ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ನ ನಾಮನಿರ್ದೇಶಿತ ಸದಸ್ಯರು ಮೇಯರ್ ಹುದ್ದೆಯ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದ್ದು, ಆಮ್ ಆದ್ಮಿ ಪಕ್ಷಕ್ಕೆ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ.
ಮೇಯರ್ ಆಯ್ಕೆಗಾಗಿ ಚುನಾವಣೆಯ ದಿನಾಂಕವನ್ನು 24 ಗಂಟೆಗಳ ಒಳಗೆ ಪ್ರಕಟಿಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ಸೂಚಿಸಿದೆ.
ಸ್ಥಳೀಯ ಸಂಸ್ಥೆಯ ಚುನಾವಣೆಗಳು ನಡೆದು ಎರಡು ತಿಂಗಳಾದರೂ ದೆಹಲಿಯ ಮೇಯರ್ ಆಯ್ಕೆಯಾಗಿಲ್ಲ. ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ನಡುವಿನ ಬಿಕ್ಕಟ್ಟಿನಿಂದಾಗಿ ಈ ಚುನಾವಣೆ ವಿಳಂಬವಾಗುತ್ತಿದೆ.
ಕಳೆದ ಡಿಸೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಬಿಜೆಪಿಯನ್ನು ಸೋಲಿಸಿತು. ಬಿಜೆಪಿ ವಶದಲ್ಲಿದ್ದ ಮುನ್ಸಿಪಲ್ ಕಾರ್ಪೊರೇಷನ್ 15 ವರ್ಷಗಳ ನಂತರ ಆಮ್ ಆದ್ಮಿ ವಶವಾಯಿತು. ಆದರೆ ಪೌರಾಯುಕ್ತರನ್ನು ಆಯ್ಕೆ ಮಾಡುವ ಚುನಾವಣೆಯು ಮೂರು ಬಾರಿ ಸ್ಥಗಿತಗೊಂಡಿದೆ. ಮುನ್ಸಿಪಲ್ನ ನಾಮನಿರ್ದೇಶಿತ ಸದಸ್ಯರು ಅಥವಾ ಹಿರಿಯರು ಮತ ಚಲಾಯಿಸಬಹುದು ಎಂದು ಅಧ್ಯಕ್ಷೀಯ ಅಧಿಕಾರಿ ಹೇಳಿದ್ದರು.
ಮುನ್ಸಿಪಲ್ ಆಡಳಿತದ ಕುರಿತು ವಿಶೇಷ ಜ್ಞಾನವನ್ನು ಹೊಂದಿರುವ ನಾಮನಿರ್ದೇಶಿತ ಕೌನ್ಸಿಲರ್ಗಳು ಸಾರ್ವಜನಿಕರಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಲ್ಲಿ ಸದನಕ್ಕೆ ಸಹಾಯ ಮಾಡುವ ಕೆಲಸ ಮಾಡುತ್ತಾರೆ. ಅವರನ್ನು ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡುತ್ತಾರೆ.
ಚುನಾವಣೆಯಲ್ಲಿ ಸೋತರೂ ಮುನ್ಸಿಪಲ್ ಮೇಲೆ ಹಿಡಿತ ಸಾಧಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ನಾಮನಿರ್ದೇಶಿತ ಕೌನ್ಸಿಲರ್ಗಳು ಬಿಜೆಪಿ ಬೆಂಬಲಿಗರು ಎಂದು ಆರೋಪಿಸಿದೆ. ಆಮ್ ಆದ್ಮಿ ಪಕ್ಷದ ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು ಜನವರಿಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಮೇಯರ್ ಚುನಾವಣೆಯನ್ನು ಕಾಲಮಿತಿಯಲ್ಲಿ ನಡೆಸಬೇಕೆಂದು ಕೋರಿದ್ದರು.
ಸಂವಿಧಾನದ 243 ಆರ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆಯ ಸೆಕ್ಷನ್ 3 (3)ರ ಪ್ರಕಾರ ನಾಮನಿರ್ದೇಶನಗೊಂಡ ವ್ಯಕ್ತಿಗಳು ಈ ಸಂದರ್ಭದಲ್ಲಿ ಮತದಾನದ ಹಕ್ಕನ್ನು ಹೊಂದಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿರಿ: ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ: ಚುನಾವಣಾ ಆಯೋಗ ಆದೇಶ
ಮೇಯರ್ ಆಯ್ಕೆಯಾದ ನಂತರ ಉಪಮೇಯರ್ ಚುನಾವಣೆಯಲ್ಲಿ ಮೇಯರ್ ಅವರೇ ಅಧ್ಯಕ್ಷರಾಗುತ್ತಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬಾರದು ಎಂದು ಒಬೆರಾಯ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದು, “ಸುಪ್ರೀಂ ಕೋರ್ಟ್ಗೆ ಧನ್ಯವಾದಗಳು. ನ್ಯಾಯಾಲಯದ ನಿರ್ಧಾರವು ಪ್ರಜಾಪ್ರಭುತ್ವದ ವಿಜಯವಾಗಿದೆ” ಎಂದು ಬಣ್ಣಿಸಿದ್ದಾರೆ.
“ಎಲ್ಜಿ ಮತ್ತು ಬಿಜೆಪಿಯು ಅಕ್ರಮ, ಅಸಂವಿಧಾನಿಕ ಆದೇಶಗಳನ್ನು ಪ್ರತಿ ದಿನವೂ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂಬುದು ಸಾಬೀತಾಗಿದೆ” ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.