Homeಕರ್ನಾಟಕನಂದಿನಿ ವರ್ಸಸ್ ಅಮುಲ್ ಪ್ರಶ್ನೆ ಮಾರುಕಟ್ಟೆ ಆಕ್ರಮಣವಲ್ಲ; ಇದು ವಿಲೀನದ ಆಕ್ರಮಣ

ನಂದಿನಿ ವರ್ಸಸ್ ಅಮುಲ್ ಪ್ರಶ್ನೆ ಮಾರುಕಟ್ಟೆ ಆಕ್ರಮಣವಲ್ಲ; ಇದು ವಿಲೀನದ ಆಕ್ರಮಣ

- Advertisement -
- Advertisement -

ಇಂದು ನಮ್ಮ ದೇಶ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬದುಕುತ್ತಿದೆ. ಅಮುಲ್ ಉತ್ಪನ್ನಗಳು (ಐಸ್‌ಕ್ರೀಮ್, ಚೀಸ್, ಬೆಣ್ಣೆ, ತುಪ್ಪ, ಪನ್ನೀರ್, ಪಿಜ್ಜಾ, ಚೀಸ್ ಪಿಜ್ಜಾ, ಚಾಕಲೇಟ್, ಭಾರತೀಯ ಸಿಹಿ ಪದಾರ್ಥಗಳು ಇತ್ಯಾದಿ) ಕರ್ನಾಟಕದಲ್ಲಿ ಬಹಳ ಹಿಂದಿನಿಂದ ಮಾರಾಟವಾಗುತ್ತಿವೆ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ, ದೊಡ್ಡ ನಗರಗಳಾದ ಮೈಸೂರು-ಬೆಂಗಳೂರು-ಮಂಗಳೂರುಗಳಲ್ಲಿ ಅಮುಲ್ ಉತ್ಪನ್ನಗಳು ಮಾರಾಟವಾಗುತ್ತಿವೆ. ಇದೀಗ ಬೆಂಗಳೂರಿನಲ್ಲಿ ಹಾಲು-ಮೊಸರು ಮಾರಾಟವನ್ನು ಆರಂಭಿಸುವುದರ ಬಗ್ಗೆ ಅಮುಲ್ ಸಾರ್ವಜನಿಕ ಹೇಳಿಕೆ ನೀಡಿದೆ. ಕರ್ನಾಟಕದಲ್ಲಿ ಅಮುಲ್‌ನ ಮಾರುಕಟ್ಟೆ ವಿಸ್ತರಣೆ ಮಾಡಿದರೆ ನಮ್ಮ ಅಭ್ಯಂತರಕ್ಕೆ ಕಾರಣವಿಲ್ಲ. ಈ ವಿವಾದದಲ್ಲಿನ ಮೂಲದಲ್ಲಿರುವ ’ನಂದಿನಿ-ಅಮುಲ್’ ವಿಲೀನದ ಪ್ರಶ್ನೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮಾರುಕಟ್ಟೆ ಪ್ರವೇಶ ಮತ್ತು ವಿಲೀನಗಳ ನಡುವೆ ನಾವು ಗೊಂದಲ ಮಾಡಿಕೊಳ್ಳಬಾರದು. ಈಗ ನಂದಿನಿ ರಕ್ಷಣೆಯ ಬಗ್ಗೆ ಮತ್ತು ಅಮುಲ್ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವುದು ಅದರ ಮಾರುಕಟ್ಟೆ ಪ್ರವೇಶದ ಬಗ್ಗೆಯಲ್ಲ. ಆದರೆ ಕರ್ನಾಟಕದ ಆಳುವ ಪಕ್ಷವು ಅಮಿತ್ ಷಾ ಹಮ್ಮಿಕೊಂಡಿರುವ ವಿಲೀನದ ಪ್ರಶ್ನೆಯನ್ನು ಮರೆಮಾಡಿ ಅಮುಲ್ ಮಾರುಕಟ್ಟೆ ಪ್ರವೇಶದ ಬಗ್ಗೆ ಮಾತ್ರ ಮಾತನಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಯಾಗಿ ವಿಲೀನದ ಪ್ರಶ್ನೆಯನ್ನು ಮುಂಚೂಣಿಗೆ ತಂದಿದ್ದಾರೆ. ಅಮಿತ್ ಷಾ ಅವರು ಒಕ್ಕೂಟ ಸರ್ಕಾರದ ಸಹಕಾರ ಮಂತ್ರಿ. ಇವರು ಯಾವುದೇ ಪೂರ್ವ ಸಿದ್ಧತೆಯಿಲ್ಲದೆ, ವಿನಾಕಾರಣವಾಗಿ-ಉದ್ದೇಶರಹಿತವಾಗಿ ಅಮುಲ್-ನಂದಿನಿ ವಿಲೀನದ ಯೋಜನೆಯನ್ನು ಮುಂದಿಡುವವರಲ್ಲ. ಇಲ್ಲಿರುವ ಅಪಾಯವನ್ನು ನಾವು ಗುರುತಿಸಬೇಕು.

