ಇತ್ತೀಚೆಗೆ ಮುಕ್ತಾಯಗೊಂಡ 82ನೇ ಕಾಂಗ್ರೆಸ್ ಮಹಾಧಿವೇಶನದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. 2024ರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಒಬಿಸಿ ಮತ್ತು ದಲಿತ ಮತಗಳನ್ನು ಸೆಳೆಯಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಕುರಿತು ಮನೋಜ್ ಸಿ.ಜಿಯವರು ಇಂಡಿಯನ್ಸ್ ಎಕ್ಸ್ಪ್ರೆಸ್ ಪತ್ರಿಕೆಗೆ ಬರೆದ ಲೇಖನದ ಕನ್ನಡ ಸಾರಾಂಶ ಇಲ್ಲಿದೆ.
2009 ರಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಗಳಿಗೆ ಮೀಸಲಾದ 131 ಲೋಕಸಭಾ ಸ್ಥಾನಗಳಲ್ಲಿ 53 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಅದು 2014ರಲ್ಲಿ 12 ಸ್ಥಾನ ಮತ್ತು 2019ರಲ್ಲಿ 10 ಸ್ಥಾನಗಳಿಗೆ ಕುಸಿಯಿತು. ಪಕ್ಷದ ಒಟ್ಟಾರೆ ಲೆಕ್ಕಾಚಾರಗಳು ಕೂಡ ತಲೆಕೆಳಗಾಗಿವೆ.
ಬಿಜೆಪಿಯ ಹಿಂದುತ್ವದ ಪ್ರಚೋದನೆ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಮೂಹಿಕ ಮನವಿಯು ಕಾಂಗ್ರೆಸ್ ಪಕ್ಷದ ಸಾಮಾಜಿಕ ಲೆಕ್ಕಾಚಾರಗಳನ್ನು ಛಿದ್ರಗೊಳಿಸಿದೆ ಮತ್ತು ಅದರ ವೋಟ್ಬ್ಯಾಂಕ್ ಅನ್ನೇ ನಾಶಪಡಿಸಿದೆ. ಹಾಗಾಗಿ ಇದೀಗ ಕಾಂಗ್ರೆಸ್ SC, ST ಮತ್ತು OBC ಸಮುದಾಯಗಳನ್ನು ತಲುಪಲು ಹೊಸ ಯೋಜನೆಯನ್ನು ರೂಪಿಸುತ್ತಿದೆ.
2024 ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ಕರ್ನಾಟಕ – ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಹಳೆಯ ಪಕ್ಷ ಕಾಂಗ್ರೆಸ್ ತನ್ನ ಪ್ರಭಾವವನ್ನು ಬೀರಬೇಕಾಗಿದೆ. ಇಲ್ಲಿ ಒಟ್ಟಾಗಿ 262 SC/ST ವಿಧಾನಸಭಾ ಮೀಸಲು ಸ್ಥಾನಗಳಿವೆ. ಈ ರಾಜ್ಯಗಳ ಫಲಿತಾಂಶವನ್ನು ನಿರ್ಧರಿಸುವಲ್ಲಿ ಅಲ್ಪಸಂಖ್ಯಾತರು ಕೂಡ ಮಹತ್ವದ ಪಾತ್ರ ವಹಿಸುತ್ತಾರೆ.
ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಪಕ್ಷದ ನಾಯಕತ್ವದ ಸ್ಥಾನಗಳನ್ನು ನೀಡುವ ಮೂಲಕ 262 ಅಸೆಂಬ್ಲಿ ಸ್ಥಾನಗಳನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಇದಕ್ಕೆ ಹಲವು ಯೋಜನೆಗಳನ್ನು ರೂಪಿಸಿದೆ. 10 ರಾಜ್ಯಗಳಲ್ಲಿ ಹರಡಿರುವ 56 ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಮತ್ತೆ ಗೆಲುವು ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
ರಾಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯು, ಎಲ್ಲಾ ಸಮಿತಿಗಳಲ್ಲಿ ಅಂದರೆ ಬ್ಲಾಕ್ ಮಟ್ಟದಿಂದ ಕಾಂಗ್ರೆಸ್ ಕಾರ್ಯ ಸಮಿತಿವರೆಗೆ (ಸಿಡಬ್ಲ್ಯೂಸಿ) 50 ಪ್ರತಿಶತದಷ್ಟು ಸ್ಥಾನಗಳನ್ನು ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಸ್ಥಾನಗಳನ್ನು ಮೀಸಲಿಟ್ಟಿದೆ. ”SC, ST, OBC ಮತ್ತು ಅಲ್ಪಸಂಖ್ಯಾತರಿಗೆ ಸ್ಥಾನಮಾನ ನೀಡುವುದರಿಂದ ಅವರು ರಾಜಕೀಯಕ್ಕೆ ಬರಲು ಉತ್ತೇಜನ ನೀಡಿದಂತಾಗುತ್ತದೆ. ಎಲ್ಲ ಸಮುದಾಯದ ನಾಯಕರಿಗೆ ಅವರು ಬಯಸಿದಂತೆ ಸ್ಥಾನಮಾನಗಳು ಸಿಗುತ್ತವೆ. ಆಗ ಅವರ ಧ್ವನಿ ಎಲ್ಲರಿಗೂ ಕೇಳಿಸುತ್ತದೆ. ಕಾಂಗ್ರೆಸ್ ಪಕ್ಷದ ರಾಜಕೀಯದ ಡೈನಾಮಿಕ್ಸ್ ಬದಲಾಗಲಿದೆ ಎಂದು ಎಸ್ಸಿ, ಒಬಿಸಿ, ಅಲ್ಪಸಂಖ್ಯಾತ ಮತ್ತು ಆದಿವಾಸಿ ಇಲಾಖೆಗಳ ಕಾಂಗ್ರೆಸ್ನ ರಾಷ್ಟ್ರೀಯ ಸಂಯೋಜಕ ಕೆ ರಾಜು ಹೇಳಿದ್ದಾರೆ.
ಇದನ್ನೂ ಓದಿ: MSP ಕಾನೂನುಬದ್ಧ ಮಾಡುವ ನಿರ್ಣಯ ಅಂಗೀಕರಿಸಿದ ಕಾಂಗ್ರೆಸ್
ಪಕ್ಷದ ಹೊಸ ಸಾಮಾಜಿಕ ನ್ಯಾಯದ ಯೋಜನೆಯು ಗಮನಾರ್ಹವಾಗಿದೆ ಏಕೆಂದರೆ ಅದು ಸಾಮಾಜಿಕ ಭದ್ರತೆಯ ಕುರಿತು ಪ್ರಸ್ತಾಪಿಸಿದೆ.
ನ್ಯಾಯಾಂಗವು ದೇಶದ ಸಾಮಾಜಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಸರ್ವಸದಸ್ಯರ ಮಹಾಅಧಿವೇಶನದಲ್ಲಿ ಅಂಗೀಕರಿಸಿದ ನಿರ್ಣಯವು ಹೇಳುತ್ತದೆ. ಆದ್ದರಿಂದ ”ಉನ್ನತ ನ್ಯಾಯಾಲಯಗಳಲ್ಲಿ ಎಸ್ಸಿ-ಎಸ್ಟಿ-ಒಬಿಸಿಗಳಿಗೆ ಮೀಸಲಾತಿಯ ನೀಡುವ ಬಗ್ಗೆ ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಶಿಕ್ಷಣದ ಹಕ್ಕು ಮತ್ತು ಘನತೆಯನ್ನು ರಕ್ಷಿಸಲು ರೋಹಿತ್ ವೆಮುಲಾ ಅವರ ಹೆಸರಿನ ವಿಶೇಷ ಕಾಯಿದೆಯನ್ನು ಜಾರಿಗೆ ತರುತ್ತದೆ. ಜೊತೆಗೆ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಖಾಸಗಿ ಸಂಘಟಿತ ವಲಯದಲ್ಲಿ ಉದ್ಯೋಗಗಳಿಗೆ ಸಮಾನ ಅವಕಾಶ ನೀಡುತ್ತದೆ ಎಂದು ಸರ್ವಸದಸ್ಯರ ಮಹಾಅಧಿವೇಶನದಲ್ಲಿ ಹೇಳಿದೆ.
