ರೆಸ್ಟೊರೆಂಟ್ನ ಫ್ರಿಡ್ಜ್ನಲ್ಲಿ ದೆಹಲಿಯ ಯುವತಿಯ ಶವವನ್ನು ಪತ್ತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿರುವುಗಳು ಲಭಿಸುತ್ತಿವೆ. ಕೊಲೆ ಕೃತ್ಯದಲ್ಲಿ ಆ ಯುವತಿಯ ಪ್ರಿಯಕನ ತಂದೆಯೂ ಭಾಗಿಯಾಗಿರುವ ವಿಚಾರ ಹೊರಬಿದ್ದಿದೆ. ದೆಹಲಿ ಪೊಲೀಸರು ಪ್ರಿಯಕರನ ತಂದೆಯನ್ನೂ ಬಂಧಿಸಿದ್ದಾರೆ.
23 ವರ್ಷದ ನಿಕ್ಕಿ ಯಾದವ್ ಅವರನ್ನು ಆಕೆಯ ಪಾರ್ಟನರ್ ಸಾಹಿಲ್ ಗೆಹ್ಲೋಟ್ ಕೊಲೆಗೈದಿದ್ದನು. ಚಾರ್ಜಿಂಗ್ ಕೇಬಲ್ನಿಂದ ಕತ್ತು ಹಿಸುಕಿ ಕೃತ್ಯ ಎಸಗಿದ್ದನು. ಕಳೆದ ವರ್ಷ ಭಾರೀ ಸುದ್ದಿಯಾದ ಅಫ್ತಾಬ್ ಪೂನಾವಾಲಾ ಮತ್ತು ಶ್ರದ್ಧಾ ವಾಕರ್ ಪ್ರಕರಣವನ್ನು ನಿಕ್ಕಿ- ಸಾಹಿಲ್ ಪ್ರಕರಣ ಮರುಕಳಿಸಿತ್ತು. ಸಾಹಿಲ್ ತನ್ನ ಕುಟುಂಬದ ಒಡೆತನದ ರೆಸ್ಟೋರೆಂಟ್ನಲ್ಲಿ ಶವವನ್ನು ಫ್ರಿಜ್ನಲ್ಲಿ ಇಟ್ಟಿದ್ದನು.
ದೇಶದಲ್ಲಿ ಅನೇಕರು ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದಾಗ ಪೊಲೀಸರು ನಿಕ್ಕಿ ಯಾದವ್ ಅವರ ಮೃತದೇಹವನ್ನು ಪತ್ತೆಹಚ್ಚಿದ್ದರು.
“ದೆಹಲಿ ಪೊಲೀಸರು ಈವರೆಗೆ 5 ಜನರನ್ನು ಬಂಧಿಸಿದ್ದಾರೆ. ಪಿತೂರಿಗೆ ಸಹಾಯ ಮಾಡಿದ ಆರೋಪದ ಮೇಲೆ ಸಾಹಿಲ್ ಗೆಹ್ಲೋಟ್ ಅವರ ತಂದೆಯನ್ನೂ ಬಂಧಿಸಲಾಗಿದೆ” ಎಂದು ವಿಶೇಷ ಸಿಪಿ ರವೀಂದರ್ ಯಾದವ್ ಅವರು ಹೇಳಿರುವುದಾಗಿ ‘ಎಎನ್ಐ’ ವರದಿ ಮಾಡಿದೆ.
