ಸಾಮಾನ್ಯ ಮನುಷ್ಯನೂ ಕೂಡ ಅಸಹ್ಯ ಪಟ್ಟುಕೊಳ್ಳುವುದು ಯಾವುದಕ್ಕೆಂದರೆ ಅನವಶ್ಯಕವಾದ ಭಟ್ಟಂಗಿತನಕ್ಕಂತಲ್ಲಾ. ಅದು ಯಂಗೋ ಏನೋ ಭಟ್ಟಂಗಿಗಳು ಎಡೂರಪ್ಪನನ್ನು ರಾಜಾಹುಲಿ ಎಂದು ಕರೆದುಬಿಟ್ಟವು. ಸೂಕ್ಷ್ಮಜ್ಞರು ಆಲೋಚಿಸಿದಾಗ ಎಡೂರಪ್ಪ ಬರಿ ಹುಲಿಯಷ್ಟೆ; ಏಕೆಂದರೆ ಇಪ್ಪತ್ತಮೂರು ದಿನ ಕಂಬಿ ಹಿಂದೆ ಇದ್ದ ಈ ಹುಲಿ, ಬಿಡುಗಡೆಯ ನಂತರ ಕಾಡಿಗೇ ಕಾಂಪೌಂಡ್ ಹಾಕಿ ದಕ್ಕಿಸಿಕೊಂಡಿತು. ಜೊತೆಗೆ ಪತ್ರಕರ್ತರಿಗೂ ಮನೆ, ಸೈಟು ಮಾಡಿಕೊಟ್ಟಾಗ ಅವರೆಲ್ಲಾ ರಾಜಾಹುಲಿಯೆಂಬ ಬಿರುದು ಬರೆದುಕೊಟ್ಟರು. ಈಗ ರಾಜಾಹುಲಿಯ ಹಲ್ಲು ಮತ್ತು ಉಗುರುಗಳನ್ನ ಬಿಜೆಪಿಗಳು ಕಿತ್ತು ಕೂರಿಸಿವೆ. ಆದರೂ ನಿರಾಶೆಗೊಳ್ಳದೆ ಭಟ್ಟಂಗಿ ಮಾಧ್ಯಮದವರು ಯಡ್ಡಿ ಮಗನನ್ನಾಗಲೇ ಮರಿ ರಾಜಾಹುಲಿ ಎಂದು ನಾಮಕರಣ ಮಾಡಿ, ಸದನವನ್ನು ನಡುಗಿಸಿದ ಮರಿ ರಾಜಾಹುಲಿ ಎಂದು ನರಿಗಳಂತೆ ಊಳಿಟ್ಟಿವೆ. ಈ ಭಟ್ಟಂಗಿಗಳ ಬತ್ತಳಿಕೆಯಲ್ಲಿ ಇನ್ನು ಎಂತೆಂತಹ ಪದಪುಂಜಗಳಿವೆಯೆಂದರೆ, ಶಿಸ್ತಿನ ಪಕ್ಷ ಬಿಜೆಪಿ ಎಂದೇ ಯಾವಾಗಲೂ ನಮೂದಿಸುವ ಇವಕ್ಕೆ ಬಿಜೆಪಿ ಶುದ್ಧ ಅಶಿಸ್ತಿನ ಪಕ್ಷ ಎಂಬುದು ತಿಳಿದೇ ಇಲ್ಲವಂತಲ್ಲ. ಅಲ್ಲದೆ ಬಿಜೆಪಿಗಳನ್ನ ಸಂಬೋಧಿಸಬೇಕಾದರೆ ಕೇಸರಿ ಕಲಿಗಳು, ಕೇಸರಿಪಡೆ ಎನ್ನುತ್ತಿದ್ದ ಇವಕ್ಕೆ ಆ ಕಲಿಗಳು ಕಿಸುಗೊಂಡು ಬಿದ್ದು ಕ್ಷೇತ್ರ ಮರೆತು ಅಲೆಯುತ್ತಿರುವುದೇ ಕಾಣುತ್ತಿಲ್ಲವಂತಲ್ಲಾ, ಥೂತ್ತೇರಿ.
