Homeಮುಖಪುಟಪವನ್ ಖೇರಾ: ಟಿವಿಯಲ್ಲಿ ಮಿಂಚುತ್ತಿರುವ ಹೊಸ ಶೈಲಿಯ ಆಕ್ರಮಣಶೀಲ ಕಾಂಗ್ರೆಸಿಗ

ಪವನ್ ಖೇರಾ: ಟಿವಿಯಲ್ಲಿ ಮಿಂಚುತ್ತಿರುವ ಹೊಸ ಶೈಲಿಯ ಆಕ್ರಮಣಶೀಲ ಕಾಂಗ್ರೆಸಿಗ

ಕಾಂಗ್ರೆಸ್ ಪಕ್ಷದದ ಹೊಸ ವಕ್ತಾರ ಪವನ್ ಖೇರಾ ತನ್ನ ಒಂದೇ ವಾಕ್ಯದ ಕಟಕು ಮಾತು, ಆಕ್ರಮಣಶೀಲ ಮತ್ತು ಉದ್ದೀಪಕ ಶೈಲಿಯಿಂದಾಗಿ ಟಿವಿ ಹಾಜರಾತಿಗಳಲ್ಲಿ ಜನಪ್ರಿಯರಾಗುತ್ತಿದ್ದಾರೆ. ಉಳಿದವರು ಕೂಡಾ ಇದನ್ನು ಅನುಸರಿಸಬೇಕು ಎಂಬುದು ಕಾಂಗ್ರೆಸ್ ನಾಯಕರ ಅಭಿಮತವಾಗಿದೆ.

- Advertisement -
- Advertisement -

ಒಂದು ವರ್ಷದ ಹಿಂದೆ ಆರ್ಥಿಕ ಬಿಕ್ಕಟ್ಟಿನ ಕುರಿತು ಪ್ರಶ್ನೆಯೊಂದಕ್ಕೆ ಬಿಜೆಪಿಯ ಶಾನವಾಝ್ ಹುಸೈನ್ ಲೈವ್ ಟಿವಿ ಶೋ ಒಂದರಲ್ಲಿ ಉತ್ತರಿಸುವಾಗ ತನ್ನ ಹಣೆಗೆ ಕೈ ಹಚ್ಚಿ ಕುಳಿತ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಜನಪ್ರಿಯ ಆನ್‌ಲೈನ್ ಸಂಸ್ಕೃತಿಯಲ್ಲಿ ತನಗೊಂದು ಜಾಗ ಮಾಡಿಕೊಂಡರು. ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ನೌಕರರಿಗೆ ಸಂಬಳ ನೀಡಲು ಸೀಮಿತವಾದ “ಕ್ಯಾಷ್ ಇನ್ ಹ್ಯಾಂಡ್” ಇರುವುದರ ಕುರಿತು ಹುಸೈನ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. “ನಾವು ನಗದು ರಹಿತ (ಕ್ಯಾಶ್‌ಲೆಸ್) ಆರ್ಥಿಕತೆಯಾಗಿರುವಾಗ ನಿಮಗೆ ಕೈಯಲ್ಲಿ ನಗದು ಏಕೆ ಬೇಕು?” ಎಂದು ಹುಸೈನ್ ಉತ್ತರಿಸಿದ್ದರು.

ಖೇರಾ ಅವರ ಪ್ರತಿಕ್ರಿಯೆಯು ಅಕೌಂಟಿಂಗ್‌ನಲ್ಲಿ ಬಳಸುವ ಸಾಮಾನ್ಯ ಪರಿಭಾಷೆಯ ಕುರಿತು ಹುಸೇನ್ ಅವರ ಅಜ್ಞಾನದ ಕುರಿತು ಅರೆ ತಮಾಷೆ, ಅರೆ ಅಚ್ಚರಿಯಿಂದ ಕೂಡಿದ್ದಾಗಿತ್ತು. (ವಾಸ್ತವವಾಗಿ ಕ್ಯಾಷ್ ಇನ್ ಹ್ಯಾಂಡ್ ಎಂದರೆ, ನಗದಲ್ಲ; ಬದಲಾಗಿ ಬ್ಯಾಂಕ್ ಖಾತೆಯಲ್ಲಾಗಲೀ, ಇತರ ಮೂಲಗಳಿಂದಾಗಲೀ ತಕ್ಷಣಕ್ಕೆ ಲಭ್ಯವಿರುವ ಹಣಕಾಸು. ಹುಸೈನ್‌ಗೆ ಇದು ಗೊತ್ತಿರಲಿಲ್ಲ!) ಅಂದಿನಿಂದ ಈ ಘಟನೆ ಒಂದು ಸ್ಮರಣಾರ್ಹ ಹಾಸ್ಯ ಘಟನೆ (meme)ಯಾಗಿಬಿಟ್ಟಿದೆ. ಈಗ ಯಾವುದೇ ಆಳುವ ಪಕ್ಷದ ಸದಸ್ಯ ಎಡವಟ್ಟು ಮಾಡಿದಾಗಲೆಲ್ಲಾ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ.

