Homeಕರ್ನಾಟಕದೇಶ-ವಿದೇಶದಲ್ಲೂ ನಂದಿನಿ ಹಾಲು ಲಭ್ಯ, ಬೆಂಗಳೂರಿನಲ್ಲಿ ಮಾತ್ರ ಲಭ್ಯವಿಲ್ಲ!: ಇದು ಕೃತಕ ಅಭಾವದ ಸೃಷ್ಟಿನಾ?

ದೇಶ-ವಿದೇಶದಲ್ಲೂ ನಂದಿನಿ ಹಾಲು ಲಭ್ಯ, ಬೆಂಗಳೂರಿನಲ್ಲಿ ಮಾತ್ರ ಲಭ್ಯವಿಲ್ಲ!: ಇದು ಕೃತಕ ಅಭಾವದ ಸೃಷ್ಟಿನಾ?

- Advertisement -
- Advertisement -

ದೇಶ- ವಿದೇಶಗಳಲ್ಲೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಾಗುತ್ತಿದೆ. ಆದರೆ ಸ್ಥಳೀಯವಾಗಿ ಕರ್ನಾಟಕದಲ್ಲಿ ಮಾತ್ರ ನಂದಿನಿ ಹಾಲು ಸಿಗುತ್ತಿಲ್ಲ. ಬೆಂಗಳೂರಿನ ನಂದಿನಿ ಮಿಲ್ಕ್ ಪಾರ್ಲರ್‌ ಗಳಲ್ಲಿ ನಂದಿನಿ ಉತ್ಪನ್ನಗಳು ಸಿಗುತ್ತಿಲ್ಲ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇರಿ ವಿವಿಧ ದೇಶಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಿಗುತ್ತವೆ. ಪ್ರಮುಖವಾಗಿ ಸಿಂಗಪುರ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ನಂದಿನಿ ಹಾಲಿನ ಉತ್ಪನ್ನಗಳು ಪೂರೈಕೆಯಾಗುತ್ತಿವೆ.

ರಾಜ್ಯದಲ್ಲಿ ನಂದಿನಿ ಉತ್ಪನ್ನ ಪೂರೈಕೆ ಕಡಿಮೆಯಾಗಿರುವುದನ್ನೇ ನೋಡಿಕೊಂಡು ಅಮುಲ್ ಹಾಲು ಮತ್ತು ಮೊಸರನ್ನು ಇ–ಕಾಮರ್ಸ್‌ ಮೂಲಕ ಮಾರುಕಟ್ಟೆಗೆ ಪ್ರವೇಶ ಮಾಡಿಸಲಾಗುತ್ತಿದೆ. ಈ ಹಿಂದೆ ಕೆಎಂಎಫ್ ಮತ್ತು ಅಮುಲ್ ವಿಲೀನದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಸ್ತಾಪಿಸಿದ್ದರು. ಆದರೆ ರಾಜ್ಯದಲ್ಲಿ ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಇದೀಗ ಕೃತಕ ಅಭಾವ ಸೃಷ್ಟಿಸಿ, ಅಮುಲ್‌ನ್ನು ರಾಜ್ಯದಲ್ಲಿ ಪ್ರವೇಶ ಮಾಡಿಸಲಾಗುತ್ತಿದೆ ಎನ್ನುವ ಅನುಮಾನ ರೈತರು ಮತ್ತು ಗ್ರಾಹಕರಲ್ಲಿ ಮೂಡಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ”ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತು ನಂದಿನಿಯನ್ನೇ ಅವಲಂಬಿಸಿರುವ ರಾಜ್ಯದ ರೈತರ ಹಿತವನ್ನು ಆದ್ಯತೆಯಲ್ಲಿ ರಕ್ಷಿಸಿ ಉಳಿಸಿಕೊಳ್ಳಬೇಕು. ನಮ್ಮ ಜನತೆ -ಗ್ರಾಹಕರು ನಂದಿನಿ ಉತ್ಪನ್ನಗಳನ್ನಷ್ಟೇ ಆದ್ಯತೆಯ ಮೇರೆಗೆ ಬಳಸಿ ರಾಜ್ಯದ ರೈತರ ಬದುಕನ್ನು ಕಾಪಾಡಬೇಕು” ಎಂದಿದ್ದಾರೆ.