*****
ವಿಕೃತಭಟ್ಟನ ವಿಕೃತ ಪುಸ್ತಕಗಳನ್ನು ಬಿಡುಗಡೆ ಮಾಡಲು ಹೋಗುವ ಸಿದ್ದರಾಮಯ್ಯನವರ ಬೌದ್ಧಿಕ ಪತನ ಆರಂಭವಾಗಲಿದೆಯಂತಲ್ಲಾ. ಏಕೆಂದರೆ ವಿಕೃತಭಟ್ಟನ ಇತಿಹಾಸವೇ ಹಾಗಿದೆ. ಈತ ಪತ್ರಿಕೆಯಲ್ಲಿ ಸಿದ್ದರಾಮಯ್ಯನ ಉಚ್ಛಾರಣೆ ಆಡಿಕೊಂಡ ದಾಖಲೆಯಿದೆ. ಸಿದ್ದುಗೆ ಶ,ಷ,ಸ,ಗಳ ವ್ಯತ್ಯಾಸ ಗೊತ್ತಿಲ್ಲವೆಂದು ಆಡಿಕೊಂಡ ಉದಾಹರಣೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹೆಣ್ಣಿನ ದ್ವೇಷಿಯಾದ ಈತ ಗೌರಿ ಸಂಘಿಗಳ ಗುಂಡೇಟಿನಿಂದ ಹುತಾತ್ಮಳಾದಾಗ, “ಆಕೆ ಗುಂಡಿಗೆ ಬಲಿಯಾಗದೆ ಗುಂಡುಹಾಕಿ ಬಲಿಯಾಗಿದ್ದರೆ ಸಿಂಗಲ್ ಕಾಲಮ್ಮಿನ ಸುದ್ದಿಯಾಗುತ್ತಿದ್ದಳು” ಎಂದು ಬರೆದ. ಗೌರಿ ಸಿದ್ದು ಅಭಿಮಾನಿಯಾಗಿದ್ದರೆ ವಿಕೃತಭಟ್ಟ ಸಿದ್ದು ವಿರೋಧಿಯಾಗಿದ್ದ. ಗೌರಿ ಹುತಾತ್ಮಳಾದಾಗ ಸರಕಾರಿ ಗೌರವದೊಂದಿಗೆ ಸಂಸ್ಕಾರ ನೆರವೇರಿಸಿದ ಸಿದ್ದು ಆಕೆಗೆ ಗೌರವ ಕೊಡಲೋಸ್ಕರವಾಗಿಯಾದರೂ ವಿಕೃತಭಟ್ಟನ ಪುಸ್ತಕ ಬಿಡುಗಡೆಗೆ ಬಂದಿದ್ದ ಕರೆಯನ್ನು ನಿರಾಕರಿಸಬೇಕಿತ್ತು. ಸಿದ್ದುಗೆ ವಿರೋಧಿಗಳನ್ನ ಒಲಿಸಿಕೊಳ್ಳುವ ತಂತ್ರವಿದಾಗಿರಬಹುದು ಆದರೆ ಭಟ್ಟನ ವಿಷ ಹುಟ್ಟಿನಿಂದಲೇ ಬಂದಿದ್ದು. ಈತ ಹೆಣ್ಣಿನ ಬಗ್ಗೆ ಎಷ್ಟು ವಿಕೃತಿ ಮೆರೆದಿದ್ದಾನೆಂಬುದಕ್ಕೆ ಇನ್ನೂ ನೂರಾರು ಉದಾಹರಣೆಗಳಿವೆ. ಮಮತಾ ಬ್ಯಾನರ್ಜಿ ಮಂಚ್ಗೆ (ವೇದಿಕೆ) ಬರುವಂತೆ ಕರೆಕೊಟ್ಟಾಗ ಭಟ್ಟ ಮಂಚ್ಅನ್ನು ಮಂಚ ಎಂದು ತಿರುಚಿ ಬರೆದು ಮೋದಿ ವಿರೋಧಿಗಳಿಗೆ ಮಂಚಕ್ಕೆ ಬರುವಂತೆ ಮಮತಾ ಕರೆ ಎಂದು ವಿಕೃತ ಮೆರೆದ. ಆ ಮಟ್ಟಿನ ವಿಕೃತ ಭಟ್ಟನ ಮನಸ್ಸನ್ನ ಮುಂದೆ ಸಿದ್ದು ಬದಲಿಸಿದರೆ, ಆತನ ಪುಸ್ತಕ ಬಿಡುಗಡೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಅದು ಸಾಧ್ಯವೇ, ಥೂತ್ತೇರಿ.