ಈ ಕ್ಷಣವು ಪಕ್ಷದಲ್ಲಿ ವಕ್ತಾರರಾಗಿ ಖೇರಾ ಅವರು ಜವಾಬ್ದಾರಿ ವಹಿಸಿಕೊಂಡ ತಕ್ಷಣದಲ್ಲಿಯೇ ಬಂತು. ಅವರು ಈ ಘಟನೆಗೆ ಒಂದು ತಿಂಗಳು ಮೊದಲು, 2018ರ ಡಿಸೆಂಬರ್‌ನಲ್ಲಷ್ಟೇ ಈ ಹುದ್ದೆಗೆ ನೇಮಕಗೊಂಡಿದ್ದರು. ಅಲ್ಪಕಾಲದಲ್ಲಿಯೇ ಅವರು ಟಿವಿ ಚರ್ಚೆಗಳಲ್ಲಿ ಬಿಜೆಪಿಯ ವಾದಗಳನ್ನು ಚಿಂದಿ ಉಡಾಯಿಸುವ ಜನಪ್ರಿಯ ವಕ್ತಾರರಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮೂಡಿಬಂದರು. ಅವರ ಹಲವಾರು ವಿಡಿಯೋ ಕ್ಲಿಪ್‌ಗಳು ವೈರಲ್ ಆಗಿವೆ.

ಕಳೆದ ಕೆಲವು ತಿಂಗಳುಗಳಿಂದ ಅವರು ಬಿಜೆಪಿ ವಕ್ತಾರರಿಗೆ ಇತಿಹಾಸ ಕಲಿಸುವುದರಲ್ಲಿ, ಅವರ ವಿಷಯಾಂತರ ತಂತ್ರಗಳನ್ನು ಪ್ರಶ್ನಿಸುವುದರಲ್ಲಿ ತೊಡಗಿದ್ದು, ದೇಶ ಮತ್ತು ತನ್ನ ಪಕ್ಷಕ್ಕೆ ಮುಖ್ಯವಾದ ವಿಷಯಗಳನ್ನು ಎತ್ತುವುದರಲ್ಲಿ ತೊಡಗಿದ್ದಾರೆ. ಇದನ್ನೆಲ್ಲಾ ಮಾಡುತ್ತಲೇ ತನ್ನ ಆಕ್ರಮಣಶೀಲ ಮನೋವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅವರು ಆಳುವ ಪಕ್ಷದ ಪರವಾಗಿರುವ ಕಾರ್ಯಕ್ರಮ ನಿರ್ವಾಹಕರ ಮನೋಭಾವವನ್ನೂ ಪ್ರಶ್ನಿಸಿ ಕಾಲೆಳೆದಿದ್ದಾರೆ.

ಆಂತರಿಕ ಬಿಕ್ಕಟ್ಟು ಮತ್ತು ಚುನಾವಣಾ ಸೋಲುಗಳ ನಡುವೆ ಗಂಭೀರ ಪರಿಸ್ಥಿತಿಯಲ್ಲಿರುವ ಕಾಂಗ್ರೆಸಿನ ರಕ್ಷಣೆಗೆ , ಅದೂ ಚುನಾವಣಾ ವಿಷಯದಲ್ಲಿ ಹೆಬ್ಬಂಡೆಯಾಗಿ ಬೆಳೆದಿರುವ ಬಿಜೆಪಿಯನ್ನು ಎದುರಿಸಲು ಈ ರೀತಿಯ ಶೈಲಿ ಮತ್ತು ಖೇರಾ ಅವರಂತವರು ಇನ್ನಷ್ಟು ಮಂದಿ ಬೇಕು ಎಂದು ಕಾಂಗ್ರೆಸ್ ಬೆಂಬಲಿಗರು ಬಯಸುವಂತೆ ಮಾಡಿದೆ.