ಭಾರತದ ಸಾಮಾಜಿಕ ನ್ಯಾಯ ನೀತಿಗಳು ಮತ್ತು ಶಾಸನಗಳನ್ನು ಅನುಷ್ಠಾನಗೊಳಿಸುವುದು ಮತ್ತು ಎಸ್ಸಿ, ಎಸ್ಟಿ ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾದ ಹಕ್ಕುಗಳನ್ನು ಬಲಪಡಿಸಲು ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ಸರ್ಕಾರವು ಕಾಲಕಾಲಕ್ಕೆ ಕಾಂಗ್ರೆಸ್ ಸರ್ಕಾರಗಳು ತಂದ ಸಾಮಾಜಿಕ ನ್ಯಾಯದ ಯೋಜನೆಗಳನ್ನು ನಾಶಪಡಿಸುತ್ತಿದೆ ಮತ್ತು ನಾವು ವಿವಿಧ ಕ್ಷೇತ್ರಗಳಲ್ಲಿ ತಂದಿರುವ ಸಶಕ್ತ ನಿಬಂಧನೆಗಳನ್ನು ನಿರ್ಲಕ್ಷಿಸುತ್ತಿದೆ. ಉದಾಹರಣೆಗೆ, ಸಾರ್ವಜನಿಕ ಸಂಸ್ಥೆಗಳ ಮುಚ್ಚುವಿಕೆ ಮತ್ತು ಬ್ಯಾಕ್ಲಾಗ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಉದ್ಯೋಗಗಳು ಕಡಿಮೆಯಾಗಿದೆ. ಹಾಗಾಗಿ ಮೀಸಲಾತಿಯಲ್ಲಿ ದುರ್ಬಲ ವರ್ಗದವರಿಗೆ ಭಾರಿ ಹಿನ್ನಡೆಯಾಗಿದೆ. ಖಾಸಗಿ ವಲಯದಲ್ಲಿ ಮೀಸಲಾತಿ ಭರವಸೆ ನೀಡುವ ನಿರ್ಣಯದ ಬಗ್ಗೆ ಯೋಚಿಸಲು, ನಮ್ಮನ್ನು ಅದು ಪ್ರೇರೇಪಿಸಿದೆ ಎಂದು ರಾಜು ಹೇಳಿದರು.
ಓಬಿಸಿ ವೋಟ್ ಬ್ಯಾಂಕ್ಗಳನ್ನು ಹೊಂದಿರುವ ಪ್ರಾದೇಶಿಕ ಪಕ್ಷಗಳು ಜಾತಿ ಗಣತಿಯನ್ನು ನಡೆಸುವುದರ ಕುರಿತು ಚರ್ಚೆ ನಡೆಸಿದವು. ಆದರೆ ಮೋದಿ ಸರ್ಕಾರ ಇದನ್ನು ವಿರೋಧಿಸಿತು. ಆದರೆ ಕಾಂಗ್ರೆಸ್ ಪಕ್ಷ ದಶವಾರ್ಷಿಕ ಜನಗಣತಿಯೊಂದಿಗೆ ಸಾಮಾಜಿಕ-ಆರ್ಥಿಕ ಜಾತಿ ಗಣತಿಯನ್ನು ನಡೆಸುವುದಾಗಿ ಹೇಳಿದೆ. ಅಲ್ಲದೆ ಕಾಂಗ್ರೆಸ್ ಪಕ್ಷವು ಈ ಹಿಂದೆ ಜಾತಿ ಗಣತಿಯನ್ನು ಬೆಂಬಲಿಸಿದೆ ಎಂದು ಅವರು ಹೇಳಿದ್ದಾರೆ.