ಇದನ್ನೂ ಓದಿ: ಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!
ಒಂದು ಕಡೆ ಗೋಹತ್ಯೆ ನಿಷೇಧದ ಕಾಯಿದೆ ತಂದು ಗೋವುಗಳನ್ನೆಲ್ಲಾ ಗೋಶಾಲೆಗೆ ಹೊಡೆದು, ಅವು ನೀರು ಮೇವಿಲ್ಲದೆ ಸಾಯುತ್ತಿದ್ದರೂ, ಗೋರಕ್ಷಣೆಯ ಅನುದಾನ ಪಡೆಯುತ್ತ ಸುಳ್ಳು ಲೆಕ್ಕ ತೋರಿಸುತ್ತ ಗೋವಿನ ಹೆಸರಲ್ಲಿ ಕೊಳ್ಳೆಹೊಡೆಯುತ್ತ ಕುಳಿತಿರುವ ಬಿಜೆಪಿಗಳು ಗೋವುಗಳೆಲ್ಲಾ ಗೋಶಾಲೆ ಸೇರಿದ ಮೇಲೆ ಗೋಮಾಳವೇಕೆ ಎಂದು ಆರೆಸ್ಸೆಸ್ ಸಂಸ್ಥೆಗೆ ಖಾತೆಮಾಡಿ ಕೊಟ್ಟಿದ್ದಾರಂತಲ್ಲಾ. ಇದನ್ನ ಪತ್ತೆ ಹಚ್ಚಿದ ಸರಕಾರ ತಡೆಯೊಡ್ಡಿದರೆ ಚಡ್ಡಿಗಳ ಬದಲು ಪೈಜಾಮಿನ ಬೊಮ್ಮಾಯಿಂದ ಖಂಡನಾ ಹೇಳಿಕೆ ಕೊಡಿಸಿದ್ದಾರಲ್ಲಾ. ಒಂದೇ ಅವಧಿಗೆ ರಾಜ್ಯದ ಗೋಮಾಳಗಳನ್ನೆಲ್ಲಾ ಕಬಳಿಸಿ ಹೊರಟ ಬಿಜೆಪಿಗಳು ಕಬಳಿಸಿದ ಜಾಗದಲ್ಲಿ ಏನೇನು ಮಾಡಬೇಕೆಂದು ನೀಲಿನಕ್ಷೆಯ ತಯಾರಿ ನಡೆಸುತ್ತಿದ್ದಾಗ, ಕರ್ನಾಟಕದ ಕತೆಯೇ ಇಷ್ಟಿದ್ದರೆ ಇನ್ನು ದೇಶದ ನಾನಾ ಕಡೆಗಳಲ್ಲಿ ಸರ್ಕಾರ ನಡೆಸುತ್ತಿರುವ ಚೆಡ್ಡಿಗಳು ಇನ್ನೆಷ್ಟು ಭೂಮಿ ಲಪಟಾಯಿಸಿರಬಹುದೆಂಬುದು ಊಹೆಗೂ ಸಿಲುಕುತ್ತಿಲ್ಲವಂತಲ್ಲಾ, ಥೂತ್ತೇರಿ.
