ಉತ್ತರಾಖಂಡದ ನೈನಿತಾಲ್ ಜಿಲ್ಲೆ ಹಲ್ದ್ವಾನಿಯ ಬಂಭೂಲ್ಪುರದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಮದ್ರಸಾ ಮತ್ತು ಮಸೀದಿಯ ತೆರವು ಕಾರ್ಯಾಚರಣೆ ವೇಳೆ ಗುರುವಾರ ಘರ್ಷಣೆ ಸಂಭವಿಸಿದೆ.
ಘಟನೆಯಲ್ಲಿ ಇದುವರೆಗ ನಾಲ್ವರು ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಪೊಲೀಸರು ಮತ್ತು ಕಟ್ಟಡ ತೆರವು ಕಾರ್ಯಾಚರಣೆಗೆ ತೆರಳಿದ್ದ ಮುನ್ಸಿಪಲ್ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ.
ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರದ ನಡುವೆ, ಅರೆಸೇನಾ ಪಡೆಯ ನಾಲ್ಕು ತುಕಡಿಗಳನ್ನು ನಿಯೋಜಿಸಿ ಅಧಿಕಾರಿಗಳು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಸ್ತುತ ಹಲ್ದ್ವಾನಿಯಲ್ಲಿ ಜಿಲ್ಲಾಡಳಿತ ಕರ್ಫ್ಯೂ ವಿಧಿಸಿದ್ದು, ಕಂಡಲ್ಲಿ ಗುಂಡು ಆದೇಶ ಹೊರಡಿಸಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಇಂದು ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬಂಭೂಲ್ಪುರದಲ್ಲಿ ಹಿಂಸಾಚಾರದ ನಡೆದಿದ್ದರೂ, ಉತ್ತರಾಖಂಡ ಸರ್ಕಾರ ಇಡೀ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಮೀನಾ, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದ್ರಸಾಕ್ಕೆ ಈ ಹಿಂದೆಯೇ ನೋಟಿಸ್ ನೀಡಲಾಗಿತ್ತು ಎಂದಿದ್ದಾರೆ.
ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಅವರು ಮಾತನಾಡಿ, ಬಂಭೂಲ್ಪುರ ಪೊಲೀಸ್ ಠಾಣೆಯ ಹೊರಗೆ ನಡೆದ ಹಿಂಸಾಚಾರದಲ್ಲಿ ಕೆಲವರು ಗುಂಡು ಹಾರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಅವರು ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಯೇ ಅಥವಾ ಅವರ ನಡುವಿನ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಯೇ ಎಂದು ತಿಳಿದು ಬರಬೇಕಿದೆ ಎಂದು ಹೇಳಿದ್ದಾರೆ.
ಸ್ಥಳೀಯರು ಬಂಭೂಲ್ಪುರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದರು. ಆ ಸಮಯದಲ್ಲಿ ಪೊಲೀಸರು ಠಾಣೆಯಲ್ಲಿ ಇದ್ದರು. ಪೊಲೀಸ್ ಪಡೆ ಉದ್ರಿಕ್ತರನ್ನು ನಿಯಂತ್ರಿಸಿದೆ, ಠಾಣೆಗೆ ಒಳಗಡೆ ನುಗ್ಗಲು ಅವಕಾಶ ನೀಡಿಲ್ಲ. ನಂತರ ಹಿಂಸಾಚಾರ ಬಂಭೂಲ್ಪುರದ ಬಳಿಯ ಗಾಂಧಿ ನಗರ ಪ್ರದೇಶಕ್ಕೆ ಹರಡಿದೆ” ಎಂದು ಡಿಎಂ ವಂದನಾ ತಿಳಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಮರ ಮನೆ, ಪ್ರಾರ್ಥನಾ ಸ್ಥಳಗಳ ‘ಕಾನೂನುಬಾಹಿರ ಧ್ವಂಸ’ವನ್ನು ತಕ್ಷಣ ನಿಲ್ಲಿಸಿ: ಅಮ್ನೆಸ್ಟಿ ಇಂಟರ್ನ್ಯಾಶನಲ್