Homeಅಂಕಣಗಳುಮೋದಿ ಸಾಧನೆ ಹಳ್ಳಿಗೆ ತಲುಪಿಸಿ ಎಂದ ಭೈರಪ್ಪ!

ಮೋದಿ ಸಾಧನೆ ಹಳ್ಳಿಗೆ ತಲುಪಿಸಿ ಎಂದ ಭೈರಪ್ಪ!

- Advertisement -
- Advertisement -

ಕೂದಲೆಳೆ ಅಂತರದಲ್ಲಿ ಘನಘೋರ ಅಪಾಯ ತಪ್ಪಿತು ಎನ್ನುವಂತೆ ಸಿದ್ದರಾಮಯ್ಯ ವಿಕೃತ ಭಟ್ಟನ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ತಪ್ಪಿಸಿಕೊಂಡು ಬುದ್ಧಿಜೀವಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರಲ್ಲಾ. ಅದಕ್ಕೆ ಹೇಳುವುದು ಜನರ ನಡುವೆ ಇರುವ ನಾಯಕ ತಪ್ಪು ಮಾಡಲಾರ ಎಂದು. ಇದಕ್ಕೊಂದು ಐತಿಹಾಸಿಕ ಉದಾಹರಣೆ ಬಸವಣ್ಣ ಅವರು ನಡೆಸಿದ ಕ್ರಾಂತಿಕಾರಿ ಚಳವಳಿ; ಈ ಶರಣ ಕ್ರಾಂತಿಯ ಬಗ್ಗೆ ಆಕ್ರೋಶಗೊಂಡ ಪುರೋಹಿತರು ಗಲಭೆ ನಡೆಸುತ್ತಾರೆ. ಅಲ್ಲೊಂದು ಕೊಲೆಯಾಗುತ್ತದೆ, ದೂರು ಬಿಜ್ಜಳನ ಬಳಿಗೆ ಹೋಗುತ್ತದೆ. ವಿಚಾರಣೆ ನಡೆಯುತ್ತದೆ. ಬಿಜ್ಜಳ ಕೊಲೆಯ ವಿಷಯದಲ್ಲಿ ಸಂಶಯಗೊಂಡು ಈ ಕೊಲೆ ಮಾಡಿದವರಾರು ಎಂದು ತನ್ನ ಆಸ್ಥಾನದಲ್ಲಿ ಪ್ರಶ್ನಿಸುತ್ತಾನೆ. ಅದಕ್ಕೆ ಬಸವಣ್ಣ ಪುರೋಹಿತಶಾಹಿಗಳು ಎನ್ನುತ್ತಾನೆ. ಆಗ ಬಿಜ್ಜಳ ಅದು ಹೇಗೆ ಹೇಳುತ್ತೀರಿ ಎಂದಾಗ, ಅದಕ್ಕೆ ಬಸವಣ್ಣ, ನಾನು ಜನಗಳ ನಡುವೆ ಇದ್ದೇನೆ ಎನ್ನುತ್ತಾನೆ. ಬಿಜ್ಜಳ ಮರುಮಾತನಾಡುವುದಿಲ್ಲ. ಈ ಐತಿಹಾಸಿಕ ಘಟನೆಯ ಸತ್ಯವನ್ನು ನಮ್ಮ ರಾಜಕಾರಣಿಗಳು ಪಾಲಿಸಿದ್ದಾದರೆ ವಿಕೃತ ಭಟ್ಟನಂತರವರ ಬಲೆಗೆ ಬೀಳಲಾರರು. ಅಕಸ್ಮಾತ್ ಬಿದ್ದರೆ ಸರ್ವನಾಶ ಗ್ಯಾರಂಟಿಯಂತಲ್ಲಾ, ಥೂತ್ತೇರಿ.

