ಜೆಡಿಯು ಪಕ್ಷವು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಮರುಸೇರ್ಪಡೆಯಾಗಲಿದೆ ಎನ್ನುವ ಮಾಧ್ಯಮಗಳ ವರದಿಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಳ್ಳಿಹಾಕಿದ್ದಾರೆ.
ಒಂದು ವರ್ಷದ ಹಿಂದೆ ಎನ್ಡಿಎದೊಂದಿಗಿನ ಜೆಡಿಯು ಸಂಬಂಧವನ್ನು ಮುರಿದುಕೊಂಡಿದೆ. ಇದೀಗ ವಿರೋಧ ಪಕ್ಷಗಳ ಒಕ್ಕೂಟ INDIAವನ್ನು ಬಲಪಡಿಸುವುದು ನಮ್ಮ ಪ್ರಧಾನ ಕೆಲಸವಾಗಿದೆ ಎಂದು ಅವರು ಹೇಳಿದ್ದಾರೆ.
ಊಹಾಪೋಹಗಳ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕುಮಾರ್, “ಕ್ಯಾ ಫಲ್ತು ಬಾತ್ ಹೈ” (ಏನು ಕೆಲಸಕ್ಕೆ ಬಾರದ ಪ್ರಶ್ನೆ ಕೇಳುತ್ತೀರಿ) ಎಂದಿದ್ದಾರೆ.
INDIA ಒಕ್ಕೂಟದ ಪ್ರಮುಖ ವ್ಯಕ್ತಿಯಾಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಪ್ರಧಾನಿ ಅಭ್ಯರ್ಥಿಯಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ತಮ್ಮದೇ ಪಕ್ಷದ ನಾಯಕರೊಬ್ಬರು ಹೇಳಿರುವ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿದರು.
”ಇಂತಹ ಹೇಳಿಕೆಗಳನ್ನು ನೀಡಬೇಡಿ ಎಂದು ನಾನು ಈಗಾಗಲೇ ನನ್ನ ಪಕ್ಷದ ಸಹೋದ್ಯೋಗಿಗಳಿಗೆ ಹೇಳಿದ್ದೇನೆ. INDIA ಮೈತ್ರಿಕೂಟದ ಏಕತೆಯನ್ನು ಬಲಪಡಿಸುವುದು ನನ್ನ ಏಕೈಕ ಆಶಯವಾಗಿದೆ. ನಾನು ಆ ನಿಟ್ಟಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದೇನೆ” ಎಂದು ಅವರು ಹೇಳಿದರು.
ಬಿಹಾರ ವಿಧಾನಸಭೆಯ ಉಪ ಸ್ಪೀಕರ್ ಮತ್ತು ಹಿರಿಯ ಜೆಡಿಯು ನಾಯಕ ಮಹೇಶ್ವರ್ ಹಜಾರಿ ಅವರು ”INDIA ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲು ನಿತೀಶ್ ಕುಮಾರ್ಗಿಂತ ಹೆಚ್ಚು ಸಮರ್ಥರು ಯಾರಿಲ್ಲ” ಎಂದು ಹೇಳಿದ್ದಾರೆ.
ಇತ್ತೀಚೆಗೆ ಲೋಕಸಭೆಯಲ್ಲಿ ಬಿಎಸ್ಪಿ ಶಾಸಕ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಅವಹೇಳನಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರ್, ”ಈ ವಿಷಯ ಬಿಡಿ, ನಮ್ಮ ಸರ್ಕಾರ ಸಮಾಜದ ಎಲ್ಲಾ ವರ್ಗಗಳ ಒಳಿತಿಗಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಇದನ್ನೂ ಓದಿ: ‘ನನ್ನ ಟಿಕೆಟ್ ರದ್ದುಗೊಳಿಸುವ ಧೈರ್ಯ ಯಾರಿಗಿದೆ?’: ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ಭೂಷಣ್ ಸಿಂಗ್