ಇತ್ತೀಚೆಗಷ್ಟೇ ಮಹಾ ಘಟಬಂಧನ್ ತೊರೆದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಹಿಂದಿನ ಮೈತ್ರಿಕೂಟವಾದ ಎನ್ಡಿಎಗೆ ಮರು ಸೇರ್ಪಡೆಗೊಂಡಿದ್ದಾರೆ. ತಮ್ಮ ಮೇಲಿನ ಟೀಕೆಗಳಿಗೆ ಉತ್ತರಿಸಿರುವ ಅವರು, ‘ಇನ್ಮುಂದೆ ಇಧರ್ ಉಧರ್ (ಇಲ್ಲಿ ಮತ್ತು ಅಲ್ಲಿ) ಇಲ್ಲ; ಎನ್ಡಿಎ ಮೈತ್ರಿಕೂಟಕ್ಕೆ ವಾಪಸ್ ಬಂದಿದ್ದು, ಬಿಜೆಪಿಯಿಂದಿಗೆ ಶಾಶ್ವತವಾಗಿ ಉಳಿಯುತ್ತೇವೆ’ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ‘ನಾವು (ಬಿಜೆಪಿ-ಜೆಡಿಯು) ಒಟ್ಟಿಗೆ ಇದ್ದೇವೆ ಎಂದು ನಾನು ಈಗಾಗಲೇ ನಿಮಗೆ ಹೇಳಿದ್ದೇನೆ, ಮಧ್ಯದಲ್ಲಿ ಎರಡು ಬಾರಿ ನಾನು “ಇಧರ್ ಉಧರ್” ಹೋಗಿದ್ದೆ. ಆದರೆ ಈಗ ಮತ್ತೊಮ್ಮೆ ನಾನು “ಉಧರ್” ಬಂದಿದ್ದೇನೆ. ನಾನು ಈಗ ಶಾಶ್ವತವಾಗಿ ಅವರೊಟ್ಟಿಗೆ ಇರುತ್ತೇನೆ’ ಎಂದರು.
ನಿನ್ನೆ ದೆಹಲಿಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರೊಂದಿಗೆ ನಡೆದ ಸಭೆಯಲ್ಲಿ ವಿಶೇಷ ಪ್ಯಾಕೇಜ್ನ ವಿಷಯವನ್ನು ಪ್ರಸ್ತಾಪಿಸಿದ್ದೀರಾ ಎಂಬ ಪ್ರಶ್ನೆಗೆ, ‘ನಮ್ಮ ಬಗ್ಗೆ ಚಿಂತಿಸಬೇಡಿ, 2005 ರಿಂದ ಬಿಹಾರದ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಅಂದಿನಿಂದ ಕೆಲಸಗಳು ನಡೆಯುತ್ತಿವೆ, ಆದ್ದರಿಂದ ನೀವು ಚಿಂತಿಸಬೇಕಾಗಿಲ್ಲ. ಎಲ್ಲ ಚರ್ಚೆಗಳು ಬಹಳ ಚೆನ್ನಾಗಿ ಮಾಡಲಾಗಿದೆ’ ಎಂದು ನಿತೀಶ್ ಕುಮಾರ್ ಹೇಳಿದರು.
ಬಿಜೆಪಿಯೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿದ ನಂತರ ನಿತೀಶ್ ಕುಮಾರ್ ಮೊದಲ ಬಾರಿಗೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಎಕ್ಸ್ನಲ್ಲಿ ಹಂಚಿಕೊಂಡಿರುವ ಗೃಹ ಸಚಿವ ಅಮಿತ್ ಶಾ, ‘ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭೇಟಿಯಾದರು. ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಎನ್ಡಿಎ ಸರ್ಕಾರವು ಬಿಹಾರದಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ತ್ವರಿತಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಈಗ ಶಾಶ್ವತವಾಗಿ ಎನ್ಡಿಎ ಜೊತೆ ಇರುತ್ತೇನೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿನ ಸೀಟು ಹಂಚಿಕೆ ಕುರಿತು ಮಾತನಾಡಿ, ‘ಈ ಬಗ್ಗೆ ಚರ್ಚಿಸುವುದರ ಹಿಂದೆ ಯಾವುದೇ ತರ್ಕವಿಲ್ಲ, ಸೀಟು ಹಂಚಿಕೆ ಮಾಡಲಾಗುತ್ತದೆ. ಅವರಿಗೆ ಮೊದಲಿನಿಂದಲೂ ತಿಳಿದಿದೆ’ ಎಂದು ಹೇಳಿದರು.
ಬಿಹಾರದಲ್ಲಿ ಬಿಜೆಪಿ ಬೆಂಬಲದೊಂದಿಗೆ ಹೊಸ ಸರ್ಕಾರ ರಚಿಸಲು ಮಹಾಘಟಬಂಧನ್ (ಮಹಾ ಮೈತ್ರಿ) ಮತ್ತು ಇಂಡಿಯಾ ಬಣವನ್ನು ತ್ಯಜಿಸಿದ ನಂತರ ಜನತಾ ದಳ (ಯುನೈಟೆಡ್) ಮುಖ್ಯಸ್ಥರ ಮೊದಲ ಭೇಟಿ ಇದಾಗಿದೆ.
ಇದನ್ನೂ ಓದಿ; ಉತ್ತರಾಖಂಡ ಹಿಂಸಾಚಾರ: ನಾಲ್ವರು ಸಾವು, 100ಕ್ಕೂ ಅಧಿಕ ಜನರಿಗೆ ಗಾಯ