******

ಕಾದಂಬರಿ ಕಾರ್ಖಾನೆಯಾದ ಆರೆಸ್ಸೆಸ್ ಲೇಖಕ ಎಸ್.ಎಲ್ ಭೈರಪ್ಪನವರು ಯುವ ಮಾಣಿಗಳಿಗೊಂದು ಅದ್ಭುತವಾದಂತಹ ಕರೆ ಕೊಟ್ಟಿದ್ದಾರಲ್ಲಾ. ಅದೇನೆಂದರೆ ವಿದ್ಯಾವಂತ ಯುವ ಜನ ಹಳ್ಳಿಹಳ್ಳಿಗಳಿಗೆ ಹೋಗಿ ಮೋದಿ ಮಾಡಿದ ಒಳ್ಳೆ ಕೆಲಸಗಳನ್ನ ಅಲ್ಲಿನ ಗ್ರಾಮವಾಸಿಗಳಿಗೆ ಮನವರಿಕೆ ಮಾಡಿ ಎಂದು. ಎಂದಿನಂತೆ ವಿದ್ಯಾವಂತರು ಹಳ್ಳಿಗೆ ಹೋಗಿ ಹೇಳುವ ಮೋದಿ ಸಾಧನೆ ಪಟ್ಟಿ ಮಾಡಲಾಗಿ ಅವು ಇಂತಿವೆಯಲ್ಲಾ.

  • ಒಂದನೆಯದಾಗಿ ಹಿಂದುಮುಂದು ನೋಡದೆ ನೋಟು ಬ್ಯಾನು ಮಾಡಿ ದೇಶದ ಉದ್ದಗಲಕ್ಕೂ ಅಲ್ಲೋಲಕಲ್ಲೋಲವಾಗಿ ನೂರಾರು ಜನ ಸತ್ತು, ಸಾವಿರಾರು ಸಣ್ಣ ಉದ್ಯಮಗಳು ಕಣ್ಮರೆಯಾದದ್ದು.
  • ಎರಡನೆಯದಾಗಿ ಜಿಎಸ್‌ಟಿ ಎಂಬ ಮನೆಹಾಳ ತೆರಿಗೆ ವಸೂಲಿಯಿಂದಲೂ ಸಣ್ಣಪುಟ್ಟ ಉದ್ಯಮ ಬಾಗಿಲು ಹಾಕಿ ಬಡವರು ತಿನ್ನುವ ಕಡ್ಲೆಪುರಿ ಮೇಲೂ ಜಿಎಸ್‌ಟಿ ಬಂದಿದ್ದು.
  • ಸಿಎಎ ಕಾನೂನು ತರಲು ಹೊರಟು ಇಡೀ ಭಾರತದ ಮುಸ್ಲಿಮರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವಂತೆ ಮಾಡಿದ್ದು.
  • ಕೃಷಿಕಾಯ್ದೆ ತಂದು ದೆಹಲಿ ಗಡಿಯಲ್ಲಿ ಹೋರಾಟನಿರತ 750 ಜನ ರೈತರು ಸಾಯುವಂತೆ ಮಾಡಿದ್ದು.
  • ಸಾವಿರಾರು ಕೋಟಿ ಒಪ್ಪಂದದ ರಫೇಲ್ ಹಗರಣ ಮುಚ್ಚಿಹಾಕಿ, ತ್ವರಿತವಾಗಿ ಮಾಡಿದ ಒಪ್ಪಂದ ಎಂದು ಬಿಂಬಿಸಿದ್ದು.
  • ಭಾರತದ ಸುಮಾರು ಹನ್ನೆರಡು ಉದ್ಯಮಗಳನ್ನು ಮಾರಿದ್ದೂ ಅಲ್ಲದೆ, ವಿಶೇಷ ಘಟಕವಾಗಿದ್ದ ರೈಲ್ವೆ ಇಲಾಖೆಯನ್ನ ಮುಗಿಸಲು ಪ್ರಯತ್ನಿಸುತ್ತಿರುವುದು; ಅವುಗಳ ಬಣ್ಣ ಬದಲಿಸಿ ಸೀಟಿನ ಅಳತೆ ಕಡಿಮೆ ಮಾಡಿ ಪ್ರಯಾಣಿಕರನ್ನ ಹಿಂಸಿಸುತ್ತಿರುವುದು.
  • ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಗೆ ದಾಳಿಯಿಟ್ಟು ಒಂದು ಡಜನ್ ರೋಡ್ ಶೋ ಮಾಡಿ ಸೋತ ಸಿಟ್ಟಿಗೆ ಕರ್ನಾಟಕದ ಪಾಲಿನ ಅಕ್ಕಿ ನಿಲ್ಲಿಸಿದ್ದಲ್ಲದೆ ಇತಿಹಾಸದಲ್ಲಿ ದಾಖಲಾಗುವಂತೆ ವಿರೋಧಪಕ್ಷದ ನಾಯಕರನ್ನೆ ನೇಮಿಸದಿದ್ದುದು.
  • ನಮ್ಮದೇ ದೇಶದ ಭುಜದಂತಿರುವ ಮಣಿಪುರ ಎರಡು ತಿಂಗಳಿಂದ ಉರಿಯುತ್ತಿದ್ದರೂ ಆ ಕಡೆ ತಿರುಗಿಯೂ ನೋಡದೆ ಅಮೆರಿಕದಲ್ಲಿ ಯೋಗ ಮಾಡುತ್ತ ಕುಳಿತದ್ದು.

ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ಕಡೆಗೂ ಮೋದಿ ಬಾಯಿ ಬಿಟ್ಟಿದ್ದು ಯಾವಾಗೆಂದರೆ ನಿಸ್ಸಹಾಯಕ ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿ ಅವರನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ ವಿಡಿಯೋ ತುಣುಕೊಂದು ತಿಂಗಳುಗಳ ನಂತರ ವೈರಲ್ ಆದಾಗ! ಇಂತಹ ಮೋದಿಯ ಸಾಧನೆಗಳನ್ನ ಹಳ್ಳಿಹಳ್ಳಿಗೆ ಹೋಗಿ ಹೇಳಿ ಎಂದು ಕರೆಕೊಡುತ್ತಿರುವ ಭೈರಪ್ಪರಿಗೆ ವಯೋಸಹಜ ಮರೆವೇನೂ ಇಲ್ಲ, ಆದರೆ ದಶಕಗಳಿಂದ ಸಂಘ ಪರಿವಾರದಿಂದ ತರಬೇತು ಪಡೆದಿರುವ ಮಿದುಳು ಹಾಗೆ ಕೆಲಸ ಮಾಡುತ್ತಿದೆಯಂತಲ್ಲಾ, ಥೂತ್ತೇರಿ.

*****

ಈಚೆಗೆ ಚಂದ್ರಯಾನ ಉಡಾವಣೆಯಾಗಿದೆ. ಇಸ್ರೊ ಅಧ್ಯಕ್ಷ ಸೋಮನಾಥ್ ಸಾರಥ್ಯದಲ್ಲಿ ಎಂಟು ಜನ ವಿಜ್ಞಾನಿಗಳೆಂಬುವರು ತಿರುಪತಿಯಲ್ಲಿ ನಿಂತು ಭಯ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ತಿಮ್ಮಪ್ಪ ಇಡೀ ಕರ್ನಾಟಕದ ಸಕಲಿಷ್ಟು ಜಾತಿಗಳ ದೇವರಾದ್ದರಿಂದ ಜನರಿಗೆಲ್ಲಾ ಈ ಚಂದ್ರಯಾನ ಉಡಾವಣೆಯಿಂದ ಒಳ್ಳೆಯದಾಗುತ್ತದಂತೆ. ಇವರ ಇಂಗಿತವನ್ನ ಆಡಿಕೊಳ್ಳುವುದಾದರೆ ಚಂದ್ರನ ಮೇಲೆ ಈ ಯಂತ್ರ ಕಾಲೂರಿದ ಕ್ಷಣದಿಂದಲೇ ಭಾರತದಲ್ಲಿ ಬಿಜೆಪಿಗಳ ಹಾವಳಿಯಿಂದ ಕ್ಷೆಭೆಗೊಂಡಿರುವ ಮನಸ್ಸುಗಳು ಶಾಂತಗೊಳ್ಳಲಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ. ರೈತರು