”ಇಲ್ಲಿನ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ಬಂದು ಹೋದ ಬಳಿಕ ರಾಜ್ಯದಲ್ಲಿ ಹೈನುಗಾರಿಕೆ ಹೆಚ್ಚಾಗಿತ್ತು, ಅದರಂತೆ ಹಾಲು ಶೇಖರಣೆ ಪ್ರಮಾಣವೂ ಹೆಚ್ಚಾಗಿತ್ತು. ಕೆಎಮ್‌ಎಫ್‌ ದಿನಕ್ಕೆ 96 ಲಕ್ಷ ಕೆ.ಜಿ ತನಕವೂ ಹಾಲು ಸಂಗ್ರಹ ಮಾಡುವ ಮೂಲಕ ದಾಖಲೆ ಬರೆದಿತ್ತು. ಹಾಲಿನ ಪ್ರಮಾಣ ಏರಿಕೆಯಾದ ಬಳಿಕ ಕೆಎಂಎಫ್ ತನ್ನ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಂಡಿದೆ. ಹಾಲಿನ ಪುಡಿ, ಐಸ್‌ಕ್ರೀಮ್, ಚೀಸ್‌, ಬೆಣ್ಣೆ, ತುಪ್ಪ, ಸಿಹಿ ತಿನಿಸು ತಯಾರಿಕೆಯನ್ನೂ ಹೆಚ್ಚಳ ಮಾಡಿಕೊಂಡಿದೆ. ಶಾಲಾ ಮಕ್ಕಳಿಗೆ, ಮಿಲಿಟರಿ ಕ್ಯಾಂಪ್‌ಗಳಿಗೆ ಗುಡ್‌ಲೈಫ್ ಹಾಲು ಪೂರೈಕೆಯಾಗುತ್ತಿದೆ.

ಆದರೆ ಕೆಲದಿನಗಳಿಂದ ಹಾಲು ಸಂಗ್ರಹ ಪ್ರಮಾಣ ಸರಾಸರಿ 76 ಲಕ್ಷ ಕೆ.ಜಿಗೆ ಇಳಿಕೆಯಾಗಿದೆ. 20 ಲಕ್ಷ ಕೆ.ಜಿ ಹಾಲು ಕಡಿಮೆಯಾಗಿದ್ದು, ಈ ವ್ಯತ್ಯಯಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಕೆಎಂಎಫ್ ಅಧಿಕಾರಿಗಳು ಮಾತನಾಡಿ, ”ಬೇಸಿಗೆಯಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುವುದು ಸಾಮಾನ್ಯ. ಒಂದು ದಿನ ಮಾತ್ರ 96 ಲಕ್ಷ ಕೆ.ಜಿ ತನಕ ಹೋಗಿತ್ತು. ನಿತ್ಯ ಹಾಲು ಸಂಗ್ರಹ ಪ್ರಮಾಣ ಸರಾಸರಿ 81 ಲಕ್ಷ ಕೆ.ಜಿ. ಇತ್ತು. ಈಗ 5 ಲಕ್ಷ ಕೆ.ಜಿ ಕಡಿಮೆಯಾಗಿದ್ದು, ಹಾಲಿನ ಪುಡಿ ಸೇರಿ ಬೇರೆ ಉತ್ಪನ್ನಗಳ ತಯಾರಿಕೆ ಕಡಿಮೆ ಮಾಡಿ ಗ್ರಾಹಕರಿಗೆ ಹಾಲು ಪೂರೈಕೆಗೆ ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಹಾಲು ಸಂಗ್ರಹ ಕಡಿಮೆಯಾಗುತ್ತಿರುವ ಬಗ್ಗೆ ಹಾಲು ಒಕ್ಕೂಟ ಪ್ರತಿಕ್ರಿಯಿಸಿದ್ದು, ”ರೈತರಿಂದ ಹಾಲು ಖರೀದಿಯ ದರ ಕಡಿಮೆ ಇದೆ. ಇದೇ ಕಾರಣಕ್ಕೆ ಹಾಲು ಸಂಗ್ರಹ ಪ್ರಮಾಣ ಕಡಿಮೆಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ”ಬೇರೆ ರಾಜ್ಯಗಳಲ್ಲಿ ರೈತರಿಂದ ಲೀಟರ್‌ ಹಾಲಿಗೆ ₹50ರಿಂದ ₹60 ತನಕ ಹಣ ಕೊಟ್ಟು ಖರೀದಿ ಮಾಡಲಾಗುತ್ತದೆ ಆದರೆ ನಮ್ಮ ರಾಜ್ಯದಲ್ಲಿ ಲೀಟರ್‌ಗೆ ಕೇವಲ ₹39 ಮಾತ್ರ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ”ದುಬಾರಿ ಪಶು ಆಹಾರ ಖರೀದಿಸಿ ಹೈನುಗಾರಿಕೆ ಮಾಡುವುದು ರೈತರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಹಾಲು ಉತ್ಪಾದನೆ ಕಡಿಮೆಯಾಗಿದೆ” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...