ಚೀನಾ, ಪಾಕಿಸ್ತಾನ ಮತ್ತು ಇತಿಹಾಸ ಪಾಠ

ಇತ್ತೀಚಿನ ದಿನಗಳಲ್ಲಿ ಖೇರಾ ಟಿವಿ ಕಾರ್ಯಕ್ರಮಗಳಲ್ಲಿ ತೋರಿಸುತ್ತಿರುವ ಆಕ್ರಮಣಶೀಲತೆಯು ಭಾರತ-ಚೀನಾ ಸಂಘರ್ಷದ ಮೇಲೆ ಕೇಂದ್ರೀಕೃತವಾಗಿದೆ.

ಕಳೆದ ವಾರ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ನಾವು ಗಡಿಯ ಬಗ್ಗೆ ಕೇಳಿದರೆ, ಇವರು ನಮ್ಮ ಜೊತೆ ಕಾದಾಡಲು ಬರುತ್ತಾರೆ. ಅಯ್ಯೋ! ಚೀನಾದ ಜೊತೆ ಕಾದಾಡಿ. ಕಾಂಗ್ರೆಸ್ ಜೊತೆ ಕಾದಾಡಲು ಇನ್ನೂ ಪೂರ್ತಿ ನಾಲ್ಕು ವರ್ಷ ಉಳಿದಿದೆ. ಆಗ ನಾವು ಕೂಡಾ ಕಾದಾಡುತ್ತೇವೆ” ಎಂದು ಕಟಕಿದ್ದರು.

ನರೇಂದ್ರ ಮೋದಿ ಟಿಕ್ ಟಾಕ್ ಸಹಿತ ಚೀನಾದ 59 appಗಳನ್ನು ನಿಷೇಧಿಸಿದ ಬಳಿಕ ನಡೆದ ಚರ್ಚೆಯೊಂದರಲ್ಲಿ ಖೇರಾ ಮನೆಮಾತಾಗಿರುವ ಘೋಷಣೆಯೊಂದನ್ನು ಹುಟ್ಟುಹಾಕಿದ್ದರು. “ಹಮ್ಲಾ ಮ್ಯಾಪ್ ಪೆ ಹೋ ರಹಾ ಹೈ; ಬದ್ಲಾ app ಪೆ ಹೋ ರಹಾ ಹೈ” (ದಾಳಿ ಮ್ಯಾಪ್ ಮೇಲೆ ಆಗುತ್ತಿದೆ. ಪ್ರತೀಕಾರ app ಮೆಲೆ ಆಗುತ್ತಿದೆ).

ಕೇವಲ ಈ ರೀತಿಯ ವಾಕ್ಚಾತುರ್ಯದ ಪ್ರದರ್ಶನ ಮತ್ತು ಒಂದು ವಾಕ್ಯದ ಕಟಕಿ ಮಾತ್ರವಲ್ಲ; ಜೊತೆಜೊತೆಗೆಯೇ ಖೇರಾ ಅಲ್ಲೊಮ್ಮೆ ಇಲ್ಲೊಮ್ಮೆ ಇತಿಹಾಸದ ಪಾಠ ಮಾಡುವುದನ್ನೂ ಇಷ್ಟಪಡುತ್ತಾರೆ.

App ನಿಷೇಧದ ಕುರಿತ ಚರ್ಚೆಯಲ್ಲಿ ಅವರು 1971ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಜಯಗಳಿಸಿದ್ದನ್ನು ಕಾರ್ಯಕ್ರಮ ನಿರ್ವಾಹಕರಿಗೆ ನೆನಪಿಸಿ, ಚೀನಾದ ವಿರುದ್ಧ 1962ರ ಸೋಲನ್ನು ನೆನಪಿಸಲು ತುದಿಗಾಲಿನಲ್ಲಿ ನಿಂತಿರುವ ಬಿಜೆಪಿಯು 1971ನ್ನು ಸಂಪೂರ್ಣ ಮರೆಯುತ್ತಿದೆ ಎಂದು ಟೀಕಿಸಿದರು.