ಯಾವ ಸಮಸ್ಯೆಗಳು ಇಲ್ಲದೆ ಸಂತೃಪ್ತ ಜೀವನ ನಡೆಸುತ್ತಾರೆ. ಇತ್ಯಾದಿ ಸಮಸ್ಯೆಗಳಿಗೆಲ್ಲಾ ಸಂಜೀವಿನಿಯಾಗಿ ಚಂದ್ರನ ನೆಲೆಯಿಂದಲೇ ಛೂಮಂತ್ರ ಕಾಳಿ ಮಾಡುವ ಈ ಯಂತ್ರ ಪುರೋಹಿತಶಾಹಿಗಳಿಗೆ ಹೆಮ್ಮೆಯ ಸಾಧನೆ. ಪುರಾಣ ಸದೃಶ ಕಥೆ ಹೆಣೆಯುವುದರಲ್ಲಿ ನಿಸ್ಸೀಮರಾದ ಇವರು ಟಿ.ವಿಯೊಳಕ್ಕೂ ಬಂದು ಕೂತಿರುವುದಲ್ಲದೆ, ವಿಜ್ಞಾನಕ್ಕೂ ತಿರುಪತಿ ಭಕ್ತಿಗೂ ಏನು ಸಂಬಂಧ ಎಂದವರ ಮೇಲೆ ಎಗರಿ ಬೀಳತೊಡಗಿವೆ. ಇದಂತಿರಲಿ ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಪುರೋಹಿತರೊಬ್ಬರು, ತಿರುಪತಿ ದರ್ಶನ ಪಡೆದ ವಿಜ್ಞಾನಿಗಳನ್ನ ಆಡಿಕೊಂಡಿದ್ದಕ್ಕೆ ಸಿಟ್ಟುಗೊಂಡು, ಹುಲಿಕುಂಟೆ ಮೂರ್ತಿ ಮೇಲೆ ನರಿಯಂತೆ ಎಗರಾಡಿದ್ದಾರಲ್ಲಾ. ಈತನ ನಡವಳಿಕೆ ನೋಡಿದರೆ ಚಕ್ರತೀರ್ಥ ವಕ್ರತೀರ್ಥ ನಾಗೇಶ ಇತ್ಯಾದಿಗಳ ಸಂಬಂಧಿಯಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲ. ಬಿಜೆಪಿಗಳ ಮಂದೆಯಲ್ಲಿ ಈತ ಪರವಾಗಿಲ್ಲ ಎಂದು ನಮ್ಮ ಎಂ.ಪಿ ಪ್ರಕಾಶರು ವಾದಿಸುತ್ತಿದ್ದುದಲ್ಲದೆ, ತಮ್ಮ ಊರಿಗೂ ಕರೆದಿದ್ದರು. ಆದರೀಗ ಈತ ತನ್ನ ಚರ್ಮದೊಳಕ್ಕೆ ಸೇರಿಸಿಕೊಂಡಿರುವ ಜನಿವಾರದ ಅನಾವರಣ ಮಾಡಿದ್ದಾರೆ. ಅದೂ ಹುಲಿಕುಂಟೆ ಮೂರ್ತಿಯವರನ್ನ ಕೆಣಕಿ. ಅಂತೂ ಹುಲಿಕುಂಟೆ ಮೂರ್ತಿಗೆ ಥ್ಯಾಂಕ್ಸ್, ಥೂತ್ತೇರಿ.

