ಕುಡಿಯುವ ನೀರಿನ ನಲ್ಲಿಗಳಿಗೆ ಮೀಟರ್ ಅಳವಡಿಸಿದರೆ ಪೊರಕೆಯಲ್ಲಿ ಹೊಡೆಯಲಾಗುವುದು ಎಂದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮದ ತಾಯಂದಿರು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಹೆಮ್ಮರಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಹಳ್ಳಿಯಲ್ಲಿ ಗ್ರಾಮದ ತಾಯಂದಿರು ಖಾಲಿ ಕೊಡಗಳೊಂದಿಗೆ ಬೀದಿಗೆ ಇಳಿದು ಪ್ರತಿಭಟಿಸಿದ್ದಾರೆ.
ಜಲ ಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ನಲ್ಲಿಗಳಿಗೆ ಮೀಟರ್ ಅಳವಡಿಸಲು ಮುಂದಾದ ಗ್ರಾ.ಪಂ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜಲ ಜೀವನ್ ಮಿಷನ್ ಯೋಜನೆಯಲ್ಲಿ ಮೀಟರ್ ಅಳವಡಿಸುವುದು ನಮಗೆ ಬೇಡವೇ ಬೇಡ. ನಮಗೆ ವಿದ್ಯುತ್ ಬಿಲ್ ಕಟ್ಟಲೂ ಆಗುತ್ತಿಲ್ಲ. ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಹೀಗಿರುವಾಗ ನಲ್ಲಿ ನೀರಿಗೆ ಮೀಟರ್ ಅಳವಡಿಸಿದರೆ ಏನು ಮಾಡೋಣ?” ಎಂದು ಪ್ರಶ್ನಿಸಿದ್ದಾರೆ.
“ಸಿಲಿಂಡರ್ ಬೆಲೆ ಏರಿಕೆಯಾಗಿದೆ, ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆಯಾಗಿದೆ. ಮತ್ತೀಗ ಕುಡಿಯೋ ನೀರಿಗೂ ನಾವು ದುಡ್ಡು ಕೊಡಬೇಕಾ?” ಎಂದು ಕೇಳಿದ್ದಾರೆ.
“ಮೀಟರ್ ಹಾಕ್ತೀವಿ ಅಂತ ಚೆನ್ನಾಗಿರೋ ಕಾಂಕ್ರೀಟ್ ರಸ್ತೆ ಅಗೆದು ಹಾಳು ಮಾಡ್ತೀರಿ. ಇದನ್ನೆಲ್ಲ ಮಾಡೋ ಬದಲು ಊರಿನ ರಸ್ತೆ ಸರಿಪಡಿಸಿ” ಎಂದಿದ್ದಾರೆ.