್ತರಿಸಿರುವ ಅವರು, “ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲದೇ ಈ ರೀತಿಯ ಹೇಳೀಕೆಗಳನ್ನು ನೀಡುತ್ತಿದ್ದಾರೆ. ವಾಸ್ತವವೆಂದರೆ 2 ವರ್ಷದ ಹಿಂದೆ ತುಪ್ಪ ಸರಬರಾಜು ಸ್ಥಗಿತಗೊಳಿಸಲಾಗಿತ್ತು” ಎಂದಿದ್ದಾರೆ.
ಕೆಎಂಎಫ್ ಅತ್ಯುತ್ತಮ ದರ್ಜೆಯ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದೆ. ಆ ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಟಿಟಿಡಿ ಟೆಂಡರ್ನಲ್ಲಿ ನಮ್ಮ ಬೆಲೆಗಿಂತ ಕಡಿಮೆ ದರಕ್ಕೆ ಬೇರೆ ಸಂಸ್ಥೆಗಳು ಬಿಡ್ ಮಾಡುತ್ತಿವೆ. ಹಾಗಾಗಿ ನಾವು ಸರಬರಾಜು ಮಾಡುತ್ತಿಲ್ಲ. ಆದರೆ ನಂದಿನಿ ಬ್ರಾಂಡ್ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ. ರಾಜ್ಯದಲ್ಲಿ, ದೇಶದಲ್ಲಿ ನಮ್ಮ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಟಿಟಿಡಿಗೆ ಸುಮಾರು 2000 ಟನ್ ತುಪ್ಪ ಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಟೆಂಡರ್ ಕರೆಯುತ್ತಾರೆ. ಕಡಿಮೆ ಬೆಲೆಗೆ ಸ್ಪರ್ಧೆ ಮಾಡಲು ಇಚ್ಚೆ ಇಲ್ಲದೇ ನಾವು ಸರಬರಾಜು ನಿಲ್ಲಿಸಿದ್ದೇವೆ. ಆದರೂ ಅವರ ಮನವಿಗೆ ಸ್ಪಂದಿಸಿ 392 ರೂಗಳಿಗೆ ನಾವು 35% ತುಪ್ಪ ಕೊಟ್ಟಿದ್ದೀವಿ. ನಮ್ಮ ರೇಟ್ಗೆ ಬಂದರೆ ಈಗಲೂ ತುಪ್ಪ ಕೊಡುತ್ತೇವೆ. ಆದರೆ ಅವರು ನೀಡುವ ಕಡಿಮೆ ದರಕ್ಕೆ ತುಪ್ಪ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ನಮ್ಮ ರೈತರು ಬಹಳ ಕಷ್ಟದಲ್ಲಿದ್ದಾರೆ. ಅವರಿಗೆ ಪ್ರತಿ ಲೀಟರ್ಗೆ 5 ರೂ ಹೆಚ್ಚು ಕೊಡಲು ನಾವು ಬೇಡಿಕೆ ಇಟ್ಟಿದ್ದೆವು. ಕೊನೆಗೆ ಮುಖ್ಯಮಂತ್ರಿಗಳು 3 ರೂ ಕೊಡಲು ಒಪ್ಪಿದ್ದಾರೆ. ಹಾಗಾಗಿ ನಾವು ನಮ್ಮ ರೈತರ ಹಿತದೃಷ್ಟಿಯಿಂದ ಬೆಲೆಯಲ್ಲಿ ರಾಜೀ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಾಲು ಒಕ್ಕೂಟಗಳಲ್ಲಿ ಯಾರು ಕಡಿಮೆ ಮೊತ್ತಕ್ಕೆ ಕೋಟ್ ಮಾಡುತ್ತಾರೋ ಅವರಿಗೆ ಟೆಂಡರ್ ಸಿಗುತ್ತದೆ. ಇಲ್ಲಿ ಯಾವ ರಾಜಕೀಯವು ಇಲ್ಲ. ತುಪ್ಪವನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮ ಗುಣಮಟ್ಟವನ್ನು ಬೇರೆ ಕಂಪೆನಿಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಮುಂದೆ ತಿರುಪತಿ ಲಡ್ಡುಗಳು ಈಗಿನಂತೆಯೇ ಇರುತ್ತವೆ ಎಂದು ಹೇಳಲಾಗದು ಎಂದು ಭೀಮಾನಾಯಕ್ ತಿಳಿಸಿದರು.
ಕೆಎಂಎಫ್ ಎಂಡಿ ಜಗದೀಶ್ ಮಾತನಾಡಿ ಟಟಿಡಿಯವರು 6 ತಿಂಗಳಿಗೊಮ್ಮೆ ತುಪ್ಪ ಖರೀದಿಸುತ್ತಿದ್ದರು. ಅತ್ಯಂತ ಕಡಿಮೆ ಬಿಡ್ ಮಾಡಿದವರಿಗೆ ಟೆಂಡರ್ ಸಿಗುತ್ತದೆ. ಸ್ಪರ್ಧಾತ್ಮಕ ಬಿಡ್ಡಿಂಗ್ಗೆ ನಾವು ಹೋಗಲು ಸಾಧ್ಯವಿಲ್ಲ. 2021-22ನೇ ಸಾಲಿನಲ್ಲಿ 345 ಟನ್ ತುಪ್ಪ ನಾವು ಕೋಟ್ ಮಾಡಿದ ದರಕ್ಕೆ ಕೊಂಡುಕೊಂಡಿದ್ದರು. ಆನಂತರ ನಾವು ಅವರು ಹೇಳುವ ಕಡಿಮೆ ಬೆಲೆಗೆ ಮಾರದಿರಲು ನಿರ್ಧರಿಸಿದ್ದೇವೆ ಎಂದರು.
ಹಾಲು, ಮೊಸರು ಮತ್ತು ತುಪ್ಪದ ಬೆಲೆ ಏರಿಕೆ ಬಗ್ಗೆ ಕೆಎಂಎಫ್ ಮಂಡಳಿ ನಿರ್ಧಾರ ತೆಗೆದುಕೊಳ್ಳುತ್ತದೆ. ಸರ್ಕಾರದ ಸಹಮತ ಪಡೆಯುತ್ತೇವೆ ಅಷ್ಟೇ. ಸದ್ಯ ಹಾಲು ಮೊಸರಿನ ಬೆಲೆ 3 ರೂ ಹೆಚ್ಚಳವಾಗಿರುವುದಕ್ಕೂ, ತುಪ್ಪ ಸರಬರಾಜು ನಿಲ್ಲಿಸಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಎಸ್ಸಿಎಸ್ಪಿ/ಟಿಎಸ್ಪಿ ಅನುದಾನ ಖರ್ಚು ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ – ಸಿಎಂ ಸಿದ್ದರಾಮಯ್ಯ