ಎಸ್ಸಿ, ಎಸ್ಟಿ ಮತ್ತು ಒಬಿಸಿಗಳನ್ನು ಆರ್ಥಿಕವಾಗಿ ದುರ್ಬಲ ವರ್ಗಗಳು (ಇಡಬ್ಲ್ಯೂಎಸ್) ಕೋಟಾದಿಂದ ಹೊರಗಿಡಲಾಗುವುದಿಲ್ಲ ಎಂದು ಕಾಂಗ್ರೆಸ್ ನಿರ್ಣಯವು ಹೇಳುತ್ತದೆ. ಎಸ್ಸಿ/ಎಸ್ಟಿಗಳಿಗೆ ಸರ್ಕಾರಿ ಸೇವೆಗಳಲ್ಲಿ ನೀಡಲಾದ ವಯಸ್ಸಿನ ಸಡಿಲಿಕೆಯನ್ನು ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೂ ನೀಡುವುದನ್ನು ಪಕ್ಷವು ಖಚಿತಪಡಿಸುತ್ತದೆ. EWS ಕೋಟಾವನ್ನು ಮೇಲ್ಜಾತಿಗಳಿಗೆ ಸೀಮಿತಗೊಳಿಸಲಾಗುವುದಿಲ್ಲ. SC/ST ಗಳು ಮತ್ತು OBC ಗಳಿಗೆ ಪ್ರತ್ಯೇಕ ಅವಕಾಶವನ್ನು ಹೊಂದಿರಬೇಕು ಎಂದು ಹಲವಾರು ಪಕ್ಷಗಳು ಇದೇ ರೀತಿ ವಾದಿಸಿವೆ.
”ನಾವು ಮಾಡಿದ ಪ್ರತಿಯೊಂದು ನಿರ್ಣಯಕ್ಕೂ ಬದ್ಧತೆ ಮತ್ತು ಸುದೀರ್ಘ ಹಿನ್ನೆಲೆ ಇದೆ. ಬಿಜೆಪಿ ಈ ವಲಯಕ್ಕೆ ಮಾಡಿರುವ ಅನ್ಯಾಯದ ಆಧರಿಸಿ ನಾವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದು ರಾಜು ಹೇಳಿದರು.
ಹಿಂದುಳಿದ ಸಮುದಾಯಗಳನ್ನು ಸೆಳೆಯಲು ಕಾಂಗ್ರೆಸ್ ಶ್ರಮಿಸುತ್ತಿದೆ. ಆದರೆ ಬಿಜೆಪಿ ಇದರಲ್ಲಿ ಮುಂದಿದೆ ಎಂದು ಕಾಂಗ್ರೆಸ್ ನಾಯಕರು ಬೇಸರದಿಂದ ಒಪ್ಪಿಕೊಳ್ಳುತ್ತಾರೆ. ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ (ದಲಿತ) ಮತ್ತು ದ್ರೌಪದಿ ಮುರ್ಮು (ಬುಡಕಟ್ಟು ಜನಾಂಗದ) ಆಯ್ಕೆಯು ಹೆಚ್ಚಾಗಿ “ಸಾಂಕೇತಿಕ” ಆಗಿದ್ದರೂ, ಅದು ಸಮುದಾಯಗಳಿಗೆ ಪ್ರಬಲ ರಾಜಕೀಯ ಸಂದೇಶವನ್ನು ರವಾನಿಸಿದೆ ಎನ್ನುತ್ತಾರೆ.