“ದಿ ಪ್ರಿಂಟ್” ಜೊತೆ ಮಾತನಾಡುತ್ತಾ ಅವರು, “ನಾನು ಯಾವತ್ತೂ ಇತಿಹಾಸ ಪುಸ್ತಕಗಳು, ಅಂತರರಾಷ್ಟ್ರೀಯ ಸಂಬಂಧಗಳ ಕುರಿತ ಪುಸ್ತಕಗಳ ಗಂಭೀರ ಓದುಗನಾಗಿದ್ದೆ. ಅದೃಷ್ಟವಶಾತ್ ಅದೀಗ ನಿಜವಾಗಿಯೂ ಚರ್ಚೆಗಳ ವೇಳೆ ನೆರವಿಗೆ ಬರುತ್ತಿದೆ. ನಾವು ಮಾಡಬೇಕಾದುದು ಇಷ್ಟೇ: ನಮ್ಮ ಇತಿಹಾಸದ ಧೂಳು ಗುಡಿಸಬೇಕು ಮತ್ತು ವಾಸ್ತವಾಂಶಗಳ ಜೊತೆ ಸಿದ್ಧರಾಗಿರಬೇಕು.”

ಅವರು ಚರ್ಚೆಯಲ್ಲಿ ಹಲವಾರು ಬಾರಿ ಬಳಸಿರುವ, ಅವರ ಪ್ರಿಯವಾದ ಇತಿಹಾಸದ ತುಣುಕೆಂದರೆ, ಬಿಜೆಪಿಗೆ ಅದರ ಮಾತೃ ಸಂಘಟನೆಯಾಗಿರುವ ಆರೆಸ್ಸೆಸ್, ಮುಸ್ಲಿಂಲೀಗ್ ಜೊತೆ ಹೊಂದಿದ್ದ ಸಂಬಂಧವನ್ನು ನೆನಪಿಸುವುದು.

“ಇತಿಹಾಸವು ನೀವು ಬಯಸಿದಲ್ಲಿಂದ ಆರಂಭವಾಗುವುದಿಲ್ಲ. ಇತಿಹಾಸವು ಹಿಂದೂ ಮಹಾಸಭಾದ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಮುಸ್ಲಿಂಲೀಗ್ ಜೊತೆಸೇರಿ ಪಶ್ಚಿಮ ಬಂಗಾಳ ಮತ್ತು ಸಿಂಧ್‌ನಲ್ಲಿ ಸರಕಾರ ರಚಿಸಿದಲ್ಲಿಂದ ಕೂಡಾ ಆರಂಭವಾಗುತ್ತದೆ” ಎಂದು ಕಳೆದ ವಾರದ ಚರ್ಚೆಯೊಂದರಲ್ಲಿ ಅವರು ಕಟಕಿದ್ದರು.

“ಅವರು ಭಾರತದ ವಿಭಜನೆಗೆ ಕಾಂಗ್ರೆಸ್ ಕಾರಣ ಎಂದು ಹೇಳುತ್ತಲೇ ಇರುತ್ತಾರೆ. ಅವರ ಈ ಕಾಲ್ಪನಿಕ ವಾದವನ್ನು ಟುಸ್ಸೆನಿಸುವುದು ಬಹಳ ಮುಖ್ಯ. ಸಮಸ್ಯೆಯೆಂದರೆ ಅವರು ತಮ್ಮದೇ ಕಾಲ್ಪನಿಕ ವಾಟ್ಸಾಪ್ ವಾದವನ್ನು ನಿಜವೆಂದೇ ನಂಬಲು ಆರಂಭಿಸಿದ್ದಾರೆ” ಎಂದು ಖೇರಾ “ದಿ ಪ್ರಿಂಟ್”ಗೆ ಹೇಳಿದರು.