ಅಮುಲ್-ನಂದಿನಿ ಪೈಪೋಟಿ

ಇದು ಕೇವಲ ಮಾರುಕಟ್ಟೆ ಪ್ರವೇಶದ ಬಗ್ಗೆಯಾಗಿದ್ದರೆ ನಾವು ಭಯ ಪಡಬೇಕಾಗಿರಲಿಲ್ಲ. ಏಕೆಂದರೆ ಮಾರುಕಟ್ಟೆ ಪೈಪೋಟಿಯಲ್ಲಿ ನಂದಿನಿಯು ಅಮುಲ್‌ಗಿಂತ ಉತ್ತಮ ಸ್ಥಾನದಲ್ಲಿದೆ. ಅಮುಲ್ ಹಾಲು ಲೀಟರ್‌ಗೆ ರೂ. 65; ನಂದಿನಿ ಹಾಲು ರೂ. 49. ಅಮುಲ್ ಮೊಸರು ಲೀಟರ್‌ಗೆ ರೂ. 67; ನಂದಿನಿ ಮೊಸರು ರೂ. 47. ಕೆನೆಭರಿತ ಹಾಲಿನ ಬೆಲೆ ಅಮುಲ್ ರೂ. 64. ನಂದಿನಿಯದ್ದು 900 ಮಿಲಿಲೀಟರ್‌ಗೆ ರೂ. 50. ಅಮುಲ್ ದೇಶದಲ್ಲಿ ಪ್ರಥಮ ಸ್ಥಾನದಲ್ಲಿರುವ ಹಾಲು ಸಹಕಾರ ಸಂಸ್ಥೆಯಾದರೆ ನಂದಿನಿ ದೇಶದಲ್ಲಿ ಎರಡನೆಯ ಸ್ಥಾನದಲ್ಲಿದೆ. ಅಮುಲ್ ಹೇಗೆ ಗುಜರಾತಿನ ಹೊರಗೆ ತನ್ನ ವ್ಯವಹಾರವನ್ನು ಬೆಳೆಸುತ್ತಿದೆಯೋ ಅದೇ ರೀತಿಯಲ್ಲಿ ನಂದಿನಿಯು ತನ್ನ ವ್ಯಾಪಾರವನ್ನು ರಾಜ್ಯದ ಹೊರಗೆ ಬೆಳೆಸುತ್ತಿದೆ. ಉದಾ: ಪ್ರತಿ ದಿನ ನಂದಿನಿ 2.5 ಲಕ್ಷ ಲೀಟರ್ ಹಾಲನ್ನು ಮುಂಬೈಗೆ ರವಾನಿಸುತ್ತಿದೆ. ಹೈದರಾಬಾದಿಗೆ ದಿನನಿತ್ಯ 1.5 ಲಕ್ಷ ಲೀಟರ್ ಹಾಲನ್ನು ರವಾನಿಸುತ್ತಿದೆ. ತಮಿಳುನಾಡಿನಲ್ಲಿಯೂ ಮಾರಾಟ ಮಾಡುತ್ತಿದೆ.

ಅಮಿತ್ ಷಾ ಸೃಷ್ಟಿಸಿದ ವಿವಾದ!

