ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಳೆದೆರಡು ದಶಕಗಳ ಕೋಮು ಸಂಘರ್ಷದ ಇತಿಹಾಸ ತೆಗೆದು ನೋಡಿದರೆ ಇಲ್ಲಿ ಕೋಮು ಬೆಂಕಿಗೆ ಅತೀ ಹೆಚ್ಚು ಉರುವಲಾಗಿ ಬಳಕೆಯಾದವರು ಬಿಲ್ಲವರು ಎಂಬ ಸತ್ಯ ನಮಗೆ ಮನವರಿಕೆಯಾಗುತ್ತದೆ. ಅದಾಗ್ಯೂ ಆ ಸಮುದಾಯಕ್ಕೆ ವಸ್ತುಸ್ಥಿತಿ ಯಾಕೆ ಅರ್ಥವಾಗುತ್ತಿಲ್ಲ ಎನ್ನುವುದೇ ನಮ್ಮ ಮುಂದಿರುವ ಉತ್ತರವಿಲ್ಲದ ಪ್ರಶ್ನೆ.
ಹಾಗೆ ನೋಡ ಹೋದರೆ ಬಿಲ್ಲವರು ಮತ್ತು ಮುಸ್ಲಿಮರೇನೂ ಆ ಜನ್ಮ ವೈರಿಗಳಲ್ಲ. ಇಲ್ಲಿನ ಮುಸ್ಲಿಮರಲ್ಲಿ ದೊಡ್ಡ ಸಂಖ್ಯೆಯವರು ಒಂದು ಕಾಲದ ಬಿಲ್ಲವರೋ, ದಲಿತರೋ ಆಗಿದ್ದವರು. ಸ್ವಯಂ ಘೋಷಿತ ಉಚ್ಚ ಕುಲದವರ ಶೋಷಣೆ, ದೌರ್ಜನ್ಯ ತಾಳಲಾರದೇ ಇಸ್ಲಾಂ ಧರ್ಮ ಸ್ವೀಕರಿಸಿದವರು.
ಇದನ್ನೇ ಮಲಯಾಳಂ ಮಹಾಕವಿ ಕುಮಾರನಾಶಾನ್ ತನ್ನ ಕವಿತೆಯಲ್ಲಿ ಹೀಗೆ ಬರೆದಿದ್ದಾರೆ.
“ಆಟ್ಟುಂ ವಿಲಕ್ಕುಂ ವಯಿಯಾಟ್ಟುಂ
ಮಟ್ಟುಮೀ ಕೂಟರ್ ಸಹಿಚ್ಚು
ಪೊರುದಿಮುಟ್ಟಿ ವಿಟ್ಟದಾಂ ಹಿಂದು ಮದಂ
ಜಾದಿಯಿಲ್ ತಾನ್ನ, ಕೆಟ್ಟು ಕಯಿಂಞ ನಂಬೂದಿರಿ ಮದಂ…
ಕೇರಳತ್ತಿಂಗಳ್ ಮುಸಲ್ಮಾನ್ಮಾರ್
ಪಶ್ಚಿಮ ಪಾರಂಙಳಿಲ್ ನಿನ್ನೋ..
ವನ್ಕಡಲ್ ಚೀರುಂ ತಿರಗಳ್ ಕಡನ್ನೋ…
ಹಿಮಾಲಯಮೇರಿ ವನ್ನವರೇರೆಯಿಲ್ಲ…
ರೇರೆಚ್ಚೆರುಮನ್ ಪೋಯಿ ತೊಪ್ಪಿಯಿಟ್ಟಾಲ್ ಚಿತ್ರಯವನೆತ್ತಿ ಚಾರುತ್ತರುತ್ತಿಡಾಂ..
ಚೆಟ್ಟುಂ ತಂಬುರಾರೇ…..”
ಸಾರಾಂಶ : ಅಟಕಾಯಿಸುವುದನ್ನು, ಹೊಡೆಯುವುದನ್ನು, ದಾರಿಯಲ್ಲಿ ಕಂಡರೆ ಬಡಿಯುವುದನ್ನು… ಸಹಿಸಿ ತಾಳ್ಮೆ ಕಳಕೊಂಡ ಆ ಜನರು ಜಾತಿ ಪದ್ಧತಿಯಲ್ಲಿ ಕೆಟ್ಟು ಕೆರ ಹಿಡಿದು ಹೋದ ನಂಬೂದಿರಿಗಳ ಅಧಿಪತ್ಯದ (ಬ್ರಾಹ್ಮಣ) ಮತವನ್ನು ತ್ಯಜಿಸಿದರು.
ಕೇರಳದ ಮುಸ್ಲಿಮರಲ್ಲಿ ಪಶ್ಚಿಮ ಘಟ್ಟಗಳ ದಾಟಿಯೋ, ಕಡಲ ತೆರೆಗಳ ದಾಟಿಯೋ, ಹಿಮಾಲಯವೇರಿ ಬಂದವರು ಹೆಚ್ಚಿಲ್ಲ. ಅವರು ಹೋಗಿ ಟೊಪ್ಪಿಯಿಟ್ಟಾಗ (ಇಸ್ಲಾಂ ಸ್ವೀಕರಿಸಿದಾಗ) ಅವರ ಮೇಲಿನ ಶೋಷಣೆ ಕೊನೆಗೊಂಡಿತು.
ಈ ಕವಿತೆ ಬರೆದ ಕುಮಾರನಾಶಾನ್ ಬೇರೆ ಯಾರೂ ಅಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳ ಖಾಸಾ ಶಿಷ್ಯ ಮತ್ತು ಸಂಗಡಿಗ.
ಕೇರಳದಲ್ಲಿ ಈಳವ (ಬಿಲ್ಲವ) ಸಮುದಾಯ ಮತ್ತಿತರ ಕೆಳವರ್ಗದ ಮೇಲೆ ತಿರುವಾಂಕೂರು ಅರಸರು ಮೇಲ್ವರ್ಗದವರ ಚಿತಾವಣೆಯ ಮೇರೆಗೆ ಹೇರಿದ್ದ ದುಷ್ಟ ಮತ್ತು ಅಮಾನವೀಯ ತೆರಿಗೆಯೊಂದಿತ್ತು. ಅದೇ ಮುಲಕ್ಕರ ಅರ್ಥಾತ್ ಸ್ತನ ತೆರಿಗೆ. ಕೆಳವರ್ಗದ ಮಹಿಳೆಯರು ತಮ್ಮ ಸ್ತನಗಳನ್ನು ಮುಚ್ಚುವಂತಿರಲಿಲ್ಲ. ಒಂದು ವೇಳೆ ಮುಚ್ಚಿದರೆ ಅದಕ್ಕೆ ಬಾರೀ ತೆರಿಗೆ ಕಟ್ಟಬೇಕಿತ್ತು. ಮಲಬಾರ್ ಪ್ರದೇಶವು ಟಿಪ್ಪು ಸುಲ್ತಾನರ ಅಧೀನಕ್ಕೆ ಬಂದಾಗ ಟಿಪ್ಪು ಅಂತಹ ಅಮಾನವೀಯ ತೆರಿಗೆಯನ್ನು ತೆಗೆದು ಹಾಕಿದರು ಮಾತ್ರವಲ್ಲದೇ ಅಂತಹ ನೀಚ ಪದ್ಧತಿಯನ್ನು ಹೇರುವವರಿಗೆ ಖಡಕ್ ಎಚ್ಚರಿಕೆ ಕೊಟ್ಟು ಅದನ್ನು ಕೊನೆಗೊಳಿಸಿದರು. ಟಿಪ್ಪು ಸುಲ್ತಾನರ ಮರಣಾನಂತರ ಮತ್ತೆ ಅದೇ ಅಮಾನವೀಯ ಪದ್ಧತಿ ಜಾರಿಗೆ ಬಂತು. ಆ ಬಳಿಕ ಅದರ ವಿರುದ್ಧ ಹೋರಾಟ ಮಾಡಿ ಅದಕ್ಕೆ ಕೊನೆ ಹಾಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು.
ಇಂದು ಅದೇ ಟಿಪ್ಪುವಿನ ಸಮುದಾಯವಾದ ಮುಸ್ಲಿಮರ ವಿರುದ್ಧ ಅದೇ ಬ್ರಾಹ್ಮಣಶಾಹಿ ಶಕ್ತಿಗಳು ಬಿಲ್ಲವರನ್ನು ಎತ್ತಿ ಕಟ್ಟಿ ತಮಾಷೆ ನೋಡುತ್ತಿದೆ. ಈ ವಾಸ್ತವ ಎಲ್ಲಿಯವರೆಗೆ ಬಿಲ್ಲವರಿಗೆ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಅವರು ಬಲಿಪಶುವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಸ್ವಾಮಿ ನಾರಾಯಣ ಗುರುಗಳು ಪ್ರವಾದಿ (ಸ) ಮತ್ತು ಇಸ್ಲಾಂ ಧರ್ಮದ ಬಗ್ಗೆ ಅತೀವ ಗೌರವವನ್ನೂ ಹೊಂದಿದ್ದರು.
ಅದಕ್ಕೆ ಅವರ ಒಂದು ಕವನವೇ ಸಾಕ್ಷಿಯೊದಗಿಸುತ್ತದೆ.
“ಪುರುಷಾಕೃತಿ ಪೂಂಡ ದೈವಮೋ…
ನರವಿಭ್ಯಾಕೃತಿ ಪೂಂಡ ಧರ್ಮಮೋ…
ಪರಮೇಶ ಪವಿತ್ರ ಪುತ್ರನೋ…
ಕರುಣಾಮಾನ್ ನೆಬಿ ಮುತ್ತು ರತ್ನಮೋ…..”
ಸಾರಾಂಶ : ಪುರುಷ ರೂಪ ತಾಳಿ ಬಂದ ದೇವನೋ…
ಮನುಷ್ಯ ರೂಪದಲ್ಲವತರಿಸಿದ ಧರ್ಮವೋ…
ಪರಮೇಶ್ವರನ ಪವಿತ್ರ ಪುತ್ರನೋ…
ಕರುಣಾಳು ಪ್ರವಾದಿ ಮುತ್ತು ರತ್ನವೋ…..
ಇಂದು ಅದೇ ಗುರುಗಳ ಹೆಸರಲ್ಲಿ ಹುಟ್ಟು ಹಾಕಲಾದ SNDP ಸ್ವಾಮಿ ನಾರಾಯಣಗುರು ಧರ್ಮ ಪರಿಪಾಲನಾ ಸಂಸ್ಥೆಯು ಇತಿಹಾಸವನ್ನು ಮರೆತು ಮತ್ತೆ ಅದೇ ಮನುವಾದಿಗಳ ತೆಕ್ಕೆಗೆ ಸರಿಯುತ್ತಿರುವುದನ್ನು ವರ್ತಮಾನದ ಕ್ರೂರ ವ್ಯಂಗ್ಯವೆನ್ನದೇ ವಿಧಿಯಿಲ್ಲ.
- ಇಸ್ಮತ್ ಪಜೀರ್
(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)
ಇದನ್ನೂ ಓದಿ: ಒಂದು ಜಾತಿ, ಒಂದು ಮತ, ಒಂದೇ ದೇವರು ಎಂಬ ಸಂದೇಶ ಸಾರಿದ ಸಂತ ನಾರಾಯಣ ಗುರುಗಳು…