ಆನ್ಲೈನ್ ನ್ಯೂಸ್ ಪೋರ್ಟಲ್ ನ್ಯೂಸ್ ಕ್ಲಿಕ್ ವಿರುದ್ಧ ದಾಖಲಿಸಲಾದ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕವು ನ್ಯೂಸ್ಕ್ಲಿಕ್ನ ಸುಮಾರು 25 ಪತ್ರಕರ್ತರು ಮತ್ತು ದೇಣಿಗೆದಾರರನ್ನು ಎರಡನೇ ಬಾರಿಗೆ ವಿಚಾರಣೆ ನಡೆಸಿದೆ.
ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಇದುವರೆಗೆ ಯಾರಿಗೂ ಕ್ಲೀನ್ ಚಿಟ್ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅ.3ರಂದು ದೆಹಲಿ ಇತರೆಡೆ ನ್ಯೂಸ್ ಕ್ಲಿಕ್ ವೆಬ್ಸೈಟ್ಗೆ ಸಂಪರ್ಕ ಇರುವ ವ್ಯಕ್ತಿಗಳಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ದಾಳಿ ನಡೆಸಿದ ದಿನ 9 ಮಹಿಳಾ ಪತ್ರಕರ್ತರು ಸೇರಿದಂತೆ ಸುಮಾರು 46 ಜನರನ್ನು ವಿಚಾರಣೆ ನಡೆಸಲಾಗಿದೆ. ಇದರ ಬಳಿಕ ಎರಡನೇ ಸುತ್ತಿನ ವಿಚಾರಣೆಗೆ ಎಲ್ಲರನ್ನೂ ಕರೆಯಲಾಗಿತ್ತು. ಅವರಲ್ಲಿ ಸುಮಾರು 25 ಮಂದಿ ಇಲ್ಲಿಯವರೆಗೆ ಹಾಜರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 3 ರಂದು ದೆಹಲಿ ಪೊಲೀಸರು ಪೋರ್ಟಲ್ನ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಹೆಚ್ಆರ್(HR) ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಿದ್ದರು. ನ್ಯೂಸ್ಕ್ಲಿಕ್ ಕಚೇರಿ ಮತ್ತು ಸಂಸ್ಥೆಗೆ ಸಂಬಂಧಿಸಿದ ಪತ್ರಕರ್ತರ ನಿವಾಸಗಳಿಂದ 300ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದರು.
ಎಲೆಕ್ಟ್ರಾನಿಕ್ ಸಾಧನಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ (ಫೊರೆನ್ಸಿಕ್ ಸೈನ್ಸ್ ಲ್ಯಾಬ್) ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 4 ರಂದು ಪುರ್ಕಾಯಸ್ಥ ಮತ್ತು ಚಕ್ರವರ್ತಿಯವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ದೆಹಲಿ ಪೊಲೀಸರು ಸಲ್ಲಿಸಿದ ಮಾಹಿತಿ ಪ್ರಕಾರ, ನೆವಿಲ್ಲೆ ರಾಯ್ ಸಿಂಗಮ್, ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಪರಸ್ಪರ ನೇರ ಸಂಪರ್ಕದಲ್ಲಿದ್ದರು ಮತ್ತು ಕಾಶ್ಮೀರವಿಲ್ಲದೆ ಭಾರತದ ನಕ್ಷೆಯನ್ನು ಹೇಗೆ ರಚಿಸುವುದು ಮತ್ತು ಅರುಣಾಚಲ ಪ್ರದೇಶವನ್ನು ವಿವಾದಿತ ಪ್ರದೇಶವೆಂದು ತೋರಿಸುವುದು ಹೇಗೆ ಎಂದು ಇವರು ಚರ್ಚಿಸುತ್ತಿರುವುದು ಕಂಡುಬಂದಿದೆ. ಈ ಉದ್ದೇಶವನ್ನು ಸಾಧಿಸಲು ಆರೋಪಿಗಳು ವಿದೇಶಿ ನಿಧಿಯ ಹೆಸರಿನಲ್ಲಿ ಪಿಪಿಕೆ ನ್ಯೂಸ್ಕ್ಲಿಕ್, ಜಿಸ್ಪಾನ್ ಇಂಡಿಯಾ, ಜೆಜೆ ಎಂಟರ್ಪ್ರೈಸಸ್, ವರ್ಚುನೆಟ್ ಸಿಸ್ಟಮ್ ಹೆಸರಿನ ಕಂಪನಿಗಳಲ್ಲಿ 115 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಪುರಕಾಯಸ್ಥ ಮತ್ತು ಚಕ್ರವರ್ತಿಯವರ 7 ದಿನಗಳ ಪೊಲೀಸ್ ಕಸ್ಟಡಿ ಇಂದು ಮುಕ್ತಾಯವಾಗಿದೆ. ಇಬ್ಬರು ಆರೋಪಿಗಳನ್ನು ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಮತ್ತು ಅವರ ಬಂಧನವನ್ನು ವಿಸ್ತರಿಸಲು ತನಿಖಾಧಿಕಾರಿಗಳು ಕೋರುವ ಸಾಧ್ಯತೆ ಇದೆ.
ಇದನ್ನು ಓದಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ನಿವಾಸದ ಮೇಲೆ ಇಡಿ ದಾಳಿ