ಕಳೆದ ಕೆಲವು ತಿಂಗಳುಗಳ ಹಿಂದೆ ಒಕ್ಕೂಟ ಸರ್ಕಾರದ ಗೃಹ-ಸಹಕಾರ ಮಂತ್ರಿ ಅಮಿತ್ ಷಾ ಅವರು ಮಂಡ್ಯದಲ್ಲಿ ಮಾತನಾಡುತ್ತಾ ’ನಂದಿನಿ-ಅಮುಲ್ ಸಹಕಾರಿ ಸಂಘಗಳನ್ನು ವಿಲೀನಗೊಳಿಸಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುವಂತೆ ಮಾಡುತ್ತೇವೆ’ ಎಂದು ಹೇಳಿಕೆ ನೀಡಿದ್ದರು. ಇವರು ರಾಷ್ಟ್ರದ ಸಹಕಾರಿ ಮಂತ್ರಿ. ಆದರೆ ಇವರು ’ವಿಲೀನ’ದ ಮಾತನಾಡಿ ಕರ್ನಾಟಕ-ಗುಜರಾತ್ ನಡುವೆ ಅಸಹಕಾರ ಬೆಳೆಯುವಂತೆ ಮಾಡ್ಡಿದ್ದಾರೆ. ಈ ವಿಲೀನ ಎನ್ನುವುದು ಕರ್ನಾಟಕದ ಸಂದರ್ಭದಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ. ಸರ್ ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ್ದ, ಕರ್ನಾಟಕದ ಆರ್ಥಿಕತೆಯ ಪ್ರತೀಕವಾಗಿದ್ದ ಮೈಸೂರು ಬ್ಯಾಂಕನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಯಿತು. ಈಗ ಮೈಸೂರು ಬ್ಯಾಂಕು ಇಲ್ಲ. ಅದು ಕೇವಲ ಒಂದು ಹಣಕಾಸಿನ ಬ್ಯಾಂಕಾಗಿರಲಿಲ್ಲ. ಕರ್ನಾಟಕದ ಅಸ್ಮಿತೆಯಾಗಿತ್ತು. ಬೆಂಗಳೂರಿನ ಒಂದು ಕೇಂದ್ರ ಸ್ಥಾನದಲ್ಲಿ ಮೈಸೂರು ಬ್ಯಾಂಕ್ ವೃತ್ತ ಇದೆ. ನಮಗೆ ಮೈಸೂರು

ಅಮಿತ್ ಶಾ

ಬ್ಯಾಂಕನ್ನು ಉಳಿಸಿಕೊಳ್ಳಲಾಗಲಿಲ್ಲ; ಮೈಸೂರು ಬ್ಯಾಂಕ್ ವೃತ್ತವನ್ನಾದರೂ ಉಳಿಸಿಕೊಳ್ಳೋಣ. ಇದನ್ನೂ ಬದಲಾಯಿಸಲು ಬಿಡಬಾರದು. ವಿಜಯ ಬ್ಯಾಂಕನ್ನು ಗುಜರಾತಿನ ಬರೋಡ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಗಿದೆ. ಕರ್ನಾಟಕದ ಬಂದರುಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಮುಂತಾದವುಗಳ ನಿರ್ಮಾಣದ ಕ್ರಾಂಟ್ರಾಕ್ಟ್‌ಅನ್ನು ಗುಜರಾತಿನ ಆದಾನಿ ಎಂಬ ವ್ಯಾಪಾರಿಗೆ ನೀಡಲಾಗಿದೆ. ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಸಂಸ್ಥೆಯನ್ನು ಐಐಟಿ ರೀತಿಯ ಸಂಸ್ಥೆಯನ್ನಾಗಿ ಮಾಡುತ್ತೇವೆ ಎಂದು ಅದನ್ನು ನಾಶ ಮಾಡಲಾಗುತ್ತಿದೆ. ಸರ್ ಎಂ. ವಿಶ್ವೇಶ್ವರಯ್ಯ-ನಾಲ್ವಡಿ ಕೃಷ್ಣರಾಜ ಒಡೆಯರ್ 1924ರಲ್ಲಿ ಸ್ಥಾಪಿಸಿದ್ದ ’ವಿಐಎಸ್‌ಎಲ್’ ಸ್ಟೀಲ್ ಕಾರ್ಖಾನೆಯನ್ನು ಇಂದು ಮುಚ್ಚಲಾಗುತ್ತಿದೆ. ಇದೇ ರೀತಿಯ ಭಯಾನಕ ಸ್ಥಿತಿಯು ’ವಿಲೀನ’ ವಿವಾದದಿಂದ ನಂದಿನಿಗೂ ಬರಬಹುದು ಎಂಬ ಆತಂಕ ಜನತೆಯ ಮನದಲ್ಲಿ ಉಂಟಾಗಿದ್ದರೆ ಅದರಲ್ಲಿ ಸತ್ಯಾಂಶವಿಲ್ಲದಿಲ್ಲ.

