ಆನ್ಲೈನ್ ಶಿಕ್ಷಣ ನಿಲ್ಲಿಸಬೇಕು, ತಾರತಮ್ಯ ತಡೆಗಟ್ಟಬೇಕು, ಪರೀಕ್ಷೆ ರದ್ದುಪಡಿಸಬೇಕು, ಉದ್ಯೋಗ ಸೃಷ್ಟಿಗೆ ಮುಂದಾಗಬೇಕು, ಬೆಲೆ ಇಳಿಕೆ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಜುಲೈ 08ರಂದು ರಾಜ್ಯಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗೆ SFI ರಾಜ್ಯ ಸಮಿತಿ ಕರೆ ನೀಡಿದೆ.
ಈ ಕುರಿತು SFI ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ.ಕೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಕೋವಿಡ್-19 ರಭಸವಾಗಿ ಹರಡುತ್ತಿರುವ ಈ ಸಮಯದಲ್ಲಿ ವಿಶ್ವವಿದ್ಯಾಲಯ, ಹಾಸ್ಟೆಲ್ಗಳನ್ನು ಕೋವಿಡ್ ಆಸ್ಪತ್ರೆ, ಕ್ವಾರೆಂಟೈನ್ ಕೇಂದ್ರಗಳಾಗಿ ಬದಲಾಯಿಸಿರುವುದರಿಮದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ರಕ್ಷಣೆಯ ಹೊಣೆಗಾರಿಕೆ ಅರಿತು ಸರ್ಕಾರ ಎಲ್ಲಾ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಎಸ್ಎಫ್ಐ ಆಗ್ರಹಿಸಿದೆ.
ಆರು ತಿಂಗಳ ಕಾಲ ವಿದ್ಯಾರ್ಥಿಗಳ ಎಲ್ಲ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು. ಸೆಮಿಸ್ಟರ್ ಶುಲ್ಕ, ಅಭಿವೃದ್ಧಿ ಶುಲ್ಕ, ಪರೀಕ್ಷಾ ಶುಲ್ಕ, ಹಾಸ್ಟೆಲ್ ಶುಲ್ಕಗಳನ್ನು ಲಾಕ್ಡೌನ್ ಸಮಯದಲ್ಲಿ ಯಾವುದೇ ಶೈಕ್ಷಣಿಕ ಶುಲ್ಕಗಳನ್ನು ವಿದ್ಯಾರ್ಥಿಗಳಿಗೆ ವಿಧಿಸಬಾರದು. ಅಭಿವೃದ್ಧಿ ಶುಲ್ಕ, ಪ್ರವೇಶ ಶುಲ್ಕ ಇತ್ಯಾದಿಗಳ ಹೆಸರಿನಲ್ಲಿ ಯಾವುದೇ ಶೋಷಣೆ ಇರಬಾರದು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.
ಮಕ್ಕಳು ಹಸಿವಿನಿಂದ ನರಳುವುದನ್ನು ನಿಲ್ಲಿಸಬೇಕು. ಹನ್ನೆರಡನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡಬೇಕು. ಇಲ್ಲವೇ ಕೇರಳ ರಾಜ್ಯ ಸರ್ಕಾರದ ಮಾದರಿಯಲ್ಲಿ ಸರ್ಕಾರವು ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 10 ಕೆಜಿ ಉಚಿತ ಆಹಾರ ಧಾನ್ಯಗಳನ್ನು 6 ತಿಂಗಳವರೆಗೆ ನೀಡಬೇಕು ಎಂದು ಹೇಳಿಕೆ ತಿಳಿಸಿದೆ.
ಆನ್ ಲೈನ್ ಶಿಕ್ಷಣವನ್ನು ಕಡ್ಡಾಯಗೊಳಿಸುವುದು ಸರಿಯಲ್ಲ. ಇದರಿಂದ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ವ್ಯಾಪಾರೀಕರಣ ಆಗುತ್ತದೆ. ಇದರ ಪರಿಣಾಮವಾಗಿ ಸಾರ್ವಜನಿಕ ಶಿಕ್ಷಣ, ಮುಖಾಮುಖಿ ಬೋಧನಾ ವಿಧಾನ, ಕ್ಯಾಂಪಸ್ಗಳಲ್ಲಿ ಸಿಗುವ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಶಿಕ್ಷಣದ ಹಕ್ಕುಗಳನ್ನು ದುರ್ಬಲಗೊಳಿಸುವ ಹುನ್ನಾರ ಅಡಗಿದೆ.
ಕೋವಿಡ್ -19 ಸಾಂಕ್ರಾಮಿಕ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಅಡೆತಡೆಗಳ ಅವಧಿಯಲ್ಲಿ, ಶೈಕ್ಷಣಿಕ ವರ್ಷವನ್ನು ಅಡ್ಡಿಪಡಿಸದಂತೆ ಆನ್ ಲೈನ್ ವಿಧಾನಗಳನ್ನು ಬಳಸಿಕೊಳ್ಳಬಹುದು. ಆದರೆ ಇದು ಶಾಶ್ವತ ಪರ್ಯಾಯವಾಗಲು ಸಾಧ್ಯವಿಲ್ಲ. ಸಂಬಂಧಪಟ್ಟ ಪ್ರದೇಶದ ಎಲ್ಲ ವಿದ್ಯಾರ್ಥಿಗಳಿಂದ ಡಿಜಿಟಲ್ ಸಾಧನಗಳಿಗೆ ಸಾರ್ವತ್ರಿಕ ಪ್ರವೇಶವಿದ್ದಲ್ಲಿ ಮಾತ್ರ ಇದನ್ನು ಬಳಸಿಕೊಳ್ಳಬೇಕು. ಶಿಕ್ಷಣದಲ್ಲಿ ಯಾವುದೇ ಡಿಜಿಟಲ್ ತಾರತಮ್ಯವನ್ನು ಎಸ್ಎಫ್ಐ ವಿರೋಧಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಳಸಮುದಾಯದ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಫೆಲೋಶಿಪ್ ವಿತರಿಸಬೇಕು. ಶಿಕ್ಷಣ ಸಂಸ್ಥೆಗಳು/ವಿದ್ಯಾಲಯಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರು, ಉಪನ್ಯಾಸಕರು ಎಲ್ಲಾ ಕಾರ್ಮಿಕರ ಬಾಕಿ ಇರುವ ವೇತನಗಳನ್ನು ಶೀಘ್ರವಾಗಿ ಪಾವತಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.
ಕೋವಿಡ್-19 ಪರೀಕ್ಷೆಗಳನ್ನು ಉಚಿತವಾಗಿ ಮಾಡಬೇಕು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನಿಲ್ಲಿಸಬೇಕು, ಉದ್ಯೋಗ ಸೃಷ್ಟಿಸಲು, ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದೆ ಎಂದು ವಾಸುದೇವರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: 16 ತಿಂಗಳಿಂದ ಬಾರದ ಶಿಷ್ಯವೇತನ: ದಾವಣಗೆರೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ 7ನೇ ದಿನಕ್ಕೆ