ತಾನು ಬಿಜೆಪಿಯಲ್ಲಿ ಇರುವುದರಿಂದ ಜಾರಿ ನಿರ್ದೇಶನಾಲಯ (ಇಡಿ) ನನ್ನನ್ನು ಬೆನ್ನಟ್ಟುವುದಿಲ್ಲ ಎಂದು ಮಹಾರಾಷ್ಟ್ರದ ಸಾಂಗ್ಲಿಯ ಬಿಜೆಪಿ ಸಂಸದರೊಬ್ಬರು ವಿವಾದ ಸೃಷ್ಟಿಸಿದ್ದಾರೆ.
ಸಾಂಗ್ಲಿಯಲ್ಲಿ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಸಂಸದ ಸಂಜಯ್ ಪಾಟೀಲ್, “ನಾನು ಐಷಾರಾಮಿ ಕಾರುಗಳನ್ನು ಖರೀದಿಸಲು ಬ್ಯಾಂಕ್ಗಳಿಂದ ಸಾಲ ತೆಗೆದುಕೊಳ್ಳುತ್ತೇನೆ. ಆದರೆ ನಾನು ಆಡಳಿತ ಪಕ್ಷದ ಸಂಸದನಾಗಿರುವುದರಿಂದ ಜಾರಿ ನಿರ್ದೇಶನಾಲಯವು ತನ್ನನ್ನು ಬೆನ್ನಟ್ಟುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರ್ಯನ್ ಖಾನ್ ಬಂಧನದಲ್ಲಿರುವ ಹೊಸ ವಿಡಿಯೋ ಟ್ವೀಟ್ ಮಾಡಿದ ಶಿವಸೇನೆ ಸಂಸದ!
2019 ರಲ್ಲಿ ಕಾಂಗ್ರೆಸ್ ತೊರೆದ ಹರ್ಷವರ್ಧನ್ ಪಾಟೀಲ್ ಅವರನ್ನು ಉಲ್ಲೇಖಿಸಿರುವ ಸಂಜಯ್ ಪಾಟಿಲ್, ಒಕ್ಕೂಟ ಸರ್ಕಾರದ ತನಿಖಾ ಏಜೆನ್ಸಿಗಳು ‘ವಿಚಾರಣೆಗಾಗಿ’ ಅವರ ಬೆನ್ನು ಬೀಳದ ಕಾರಣ ಅವರೀಗ ಚೆನ್ನಾಗಿ ನಿದ್ರೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಆಡಳಿತ ಪಕ್ಷಗಳಾದ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಒಕ್ಕೂಟ ಸರ್ಕಾವು ತಮ್ಮ ಸರ್ಕಾರದ ನಾಯಕರ ಮೇಲೆ ತನಿಖಾ ಸಂಸ್ಥೆಗಳನ್ನು ಬಿಟ್ಟು ತೊಂದರೆ ನೀಡುತ್ತಿದೆ ಎಂದು ಆರೋಪಿಸುತ್ತಲೆ ಇವೆ. ಈ ವೇಳೆಯೆ ಬಿಜೆಪಿ ಸಂಸದ ಸಂಜಯ್ ಪಾಟೀಲ್ ಹೇಳಿಕೆ ಹೊರ ಬಂದಿದ್ದು, ಪಕ್ಷವನ್ನು ತೀವ್ರ ಮುಜುಗರಕ್ಕೆ ಈಡಾಗುವಂತೆ ಮಾಡಿದೆ.
ಇದನ್ನೂ ಓದಿ: 2024ಕ್ಕೆ ರಾವಣನನ್ನು ಸಂಪೂರ್ಣವಾಗಿ ಸುಡುತ್ತೇವೆ: ಶಿವಸೇನೆ ಸಂಸದ ಸಂಜಯ್ ರಾವತ್