ಇದನ್ನೂ ಓದಿ: ಅಮುಲ್‌ v/s ನಂದಿನಿಯಲ್ಲ, ಎರಡೂ ಒಂದಾಗಿ ನಡೆಯುತ್ತವೆ: ಅಮುಲ್ ಎಂಡಿ ಪ್ರತಿಕ್ರಿಯೆ

ಗುಜರಾತ್ ಹೇಳಿ ಕೇಳಿ ವ್ಯಾಪಾರಿಗಳ ನಾಡು. ಕರ್ನಾಟಕದ ಎಲ್ಲ ನಗರಗಳಲ್ಲಿಯೂ ಗುಜರಾತಿ ವ್ಯಾಪಾರಿಗಳಿದ್ದಾರೆ. ಇದರಿಂದ ನಮ್ಮ ಸಹಬಾಳ್ವೆಗೆ ಸಮಸ್ಯೆ ಉಂಟಾಗಿಲ್ಲ. ಆದರೆ ’ವಿಲೀನ’ ಇದೆಯಲ್ಲ ಇದು ಲಕ್ಷಾಂತರ ಕರ್ನಾಟಕಸ್ಥರ ಬಾಳಿಗೆ ಮಣ್ಣು ಹಾಕಲಿದೆ. ನಂದಿನಿ ಬ್ರಾಂಡಿನಲ್ಲಿ ವ್ಯವಹಾರ ನಡೆಸುತ್ತಿರುವ ಕರ್ನಾಟಕ ಮಿಲ್ಕ್ ಫೆಡರೇಶನ್ನಿನ ವಾರ್ಷಿಕ ವ್ಯವಹಾರ ರೂ.20000 ಕೋಟಿ. ಲಕ್ಷಾಂತರ ಹೈನುಗಾರರು, ವಿಶೇಷವಾಗಿ ಮಹಿಳೆಯರು ನಂದಿನಿಯ ಸುತ್ತ ಬೆಳೆದಿರುವ ಹಾಲು ಒಕ್ಕೂಟಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರವು ಪ್ರತಿ ಲೀಟರ್ ಹಾಲಿಗೆ ಸಬ್ಸಿಡಿ ನೀಡುತ್ತಿದೆ. ಪಶು ಆಹಾರದ ಉದ್ದಿಮೆಯೂ ಬೆಳೆಯುತ್ತಿದೆ.

’ವಿಲೀನ’ವು ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ!

ಅಮಿತ್ ಷಾ ಪ್ರತಿನಿಧಿಸುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ನಮ್ಮ ಸಂವಿಧಾನದತ್ತ ಒಕ್ಕೂಟ ತತ್ವದ ಬಗ್ಗೆ ನಂಬಿಕೆಯಿಲ್ಲ. ಸೈದ್ಧಾಂತಿಕವಾಗಿ ಅವರದ್ದು ಏಕರೂಪದ-ಕೇಂದ್ರೀಕೃತ ರಾಜಕೀಯದಲ್ಲಿ ನಂಬಿಕೆಯಿರುವ ಪಕ್ಷ. ರಾಜ್ಯಗಳ ಸ್ವಾಯತ್ತ ಬೆಳವಣಿಗೆಗೆ ’ವಿಲೀನ’ವು ಕಂಟಕಪ್ರಾಯವಾಗುತ್ತದೆ. ನಂದಿನಿ ಮತ್ತು ಅಮುಲ್ ಎರಡೂ ತಮ್ಮ ತಮ್ಮ ವ್ಯಾಪಾರ-ವ್ಯವಹಾರ, ಉತ್ಪಾದನೆ ನಡೆಸಿಕೊಂಡಿದ್ದರೆ ಅಮಿತ್ ಷಾಗೆ ಏನು ತೊಂದರೆ? ಇದೇ ರೀತಿಯ ಸಹಕಾರಿ ಹಾಲಿನ ಸಂಸ್ಥೆಗಳನ್ನು ಎಲ್ಲಾ ರಾಜ್ಯಗಳಲ್ಲೂ ಬೆಳೆಸಲು ಒಕ್ಕೂಟ ಸರ್ಕಾರ ಶ್ರಮ ಪಡಬೇಕೇ ವಿನಾ ನಂದಿನಿ-ಅಮುಲ್ ವಿಲೀನದ ಬಗ್ಗೆ ತಂತ್ರಗಾರಿಕೆ ಮಾಡುವುದಲ್ಲ. ಒಕ್ಕೂಟ ಸರ್ಕಾರ ನಂದಿನಿ ಬೆಳವಣಿಗೆಗೆ ಒಂದು ಬಿಡಿಗಾಸೂ ನೀಡುತ್ತಿಲ್ಲ. ಆದರೆ ಇದನ್ನು ಆಪೋಶನ ಮಾಡಿಕೊಳ್ಳಲು ಕಾಲು ಕೆರೆದುಕೊಂಡು ನಿಂತಿದೆ.