ಕಾಂಗ್ರೆಸ್‌ನಲ್ಲಿ ಖೇರಾ ಹಿನ್ನೆಲೆ, ಪ್ರಸ್ತುತ

ಪವನ್ ಖೇರಾ 1989ರಲ್ಲಿ ಕಾಂಗ್ರೆಸ್ ಯುವ ವಿಭಾಗದಿಂದ ರಾಜಕೀಯ ಜೀವನ ಆರಂಭಿಸಿದರು. ಆದರೆ, 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ಪಕ್ಷ ತೊರೆದರು. ನಂತರ 1998ರಲ್ಲಿ ಆಂದಿನ ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಮರಳಿ ಬಂದರು. 2013ರಲ್ಲಿ ದೀಕ್ಷಿತ್ ಅವರ ಅಧಿಕಾರ ಕೊನೆಗೊಳ್ಳುವ ತನಕ ಅವರು ಅದೇ ಸ್ಥಾನದಲ್ಲಿದ್ದರು.

2015ರಿಂದ ಅವರು ಟಿವಿ ಚರ್ಚೆಗಳಲ್ಲಿ ಪಕ್ಷದ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ 2018ರಲ್ಲಿ ರಚಿಸಲಾದ ಚುನಾವಣಾ ಸಮಿತಿಯೊಂದರ ಸಂಚಾಲಕರಾಗಿ ನೇಮಕಗೊಂಡರು.

ಅವರೀಗ ಕೆಲ ವರ್ಷಗಳಿಂದ ಟಿವಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರೂ ಇತ್ತೀಚೆಗೆ ಅವರ ಆಕ್ರಮಣಶೀಲತೆ ಒಂದು ಹಂತ ಮೇಲೇರಿದೆ. “ನನ್ನೊಳಗೆ ಏನೋ ಬದಲಾಗಿದೆ. ಯದ್ವಾತದ್ವಾ ಸುಳ್ಳು ಮಾಹಿತಿಗಳು, ದ್ವೇಷ ಇತ್ಯಾದಿ ನನ್ನನ್ನು ತಳಮಳಗೊಳಿಸಿ ಸಿಟ್ಟಿಗೆಬ್ಬಿಸುತ್ತವೆ. ಅವುಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಉಗ್ರವಾಗಿ ವಿರೋಧಿಸಬೇಕಾದ ಅಗತ್ಯವಿದೆ. ನಾವು ಸುಮ್ಮನೇ ಇದ್ದರೆ, ನಮ್ಮ ವಾದಗಳು ದುರ್ಬಲವಾಗುತ್ತವೆ. ನಾವು ಜಾತ್ಯತೀತರೂ, ಉದಾರವಾದಿಗಳಾಗಿರುವುದಕ್ಕೆ ಯಾರ ಕ್ಷಮೆಯನ್ನೂ ಕೇಳಬೇಕಾಗಿಲ್ಲ. ನಾವು ಅದೇ ಎಂದು ಒಪ್ಪಿಕೊಳ್ಳಬೇಕು” ಎಂದು ಹೇಳಿದ ಖೇರಾ, ಅವರ ಭಾವನಾತ್ಮಕ ಸ್ಫೋಟಕ ಮಾತುಗಳು ಮತ್ತು ಆಕ್ರಮಣಶೀಲತೆಯ ಬಗ್ಗೆ ಕೇಳಿದಾಗ, “ನನಗೆ ಬೇರೆ ರೀತಿಗಳು ಗೊತ್ತಿಲ್ಲ” ಎಂದರು.

“ಅದು ನನಗೆ ಸಹಜವಾಗಿಯೇ ಬರುತ್ತದೆ. ಯಾವುದೇ ವಿಷಯದ ಕುರಿತು ಭಾವತೀವ್ರತೆ ಇಲ್ಲದಿದ್ದರೆ ನಾನದನ್ನು ಮಂಡಿಸಲಾರೆ. ಬಹುಶಃ ಹಿಂದೆ ನಾನು ನನಗೇ ಲಗಾಮು ಹಾಕಿಕೊಂಡಿದ್ದೆ ಮತ್ತು ಹೆಚ್ಚು ಜಾಗರೂಕನಾಗಿದ್ದೆ. ಆದರೀಗ ಬೇರೆ ದಾರಿಯಿಲ್ಲ.” ಎಂದು ಖೇರಾ ಹೇಳಿದರು. ಟಿವಿ ಚರ್ಚೆಗಳಲ್ಲಿ ಅವರ ಭಾವತೀವ್ರತೆಯ ವಾದಗಳು ಅವರಿಗೆ ಸಾಮಾಜಿಕ ಮಾಧ್ಯಮಗಳ ವೀಕ್ಷಕರಿಂದ ಮಾತ್ರವಲ್ಲ; ಅವರ ಸ್ವಂತ ಪಕ್ಷದವರಿಂದಲೂ ಮೆಚ್ಚುಗೆಯನ್ನು ತಂದುಕೊಟ್ಟಿವೆ.

