ಕೇರಳದಲ್ಲಿ ಈಗಲೇ ವಿಧಾನಸಭಾ ಚುನಾವಣೆ ನಡೆದರೂ ಸಿಪಿಎಂ ನೇತೃತ್ವದ ಎಲ್.ಡಿ.ಎಫ್ ಎಡರಂಗ ಸರ್ಕಾರವೇ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಏಷ್ಯಾನೆಟ್ – ಸಿಫೋರ್ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಸಿಎಂ ಯಾರಾಗಬೇಕು ಎಂಬ ಪ್ರಶ್ನೆಗೆ ಶೇಕಡ 27ರಷ್ಟು ಜನರು ಪಿಣರಾಯಿ ವಿಜಯನ್ಗೆ ಜೈ ಅಂದಿದ್ದಾರೆ.
ಕೇರಳದಲ್ಲಿ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಸಮೀಕ್ಷೆ ನಡೆಸಿರುವ ಏಷ್ಯಾನೆಟ್-ಸಿಫೋರ್ ಸಂಸ್ಥೆಗಳು ಕೇರಳದಲ್ಲಿ ಮತ್ತೆ ಎಡರಂಗ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಈಗ ಚುನಾವಣೆ ನಡೆದರೂ ಎಡರಂಗ 77-83 ಸೀಟುಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದರು.
ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳ ಪೈಕಿ ಸರಳ ಬಹುಮತ ಪಡೆದು ಮತ್ತೆ ಎಲ್.ಡಿ.ಎಫ್ ಅಧಿಕಾರಕ್ಕೆ ಏರಲಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 54-60 ಸ್ಥಾನಗಳನ್ನು ಪಡೆದರೆ, ಬಿಜೆಪಿ 3 ರಿಂದ 7 ಸ್ಥಾನ ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.
ಸಿಪಿಎಂ ನೇತೃತ್ವದ ಎಲ್.ಡಿ.ಎಫ್ ಶೇಕಡ 42ರಷ್ಟು ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶೇ.39ರಷ್ಟು ಮತ ಪಡೆಯಲಿದೆ. ಬಿಜೆಪಿ ನೇತೃತ್ವದ ಎನ್.ಡಿ.ಎ. ಶೇ.18ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.
ಕೇರಳದಲ್ಲಿ ಮೇ 2021ಕ್ಕೆ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಎಲ್.ಡಿ.ಎಫ್ ಪುನಃ ಅಧಿಕಾರಕ್ಕೆ ಏರಿದರೆ ಸತತ ಎರಡನೇ ಬಾರಿಗೆ ಪಕ್ಷವೊಂದು ಅಧಿಕ್ಕಾರಕ್ಕೇರಲಾಗದ 40 ವರ್ಷದ ದಾಖಲೆ ಮುರಿಯಲಿದೆ.
