ವಿದೇಶಗಳಲ್ಲಿ ಭಾರತೀಯ ರಾಯಭಾರಿ ಕಚೇರಿಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದ ಆರೋಪದಲ್ಲಿ 43 ಖಲಿಸ್ತಾನಿ ಬೆಂಬಲಿಗರನ್ನು ಭಾರತೀಯ ತನಿಖಾ ಸಂಸ್ಥೆ ಎನ್ಐಎ ಪತ್ತೆ ಹಚ್ಚಿದೆ. ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನಲ್ಲಿ ಮಾ.19ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ಭಾಗಿಯಾದ ಮತ್ತು ಜು.2ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದ ಆರೋಪದಲ್ಲಿ 43 ಖಲಿಸ್ತಾನಿ ಬೆಂಬಲಿಗರನ್ನು ಪತ್ತೆಹಚ್ಚಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೇಳಿಕೊಂಡಿದೆ.
NIA ಪ್ರಕಾರ, ಒಟ್ಟಾವಾ ಮತ್ತು ಲಂಡನ್ನಲ್ಲಿರುವ ಭಾರತದ ಹೈಕಮಿಷನ್ಗಳ ಮೇಲಿನ ದಾಳಿಗಳು, ಹಾಗೆಯೇ ಸ್ಯಾನ್ ಫ್ರಾನ್ಸಿಸ್ಕೋ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಮತ್ತು USನಲ್ಲಿ ಭಾರತದ ಕಚೇರಿಗಳ ಮೇಲಿನ ದಾಳಿಯ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ವಿದೇಶದಲ್ಲಿ ಭಾರತೀಯ ಕಚೇರಿಗಳ ಮೇಲಿನ ದಾಳಿಯ ಹಿಂದಿನ ಪಿತೂರಿಯನ್ನು ಬಿಚ್ಚಿಡುವ ಎನ್ಐಎ ಪ್ರಯತ್ನಗಳ ಭಾಗವಾಗಿ 50ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ. ಈ ದಾಳಿಗಳು ವಿದೇಶಗಳಲ್ಲಿನ ಭಾರತೀಯ ಹಿತಾಸಕ್ತಿಗಳ ವಿರುದ್ಧದ ಅಪರಾಧಗಳ ಮೇಲೆ NIA ಗಮನಹರಿಸುವುದರ ಭಾಗವಾಗಿತ್ತು ಎಂದು ಎನ್ಐಎಎ ತಿಳಿಸಿದೆ.
ದಾಳಿಗಳಲ್ಲಿ ಕ್ರಿಮಿನಲ್ ಅತಿಕ್ರಮಣ, ವಿಧ್ವಂಸಕ ಕೃತ್ಯ, ಸಾರ್ವಜನಿಕ ಆಸ್ತಿಗಳಿಗೆ ಹಾನಿ, ಮತ್ತು ಭಾರತೀಯ ಅಧಿಕಾರಿಗಳಿಗೆ ನೋವುಂಟುಮಾಡುವ ಪ್ರಯತ್ನಗಳು ಮತ್ತು ಭಾರತೀಯ ಕಟ್ಟಡವನ್ನು ಹಾನಿಗೊಳಿಸುವ ಪ್ರಯತ್ನಗಳನ್ನು ಮಾಡಲಾಗಿದೆ. NIA ಈ ಬಗ್ಗೆ ಹಲವಾರು ವಿಧಾನಗಳನ್ನು ಬಳಸಿ ತನಿಖೆ ನಡೆಸಿದ್ದು,
43 ಜನರನ್ನು ಶಂಕಿತರು ಎಂದು ಗುರುತಿಸಿಕೊಂಡಿದೆ ಎಂದು ಹೇಳಿಕೊಂಡಿದೆ.
ಎನ್ಐಎ ಇತ್ತೀಚಿನ ತಿಂಗಳುಗಳಲ್ಲಿ ಈ ಪ್ರಕರಣಗಳ ಬಗ್ಗೆ ತನ್ನ ತನಿಖೆಯನ್ನು ಚುರುಕುಗೊಳಿಸಿದೆ ಮತ್ತು ದಾಳಿಯ ಸಂಚಿನ ಭಾಗವೆಂದು ಶಂಕಿಸಲಾದ ಭಾರತದಲ್ಲಿನ 80ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ಐಎ ವಕ್ತಾರರು ತಿಳಿಸಿದ್ದಾರೆ.
ಇನ್ನು NIA 2023ರಲ್ಲಿ 625 ಜನರನ್ನು ಬಂಧಿಸಿದೆ. 2022ರಲ್ಲಿ 490 ಮಂದಿಯನ್ನು ಬಂಧಿಸಿತ್ತು. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸುಮಾರು 28 ಪ್ರತಿಶತದಷ್ಟು ಹೆಚ್ಚಾಗಿದೆ. 625 ಬಂಧನದಲ್ಲಿ 65 ಮಂದಿ ಐಸಿಸ್ ಪ್ರಕರಣಗಳಲ್ಲಿ, 114 ಮಂದಿ ಭಯೋತ್ಪಾದನೆ ಪ್ರಕರಣಗಳಲ್ಲಿ, 45 ಮಂದಿಯನ್ನು ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ, 28 ಭಯೋತ್ಪಾದಕ ಕೃತ್ಯಗಳಡಿಯಲ್ಲಿ ಬಂಧಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯವು 2018- 2023ರವರೆಗೆ 324 ಪ್ರಕರಣಗಳನ್ನು NIA ಗೆ ಹಸ್ತಾಂತರಿಸಿದೆ. 2022ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ 10.53 ಕೋಟಿ ಮೌಲ್ಯದ 37 ಆಸ್ತಿಗಳನ್ನು ವಶಪಡಿಸಿಕೊಂಡಿದೆ. 2023ರಲ್ಲಿ ಅದು 240ಕ್ಕೆ ಏರಿಕೆಯಾಗಿದೆ. ಇದರಲ್ಲಿ 156 ಬ್ಯಾಂಕ್ ಖಾತೆಗಳ ಒಟ್ಟು 55.90 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಆಸ್ತಿಗಳು ಭಯೋತ್ಪಾದನೆ, ಸ್ಫೋಟಕಗಳು ಮತ್ತು ಇತರ ಮಹತ್ವದ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಶಂಕಿತರ ಒಡೆತನದಲ್ಲಿದೆ. ಇವುಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದನ್ನು ಓದಿ: ಬಿಜೆಪಿ ನಾಯಕನ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ದಲಿತ ರೈತರಿಗೆ ‘ED’ಯಿಂದ ಸಮನ್ಸ್!