ಸಾಹಿಲ್ ಮತ್ತು ನಿಕ್ಕಿಯವರು ಅಕ್ಟೋಬರ್ 2020ರಲ್ಲಿ ನೋಯ್ಡಾ ದೇವಸ್ಥಾನದಲ್ಲಿ ವಿವಾಹವಾಗಿದ್ದರು ಎಂಬ ಮತ್ತೊಂದು ವಿಚಾರವನ್ನು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಸಾಹಿಲ್ನ ಮನೆಯವರು ಈ ಸಂಬಂಧವನ್ನು ಒಪ್ಪಿಕೊಂಡಿರಲಿಲ್ಲ. ಬೇರೊಂದು ಹುಡುಗಿಯೊಂದಿಗೆ ಸಾಹಿಲ್ ಮದುವೆಯನ್ನು ನಿಶ್ಚಯಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನ ಲಿವ್ ಇನ್ ಪಾರ್ಟನರ್ ಇನ್ನೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂದು ನಿಕ್ಕಿಗೆ ತಿಳಿದಿರಲಿಲ್ಲ. ಆತನ ಮದುವೆಗೆ ಒಂದು ದಿನ ಮುಂಚಿತವಾಗಿ ಈ ವಿಷಯ ಆಕೆಗೆ ಗೊತ್ತಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ.
ನೈಋತ್ಯ ದೆಹಲಿಯಲ್ಲಿನ ತನ್ನ ಬಾಡಿಗೆ ಮನೆಗೆ ನಿಕ್ಕಿ ಯಾದವ್ ಪ್ರವೇಶಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ತನಿಖೆ ವೇಳೆ ಕಂಡುಕೊಂಡಿದ್ದಾರೆ. ಫೆಬ್ರವರಿ 9ರಂದು ಸೆರೆಯಾಗಿರುವ ವೀಡಿಯೊದಲ್ಲಿ, ನಿಕ್ಕಿ ಒಂಟಿಯಾಗಿದ್ದರು ಎಂಬುದು ತಿಳಿದುಬಂದಿದೆ.
ಆಕೆಯ ಗೆಳೆಯನು ಆ ದಿನ ಕೆಲವು ಗಂಟೆಗಳ ನಂತರದಲ್ಲಿ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿರಿ: ಪ್ರಶ್ನೆಪತ್ರಿಕೆ ಸೋರಿಕೆ ವಿವಾದ; ಅರುಣಾಚಲದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಸಾಹಿಲ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಕ್ಕಾಗಿ ಈ ದಂಪತಿಗಳು ಸುಮಾರು ಮೂರು ಗಂಟೆಗಳ ಕಾಲ ಕಾರಿನೊಳಗೆ, ಮನೆಯಿಂದ ಸ್ವಲ್ಪ ದೂರದಲ್ಲಿ ಜಗಳವಾಡಿದ್ದರು.
ಜಗಳ ತಾರಕ್ಕೇರಿದಾಗ ಸಾಹಿಲ್ ಚಾರ್ಜಿಂಗ್ ಕೇಬಲ್ ಬಳಸಿ ನಿಕ್ಕಿಯ ಕತ್ತು ಹಿಸುಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಭಯಭೀತನಾಗಿದ್ದ ಆತ, ತನ್ನ ಗೆಳತಿಯ ಶವವನ್ನು ತಮ್ಮ ಕುಟುಂಬದ ಧಾಬಾದಲ್ಲಿನ ಫ್ರೀಜರ್ನಲ್ಲಿ ಇರಿಸಲು ನಿರ್ಧರಿಸಿದ್ದನು.
ತನ್ನ ಲಿವ್ ಇನ್ ಪಾರ್ಟನರ್ಅನ್ನು ಈ ರೀತಿಯಲ್ಲಿ ದೆಹಲಿಯಲ್ಲಿ ಕೊಂದಿರುವ ಎರಡನೇ ಪ್ರಮುಖ ಘಟನೆ ಇದಾಗಿದೆ. ಕಳೆದ ವರ್ಷ, ಶ್ರದ್ಧಾ ವಾಕರ್ ಅವರನ್ನು ಆಕೆಯ ಪ್ರಿಯಕರ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದನು. ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ, ನಗರದಾದ್ಯಂತ ದೇಹದ ಭಾಗಗಳನ್ನು ವಿಲೇವಾರಿ ಮಾಡುವ ಮೊದಲು ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟಿದ್ದನು.