ಅಭಿವೃದ್ಧಿಯಲ್ಲಿ ಮುಂದಿರುವ ಕರ್ನಾಟಕ

ಅನೇಕ ಅಭಿವೃದ್ಧಿ ಸೂಚಿಗಳಲ್ಲಿ ಕರ್ನಾಟಕವು ಗುಜರಾತ್‌ಗಿಂತ ಮುಂದಿದೆ. ಉದಾ: 2020-21ರಲ್ಲಿ ಗುಜರಾತಿನ ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ರೂ.14.59 ಲಕ್ಷ ಕೋಟಿಯಾದರೆ ಕರ್ನಾಟಕದ್ದು ರೂ.15.75 ಲಕ್ಷ ಕೋಟಿ. ತಲಾ ವರಮಾನ ಗುಜರಾತಿನದ್ದು ರೂ. 212821ರಷ್ಟಿದ್ದರೆ ಕರ್ನಾಟಕದ್ದು ರೂ.236451. ಜನಸಂಖ್ಯಾ ದಶಕವಾರು ಬೆಳವಣಿಗೆ (2001-2011) ಗುಜರಾತನಲ್ಲಿ ಶೇ.19.3ರಷ್ಟಿದ್ದರೆ ಕರ್ನಾಟಕದಲ್ಲಿ ಶೇ.15.6ರಷ್ಟಿದೆ. ಲಿಂಗ ಅನುಪಾತ ಗುಜರಾತಿನಲ್ಲಿ (2011) 919, ಕರ್ನಾಟಕದಲ್ಲಿ ಇದು 973. ಸಾಕ್ಷರತೆಯಲ್ಲಿ ಲಿಂಗ ಸಂಬಂಧಿ ಅಂತರ ಕರ್ನಾಟಕದಲ್ಲಿ ಶೇ.14.7 ಅಂಶಗಳಷ್ಟಿದ್ದರೆ ಗುಜರಾತಿನಲ್ಲಿ ಇದು ಶೇ.16.5 ಅಂಶಗಳಷ್ಟಿದೆ. ಶಿಶು ಮರಣ ಪ್ರಮಾಣ 2019-20ರಲ್ಲಿ ಪ್ರತಿ ಸಾವಿರ ಜನನಗಳಿಗೆ ಗುಜರಾತಿನಲ್ಲಿ 31ರಷ್ಟಿದ್ದರೆ ಕರ್ನಾಟಕದಲ್ಲಿ 25. ಗುಜರಾತ್ ಅಭಿವೃದ್ಧಿ ಮಾದರಿ ಎನ್ನುವುದು ಕೃತವಾಗಿ ಕಟ್ಟಿದ್ದೇ ವಿನಾ ನಿಜಸ್ಥಿತಿಯು ಮಾದರಿಯಾಗಿಲ್ಲ. ಆರ್ಥಿಕ ಅಭಿವೃದ್ಧಿಯಲ್ಲಿ, ಸಾಮಾಜಿಕ ನ್ಯಾಯದಲ್ಲಿ ಮತ್ತು ಲಿಂಗ ಸಮಾನತೆಯಲ್ಲಿ ಕರ್ನಾಟಕದಿಂದ ಗುಜರಾತ್ ಪಾಠ ಕಲಿಯಬೇಕೇ ವಿನಾ ಗುಜರಾತಿನಿಂದ ಕರ್ನಾಟಕ ಕಲಿಯಬೇಕಾದುದೇನಿಲ್ಲ. ಆದ್ದರಿಂದ ನಂದಿನಿಯನ್ನು ಅದರ ಪಾಲಿಗೆ ಅದನ್ನು ಬಿಡುವುದು ಒಳ್ಳೆಯದು. ಅವರು ತಮ್ಮ ತವರು ರಾಜ್ಯದ ಅಭಿವೃದ್ಧಿಯ ಬಗ್ಗೆ ಕರ್ನಾಟಕದಿಂದ, ತಮಿಳುನಾಡಿನಿಂದ, ಕೇರಳದಿಂದ ಪಾಠ ಕಲಿತು ಅದನ್ನು ಉತ್ತಮಪಡಿಸಲಿ. ಅಮುಲ್-ನಂದಿನಿ ಮಾರುಕಟ್ಟೆ ಪೈಪೋಟಿಗೆ ಸ್ವಾಗತ. ಎರಡರ ವಿಲೀನಕ್ಕೆ ನಮ್ಮ ವಿರೋಧವಿದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...