ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಘೋಷಿಸಿದ್ದಾರೆ.
ಇಂದು ಮೈಸೂರನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “2019ರಲ್ಲಿ ಆದ ಮಾರಣಾಂತಿಕ ಹಲ್ಲೆಯಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆರೋಗ್ಯ ಸರಿ ಇಲ್ಲದ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
ಬಹಳ ದಿನಗಳಿಂದ ಈ ವಿಷಯ ಬಹಿರಂಗಪಡಿಸಬೇಕೆಂದು ಅಂದುಕೊಂಡಿದ್ದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್ದೀಪ್ ಸಿಂಗ್ ಸುರ್ಜೇವಾಲ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ರವರಿಗೆ ಪತ್ರ ಬರೆದಿದ್ದೆ. ಆದರೆ ಪಕ್ಷದ ವರಿಷ್ಠರು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು. ಆದರೆ ಈಗ ಮಾಧ್ಯಮಗಳ ಮೂಲಕ ವಿಷಯ ಬಹಿರಂಗಗೊಂಡಿದೆ ಎಂದಿದ್ದಾರೆ.
ಅಭಿಮಾನಿಗಳ ಒತ್ತಾಯದ ಮೇರೆಗೆ ಕೆಪಿಸಿಸಿಗೆ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಸಹ ಸಾಯುವವರೆಗೂ ನಿಷ್ಟಾವಂತ ಕಾಂಗ್ರೆಸ್ಸಿಗನಾಗಿ ಇರುತ್ತೇನೆ. ಅನಾರೋಗ್ಯದ ನಡುವೆಯೂ 4 ವರ್ಷ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿದ ತೃಪ್ತಿ ಇದೆ. ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳುತ್ತೇನೆ, ಅನುಯಾಯಿಗಳ ಮಾತಿಗೆ ಕಿವಿಗೊಡುತ್ತೇನೆ ಎಂದು ಸೇಠ್ ತಿಳಿಸಿದ್ದಾರೆ.
ಇನ್ನು ಅವರು ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದಂತೆ ಅವರ ಮನೆಯ ನಿವಾಸದಲ್ಲಿ ಅಭಿಮಾನಿಗಳು ಆತ್ಮಹತ್ಯೆಯ ಬೆದರಿಕೆಯೊಡ್ಡಿದ್ದಾರೆ. ವ್ಯಕ್ತಿಯೊಬ್ಬರೂ ಸೀಮೇಎಣ್ಣೆ ಸುರಿದುಕೊಂಡು ಬೆದರಿಕೆಯೊಡ್ಡಿದ್ದರೆ , ಮತ್ತೊಬ್ಬರು ಅವರ ಮನೆಯ ಮೇಲೆ ಹತ್ತಿ ಬಿದ್ದು ಸಾಯುವುದಾಗಿ ಬ್ಲಾಕ್ ಮೇಲ್ ಮಾಡಿದರು. ಅವರನ್ನು ಸುಮ್ಮನಾಗಿಸುವಲ್ಲಿ ತನ್ವೀರ್ ಸೇಠ್ ಹೈರಣಾದರು.
High drama outside @INCKarnataka mla Tanveer Sait's residence in #Mysuru. One of his supporter tried to immolate himself and another tried to jumo of his office after rumours started circulating that he won't be given ticket this time. #Karnataka pic.twitter.com/3E7QEq5k0k
— Imran Khan (@KeypadGuerilla) February 28, 2023
ಕಾಂಗ್ರೆಸ್ ಭದ್ರಕೋಟೆಯಾದ ನರಸಿಂಹರಾಜ ವಿಧಾನಸಭಾ ಕ್ಷೇತ್ರ
ನರಸಿಂಹರಾಜ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಗಿದೆ. ತನ್ವೀರ್ ಸೇಠ್ರವರು ಈ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿದಂತೆ ಸತತ ಐದು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. 2016ರಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಇನ್ನು ತನ್ವೀರ್ ಸೇಠ್ರವರ ತಂದೆ ಅಜೀಜ್ ಸೇಠ್ರವರು ಈ ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1985 ಮುಕ್ತರ್ ಉನ್ನೀಸ ಎಂಬುವವರು ಕಾಂಗ್ರೆಸ್ನಿಂದ ಮತ್ತು 1994ರಲ್ಲಿ ಬಿಜೆಪಿಯಿಂದ ಈ ಮಾರುತಿರಾವ್ ಪವಾರ್ ಎಂಬುವವರು ಗೆಲುವು ಸಾಧಿಸಿದ್ದರು. ಆ ಎರಡು ಚುನಾವಣೆ ಹೊರತುಪಡಿಸಿ ಉಳೆದ ಎಲ್ಲಾ ಚುನಾವಣೆಗಳಲ್ಲಿಯೂ ಸೇಠ್ ಕುಟುಂಬವೇ ಗೆಲ್ಲುತ್ತಾ ಬಂದಿದೆ.
ಇದನ್ನೂ ಓದಿ: ಒಬಿಸಿ ಸಚಿವಾಲಯ, ಜಾತಿಗಣತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ: ಕಾಂಗ್ರೆಸ್ ನಿರ್ಣಯಗಳಿವು