ಇದನ್ನೂ ಓದಿ: IT, ED, CBI ಸಂಸ್ಥೆಗಳು ‘ಮೋದಿ ಸರ್ಕಾರ’ದ ಕಿರುಕುಳದ ಸಾಧನಗಳು: ಜೈರಾಮ್ ರಮೇಶ್
2018ರ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 31 ಮೀಸಲು ಸ್ಥಾನಗಳಲ್ಲಿ 7ನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಕರ್ನಾಟಕದಲ್ಲಿ, 2018ರ ಚುನಾವಣೆಯಲ್ಲಿ 51 ಮೀಸಲು ಸ್ಥಾನಗಳಲ್ಲಿ 18ನ್ನು ಗೆದ್ದಿದೆ. ಛತ್ತೀಸ್ಗಢದಲ್ಲಿ ಪಕ್ಷವು ರಾಜ್ಯ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದಿದ್ದರಿಂದ ಸಂಖ್ಯೆಗಳು ಉತ್ತಮವಾಗಿವೆ. ರಾಜಸ್ಥಾನದಲ್ಲಿ 59 ಮೀಸಲು ಸ್ಥಾನಗಳ ಪೈಕಿ 30ರಲ್ಲಿ ಗೆಲುವು ಸಾಧಿಸಿದೆ. ಐದು ರಾಜ್ಯಗಳ ಎಲ್ಲಾ 262 ಮೀಸಲು ಸ್ಥಾನಗಳಿಗೆ ಸಂಯೋಜಕರನ್ನು ನೇಮಿಸಲು ಪಕ್ಷವು ಈಗ ಸಿದ್ಧತೆ ನಡೆಸಿದೆ.
”ಕಾಂಗ್ರೆಸ್ ತನ್ನ ವ್ಯಾಪ್ತಿಯನ್ನು ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಗೆ ವಿಸ್ತರಿಸದ ಹೊರತು ನಾವು ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ನಾವು ನೋಡಿದ್ದೇವೆ. ಈ ಸಮುದಾಯಗಳ ಮತ ಪಡೆಯಲು ನಾವು ಅವರ ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಉದಾಹರಣೆಗೆ, OBC ಸಮುದಾಯಗಳು ಜಾತಿಗಣತಿಗೆ ಒತ್ತಾಯಿಸುತ್ತಿವೆ. ಜನಗಣತಿ ನಡೆಯದಿದ್ದರೆ ಅವರ ಮೀಸಲಾತಿಯೂ ಅಪಾಯಕ್ಕೆ ಸಿಲುಕುತ್ತದೆ. ಹಾಗಾಗಿ ಜಾತಿಗಣತಿಗೆ ಬಹಿರಂಗವಾಗಿ ಮತ್ತು ನಿಸ್ಸಂದಿಗ್ಧವಾಗಿ ಒತ್ತಾಯಿಸಿದ್ದೇವೆ ಎಂದು ರಾಜು ಹೇಳಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಎರಡನೇ ಸ್ಥಾನ ಪಡೆದಿರುವ ಕ್ಷೇತ್ರಗಳನ್ನುಗುರುತಿಸಿ, ಅಲ್ಲಿ ಕಾಂಗ್ರೆಸ್ ತನ್ನ ನಾಯಕತ್ವ ಪ್ರಬಲಗೊಳಿಸಲಾಗುತ್ತದೆ. ಈ ಎಲ್ಲಾ ಸ್ಥಾನಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಂದ ತನ್ನ ಹೊಸ ನಾಯಕತ್ವವನ್ನು ಅಭಿವೃದ್ಧಿಪಡಿಸುವ ಆಲೋಚನೆ ಹೊಂದಿದೆ.
ಎಐಸಿಸಿ ನಿರ್ಣಯವು, ಅಸಮಾನತೆಗಳನ್ನು ಅಧ್ಯಯನ ಮಾಡಲು ಮತ್ತು ಎಸ್ಸಿ/ಎಸ್ಟಿಗಳು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸ್ಥಿತಿಯನ್ನುಅರಿತುಕೊಳ್ಳಲು ದೇಶಾದ್ಯಂತ ಸಮೀಕ್ಷೆಗಳನ್ನು ಕೈಗೊಳ್ಳುವ ಬಗ್ಗೆ ಹೇಳುತ್ತದೆ.
ಒಬಿಸಿಗಳ ಸಬಲೀಕರಣಕ್ಕಾಗಿ ಸಚಿವಾಲಯವನ್ನು ಮೀಸಲಿಡುವ ಭರವಸೆಯನ್ನು ಪಕ್ಷವು ನೀಡುತ್ತದೆ. ಇದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
[email protected]