*****
ಸದ್ಯಕ್ಕೆ ಸದನದ ವಿರೋಧಪಕ್ಷವನ್ನ ಆವರಿಸಿರುವ ಕುಮಾರಣ್ಣನವರು ಸದರಿ ಸರಕಾರದ ಎಲ್ಲ ನಡೆಗಳನ್ನು ಟೀಕಿಸುವ ಭರದಲ್ಲಿ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ವರ್ಗಾವಣೆ ಪಟ್ಟಿಯನ್ನ ಮರೆತು, ಈ ಸರಕಾರದ ವರ್ಗಾವಣೆ ದರಪಟ್ಟಿಯನ್ನ ಪತ್ರಿಕೆಗೆ ಬಿಡುಗಡೆ ಮಾಡಿದ್ದಲ್ಲದೆ ಸದನದಲ್ಲೂ ಬಿಡುಗಡೆಗೊಳಿಸಿದರಂತಲ್ಲಾ. ಆದರೇನು ಹಿಂದೆ ಕುಮಾರಣ್ಣನ ಸರಕಾರ ವರ್ಗಾವಣೆಗೆ ದರ ನಿಗದಿ ಮಾಡಿ ವಸೂಲಿ ಮಾಡಿದ್ದ ಪತ್ರಿಕಾ ವರದಿಯನ್ನೇ ಚಲುವರಾಯಸ್ವಾಮಿ ಬಿಡುಗಡೆ ಮಾಡಲಾಗಿ ಸಿಟ್ಟಾದ ಕುಮಾರಣ್ಣ ಜೆಡಿಎಸ್ಅನ್ನೆ ಬಿಜೆಪಿಯಲ್ಲಿ ಲೀನಗೊಳಿಸಿ ಅಧಿಕೃತ ವಿರೋಧ ಪಕ್ಷದ ನಾಯಕನಾಗಲು ಹೊರಟಿದ್ದಾರಂತಲ್ಲಾ. ಹಾಗೇನಾದರು ಆದರೆ ದೇವೇಗೌಡರು ಮಕ್ಕಳಿಗಾಗಿ ಕಟ್ಟಿಬೆಳೆಸಿದ ಪಾರ್ಟಿಯ ಕತೆಯೇನು ಎಂದು ನಿರಾಶ್ರಿತರಂತಾಗಿರುವ ಜೆಡಿಎಸ್ನವರು ಆತಂಕಗೊಂಡಿದ್ದಾರಂತಲ್ಲಾ. ಕುಮಾರಣ್ಣ ಪಂಚರತ್ನ ಮುಂದಿಟ್ಟುಕೊಂಡು ಕರ್ನಾಟಕ ಸುತ್ತುವಾಗ ನನಗೆ ನೀವು ನೂರ ಇಪ್ಪತ್ತುಮೂರು ಸೀಟು ಗೆಲ್ಲಿಸಿಕೊಡದಿದ್ದರೆ ಪಾರ್ಟಿಯನ್ನೆ ವಿಸರ್ಜನೆ ಮಾಡುತ್ತೇನೆ ಎಂದು ಶಪಥಗೈದಿದ್ದರು ಎಂದು ಕಾಂಗ್ರೆಸ್ನವರು ಪದೇಪದೇ ಆರೋಪಿಸುತ್ತಿದ್ದಾರೆ. ಈಗ ಕುಮಾರಣ್ಣ ಬಿಜೆಪಿ ಸೇರಿದರೆ ಪಾರ್ಟಿ ತಂತಾನೆ ವಿಸರ್ಜನೆಯಾಗುತ್ತದಂತಲ್ಲಾ. ಹಾಗೇನಾದರು ಆದರೆ ರೇವಣ್ಣ, ಜಿ.ಟಿ.ದೇವೇಗೌಡ ಇನ್ನು ಮುಂತಾದವರು ಸಿದ್ದು ಸನಿಹಕ್ಕೆ ಬಂದರೆ ಆಶ್ಚರ್ಯವಿಲ್ಲ. 123 ಸೀಟು ಬರದಿದ್ದರೆ ಪಾರ್ಟಿಯನ್ನೇ ವಿಸರ್ಜಿಸುವೆನೆಂದು ಕುಮಾರಸ್ವಾಮಿ ಹೇಳಿದ್ದರು ಎಂದು ಸದನದಲ್ಲಿಯೇ ಸಿದ್ದು ಹೇಳಿದ ಮಾತಿಗೆ ಕುಮಾರಣ್ಣನ ಕಡೆ ಇರುವ ನಾಗಮಂಗಲ ಕಡೆಯ ಕಾರ್ಯಕರ್ತರು, “ಹೌದು ಕುಮಾರಣ್ಣ ಅಂಗೇಳಿದ್ರು. ಆದ್ರೆ ಅಕಸ್ಮಾತ್ 19 ಸೀಟು ಬಂದ್ರೆ ವಿಸರ್ಜನೆ ಮಾಡ್ತಿನಿ ಅಂತ ಎಲ್ಲೇಳಿದ್ರು ಎಂದವಂತಲ್ಲಾ. ಇದಲ್ಲವೆ ಬಿಜೆಪಿ ಸೇರುವ ತಯಾರಿ, ಥೂತ್ತೇರಿ.