ಸರ್ವೇಯಲ್ಲಿ ಭಾಗವಹಿಸಿದ ಶೇಕಡ 27ರಷ್ಟು ಜನರು ಪಿಣರಾಯಿ ವಿಜಯನ್ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಪ್ರತಿಕ್ರಿಯೆ ನೀಡಿದ್ದರೆ ಪ್ರತಿಪಕ್ಷ ಕಾಂಗ್ರೆಸ್ ನ ಒಮನ್ ಚಾಂಡಿ ಗೆ ಶೇ. 23ರಷ್ಟು ಮಂದಿ ಮುಖ್ಯಮಂತ್ರಿ ಆಗಬೇಕು ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಿಪಿಎಂ ನಾಯಕಿ, ಪ್ರಸಕ್ತ ಆರೋಗ್ಯ ಸಚಿವೆ ಕೆ.ಕೆ. ಶೈಲಜ ಅವರಿಗೆ ಶೇ.12ರಷ್ಟು ಮಂದಿ ಬೆಂಬಲ ನೀಡಿದ್ದಾರೆ. 2018ರಲ್ಲಿ ನಿಫಾ ಸೋಂಕು ಮತ್ತು 2020ರಲ್ಲಿ ಕೊರೊನ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾದ ನಂತರ ಅವರು ದೇಶ ಮತ್ತು ವಿಶ್ವಾದ್ಯಂತ ಹೆಸರು ಗಳಿಸಿದ್ದಾರೆ ಎಂದು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಬಿಜೆಪಿ ರಾಜ್ಯಧ್ಯಕ್ಷ ಕೆ.ಸುರೇಂದ್ರನ್ ಸಿಎಂ ಆಗುವುದನ್ನು ಶೇ.7ರಷ್ಟು ಮಂದಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಪ್ರತಿಪಕ್ಷ ನಾಯಕ ರಮೇಶ್ ಚನ್ನಿತಲ ಅವರಿಗೆ ಶೇ.5ರಷ್ಟು ಬೆಂಬಲ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳ ರಾಜ್ಯವು ಕೋವಿಡ್ ಅನ್ನು ನಿಭಾಯಿಸಿದ ರೀತಿಗೆ ಪ್ರಪಂಚಾದ್ಯಂತ ಹೆಸರುವಾಸಿಯಾಗಿದೆ. ಸದ್ಯಕ್ಕೆ ಅಲ್ಲಿ 5000 ಕ್ಕಿಂತ ಕಡಿಮೆ ಪ್ರಕರಣಗಳಿದ್ದರೆ ದಕ್ಷಿಣದ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿವೆ. ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಇದು ಜನರ ಮೇಲೆ ಪ್ರಭಾವ ಬೀರಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ವಿಜಯನ್ ಸಾಧನೆಯ ವಿಚಾರದಲ್ಲಿ ಶೇ.16 ರಷ್ಟು ಜನ ಅತ್ಯುತ್ತಮ ಎಂದಿದ್ದಾರೆ. ಶೇ.51 ರಷ್ಟು ಜನರು ಉತ್ತಮ ಎಂದಿದ್ದಾರೆ. ಹಾಗೆಯೇ ಶೇ.16 ರಷ್ಟು ಜನರು ಕಳಪೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.86% ಜನರು ಒಟ್ಟಾರೆ ಸರ್ಕಾರ ಉತ್ತಮವಾಗಿ ಸಾಂಕ್ರಾಮಿಕವನ್ನು ನಿರ್ವಹಿಸಿದೆ ಎಂದು ಸೂಚಿಸಿದ್ದಾರೆ.
ಸಮೀಕ್ಷೆಯ ಪ್ರಮುಖ ವಿಷಯವೇನೆಂದರೆ ಕೇರಳದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯದಲ್ಲಿ ಎರಡನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಬಿಜೆಪಿಯು ಒಮ್ಮೆಗೇ ಶೇ.18ರಷ್ಟು ಮತ ಪಡೆಯಲಿದೆ ಎಂದು ಹೇಳಲಾಗಿದೆ.
ಜೂನ್18 ರಿಂದ 29ರವರೆಗೆ ನಡೆದ ಈ ಸಮೀಕ್ಷೆಯು 50 ವಿಧಾನಸಭಾ ಕ್ಷೇತ್ರಗಳ 10409 ಜನರನ್ನು ಮಾತಾಡಿಸಿ ಅಭಿಪ್ರಾಯ ಪಡೆದಿದೆ.
ಕೊರೊನಾ ವಿರುದ್ದದ ಹೋರಾಟ: ಕೇರಳದ ಆರೋಗ್ಯ ಮಂತ್ರಿಗೆ ವಿಶ್ವಸಂಸ್ಥೆಯಿಂದ ಗೌರವ
ಇದನ್ನೂ ಓದಿ: ಪವನ್ ಖೇರಾ: ಟಿವಿಯಲ್ಲಿ ಮಿಂಚುತ್ತಿರುವ ಹೊಸ ಶೈಲಿಯ ಆಕ್ರಮಣಶೀಲ ಕಾಂಗ್ರೆಸಿಗ