ಕಳೆದ ವಾರ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಖೇರಾ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. “ನೀವು ಈ ದಿನಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದೀರಿ” ಎಂದವರು ಹೇಳಿದ್ದರು.

ಕೆಲವರು ಅವರಿಗೆ ಯೂ ಟ್ಯೂಬ್ ಚಾನೆಲೊಂದನ್ನು ಆರಂಭಿಸಿ, ಬಿಜೆಪಿಯ ಅಪಪ್ರಚಾರವನ್ನು ಎದುರಿಸುವಂತೆಯೂ ಮನವಿ ಮಾಡಿದ್ದಾರೆ. “ಈ ಸೂಚನೆಯಿಂದ ನಾನು ವಿನೀತನಾಗಿದ್ದೇನೆ; ಆದರದು ಸರಿಯಲ್ಲ. ಇದು ಯಾವತ್ತೂ ವ್ಯಕ್ತಿಗತ ವಿಚರವಾಗಿರಲಿಲ್ಲ. ಅದು ಇನ್ನಷ್ಟು ಮಹತ್ವದ ಸಂದೇಶಕ್ಕೆ ಸಂಬಂಧಿಸಿದ್ದಾಗಿದೆ. ಅದು ನಮ್ಮ ವಾದವನ್ನು ಮರಳಿ ಪುನರುಜ್ಜೀವನಗೊಳಿಸುವ ಅಗತ್ಯಕ್ಕೆ ಸಂಬಂಧಿಸಿದೆ” ಎಂದ ಅವರು ಹೇಳಿದರು.

ಖೇರಾ “ಪ್ರತಿಕೃತಿ”ಗಳಿಗೆ ಕರೆ

ಅವರ ಜನಪ್ರಿಯ ಶೈಲಿಗೆ ದಿನೇದಿನೇ ಹೆಚ್ಚುತ್ತಿರುವ ಮೆಚ್ಚುಗೆಯ ನಡುವೆ “ಖೇರಾ ಪ್ರತಿಕೃತಿ”ಗಳ ಅಗತ್ಯದ ಬಗ್ಗೆಯೂ ಕಾಂಗ್ರೆಸ್ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಪಕ್ಷದಲ್ಲಿ ಅವರಂತಹ ಬಿರುಸಿನ, ಕಟುವಾದ ವಕ್ತಾರರ ಕೊರತೆ ಇರುವಾಗ ಅವರಂತಹ ಇನ್ನಷ್ಟು ಮಂದಿ ಬೇಕು ಎಂಬುದರ ಪ್ರತಿಫಲನವಾಗಿದೆ ಇದು. ಖೇರಾ ಅವರ ವಿಡಿಯೋಗಳಿಗೆ ಸಿಗುತ್ತಿರುವ ಸ್ವಾಗತವು ಇತರ ವಕ್ತಾರರು ಕೂಡಾ ಹೆಚ್ಚು ಆಕ್ರಮಣಕಾರಿ ನಿಲುವು ತಮ್ಮದಾಗಿಸಿಕೊಳ್ಳಬೇಕು ಎಂದು ಪಕ್ಷದ ನಾಯಕರು ಹೇಳುತ್ತಾರೆ.

“ಎಂದಾದರೂ ಬಿಜೆಪಿಯೊಂದಿಗೆ ಟಿವಿ ಚರ್ಚೆಯಲ್ಲಿ ಭಾಗವಹಿಸಿರುವ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅವರನ್ನು ಎದುರಿಸಲು ನಮಗೆ ಸ್ವಲ್ಪ ಮಟ್ಟಿನ ವಾಕ್ಚಾತುರ್ಯ, ಸ್ವಲ್ಪ ಮಟ್ಟಿನ ಆಕ್ರಮಣಶೀಲತೆ ಬೇಕೆಂದು ಅರ್ಥವಾಗಿದೆ. ಸೌಮ್ಯ ಮನೋಭಾವದಿಂದ ಅದನ್ನು ಮಾಡಲು ಸಾಧ್ಯವಿಲ್ಲ” ಎಂದು ಹೆಸರು ಹೇಳಲು ಇಚ್ಚಿಸದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.