*****
ಬಿಜೆಪಿ ಜೊತೆ ಸೇರಿ ರಾಜಕೀಯ ಕೂಡಾವಳಿ ಜೀವನ ನಡೆಸಲು ಹೊರಟಿರುವ ಕುಮಾರಣ್ಣನ ಬಗ್ಗೆ ಸಹಜವಾಗಿ ಕರ್ನಾಟಕದ ಕೆಲ ಮನಸ್ಸುಗಳು ಮಮ್ಮಲ ಮರುಗಿವೆ. ಏಕೆಂದರೆ ಇದೇ ಕುಮಾರಣ್ಣ ಪ್ರಹ್ಲಾದ ಜೋಶಿ ಟೀಮನ್ನು ಪೇಶ್ವೆ ಸಂತತಿಗೆ ಹೋಲಿಸಿದ್ದರು ಮತ್ತು ಆರೆಸ್ಸೆಸ್ಸಿಗರ ಮೇಲೆ ದಾಳಿ ಮಾಡಿದ್ದರು. ಆದರೆ ಈಗ ಈ ಮಾತುಗಳು ಅರ್ಥ ಕಳೆದುಕೊಳ್ಳತೊಡಗಿವೆ. ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ಬಿಜೆಪಿಗಳಿಗೆ ಕುಮಾರಣ್ಣನೇ ಆದರ್ಶ, ಏಕೆಂದರೆ ಎಮ್ಮೆ ನಡಿಗೆಯಲ್ಲಿ ಹೋಗುತ್ತಿದ್ದ ಧರ್ಮಸಿಂಗ್ ಸರಕಾರ ಕೆಡವಿ ಮುಖ್ಯಮಂತ್ರಿಯಾದ ಕುಮಾರಣ್ಣನಿಗೆ ಕೆಲ ಸತ್ಯಸಂಗತಿಗಳು ಗೊತ್ತಿವೆ. ಅದೇನೆಂದರೆ ತಾನು ಯಾವತ್ತೂ ಜನಾಭಿಪ್ರಾಯದ ಮುಖ್ಯಮಂತ್ರಿಯಾಗಲೂ ಸಾಧ್ಯವಿಲ್ಲ ಎಂದು; ಒಂದೋ ಕಾಂಗೈ ತೆಕ್ಕೆಗೆ ಬೀಳಬೇಕು, ಇಲ್ಲ ಬಿಜೆಪಿ ಆಲಿಂಗನಕ್ಕೆ ಅರ್ಪಿಸಿಕೊಳ್ಳಬೇಕು. ಆದರೆ ಬಿಜೆಪಿಯದ್ದು ದೃತರಾಷ್ಟ್ರಲಿಂಗನ. ಅವರು ಕುಮಾರಣ್ಣನನ್ನ ಆಲಂಗಿಸಿ ಜೆಡಿಎಸ್ ಸಮಾಧಿಯ ಮೇಲೆ ಪಾಪಾಸು ಕಳ್ಳಿಯಂತೆ ಬೆಳೆಯಬಲ್ಲರಂತಲ್ಲಾ. ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆಯ ಉದಾಹರಣೆ ಕಣ್ಣಮುಂದೆಯಿದ್ದರೂ, ಕುಮಾರಸ್ವಾಮಿಯವರಿಗೆ ಅದು ಕಾಣುತ್ತಿಲ್ಲವಂತಲ್ಲಾ, ಥೂತ್ತೇರಿ
Correct analysis. Kumaraswamy and Yediyurappa is now in lurch. They lost their dignity also.
Thooth teri
.