******

ಕರ್ನಾಟಕದಲ್ಲಿ ಹೊಸದಾಗಿ ರಚನೆಗೊಂಡ ಸರಕಾರ ವಿರೋಧಪಕ್ಷಗಳ ವಿಕೃತ ದಾಳಿಯಿಂದ ಚೇತರಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಹರಿಪ್ರಸಾದ್ ಎಂಬ ಮಹಾನಾಯಕರು ನಮ್ಮ ಜನಾಂಗವನ್ನು ಕಡೆಗಣಿಸಿದರೆ ಮುಖ್ಯಮಂತ್ರಿಯನ್ನು ಇಳಿಸುವುದೂ ಗೊತ್ತು ಎಂದು ಹೇಳಿ ಕುಮಾರಣ್ಣ ಮತ್ತು ಬೊಮ್ಮಾಯಿಗೆ ರೋಮಾಂಚನವುಂಟುಮಾಡಿದ್ದಾರಲ್ಲಾ. ಹರಿಪ್ರಸಾದ್ ಎಲ್ಲ ಜನಾಂಗ ಎಂದಿದ್ದರೆ ಇಂತ ಅಣಕ ಬರೆಯುವ ಅಗತ್ಯವಿರಲಿಲ್ಲ. ಆದರೆ ಅವರು ತನ್ನ ಜನಾಂಗದ ಹೆಸರನ್ನು ಎಳೆದು ತಂದಿರುವುದರಿಂದ ಕೆಲ ಮಾಹಿತಿಯನ್ನ ಮುಖಕ್ಕೆ ಹಿಡಿಯುವ ಅಗತ್ಯವಂತಲ್ಲ.

1995ರಲ್ಲಿ ಈ ನಾಡಿನ ಎರಡನೇ ಬಹುದೊಡ್ಡ ಸಂಖ್ಯೆಯಾದ ಒಕ್ಕಲಿಗರ ಪೈಕಿ ಕೇವಲ ಎರಡು ಜನ ಎಂ.ಪಿಗಳಿದ್ದರೆ ಹರಿಪ್ರಸಾದರ ಸಮುದಾಯದ ಪೈಕಿ ಐದು ಜನ ಎಂ.ಪಿ ಗಳಿದ್ದರು. ಹಲವು ವ್ಯವಹಾರಗಳಲ್ಲೂ ಅವರು ಪ್ರಧಾನವಾಗಿ ಇದ್ದರು. ಕನ್ನಡ ಚಿತ್ರರಂಗದಲ್ಲೂ ಅನೇಕ ಗಣ್ಯರಿದ್ದರು. ಪತ್ರಿಕಾರಂಗದಲ್ಲೂ ಪ್ರಧಾನವಾಗಿ ಮುಂಚೂಣಿಯಲ್ಲಿದ್ದರು. ಹೀಗೆ ಸರಕಾರ, ಸಿನಿಮಾ, ಮಾಧ್ಯಮ ಮತ್ತು ಉದ್ಯಮದಲ್ಲಿದ್ದ ಹರಿಪ್ರಸಾದರ ಸಮುದಾಯದ ಜನ ತುಂಬ ಘನತೆಯಿಂದ ನಡೆದುಕೊಂಡು ಈ ನಾಡಿನ ಕೀರ್ತಿಯನ್ನ ಬೆಳಗಿದರು. ಈಗ ಅಂತವರ ಹೆಸರಿಗೆ ಮಸಿ ಬಳಿಯುತ್ತಿರುವ ಹರಿಪ್ರಸಾದ್ ಅವರಿಗೆ ಸೈರಣೆ ಬೇಕಾಗಿದೆಯಂತಲ್ಲಾ. ಅದೂ ಜವಾಬ್ದಾರಿಯುತ ಸೈರಣೆ ಮುಖ್ಯ. ಇಲ್ಲವಾದರೆ ’ಬಂ’ನಂತೆ ಜೆಡಿಎಸ್‌ಗೆ ಹೋಗಿ ಕಡೆಗಣನೆಗೆ ಒಳಗಾಗಬೇಕಾಗುತ್ತಂತಲ್ಲಾ, ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

0
2021ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಯ್ದ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ಭಾರತ ಸರ್ಕಾರವು ತನ್ನ ಪ್ರಾಕ್ಸಿ ಏಜೆಂಟ್‌ಗಳ ಮೂಲಕ ಪ್ರಯತ್ನಿಸಿರಬಹುದು ಎಂದು ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ...