ಮುಂಬೈನ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್, ಏಜೆನ್ಸಿ ಮೇಲೆ ಲಂಚದ ಆರೋಪ ಮಾಡಿದ್ದರು. ಆರ್ಯನ್ ಖಾನ್ ಬಿಡುಗಡೆಗೆ 18 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಡಲಾಗಿತ್ತು ಎಂದು ಆರೋಪಿಸಿದ್ದರು.
ಈ ಆರೋಪಗಳನ್ನು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ನಿರಾಕರಿಸಿದ್ದಾರೆ. ನನ್ನನ್ನು ಲಂಚದ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ವಾಂಖೆಡೆ ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಖಾಸಗಿ ತನಿಖಾಧಿಕಾರಿ ಕೆ.ಪಿ ಗೋಸಾವಿಯ ವೈಯಕ್ತಿಕ ಅಂಗರಕ್ಷಕ ಎಂದು ಹೇಳಿಕೊಳ್ಳುವ ಪ್ರಭಾಕರ್ ಸೈಲ್, ಅಕ್ಟೋಬರ್ 3 ರಂದು ಸ್ಯಾಮ್ ಡಿಸೋಜಾ ಮತ್ತು ಕೆ.ಪಿ ಗೋಸಾವಿ ನಡುವೆ 18 ಕೋಟಿ ರೂಪಾಯಿ ಒಪ್ಪಂದದ ಬಗ್ಗೆ ನಡೆದ ಸಂಭಾಷಣೆಯನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ. ಇದರಲ್ಲಿ 8 ಕೋಟಿ ರೂಪಾಯಿಗಳನ್ನು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ನೀಡಬೇಕಾಗುತ್ತದೆ ಎಂದು ಹೇಳಿದ್ದರು ಎಂದ ಆರೋಪಿಸಿದ್ದಾರೆ.
ಅಕ್ಟೋಬರ್ 3 ರ ಸಂಜೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಕೆ.ಪಿ ಗೋಸಾವಿ ಮತ್ತು ಇನ್ನೊಬ್ಬ ವ್ಯಕ್ತಿ ಸ್ಯಾಮ್ ಡಿಸೋಜಾ ಅವರು ಕಾರಿನೊಳಗೆ 15 ನಿಮಿಷಗಳ ಸಭೆ ನಡೆಸಿದರು ಎಂದಿದ್ದಾರೆ. ಈ ಪ್ರಕರಣದಲ್ಲಿ ಎನ್ಸಿಬಿ ಹೆಸರಿಸಿರುವ ಒಂಬತ್ತು ಸಾಕ್ಷಿಗಳಲ್ಲಿ ಪ್ರಭಾಕರ್ ಸೈಲ್ ಕೂಡ ಒಬ್ಬರು.
ಇದನ್ನೂ ಓದಿ: ಆರ್ಯನ್ ಖಾನ್ಗೆ ಡ್ರಗ್ಸ್ ಪೂರೈಕೆ ಆರೋಪ ನಿರಾಕರಿಸಿದ ನಟಿ ಅನನ್ಯ ಪಾಂಡೆ: ವರದಿ
ಪ್ರಭಾಕರ ಸೈಲ್ ಅವರು ಕೆ.ಪಿ.ಗೋಸಾವಿ ಅವರ ಸೂಚನೆಯಂತೆ ಎರಡು ಚೀಲ ಹಣವನ್ನು ಸ್ಯಾಮ್ ಡಿಸೋಜಾ ಅವರಿಗೆ ನೀಡಿದರು. ಈ ಚೀಲಗಳಲ್ಲಿ 38 ಲಕ್ಷ ರೂಪಾಯಿಯಿತ್ತು ಎಂದು ಹೇಳಿದ್ದಾರೆ. ಜೊತೆಗೆ ಎನ್ಸಿಬಿ ದಾಳಿ ನಡೆಸಿದ ರಾತ್ರಿ ತಾನು ಗೋಸಾವಿಯ ಜೊತೆಗಿದ್ದೆ. ಅಧಿಕಾರಿಗಳು ಪಂಚನಾಮವಾಗಿ ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 2 ರಂದು ಕ್ರೂಸ್ ಹಡಗಿನ ಮೇಲೆ ದಾಳಿಯ ನಂತರ ಕೆಪಿ ಗೋಸಾವಿ, ಆರ್ಯನ್ ಖಾನ್ ಅವರನ್ನು ಅಪಹರಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿರುವ ವಕೀಲ ಜಯಂತ್ ವಶಿಷ್ಠ್, ಎಫ್ಐಆರ್ ದಾಖಲಿಸುವಂತೆ ಮುಂಬೈ ಪೊಲೀಸರಿಗೆ ಇಂದು (ಸೋಮವಾರ) ಮನವಿ ಮಾಡಿದ್ದಾರೆ.
ಇತ್ತ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮುಂಬೈ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ತನ್ನನ್ನು ಈ ಲಂಚ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ದೂರಿದ್ದಾರೆ.
ಎನ್ಸಿಬಿ ಮೂಲಗಳು ಪ್ರಭಾಕರ್ ಸೈಲ್ ಅವರ ಆರೋಪಗಳನ್ನು ನಿರಾಕರಿಸಿ, “ಕೇವಲ ಏಜೆನ್ಸಿ ಇಮೇಜ್ಗೆ ಹಾನಿ ಮಾಡಲು ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 2 ರಂದು ಮುಂಬೈನ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತಿದ್ದ ವೇಳೆ ದಾಳಿ ನಡೆಸಿದ್ದ ಎನ್ಸಿಬಿ ಆರ್ಯನ್ ಖಾನ್ರನ್ನು ಅ.3 ರಂದು ಬಂಧಿಸಿತ್ತು. ಆರ್ಯನ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಆರ್ಯನ್ ಖಾನ್ ಮತ್ತು ಇತರರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8 (ಸಿ), 20 (ಬಿ), 27, 28, 29 ಮತ್ತು 35 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಡ್ರಗ್ಸ್ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಆರ್ಯನ್ ಖಾನ್ ಬಂಧನದಲ್ಲಿರುವ ಹೊಸ ವಿಡಿಯೋ ಟ್ವೀಟ್ ಮಾಡಿದ ಶಿವಸೇನೆ ಸಂಸದ!