ಖೇರಾ ಅವರು ಪಕ್ಷದ ಹೊಸ ವಕ್ತಾರರಲ್ಲಿ ಒಬ್ಬರಾಗಿದ್ದರೆ, ಹಿರಿಯರಾದ ರಣದೀಪ್ ಸುರ್ಜೇವಾಲ್, ಅಭಿಶೇಕ್ ಮನು ಸಿಂಘ್ವಿ ಮುಂತಾದವರು ಈಗ ಹಲವಾರು ವರ್ಷಗಳಿಂದ ಇದ್ದವರು ಹಿಂದೆ ಯುಪಿಎ ಅವಧಿಯ ಕಾಂಗ್ರೆಸ್ ಧೋರಣೆಗಳ ಸಮರ್ಥನೆಯಲ್ಲಿ ತೊಡಗಿದ್ದರೆ, ಈಗ ಬಿಜೆಪಿಯ ಧೋರಣೆಗಳನನ್ನ ವಿರೋಧಿಸುವುದರಲ್ಲಿ ತೊಡಗಿದ್ದಾರೆ. ಆದರೆ, ಅವರ ವಾಕ್ಚಾತುರ್ಯವು ಅಪರೂಪಕ್ಕೊಮ್ಮೆ ಮಾತ್ರ ಈ ಮಟ್ಟವನ್ನು ಮುಟ್ಟಿದೆ.

“ನಮ್ಮ ಕೆಲವು ಹಿರಿಯ ವಕ್ತಾರರ ಚರ್ಚಾ ಕೌಶಲವು ಪುನರಾವರ್ತನೆಯಂತೆ ಕಾಣುತ್ತಿರುವುದು ನಿಜ. ಕೆಲವು ಸಲ ಅವು ಏಕತಾನತೆಯಿಂದ ಕೂಡಿರುವುದೂ ನಿಜ. ಆದರೆ, ಅದು ಏಕೆಂದರೆ,  ಹಿರಿಯ ನಾಯಕರು ಹೆಚ್ಚು ಜಾಗರೂಕತೆಯಿಂದ ಇರಬೇಕಾಗುತ್ತದೆ. ಅವರು ಲೈವ್ ಟಿವಿಯಲ್ಲಿ ಕಡಿಮೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬ ಪಕ್ಷದ ನಾಯಕರು ಎಷ್ಟು ಆಕ್ರಮಣಕಾರಿಯಾಗಿ ಮಾತನಾಡಬಹುದು ಎಂಬ ಮೇಲೆಯೂ ಈ ವ್ಯತ್ಯಾಸ ಅವಲಂಬಿಸಬಹುದು” ಎಂದು ಈ ನಾಯಕ ಹೇಳಿದರು.

“ಪವನ್ ಖೇರಾ, ಒಬ್ಬ ಸಂಬಿತ್ ಪಾತ್ರನನ್ನು ಎದುರಿಸಬಹುದು. ಆದರೆ, ಅಭಿಶೇಕ್ ಮನು ಸಂಘ್ವಿ ಅಂತವರು ರವಿಶಂಕರ್ ಪ್ರಸಾದ್ ಅಂತಹ ಹಿರಿಯರ ವಿರುದ್ಧ ಚರ್ಚೆ ಮಾಡಬೇಕಾಗುತ್ತದೆ. ಆದುದರಿಂದ ಅವರು ತಮ್ಮ ವಾಕ್ಚಾತುರ್ಯವನ್ನೂ, ಅಕಾಮಣಶೀಲತೆಯನ್ನೂ ನಿಯಂತ್ರಣದಲ್ಲಿ ಇಡಬೇಕಾಗುತ್ತದೆ” ಎಂದು ಈ ನಾಯಕರು ಹೇಳುತ್ತಾರೆ.

ಕೃಪೆ: ದಿ ಪ್ರಿಂಟ್ (ಫಾತಿಮಾ ಖಾನ್)

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಗೌರಿ ಲಂಕೇಶ್ ನೆನಪಿದೆಯಾ? ಎಂದು ಪತ್ರಕರ್ತೆ ರಾಣಾ ಅಯೂಬ್ ಗೆ ಜೀವ ಬೆದರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...