ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮಾವೋವಾದಿಗಳ ಜೊತೆಗಿನ ಲಿಂಕ್ ಕುರಿತ ತನಿಖೆಯ ಭಾಗವಾಗಿ ಎನ್ಐಎ ಅಧಿಕಾರಿಗಳು ನಾಗರಿಕ ಹಕ್ಕುಗಳ ಸಂಘಟನೆಗಳ ನಾಯಕರ ಮತ್ತು ಸಾಮಾಜಿಕ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ನಾಗರಿಕ ಹಕ್ಕುಗಳ ಕಾರ್ಯಕರ್ತರು ಮತ್ತು ಅಮರುಳ ಬಂಧು ಮಿತ್ರರ ಸಂಘ, ಕುಲ ನಿರ್ಮೂಲನ ಹೋರಾಟ ಸಮಿತಿ (ಕೆಎನ್ಪಿಎಸ್), ಚೈತನ್ಯ ಮಹಿಳಾ ಸಂಘದ ನಾಯಕರು ಮತ್ತು ಅವರ ಸಂಬಂಧಿಕರ ಮನೆಗಳಲ್ಲಿ ಎನ್ಐಎ ಅಧಿಕಾರಿಗಳು ಮುಂಜಾನೆಯೇ ಶೋಧ ಆರಂಭಿಸಿದ್ದಾರೆ. ಶೋಧಕ್ಕೊಳಗಾದ ಕೆಲವರನ್ನು ಎನ್ಐಎ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ ಎಂದು ಹೇಳಲಾಗಿದೆ.
ಮಾವೋವಾದಿಗಳ ಜೊತೆಗಿನ ನಂಟು ಹೊಂದಿದ್ದಾರೆಂದು ಆರೋಪಿಸಿ ಎನ್ಐಎ ದಾಳಿ ನಡೆದಿದೆ ಎಂದು ಹೇಳಲಾಗದೆ. ಎನ್ಐಎ ಅಧಿಕಾರಿಗಳು ಶೋಧದ ಬಳಿಕ ಸಿಆರ್ಪಿಸಿಯ ಸೆಕ್ಷನ್ 160ರಡಿಯಲ್ಲಿ ಕೆಲವರಿಗೆ ನೋಟಿಸ್ಗಳನ್ನು ನೀಡಿದ್ದಾರೆ.
ನವೆಂಬರ್ 2020ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಗ್ರಾಮಾಂತರ ಪೊಲೀಸರು ಬಂಧಿಸಿದ ಪಾಂಗಿ ನಾಗಣ್ಣ ಎಂಬ ಟಿವಿ ಪತ್ರಕರ್ತನಿಗೆ ಸಂಬಂಧಿಸಿದ ಮುಂಚಿಂಗಿಪುಟ್ಟು ಪ್ರಕರಣಕ್ಕೆ ಸಂಬಂಧಿಸಿ ಈ ಶೋಧ ನಡೆದಿದೆ ಎಂದು ಹೇಳಲಾಗಿದೆ.
ಪೊಲೀಸರು ನಾಗಣ್ಣ ಮತ್ತು ಇತರ 63 ಮಂದಿ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಮಾನವ ಹಕ್ಕುಗಳ ವೇದಿಕೆಯ ವಿ.ಎಸ್.ಕೃಷ್ಣ, ಎಪಿ ನಾಗರಿಕ ಸ್ವಾತಂತ್ರ್ಯ ಸಮಿತಿಯ ವಕೀಲ ವಿ.ರಘುನಾಥ್, ಚಿಲುಕಾ ಚಂದ್ರಶೇಖರ್, ಡಪ್ಪು ರಮೇಶ್, ವಿರಾಸಂನ ವರಲಕ್ಷ್ಮಿ ಸೇರಿದಂತೆ ಅನೇಕ ಕಾರ್ಯಕರ್ತರನ್ನು ವಿಶಾಖಪಟ್ಟಣ ಗ್ರಾಮಾಂತರ ಪೊಲೀಸರು ದಾಖಲಿಸಿದ ಎಫ್ಐಆರ್ನಲ್ಲಿ ಹೆಸರಿಸಲಾಗಿತ್ತು.
ಹೈದರಾಬಾದ್ನಲ್ಲಿರುವ ಸಾಮಾಜಿಕ ಕಾರ್ಯಕರ್ತೆ ಭವಾನಿ ಮತ್ತು ವಕೀಲ ಸುರೇಶ್ ಅವರ ಮನೆಗಳಲ್ಲಿ ಎನ್ಐಎ ತಂಡ ಶೋಧ ನಡೆಸಿದೆ. ಆಂಧ್ರಪ್ರದೇಶದ ಗುಂಟೂರು, ವಿಜಯವಾಡ, ಪೊನ್ನೂರು, ಮಂಗಳಗಿರಿ, ಬಾಪಟ್ಲಾ, ನೆಲ್ಲೂರು, ತಿರುಪತಿ, ಅನಂತಪುರ ಸೇರಿ ವಿವಿಧೆಡೆ ಶೋಧ ಕಾರ್ಯ ನಡೆದಿದೆ.
ಎನ್ಐಎ ಅಧಿಕಾರಿಗಳು ಗುಂಟೂರು ಜಿಲ್ಲಾ ನಾಗರಿಕ ಸ್ವಾತಂತ್ರ್ಯ ಸಮಿತಿ ಅಧ್ಯಕ್ಷ ರಾಜಾ ರಾವ್ ಅವರ ಪೊನ್ನೂರಿನ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ಪ್ರಜಾ ತಂತ್ರ ಪಕ್ಷವನ್ನು ನಡೆಸುತ್ತಿರುವ ಅವರ ಸ್ನೇಹಿತ ಟಿ ಸುಬ್ಬರಾವ್ ಅವರ ನಿವಾಸದಲ್ಲೂ ಶೋಧ ನಡೆಸಿದ್ದಾರೆ. ನೆಲ್ಲೂರಿನಲ್ಲಿ ಯಳ್ಳಂಕಿ ವೆಂಕಟೇಶ್ವರಲು, ತಿರುಪತಿಯ ಕ್ರಾಂತಿ ಚೈತನ್ಯ ಮತ್ತು ತಿರುಪತಿಯ ಕವಲಿ ಬಾಲಯ್ಯ ಅವರ ಮನೆಗಳಲ್ಲೂ ಶೋಧ ಕಾರ್ಯ ನಡೆದಿದೆ.
ಇದನ್ನು ಓದಿ: ಜಾತಿಗಣತಿ ವರದಿ ಬಿಡುಗಡೆಗೊಳಿಸಿದ ಬಿಹಾರ